ಆ್ಯಪ್ನಗರ

ಸದ್ದಿಲ್ಲದೆ ಉಗ್ರ ಹಫೀಜ್‌ ಜೈಲಿನಿಂದ ಬಿಡುಗಡೆ: ಪಾಕ್‌ನ ವಂಚನೆ ಬಹಿರಂಗಪಡಿಸಿದ ಗುಪ್ತಚರ ಇಲಾಖೆ

​​2019ರ ಜುಲೈನಲ್ಲಿ 10 ವರ್ಷ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿ ಲಾಹೋರ್‌ನ ಕೋಟ್‌ ಲಖ್‌ಪತ್‌ ಜೈಲು ಸೇರಿದ್ದ ಉಗ್ರ ಹಫೀಜ್‌ ಸದ್ಯ ಮತ್ತಷ್ಟು ಹೆಚ್ಚುವರಿ ಜೈಲು ವಾಸಕ್ಕೆ ಗುರಿಯಾಗಿದ್ದಾನೆ. ಆದರೆ ಭಾರತೀಯ ಗುಪ್ತಚರರು ಹಫೀಜ್‌ನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಆತ ಜೈಲಿನಿಂದ ಬಿಡುಗಡೆಯಾಗಿ ಮನೆಯಲ್ಲಿ ಆರಾಮಾಗಿ ಇರುವುದನ್ನು ಪತ್ತೆ ಮಾಡಿದ್ದಾರೆ.

Vijaya Karnataka Web 27 Nov 2020, 7:45 am
ಲಾಹೋರ್‌: ಮುಂಬಯಿ ದಾಳಿ ಸಂಚುಕೋರ ಹಾಗೂ ಲಷ್ಕರೆ ತಯ್ಬಾ ಉಗ್ರ ಸಂಘಟನೆ ಸಂಸ್ಥಾಪಕ ಹಫೀಜ್‌ ಸಯೀದ್‌ಗೆ ಕಳೆದ ತಿಂಗಳು ಪಾಕ್‌ ಕೋರ್ಟ್‌ ಜೈಲು ಶಿಕ್ಷೆಯನ್ನು ವಿಸ್ತರಿಸಿ ಆದೇಶ ನೀಡಿದ್ದರೂ ಆತ ಮಾತ್ರ ಇಮ್ರಾನ್‌ ಖಾನ್‌ ಸರಕಾರದ ನೆರವಿನಿಂದ ಜೈಲು ತೊರೆದು ಮನೆಯಲ್ಲೇ ವಾಸವಾಗಿದ್ದಾನೆ.
Vijaya Karnataka Web Hafiz Saeed.
File Photo


2019ರ ಜುಲೈನಲ್ಲಿ 10 ವರ್ಷ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿ ಲಾಹೋರ್‌ನ ಕೋಟ್‌ ಲಖ್‌ಪತ್‌ ಜೈಲು ಸೇರಿದ್ದ ಉಗ್ರ ಹಫೀಜ್‌ ಸದ್ಯ ಮತ್ತಷ್ಟು ಹೆಚ್ಚುವರಿ ಜೈಲು ವಾಸಕ್ಕೆ ಗುರಿಯಾಗಿದ್ದಾನೆ. ಆದರೆ ಭಾರತೀಯ ಗುಪ್ತಚರರು ಹಫೀಜ್‌ನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಆತ ಜೈಲಿನಿಂದ ಬಿಡುಗಡೆಯಾಗಿ ಮನೆಯಲ್ಲಿ ಆರಾಮಾಗಿ ಇರುವುದನ್ನು ಪತ್ತೆ ಮಾಡಿದ್ದಾರೆ.

ಇಮ್ರಾನ್‌ ಸರಕಾರ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜಗತ್ತಿಗೇ ಮಂಕುಬೂದಿ ಎರಚಿ ಗೌಪ್ಯವಾಗಿ ಹಫೀಜ್‌ನನ್ನು ಜೈಲಿನಿಂದ ನಿವಾಸಕ್ಕೆ ಸ್ಥಳಾಂತರಿಸಿದೆ. ಆತನ ನಿವಾಸಕ್ಕೆ ಪಾಕಿಸ್ತಾನ ಮಿಲಿಟರಿಯಿಂದ ಭಾರಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಹಲವು ಗಣ್ಯರು ಕೂಡ ಹಫೀಜ್‌ನನ್ನು ನಿತ್ಯ ಭೇಟಿಯಾಗುತ್ತಿದ್ದಾರೆ ಎಂದು ಗುಪ್ತಚರ ಅಧಿಕಾರಿಯೊಬ್ಬರು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ.

ಉಗ್ರ ಹಫೀಜ್‌ ಜೈಲಿನ ಬದಲು ಮನೆಯಲ್ಲಿದ್ದಾನೆ ಎನ್ನುವುದಕ್ಕೆ ಮತ್ತೊಂದು ಬಲವಾದ ಸಾಕ್ಷಿಯಾಗಿ ಕಳೆದ ತಿಂಗಳು ಲಷ್ಕರ್‌ನ ಜಿಹಾದಿ ವಿಭಾಗದ ಮುಖ್ಯ ಕಾರ್ಯನಿವಾಹಣೆ ಕಮಾಂಡರ್‌ ಝಾಕಿ-ಉರ್‌-ರೆಹಮಾನ್‌ ಲಖ್ವಿ ಖುದ್ದು ಆಗಮಿಸಿ ಹಫೀಜ್‌ನನ್ನು ಭೇಟಿ ಮಾಡಿದ್ದಾನೆ. ಇಬ್ಬರೂ ಸೇರಿ ಜಿಹಾದ್‌ ಚಟುವಟಿಕೆಗಳಿಗೆ ಸಾಕಷ್ಟು ಪ್ರಮಾಣದಲ್ಲಿದೇಣಿಗೆ ಸಂಗ್ರಹದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

26/11 ದಾಳಿಗೆ 12 ವರ್ಷ: ಇನ್ನೂ 19 ಉಗ್ರರನ್ನು ಬಂಧಿಸಬೇಕಿರುವ ಪಾಕ್‌ನಿಂದ ಕಳ್ಳಾಟ!

12 ವರ್ಷ ಕಳೆದರೂ ದಾಳಿಕೋರರ ಬಂಧನವಿಲ್ಲ
ಮುಂಬಯಿನಲ್ಲಿ ಪಾಕ್‌ ಪೋಷಿತ ಉಗ್ರರಿಂದ ಸರಣಿ ದಾಳಿಗಳು ನಡೆದು 12 ವರ್ಷಗಳು ಕಳೆದರೂ ಕೂಡ ಪಾಕಿಸ್ತಾನ ಸರಕಾರದಿಂದ ಲಷ್ಕರ್‌ ಸಂಘಟನೆಯ ಮೋಸ್ಟ್‌ ವಾಂಟೆಡ್‌ 19 ಉಗ್ರರನ್ನು ಬಂಧಿಸಲು ಸಾಧ್ಯವಾಗಿಲ್ಲ. ಇವರ ಬಗ್ಗೆ ಭಾರತ ಹಲವಾರು ದಾಖಲೆಗಳನ್ನು ಈಗಾಗಲೇ ಪಾಕ್‌ಗೆ ಒದಗಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ಕೂಡ ಪಾಕ್‌ಗೆ ಖಡಕ್‌ ಎಚ್ಚರಿಕೆ ನೀಡಿ ಉಗ್ರರ ದಮನಕ್ಕೆ ನಿರ್ದೇಶಿಸಿದೆ.

ದಾಳಿಕೋರ ಉಗ್ರರ ಪೈಕಿ ಕೆಲವರು ಇನ್ನೂ ಕೂಡ ಪಾಕಿಸ್ತಾನದಲ್ಲಿಯೇ ಅಡಗಿಕೊಂಡಿದ್ದಾರೆ. ಮತ್ತೆ ಕೆಲವರು ದೇಶದ ತೊರೆದು ಅಫಘಾನಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ. 2009ರಿಂದಲೂ ಪಾಕಿಸ್ತಾನದ ತನಿಖಾ ಸಂಸ್ಥೆ ಎಫ್‌ಐಎ ಮುಂಬಯಿ ದಾಳಿ ನಡೆಸಿದ್ದ 19 ಉಗ್ರರ ಶೀಧಕಾರ್ಯದಲ್ಲಿನಿರತವಾಗಿರುವಂತೆ ಪ್ರತಿಪಾದಿಸುತ್ತಿದೆ. ಕೆಲವು ಹಣ ವರ್ಗಾವಣೆ ದಾಖಲೆಗಳನ್ನು ಪತ್ತೆ ಮಾಡಿರುವುದಾಗಿ ಘೋಷಿಸಿದ್ದು ಬಿಟ್ಟರೆ ಉಗ್ರರ ಬಂಧನ ಮಾತ್ರ ಆಗಿಲ್ಲ.

ಅಮೆರಿಕ, ಇಸ್ರೇಲ್‌ನಲ್ಲಿ ಸಂತಾಪ
ಅಮೆರಿಕ ಹಾಗೂ ಇಸ್ರೇಲ್‌ಗಳು 2008ರ 26/11 ದಾಳಿಯಲ್ಲಿ ಮೃತಪಟ್ಟ ತಮ್ಮ ದೇಶದ ಪ್ರಜೆಗಳಿಗೆ ಗುರುವಾರ ಗೌರವ ಸಲ್ಲಿಸಿದವು. ದಾಳಿಯಲ್ಲಿಅಮೆರಿಕ ಹಾಗೂ ಇಸ್ರೇಲ್‌ನ ತಲಾ 6 ಮಂದಿ ಮೃತಪಟ್ಟಿದ್ದಾರೆ. ''ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ಸೇರಿದಂತೆ ಯಾವುದೇ ದೇಶವು ಯಾವುದೇ ರೀತಿಯ ನೆರವು ನೀಡುವುದನ್ನು ನಾವು ವಿರೋಧಿಸುತ್ತೇವೆ,'' ಎಂದು ಇಸ್ರೇಲ್‌ ತಿಳಿಸಿದೆ. ದೇಶದಲ್ಲಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿ ಹಲವು ನಾಯಕರು ಮುಂಬಯಿ ದಾಳಿಯಲ್ಲಿ ಮಡಿದವರಿಗೆ ಗೌರವ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ