ಆ್ಯಪ್ನಗರ

ಹಿಂದೂ ಹುಡುಗಿಯರ ಅಪಹರಣ, ಬಲವಂತದ ಮದುವೆ: ತನಿಖೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆದೇಶ

ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯ ಸರಕಾರಗಳು ಜಂಟಿ ಕಾರ್ಯಾಚರಣೆ ನಡೆಸಿ ಹಿಂದೂ ಯುವತಿಯರನ್ನು ಶೀಘ್ರವೇ ರಕ್ಷಿಸುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಇಮ್ರಾನ್ ಖಾನ್ ನಿರ್ದೇಶನ ನೀಡಿದ್ದಾರೆ. 'ಅಲ್ಪಸಂಖ್ಯಾತರು ಪಾಕ್‌ ಧ್ವಜದ ಬಿಳಿ ಬಣ್ಣದ ಸಂಕೇತ. ನಮ್ಮ ಧ್ವಜದ ಎಲ್ಲ ಬಣ್ಣಗಳೂ ನಮಗೆ ಅಮೂಲ್ಯ. ನಮ್ಮ ರಾಷ್ಟ್ರಧ್ವಜದ ರಕ್ಷಣೆಯಷ್ಟೇ ಅಲ್ಪಸಂಖ್ಯಾತರ ರಕ್ಷಣೆಯೂ ಮುಖ್ಯ. ಅದಕ್ಕೆ ನಾವು ಎಲ್ಲ ಕ್ರಮ ಕೈಗೊಳ್ಳುತ್ತೇವೆ' ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ಚೌಧರಿ ತಿಳಿಸಿದರು.

Vijaya Karnataka Web 24 Mar 2019, 4:36 pm
ಇಸ್ಲಾಮಾಬಾದ್: ಸಿಂಧ್ ಪ್ರಾಂತ್ಯದಲ್ಲಿ ಹದಿಹರೆಯದ ಇಬ್ಬರು ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತದ ಮತಾಂತರ ಮಾಡಿ ಮದುವೆಯಾದ ಪ್ರಕರಣ ಕುರಿತು ತನಿಖೆ ನಡೆಸುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಆದೇಶಿಸಿದ್ದಾರೆ. ತಕ್ಷಣ ಹಿಂದೂ ಯುವತಿಯರ ರಕ್ಷಣೆಗೆ ಎಲ್ಲ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ವಾರ್ತಾ ಸಚಿವ ಫವಾದ್ ಚೌಧರಿ ತಿಳಿಸಿದರು.
Vijaya Karnataka Web Imran Khan, Pak PM


ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಹೋಳಿ ಹಬ್ಬದ ಆಚರಣೆ ವೇಳೆ ರವೀನಾ (13) ಮತ್ತು ರೀನಾ (15) ಎಂಬ ಇಬ್ಬರು ಹುಡುಗಿಯರನ್ನು ಅವರ ಮನೆಯಿಂದಲೇ 'ಪ್ರಭಾವಿ'ಗಳ ಗುಂಪೊಂದು ಅಪಹರಿಸಿತ್ತು. ಆ ಬಳಿಕ ಸ್ವಲ್ಪವೇ ಹೊತ್ತಿನಲ್ಲಿ ಧರ್ಮಗುರುವೊಬ್ಬ ಆ ಹುಡುಗಿಯರನ್ನು ಮತಾಂತರಿಸಿ ನಿಖಾ (ಮದುವೆ) ಮಾಡಿಸುತ್ತಿರುವ ದೃಶ್ಯ ವೀಡಿಯೋ ವೈರಲ್ ಆಯಿತು.

ಮತ್ತೊಂದು ವೀಡಿಯೋದಲ್ಲಿ ಆ ಇಬ್ಬರೂ ಹುಡುಗಿಯರು ಮಾತನಾಡಿ, ಸ್ವಂತ ಇಚ್ಛೆಯಿಂದ ಇಸ್ಲಾಂ ಅನ್ನು ಸ್ವೀಕರಿಸಿರುವುದಾಗಿ ಹೇಳುವ ದೃಶ್ಯವೂ ವೈರಲ್ ಆಯಿತು.

ಘಟನೆ ಕುರಿತು ತನಿಖೆಗೆ ಆದೇಶಿಸಿರುವುದನ್ನು ವಾರ್ತಾ ಸಚಿವ ಚೌಧರಿ ಉರ್ದು ಭಾಷೆಯ ಟ್ವಿಟರ್ ಪೋಸ್ಟ್ ಒಂದರಲ್ಲಿ ಪ್ರಕಟಿಸಿದ್ದಾರೆ. ಆ ಬಾಲಕಿಯರನ್ನು ಪಂಜಾಬ್‌ ಪ್ರಾಂತ್ಯದ ರಹೀಂ ಯಾರ್ ಖಾನ್‌ ಮತಾಂತರ ಗೃಹಕ್ಕೆ ಕರೆದೊಯ್ಯಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಕೂಡಲೇ ತನಿಖೆ ನಡೆಸುವಂತೆ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿಗೆ ಪ್ರಧಾನಿ ಇಮ್ರಾನ್ ಖಾನ್ ಸೂಚಿಸಿದ್ದಾರೆ.

ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯ ಸರಕಾರಗಳು ಜಂಟಿ ಕಾರ್ಯಾಚರಣೆ ನಡೆಸಿ ಹಿಂದೂ ಯುವತಿಯರನ್ನು ಶೀಘ್ರವೇ ರಕ್ಷಿಸುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಇಮ್ರಾನ್ ಖಾನ್ ನಿರ್ದೇಶನ ನೀಡಿದ್ದಾರೆ.

'ಅಲ್ಪಸಂಖ್ಯಾತರು ಪಾಕ್‌ ಧ್ವಜದ ಬಿಳಿ ಬಣ್ಣದ ಸಂಕೇತ. ನಮ್ಮ ಧ್ವಜದ ಎಲ್ಲ ಬಣ್ಣಗಳೂ ನಮಗೆ ಅಮೂಲ್ಯ. ನಮ್ಮ ರಾಷ್ಟ್ರಧ್ವಜದ ರಕ್ಷಣೆಯಷ್ಟೇ ಅಲ್ಪಸಂಖ್ಯಾತರ ರಕ್ಷಣೆಯೂ ಮುಖ್ಯ. ಅದಕ್ಕೆ ನಾವು ಎಲ್ಲ ಕ್ರಮ ಕೈಗೊಳ್ಳುತ್ತೇವೆ' ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ಚೌಧರಿ ತಿಳಿಸಿದರು.

ಹಿಂದೂ ಯುವತಿಯರ ಅಪಹರಣದ ವಿರುದ್ಧ ಪಾಕಿಸ್ತಾನದ ಹಿಂದೂ ಸಮುದಾಯ ಭಾರೀ ಪ್ರತಿಭಟನೆ ನಡೆಸಿತ್ತು.

ಕಳೆದ ವರ್ಷದ ಸಂಸತ್ ಚುನಾವಣೆ ವೇಳೆ ಇಮ್ರಾನ್ ಖಾನ್‌, ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗೆ ಬದ್ಧತೆ ವ್ಯಕ್ತಪಡಿಸಿದ್ದರು. ಹಿಂದೂ ಹುಡುಗಿಯರ ಬಲವಂತದ ಮತಾಂತರ ಹಾಗೂ ಮದುವೆ ಪ್ರಕರಣಗಳನ್ನು ತಡೆಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ