ಆ್ಯಪ್ನಗರ

ಪಾಕ್‌ ಭಯೋತ್ಪಾದಕ ರಾಷ್ಟ್ರ: ಮತ್ತಷ್ಟು ಬಲಗೊಂಡ ಜಾಗತಿಕ ಗ್ರಹಿಕೆ

ಜಾಗತಿಕ ಸಮುದಾಯದ ಪ್ರತಿಕ್ರಿಯೆಗಳು ಹಾಗೂ ಖಂಡನೆಗಳನ್ನು ಗಮನಿಸಿದರೆ, ಪಾಕ್‌ ಸರಣಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವ ರಾಷ್ಟ್ರ ಎಂಬ ಭಾವನೆ ವ್ಯಾಪಕವಾಗಿ ಬೇರೂರಿದೆ. ಭಾರತವಂತೂ ಪಾಕ್ ಭಯೋತ್ಪಾದನೆಯ ನೇರ ಬಲಿಪಶುವಾಗಿದ್ದು, ಸ್ವಯಂ ರಕ್ಷಣೆಯ ಭಾರತದ ಹಕ್ಕಿಗೆ ಜಾಗತಿಕ ಮಾನ್ಯತೆ ದೊರೆತಿದೆ.

Vijaya Karnataka Web 2 Mar 2019, 11:13 pm
ವಾಷಿಂಗ್ಟನ್: ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ಭವಿಸಿರುವ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಒಂದು ಭಯೋತ್ಪಾದಕ ರಾಷ್ಟ್ರ ಎಂಬ ಜಾಗತಿಕ ಗ್ರಹಿಕೆ ಮತ್ತಷ್ಟು ಬಲಗೊಂಡಿದೆ.
Vijaya Karnataka Web Pak Terror


ಜಾಗತಿಕ ಸಮುದಾಯದ ಪ್ರತಿಕ್ರಿಯೆಗಳು ಹಾಗೂ ಖಂಡನೆಗಳನ್ನು ಗಮನಿಸಿದರೆ, ಪಾಕ್‌ ಸರಣಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವ ರಾಷ್ಟ್ರ ಎಂಬ ಭಾವನೆ ವ್ಯಾಪಕವಾಗಿ ಬೇರೂರಿದೆ. ಭಾರತವಂತೂ ಪಾಕ್ ಭಯೋತ್ಪಾದನೆಯ ನೇರ ಬಲಿಪಶುವಾಗಿದ್ದು, ಸ್ವಯಂ ರಕ್ಷಣೆಯ ಭಾರತದ ಹಕ್ಕಿಗೆ ಜಾಗತಿಕ ಮಾನ್ಯತೆ ದೊರೆತಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೊದಲು ಈ ನಿಲುವಿಗೆ ಬಂದಿದ್ದು, ಪುಲ್ವಾಮಾ ದಾಳಿಯ ಬಳಿಕ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾರತೀಯ ವಾಯುಪಡೆ ಪಾಕಿಸ್ತಾನದ ಒಳಗೇ ನುಗ್ಗಿ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿರುವುದನ್ನು ಸ್ವಯಂ ರಕ್ಷಣೆಯ ಕ್ರಮ ಎಂದು ಬಣ್ಣಿಸಿದ್ದಾರೆ. ಇದರೊಂದಿಗೆ ಭಾರತದ ವೈಮಾನಿಕ ದಾಳಿಗೆ ಜಾಗತಿಕ ಸಮುದಾಯ ಪೂರಕ ಪ್ರತಿಕ್ರಿಯೆ ವ್ಯಕ್ತಪಡಿಸಲು ನಾಂದಿ ಹಾಡಿದೆ.

ಉಗ್ರರ ನೆಲೆಗಳ ಮೇಲೆ ಭಾರತದ ದಾಳಿಯನ್ನು ಭಯೋತ್ಪಾದನೆ ವಿರುದ್ಧ ಸಮರ ಎಂದು ಅಮೆರಿಕ ಬಣ್ಣಿಸಿದ್ದು, ಭಾರತ ಆಕ್ರಮಣಕಾರಿ ಎಂಬ ಗ್ರಹಿಕೆ ಬಾರದಂತೆ ತಡೆದಿದೆ. ಅಲ್ಲದೆ ಫ್ರಾನ್ಸ್‌ ಮತ್ತು ರಷ್ಯಾ ಕೂಡ ಪ್ರತ್ಯೇಕವಾಗಿ ಇದೇ ನಿಲುವು ವ್ಯಕ್ತಪಡಿಸಿವೆ.

ಕೊನೆಗೆ ಚೀನಾ ಕೂಡ, ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರರ ನೆಲೆಗಳನ್ನು ನಾಶಪಡಿಸಬೇಕು ಎಂದು ಆಗ್ರಹಿಸಿತು. ಅಲ್ಲದೆ ಭಾರತದ ದಾಳಿಯನ್ನು ಖಂಡಿಸಲಿಲ್ಲ.

ಪುಲ್ವಾಮಾ ದಾಳಿಯಲ್ಲಿ ಪಾಕ್ ಸರಕಾರ ನೇರವಾಗಿ ಭಾಗಿಯಾಗದಿದ್ದರೂ ದಶಕಗಳಿಂದ ಅದು ಪೋಷಿಸುತ್ತಲೇ ಬಂದಿರುವ ಭಯೋತ್ಪಾದಕ ಸಂಘಟನೆ ಜೈಷೆ ಮೊಹಮ್ಮದ್ ದಾಳಿಯ ಹೊಣೆ ಹೊತ್ತಿದೆ. ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬುದನ್ನು ಹಲವು ಬಾರಿ ಅಮೆರಿಕವೂ ಪ್ರತಿಪಾದಿಸುತ್ತಲೇ ಬಂದಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಶುಕ್ರವಾರ ನೀಡಿದ ಹೇಳಿಕೆಯಿಂದ ಪಾಕ್ ಭಯೋತ್ಪಾದಕ ರಾಷ್ಟ್ರವೆಂಬುದಕ್ಕೆ ನೇರಾನೇರ ಸಾಕ್ಷಿಯೇ ದೊರೆತಿದೆ. ಪುಲ್ವಾಮಾ ದಾಳಿಯೂ ಸೇರಿದಂತೆ ಭಾರತದ ವಿರುದ್ಧ ಹಲವು ಬಾರಿ ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದ ಜೈಷೆ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪಾಕ್ ನೆಲದಲ್ಲೇ ಇದ್ದಾನೆ ಎಂಬುದನ್ನು ಬಹಿರಂಗವಾಗಿಯೇ ಪಾಕ್ ವಿದೇಶಾಂಗ ಸಚಿವರು ಒಪ್ಪಿಕೊಂಡಿದ್ದರು.

'ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ. ಆತ ತೀವ್ರ ಅಸ್ವಸ್ಥನಾಗಿದ್ದಾನೆ. ಮನೆಯಿಂದ ಹೊರಗೆ ಹೋಗಲೂ ಆಗದಷ್ಟು ನಿತ್ರಾಣಗೊಂಡಿದ್ದಾನೆ' ಎಂದು ಖುರೇಷಿ ಸಿಎನ್‌ಎನ್‌ ಚಾನೆಲ್‌ಗೆ ತಿಳಿಸಿದ್ದರು. 'ಭಾರತ ಸೂಕ್ತ ಸಾಕ್ಷ್ಯಾಧಾರ ನೀಡಿದರೆ ಜನತೆ ಹಾಗೂ ನ್ಯಾಯಾಂಗಕ್ಕೆ ನಾವು ಮನವರಿಕೆ ಮಾಡುತ್ತೇವೆ' ಎಂದೂ ಖುರೇಷಿ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ