ಆ್ಯಪ್ನಗರ

Pakistan: ಐಎಂಎಫ್‌ ಜೊತೆ ಮತ್ತೊಂದು ಸುತ್ತಿನ ಚೌಕಾಶಿ: ನಾವು ಭಿಕ್ಷೆ ಬೇಡ್ತಿಲ್ಲ ಎಂದ ಪಾಕಿಸ್ತಾನ!

Pakistan Economic Crisis: ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಮಾತಿದೆ. ಈ ಮಾತು ಪಾಕಿಸ್ತಾನಕ್ಕೆ ಯಥಾವತ್ತಾಗಿ ಅನ್ವಯ ಆಗುತ್ತೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ, ಪ್ರತಿ ದಿನ ಒಂದಲ್ಲಾ ಒಂದು ರಾಷ್ಟ್ರದ ಎದುರು ಭಿಕ್ಷಾ ಪಾತ್ರೆ ಹಿಡಿದು ನಿಲ್ಲುತ್ತಿದೆ. ಜೊತೆಯಲ್ಲೇ ಐಎಂಎಫ್‌ ಜೊತೆಯಲ್ಲೂ ಮೇಲಿಂದ ಮೇಲೆ ಮಾತುಕತೆ ನಡೆಸುತ್ತಿದೆ. ಹಣ ಕೊಡೋದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿರುವ ಐಎಂಎಫ್‌ಗೆ ಪಾಕಿಸ್ತಾನದ ಅಧಿಕಾರಿಗಳು ಧಮ್ಕಿ ಕೂಡಾ ಹಾಕಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ!

Authored byದಿಲೀಪ್ ಡಿ. ಆರ್. | Vijaya Karnataka Web 5 Mar 2023, 12:55 pm

ಹೈಲೈಟ್ಸ್‌:

  • ನಾವು ಐಎಂಎಫ್‌ನಿಂದ ಭಿಕ್ಷೆ ಕೇಳುತ್ತಿಲ್ಲ. ನಾವು ಭಿಕ್ಷುಕರಲ್ಲ
  • ನಾವು ಐಎಂಎಫ್‌ನ ಸದಸ್ಯರು. ಹೀಗಾಗಿ, ಆರ್ಥಿಕ ಸಹಾಯ ಕೇಳುತ್ತಿದ್ದೇವೆ
  • ಹಣ ನೀಡುವುದಿಲ್ಲವಾದ್ರೆ ನಮ್ಮ ಸದಸ್ಯತ್ವ ರದ್ದುಪಡಿಸಲಿ: ಐಎಂಎಫ್‌ಗೆ ಪಾಕ್ ಸವಾಲ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web imf pak
ಐಎಂಎಫ್‌ ಜೊತೆ ಮತ್ತೊಂದು ಸುತ್ತಿನ ಚೌಕಾಶಿ: ನಾವು ಭಿಕ್ಷೆ ಬೇಡ್ತಿಲ್ಲ ಎಂದ ಪಾಕಿಸ್ತಾನ!
ಇಸ್ಲಾಮಾಬಾದ್ (ಪಾಕಿಸ್ತಾನ): ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಪಾಕಿಸ್ತಾನ ದೇಶವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಅನುದಾನ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಮಾರ್ಚ್ 6 ಸೋಮವಾರ ಕೂಡಾ ಐಎಂಎಫ್ ಹಾಗೂ ಪಾಕ್ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಆದ್ರೆ, ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಹಣ ಸಿಗೋದು ಕಷ್ಟ ಕಷ್ಟ ಎಂದೇ ವಿಶ್ಲೇಷಿಸಲಾಗುತ್ತಿದೆ..!
ಏಕೆಂದರೆ ಮುಂದಿನ ನಾಲ್ಕು ತಿಂಗಳಲ್ಲಿ ಪಾಕಿಸ್ತಾನ ಸರ್ಕಾರ ಸಂಗ್ರಹ ಮಾಡಲಿರುವ ಆದಾಯ ಹಾಗೂ ಖರ್ಚು - ವೆಚ್ಚಗಳ ಲೆಕ್ಕಾಚಾರವನ್ನು ಐಎಂಎಫ್ ಪರಿಶೀಲನೆ ನಡೆಸಲಿದೆ. ಆದರೆ, ಪಾಕಿಸ್ತಾನ ಸರ್ಕಾರವು ತನ್ನ ದೇಶದ ಆರ್ಥಿಕ ಸುಧಾರಣೆ ಹಾಗೂ ತುರ್ತು ಸಾಲ ತೀರಿಸಲು 1.1 ಬಿಲಿಯನ್ ಅಮೆರಿಕನ್ ಡಾಲರ್ ಹಣ ನೀಡುವಂತೆ ಮನವಿ ಮಾಡಿದೆ. ಈ ಮನವಿಯನ್ನು ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಯು ಈ ಹಿಂದೆಯೇ ತಳ್ಳಿ ಹಾಕಿರುವ ಹಿನ್ನೆಲೆಯಲ್ಲಿ ಪಾಕ್ ಸರ್ಕಾರದ ಪ್ರಮುಖರು ಆತಂಕದಲ್ಲಿದ್ದಾರೆ.

Pakistan: ಪಾಕಿಸ್ತಾನ ದೇಶವನ್ನೇ ಛಿದ್ರ ಮಾಡಲಿದ್ದಾರೆ ಟಿಟಿಪಿ ಉಗ್ರರು! ಅಮೆರಿಕ ವಾರ್ನಿಂಗ್!
ಇಷ್ಟಾದರೂ ಪಾಕ್ ಸರ್ಕಾರದ ಅಧಿಕಾರಿಗಳು ತಮ್ಮ ಮೊಂಡಾಟ ಮುಂದುವರೆಸಿದ್ದಾರೆ. ನಾವು ಐಎಂಎಫ್‌ನಿಂದ ಭಿಕ್ಷೆ ಕೇಳುತ್ತಿಲ್ಲ. ನಾವು ಭಿಕ್ಷುಕರಲ್ಲ. ನಾವು ಐಎಂಎಫ್‌ನ ಸದಸ್ಯರು. ಹೀಗಾಗಿ, ಆರ್ಥಿಕ ಸಹಾಯ ಕೇಳುತ್ತಿದ್ದೇವೆ. ಹಣ ನೀಡುವುದಿಲ್ಲವಾದ್ರೆ ನಮ್ಮ ಸದಸ್ಯತ್ವ ರದ್ದುಪಡಿಸಲಿ ಎಂದೂ ಐಎಂಎಫ್‌ಗೆ ಸವಾಲೆಸೆದಿದ್ದಾರೆ.

ಇನ್ನೊಂದೆಡೆ ಚೀನಾದ ಕೈಗಾರಿಕಾ ಹಾಗೂ ವಾಣಿಜ್ಯ ಬ್ಯಾಂಕ್ ಪಾಕಿಸ್ತಾನ ದೇಶಕ್ಕೆ 1.3 ಬಿಲಿಯನ್ ಅಮೆರಿಕನ್ ಡಾಲರ್ ಹಣಕಾಸು ನೆರವು ನೀಡಲಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಖ್ ಧರ್ ಅವರು ಶನಿವಾರ ಹೇಳಿಕೆ ನೀಡಿದ್ಧರು. ಈ ಸಂಬಂಧ ಎಲ್ಲ ಕಾಗದ ಪತ್ರಗಳ ದಾಖಲಾತಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಹಣ ಸಿಗಲಿದೆ. ಈ ಹಣವನ್ನು ನಾವು ವಿದೇಶಿ ವಿನಿಮಯ ನಿಧಿಯನ್ನಾಗಿ ಬಳಸಿಕೊಳ್ತೇವೆ ಎಂದು ಅವರು ವಿವರಿಸಿದ್ದಾರೆ.

India Slams Pakistan: ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ಕ್ಯಾತೆ ತೆಗೆದ ಪಾಕಿಸ್ತಾನಕ್ಕೆ ಭಾರತದ ತಿರುಗೇಟು!
ಚೀನಾದಿಂದ ಪಾಕಿಸ್ತಾನಕ್ಕೆ ಮೊದಲ ಹಂತವಾಗಿ 500 ಮಿಲಿಯನ್ ಅಮೆರಿಕನ್ ಡಾಲರ್ ಹಣ ಸಿಗಲಿದ್ದು, ಮುಂದಿನ 10 ದಿನಗಳ ನಂತರ ಮತ್ತೊಮ್ಮೆ 500 ಮಿಲಿಯನ್ ಅಮೆರಿಕನ್ ಡಾಲರ್ ಹಣ ಸಿಗಲಿದೆ ಎಂದು ಅವರು ಹೆಳಿದ್ದಾರೆ. ಸದ್ಯ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಬಳಿ 3.82 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ವಿದೇಶಿ ವಿನಿಮಯ ನಿಧಿ ಇದ್ದು, ಚೀನಾದ ನೆರವಿನಿಂದ ಹಾಗೂ ದೇಶೀಯ ಬ್ಯಾಂಕ್‌ಗಳ ನಿಧಿ ಸಂಗ್ರಹದಿಂದ ಈ ಮೊತ್ತ 9.26 ಬಿಲಿಯನ್ ಡಾಲರ್‌ಗೆ ಏರಿಕೆ ಆಗಲಿದೆ ಎಂದು ಇಶಾಖ್ ಧರ್ ವಿವರಿಸಿದ್ಧಾರೆ.

ಆರ್ಥಿಕ ಸಂಕಷ್ಟದಲ್ಲಿ ಇರುವ ಪಾಕಿಸ್ತಾನಕ್ಕೆ ತುರ್ತಾಗಿ ನೆರವು ನೀಡುತ್ತಿರುವ ಚೀನಾ ದೇಶಕ್ಕೆ ಧನ್ಯವಾದ ಅರ್ಪಿಸಿರುವ ಪಾಕಿಸ್ತಾನದ ಹಣಕಾಸು ಸಚಿವ ಇಶಾಖ್ ಧರ್, ಚೀನಾದ ಈ ನಿರ್ಧಾರವು ನಮ್ಮ ಜೊತೆಗಿನ ಅತ್ಯದ್ಭುತ ಗೆಳೆತನಕ್ಕೆ ಸಾಕ್ಷಿ ಎಂದು ಬಣ್ಣಿಸಿರೋದಾಗಿ ಪಾಕಿಸ್ತಾನದ ಡಾನ್ ಪತ್ರಿಕೆ ಹೇಳಿದೆ. ಚೀನಾದಿಂದ ಸಿಗುತ್ತಿರುವ ಹಣಕಾಸಿನ ನೆರವಿನ ಜೊತೆಯಲ್ಲೇ ಐಎಂಎಫ್‌ನಿಂದಲೂ ಹಣ ಸಿಕ್ಕರೆ ಪಾಕಿಸ್ತಾನದ ಆರ್ಥಿಕ ಸ್ಥಿತಿ ಗಣನೀಯ ಸುಧಾರಣೆ ಕಾಣಲಿದೆ ಎಂದು ಇಶಾಖ್ ಧರ್ ಹೇಳಿದ್ದಾರೆ.


ಇನ್ನೊಂದೆಡೆ ಮಾರ್ಚ್ 5 ರಿಂದ 9ರವರೆಗೆ ಕತಾರ್ ದೇಶದ ಪ್ರವಾಸ ಕೈಗೊಂಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ಹಿಂದುಳಿದ ದೇಶಗಳ ಕುರಿತಾದ ವಿಶ್ವ ಸಂಸ್ಥೆಯ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಕತಾರ್‌ನ ರಾಜನ ಜೊತೆ ಪಾಕಿಸ್ತಾನ ಪ್ರಧಾನಿ ಮಾತುಕತೆ ನಡೆಸಲಿದ್ದು, ಆರ್ಥಿಕ ಸಹಾಯ ಕೇಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇವೆಲ್ಲದರ ಮಧ್ಯೆ ಪಾಕಿಸ್ತಾನ ದೇಶದ ಕೇಂದ್ರೀಯ ಬ್ಯಾಂಕ್‌ಗಳು ಜನರಿಗೆ ನೀಡುತ್ತಿರುವ ಸಾಲದ ಮೇಲಿನ ಬಡ್ಡಿಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿವೆ. ಇದಲ್ಲದೆ ಪಾಕಿಸ್ತಾನ ಸರ್ಕಾರವು ಐಎಂಎಫ್‌ ಸೂಚನೆಯಂತೆ ಪಾಕಿಸ್ತಾನದ ವಿದ್ಯುತ್ ಬಳಕೆದಾರರ ಮೇಲೆ ಪ್ರತಿ ಯೂನಿಟ್‌ಗೆ 3.23 ರೂ. ಹೆಚ್ಚುವರಿ ಸರ್‌ಚಾರ್ಜ್‌ ಕೂಡಾ ಹೇರಿದೆ. ಪಾಕಿಸ್ತಾನದಲ್ಲಿ ದೈನಂದಿನ ಜನ ಜೀವನ ದುಬಾರಿಯಾಗಿದ್ದು, ಆರೋಗ್ಯ, ಆಹಾರ ಕ್ಷೇತ್ರಗಳ ಸ್ಥಿತಿ ಶೋಚನೀಯವಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳು ತಿಳಿಸಿವೆ. ಪಾಕಿಸ್ತಾನದಲ್ಲಿ ಸದ್ಯ ‘ಕಡಿಮೆ ತಿನ್ನಿ’, ‘ಕಡಿಮೆ ವಾಹನ ಬಳಸಿ’ ನೀತಿ ಜಾರಿಯಲ್ಲಿದೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ