ಆ್ಯಪ್ನಗರ

Imran Khan: ಪಾಕಿಸ್ತಾನದಲ್ಲಿ ಹೈಡ್ರಾಮಾ: ಇಮ್ರಾನ್ ಖಾನ್ ನಿವಾಸದ ಮೇಲೆ ಪೊಲೀಸರ ದಾಳಿ, ಪೆಟ್ರೋಲ್ ಬಾಂಬ್ ವಶ

Punjab Police Raid Imran Khan House: ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಕಾರ್ಯಾಚರಣೆ ಮತ್ತಷ್ಟು ನಾಟಕೀಯ ಸನ್ನಿವೇಶಗಳನ್ನು ಸೃಷ್ಟಿಸಿದೆ. ಲಾಹೋರ್‌ನಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರ ಬೃಹತ್ ಪಡೆ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದೆ.

Authored byಅಮಿತ್ ಎಂ.ಎಸ್ | Vijaya Karnataka Web 18 Mar 2023, 8:24 pm

ಹೈಲೈಟ್ಸ್‌:

  • ಪಾಕಿಸ್ತಾನದ ಲಾಹೋರ್‌ನಲ್ಲಿನ ಇಮ್ರಾನ್ ಖಾನ್ ನಿವಾಸದ ಮೇಲೆ ಬೃಹತ್ ಕಾರ್ಯಾಚರಣೆ
  • ಪಿಟಿಐ ಕಾರ್ಯಕರ್ತರ ಪ್ರತಿರೋಧದ ನಡುವೆ ಮನೆಯೊಳಗೆ ಪ್ರವೇಶಿಸಿದ ಪೊಲೀಸರ ದೊಡ್ಡ ಗುಂಪು
  • ಮನೆ ಒಳಗೆ ರೈಫಲ್‌, ಪೆಟ್ರೋಲ್ ಬಾಂಬ್‌ಗಳು ಪತ್ತೆ, 61 ಪಿಟಿಐ ಕಾರ್ಯಕರ್ತರ ಬಂಧನ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Iman Khan
ಲಾಹೋರ್: ಪಾಕಿಸ್ತಾನದಲ್ಲಿನ ರಾಜಕೀಯ ಕೋಲಾಹಲ ಮತ್ತಷ್ಟು ಉಲ್ಬಣಗೊಳ್ಳುವ ಸೂಚನೆ ದೊರಕಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಲಾಹೋರ್‌ನಲ್ಲಿನ ನಿವಾಸದಲ್ಲಿ 10,000ಕ್ಕೂ ಅಧಿಕ ಶಸ್ತ್ರಸಜ್ಜಿತ ಪಂಜಾಬ್ ಪೊಲೀಸ್ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪಿಟಿಐ ಪಕ್ಷದ ಅನೇಕರನ್ನು ಬಂಧಿಸಿದ್ದಾರೆ. ಇಮ್ರಾನ್ ಖಾನ್ ನಿವಾಸದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಪೆಟ್ರೋಲ್ ಬಾಂಬ್‌ಗಳು ಪತ್ತೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರು ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆಂದು ಇಸ್ಲಾಮಾಬಾದ್‌ಗೆ ತೆರಳಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.
Imran Khan - ಇನ್ನು ಕೆಲವೇ ಗಂಟೆಗಳಲ್ಲಿ ಇಮ್ರಾನ್ ಖಾನ್ ಬಂಧನ; ಮನೆ ಬಳಿ ಬಂದ ಪೊಲೀಸರ ಮೇಲೆ ಕಲ್ಲು ತೂರಾಟ

ಲಾಹೋರ್‌ನಲ್ಲಿನ ಖಾನ್ ಅವರ ಜಮಾನ್ ಪಾರ್ಕ್ ನಿವಾಸದಲ್ಲಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದರು. ತೋಶಖಾನಾ ಪ್ರಕರಣದಲ್ಲಿ ಖಾನ್ ಅವರನ್ನು ಬಂಧಿಸದಂತೆ ತಡೆಯಲು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಕಾರ್ಯಕರ್ತರು ಅಳವಡಿಸಿದ್ದ ಬ್ಯಾರಿಕೇಡ್‌ಗಳು ಮತ್ತು ಕ್ಯಾಂಪ್‌ಗಳನ್ನು ತೆರವುಗೊಳಿಸಿದರು.


ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪಡೆದ ಬಲು ದುಬಾರಿ ಗ್ರಾಫ್ ರಿಸ್ಟ್ ವಾಚ್ ಸೇರಿದಂತೆ ಇತರೆ ಬೆಲೆ ಬಾಳುವ ವಸ್ತುಗಳನ್ನು ತೋಶಖಾನಾ ಎಂದು ಕರೆಯಲಾಗುವ ಪಾಕಿಸ್ತಾನ ಸರ್ಕಾರದ ಖಜಾನೆಯಿಂದ ರಿಯಾಯಿತಿ ದರದಲ್ಲಿ ಖರೀದಿಸಿ, ಅದನ್ನು ದುಬಾರಿ ದರಕ್ಕೆ ಮಾರಾಟ ಮಾಡಿದ ಆರೋಪ 70 ವರ್ಷದ ಇಮ್ರಾನ್ ಖಾನ್ ಮೇಲಿದೆ.

ಪೊಲೀಸರು ಶನಿವಾರ ನಡೆಸಿದ ಕಾರ್ಯಾಚರಣೆ ವೇಳೆ ಪಿಟಿಐನ 61 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸುಮಾರು 10 ಪಿಟಿಐ ಬೆಂಬಲಿಗರು ಮತ್ತು ಮೂವರು ಪೊಲೀಸರು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಆದರೆ ಖಾನ್ ಅವರನ್ನು ಬಂಧಿಸುವ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.
Imran Khan arrest | ಇಮ್ರಾನ್‌ ಖಾನ್‌ ಬಂಧಿಸಲು ಲಾಹೋರ್‌ಗೆ ಬಂದ ಇಸ್ಲಾಮಾಬಾದ್ ಪೊಲೀಸರು, ಸಿಗಲಿಲ್ಲ ಮಾಜಿ ಪ್ರಧಾನಿ

ಲಾಹೋರ್ ಹೈಕೋರ್ಟ್ ಆದೇಶ ಹಾಗೂ ಪಿಎಸ್‌ಎಲ್ ಮ್ಯಾಚ್ (ಕ್ರಿಕೆಟ್ ಲೀಗ್) ಕಾರಣದಿಂದ ಜಮಾನ್ ಪಾರ್ಕ್‌ನಲ್ಲಿನ ಕಾರ್ಯಾಚರಣೆಯನ್ನು ಪೊಲೀಸರು ಸ್ಥಗಿತಗೊಳಿಸಿದ್ದರು. ಆದರೆ ಪೊಲೀಸರ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಹೈಕೋರ್ಟ್ ತಡೆ ನೀಡಿರಲಿಲ್ಲ. ಇಂದು ನಾವು ಮಧ್ಯಾಹ್ನ 12 ಗಂಟೆಗೆ ಕಾರ್ಯಾಚರಣೆ ಆರಂಭಿಸಿದೆವು. ಪಿಟಿಐ ಕಾರ್ಯಕರ್ತರಿಂದ ಪ್ರತಿರೋಧ ಎದುರಾಯಿತು. ಆದರೆ ನಾವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು , 61 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪಂಜಾಬ್ ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ಡಾ. ಉಸ್ಮಾನ್ ಅನ್ವರ್ ತಿಳಿಸಿದ್ದಾರೆ.


ಭಾರಿ ಶಸ್ತ್ರಾಸ್ತ್ರಗಳು ವಶ

ಕಲಾಶ್ನಿಕೋವ್ ಸೇರಿದಂತೆ 20 ರೈಫಲ್‌ಗಳು ಪೆಟ್ರೋಲ್ ಬಾಂಬ್‌ಗಳನ್ನು ಇಮ್ರಾನ್ ಖಾನ್ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಜಮಾನ್ ಪಾರ್ಕ್ ಜಾಗದಲ್ಲಿ ಕೆಲವು ಬಂಕರ್‌ಗಳನ್ನು ನಿರ್ಮಿಸಲಾಗಿತ್ತು. ಈ ಸಂಬಂಧ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ. ಪೊಲೀಸರು ಸರ್ಚ್ ವಾರಂಟ್ ಪಡೆದ ಬಳಿಕವಷ್ಟೇ ಈ ರೇಡ್ ನಡೆದಿದೆ ಎಂದು ಹೇಳಿದ್ದಾರೆ.


ಕಾರ್ಯಾಚರಣೆ ವೇಳೆ ಪೊಲೀಸರು ಪಿಟಿಐ ಕಾರ್ಯಕರ್ತರು ಮತ್ತು ಮನೆ ಕೆಲಸವರಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಖಾನ್ ನಿವಾಸದ ಒಳಗೆ ಪ್ರವೇಶಿಸಿದ ಬಳಿಕ ಪಿಟಿಐ ಕಾರ್ಯಕರ್ತರಿಗೆ ಪೊಲೀಸರು ಹೊಡೆಯುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮನೆ ಒಳಗಿನಿಂದ ತಮ್ಮ ಮೇಲೆ ಗುಂಡು ಹಾರಿಸಲಾಯಿತು ಎಂದು ಹೇಳಿರುವ ಪೊಲೀಸರು, ಖಾನ್ ನಿವಾಸದ ಮುಖ್ಯ ಗೇಟ್ ಹಾಗೂ ಮುಂದಿನ ಗೋಡೆಗಳನ್ನು ಬುಲ್ಡೋಜರ್ ಮೂಲಕ ಒಡೆದು ಪರಿಶೀಲನೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಮೋದಿ ಭಾರತದಿಂದ ಹೊರಗೆ ಎಷ್ಟು ಆಸ್ತಿ ಮಾಡಿದ್ದಾರೆ?: ಷರೀಫ್ ಜತೆ ಇಮ್ರಾನ್ ಖಾನ್ ಹೋಲಿಕೆ

ಇಮ್ರಾನ್ ಬೆಂಗಾವಲು ವಾಹನ ಅಪಘಾತ

ಇನ್ನೊಂದೆಡೆ ಇಸ್ಲಾಮಾಬಾದ್‌ಗೆ ತೆರಳಿತ್ತಿದ್ದ ಇಮ್ರಾನ್ ಖಾನ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಯಿತು. ಇದರಿಂದ ಖಾನ್ ಅವರು ಕೋರ್ಟ್‌ಗೆ ತೆರಳುವುದು ತಡವಾಯಿತು. ತಮ್ಮನ್ನು ಬಂಧಿಸಲು ಸರ್ಕಾರ ಸಂಚು ನಡೆಸಿದೆ. ಚುನಾವಣಾ ಪ್ರಚಾರ ನಡೆಸದಂತೆ ತಮ್ಮನ್ನು ತಡೆಯುವುದು ಅದರ ಉದ್ದೇಶ ಎಂದು ಖಾನ್ ಆರೋಪಿಸಿದ್ದಾರೆ.

ತೋಶಖಾನಾ ಸೇರಿದಂತೆ 9 ಪ್ರಕರಣಗಳಿಂದ ಇಮ್ರಾನ್ ಖಾನ್ ಅವರನ್ನು ಬಂಧಿಸದಂತೆ ಕೋರ್ಟ್ ರಕ್ಷಣೆ ನೀಡಿದೆ. ಆದರೂ ತಮ್ಮನ್ನು ಬಂಧಿಸಲಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. "ಅವರು ನನ್ನನ್ನು ಬಂಧಿಸುತ್ತಾರೆ ಎಂಬುದು ಗೊತ್ತಿದ್ದರೂ ನಾನು ನ್ಯಾಯಾಲಯಕ್ಕೆ ಹೋಗುತ್ತಿದ್ದೇನೆ. ಏಕೆಂದರೆ ನನಗೆ ಕಾನೂನಿನಲ್ಲಿ ನಂಬಿಕೆ ಇದೆ" ಎಂದು ಹೇಳಿದ್ದಾರೆ.

"ನನ್ನ ಪತ್ನಿ ಬುಶ್ರಾ ಬೇಗಂ ಒಬ್ಬಂಟಿಯಾಗಿರುವ ಮನೆಯ ಮೇಲೆ ಪಂಜಾಬ್ ಪೊಲೀಸರು ಆಕ್ರಮಣ ಎಸಗಿದ್ದಾರೆ. ಯಾವ ಕಾನೂನಿನ ಅಡಿ ಅವರು ಇದನ್ನು ಮಾಡುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ