ಆ್ಯಪ್ನಗರ

ರಾತ್ರಿಯೆಲ್ಲಾ ಎಚ್ಚರವಿದ್ದು ಕಾಲೆಳೆದ ಪಾಕ್!: ಚಂದ್ರಯಾನ-2 ಹಿನ್ನಡೆಗೆ ಲೇವಡಿ

ಭಾರತ ಗೆದ್ದಾಗ ಒಳಗೊಳಗೇ ಬುಸುಗುಟ್ಟಿ, ಭಾರತ ಸೋತಾಗ ಆಡಿಕೊಳ್ಳುವ ಪಾಕಿಸ್ತಾನದ ದುರ್ಬುದ್ದಿ ಮುಂದುವರೆದಿದೆ. ಚಂದ್ರಯಾನ-2 ಕಾರ್ಯಾಚರಣೆಯನ್ನು ರಾತ್ರಿಯೆಲ್ಲಾ ನಿದ್ರೆಗೆಟ್ಟು ನೋಡಿದ ಪಾಕಿಸ್ತಾನ, ಹಿನ್ನಡೆ ಅನುಭವಿಸಿದ್ದೇ ತಡ ಕಿಚಾಯಿಸಿದೆ!

Vijaya Karnataka Web 7 Sep 2019, 4:26 am
ಇಸ್ಲಾಮಾಬಾದ್ (ಪಾಕಿಸ್ತಾನ): ‘ಯಾವ ಕೆಲಸ ಬರುವುದಿಲ್ಲವೋ ಅದನ್ನು ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಾರದು.. ಡಿಯರ್ ಎಂಡಿಯಾ’ ಇದು ನಮ್ಮ ನೆರೆರಾಷ್ಟ್ರ ಪಾಪಿ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವನ ಒಕ್ಕಣೆ! ಭಾರತದ ಹೆಮ್ಮೆಯ ಇಸ್ರೋ ಹಿನ್ನಡೆ ಅನುಭವಿಸಿರುವ ಈ ಸನ್ನಿವೇಶದಲ್ಲಿ ಫವಾದ್ ಹುಸೇನ್ ಎಂಬ ಈ ಮಹಾನುಭಾವ ಕೊಟ್ಟಿರುವ ಟಾಂಗ್ ಇದು. ಅದೂ ಕೂಡಾ ಇಂಡಿಯಾ ಎನ್ನುವ ಬದಲು ಎಂಡಿಯಾ ಎಂದು ಕರೆದಿದ್ದಾನೆ ಫವಾದ್ ಹುಸೇನ್.
Vijaya Karnataka Web modi discussion



ಪಾಕಿಸ್ತಾನದ ಈ ಸಚಿವ ಮಹಾಶಯ, ಭಾರತದ ಕಾಲೆಳೆಯಲು ಸರಣಿ ಟ್ವೀಟ್ ಮಾಡುತ್ತಾ ರಾತ್ರಿಯೆಲ್ಲಾ ಎಚ್ಚರವಾಗಿದ್ದ. ಚಂದ್ರನಲ್ಲಿ ಇಳಿಯಬೇಕಿದ್ದ ‘ಆಟಿಕೆ’ ಮುಂಬೈ ಮೇಲೆ ಬಿದ್ದಿದೆ ಅಂತಾನೂ ತಮಾಷೆ ಮಾಡಿದ್ದಾನೆ ಫವಾದ್ ಹುಸೇನ್!


ಫವಾದ್ ಹುಸೇನ್ ನ ಹುಚ್ಚಾಟಕ್ಕೆ ಭಾರತೀಯ ನೆಟ್ಟಿಗರು ಭರ್ಜರಿಯಾಗಿ ತಿರುಗೇಟು ಕೊಡುತ್ತಿದ್ದಂತೆಯೇ ಸಮರ್ಥನೆಯ ಮಾತನ್ನಾಡಿದ ಹುಸೇನ್, ಒಂದು ಅದ್ಭುತ ಘಟನೆಯನ್ನು ತಪ್ಪಿಸಿಕೊಂಡೆ ಎಂದು ಲೇವಡಿ ಮಾಡಿದ್ದಾನೆ.


ಇಷ್ಟಕ್ಕೇ ತನ್ನ ವ್ಯಂಗ್ಯದ ಮಾತುಗಳನ್ನು ನಿಲ್ಲಿಸದ ಫವಾದ್, ಕೆಲಸಕ್ಕೆ ಬಾರದವರಿಗಾಗಿ 900 ಕೋಟಿ ಖರ್ಚು ಮಾಡಿ ಎಂದು ನಾವು ಹೇಳಿದ್ದೆವಾ ಎಂದು ಉದ್ಧಟತನದ ಮಾತುಗಳನ್ನಾಡಿದ್ದಾನೆ.


ಅಂತಿಮವಾಗಿ ಪ್ರಧಾನಿ ಮೋದಿಯವರನ್ನೂ ಫವಾದ್ ಹುಸೇನ್ ಲೇವಡಿ ಮಾಡಿದ್ದಾನೆ. ಉಪಗ್ರಹ ಸಂವಹನದ ಬಗ್ಗೆ ಮೋದಿ ಭಾಷಣ ಮಾಡುತ್ತಿದ್ದಾರೆ, ಅವರು ರಾಜಕಾರಣಿಯಲ್ಲ, ಗಗನಯಾನಿ ಎಂದು ಲೇವಡಿ ಮಾಡಿದ್ದಾನೆ. ಬಡ ರಾಷ್ಟ್ರವೊಂದು 900 ಕೋಟಿ ರೂ. ವ್ಯರ್ಥ ಮಾಡಿದ್ದೇಕೆ ಎಂದು ಲೋಕಸಭೆಯಲ್ಲಿ ಪ್ರಶ್ನಿಸಬೇಕು ಎಂದು ಉಪದೇಶವನ್ನೂ ಕೊಟ್ಟಿದ್ದಾನೆ.


ನಿಮ್ಮ ಸಾಧನೆ ಕಡಿಮೆಯದ್ದೇನಲ್ಲ, ಇಸ್ರೋ ವಿಜ್ಞಾನಿಗಳ ಬೆನ್ನುತಟ್ಟಿದ ಪ್ರಧಾನಿ

ಬಾಹ್ಯಾಕಾಶ ರಂಗದಲ್ಲಿ ಸಾಧನೆ ಮೆರೆದ ಎಲ್ಲ ದೇಶಗಳೂ ತಪ್ಪುಗಳನ್ನು ಮಾಡಿವೆ, ತಪ್ಪುಗಳಿಂದ ಪಾಠ ಕಲಿತು ಮುನ್ನಡೆದಿವೆ. ಅಮೆರಿಕ, ರಷ್ಯಾ, ಚೀನಾ ಹೀಗೆ ಬಾಹ್ಯಾಕಾಶದ ವೈಫಲ್ಯಗಳ ಪಟ್ಟಿ ಮಾಡುತ್ತಾ ಸಾಗಿದರೆ ಸೋಲಿನ ಸರಮಾಲೆಗಳೇ ಸಿಗುತ್ತವೆ. ಹೀಗಿರುವಾಗ ನಡೆಯಲೂ ಸಾಧ್ಯವಾಗದ ದೇಶ, ಅಭಿವೃದ್ಧಿಯ ಬೆನ್ನೇರಿ ಹೊರಟ ಭಾರತ ಸಣ್ಣದೊಂದು ಹಿನ್ನಡೆ ಸಾಧಿಸಿದಾಗ ವ್ಯಂಗ್ಯದ ಮಾತುಗಳನ್ನಾಡುವುದು ನಿಜಕ್ಕೂ ಬೇಜವಾಬ್ದಾರಿಯ ಪರಮಾವಧಿ.

‘ವಿಕ್ರಮ್’ ಗರ್ಭದಲ್ಲೇ ಜೀವಬಿಟ್ಟ ‘ಪ್ರಜ್ಞಾನ್’: ಮಹತ್ಸಾಧನೆಗೆ ಬಾಕಿ ಇದ್ದಿದ್ದು ಕೇವಲ 2.1 ಕಿ.ಮೀ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ