ಆ್ಯಪ್ನಗರ

ಭಾರತೀಯ ಜೆಟ್‌ಗಳು ಬಾಂಬ್ ದಾಳಿ ನಡೆಸಬಾರದೆಂದು ಪಾಕ್‌ ಸರಕಾರ ಉಗ್ರರನ್ನು ರಕ್ಷಿಸುತ್ತಿದೆ: ಬಿಲಾವಲ್‌ ಭುಟ್ಟೋ

ಪಾಕಿಸ್ತಾನ ಸರಕಾರ ಉಗ್ರರನ್ನು ರಕ್ಷಿಸಲು ವಶದಲ್ಲಿ ಇಟ್ಟುಕೊಂಡಿದೆ ಅಷ್ಟೇ. ಭಾರತೀಯ ಜೆಟ್‌ಗಳು ಉಗ್ರರ ಮೇಲೆ ಬಾಂಬ್‌ ದಾಳಿ ನಡೆಸಲಾರದಂತೆ ರಕ್ಷಿಸುತ್ತಿದೆ ಎಂದು ಪಾಕಿಸ್ತಾನ ಪೀಪಲ್ಸ್ ಪಕ್ಷ (ಪಿಪಿಪಿ) ನಾಯಕ ಬಿಲಾವಲ್ ಭುಟ್ಟೋ ಆರೋಪಿಸಿದ್ದಾರೆ.

TIMESOFINDIA.COM 21 Mar 2019, 10:20 pm
ಇಸ್ಲಾಮಾಬಾದ್: ಭಯೋತ್ಪಾದನೆ ವಿಚಾರದಲ್ಲಿ ಪದೇ ಪದೇ ಟೀಕೆಗೊಳಗಾಗ್ತಿರುವ ಪಾಪಿ ಪಾಕಿಸ್ತಾನ ಈ ಬಾರಿ ತನ್ನದೇ ದೇಶದೊಳಗಿನ ನಾಯಕನಿಂದಲೇ ಛೀಮಾರಿ ಹಾಕಿಸಿಕೊಂಡಿದೆ. ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು ಪಾಕಿಸ್ತಾನ ಪೀಪಲ್ಸ್ ಪಕ್ಷ (ಪಿಪಿಪಿ) ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಪ್ರಶ್ನೆ ಮಾಡಿದ್ದಾರೆ.
Vijaya Karnataka Web bilawal bhutto


ಅಲ್ಲದೆ, ''ಉಗ್ರರನ್ನು ಬಂಧಿಸಿಲ್ಲ. ಬದಲಾಗಿ ಭಾರತೀಯ ಜೆಟ್‌ಗಳು ಅವರ ಮೇಲೆ ಬಾಂಬ್‌ ದಾಳಿ ನಡೆಸಲು ಸಾಧ್ಯವಾಗದಂತೆ ರಕ್ಷಿಸಲು ವಶಕ್ಕೆ ಪಡೆಯಲಾಗಿದೆ'' ಎಂದು ಬಿಲಾವಲ್ ಭುಟ್ಟೋ ಬುಧವಾರ ( ಮಾರ್ಚ್ 20, 2019)ರಂದು ವರದಿ ನೀಡಲಾಗಿದೆ.

ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ಹಿನ್ನೆಲೆ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ಎದುರು ತಂದೆ ಹಾಗೂ ಪಾಕಿಸ್ತಾನ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಜತೆಗೆ ವಿಚಾರಣೆಗೆ ಹಾಜರಾಗಿದ್ದ ಪಿಪಿಪಿ ನಾಯಕ ಬಿಲಾವಲ್‌ ಭುಟ್ಟೋ ವರದಿಗಾರರ ಬಳಿ ಪಾಕ್ ಸರಕಾರದ ವಿರುದ್ಧ ಈ ಆರೋಪ ಮಾಡಿದ್ದಾರೆ. ಅಲ್ಲದೆ, ನಿಷೇಧಿತ ಉಗ್ರ ಸಂಘಟನೆಗಳ ನೆರವನ್ನು ಪ್ರಧಾನಿ ಇಮ್ರಾನ್ ಖಾನ್ ಪಡೆದುಕೊಳ್ಳುತ್ತಿದ್ದಾರೆ ಎಂದು ಪಿಪಿಪಿ ನಾಯಕ ಆರೋಪಿಸಿದ್ದಾರೆ.

ಇನ್ನೊಂದೆಡೆ, ಭಾರತದ ಮೇಲೆ ಪುನಃ ಉಗ್ರ ದಾಳಿ ನಡೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಅಮೆರಿಕ ಖಡಕ್‌ ಎಚ್ಚರಿಕೆ ನೀಡಿದೆ. ಇದೇ ವೇಳೆ, ಪಾಕಿಸ್ತಾನದ ರಕ್ಷಾಕವಚದಂತೆ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಚೀನಾವನ್ನು ಆಗ್ರಹಿಸಿದೆ.

''ಉಪಖಂಡದಲ್ಲಿ ಉದ್ವಿಗ್ನ ವಾತಾವರಣ ದಮನ, ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಮುಖ್ಯವಾಗಿ ಜೈಷೆ ಮೊಹಮದ್‌, ಲಷ್ಕರೆ ತಯ್ಬಾ ಸೇರಿದಂತೆ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅಮೆರಿಕ ಬಯಸುತ್ತದೆ. ಒಂದು ವೇಳೆ ಉಗ್ರರ ವಿರುದ್ಧ ಗಂಭೀರ ಕ್ರಮಗಳನ್ನು ಕೈಗೊಳ್ಳದೆ, ಉಗ್ರ ಸಂಘಟನೆಗಳು ಭಾರತದ ಮೇಲೆ ಪುನಃ ದಾಳಿ ನಡೆಸಿದರೆ ಪಾಕಿಸ್ತಾನ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ,'' ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

''ಪುಲ್ವಾಮಾ ದಾಳಿಯ ನಂತರ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕೆಲವು ಕ್ರಮಗಳನ್ನು ಕೈಗೊಂಡಿದೆಯಾದರೂ ಅದು ಸಾಲದು. ಇನ್ನಷ್ಟು ಕಠಿಣ ಕ್ರಮಗಳನ್ನು ಜರುಗಿಸಬೇಕಿದೆ. ನಾವು ಗಮನಿಸಿದಂತೆ, ಈ ಹಿಂದೆ ಕೆಲವು ಉಗ್ರರನ್ನು ಬಂಧಿಸಿ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ ಉಗ್ರರು ಸ್ವತಂತ್ರವಾಗಿ ಓಡಾಡಲು, ರಾರ‍ಯಲಿಗಳನ್ನು ಹಮ್ಮಿಕೊಳ್ಳಲು ಅವಕಾಶ ನೀಡಲಾಗಿದೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ