ಆ್ಯಪ್ನಗರ

ಮನಮೋಹನ್ ಸಿಂಗ್ ರನ್ನು ಹೊಗಳಿದ ಪಾಕ್ ಸಚಿವ ಖುರೇಷಿ

ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿರುವ ಸಹೃದಯಿ ಮನುಷ್ಯ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಹೊಗಳಿದ್ದಾರೆ. ಮತ್ತೊಂದು ಘಟನೆಯಲ್ಲಿ ಪಾಕಿಸ್ತಾನದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಐವರು ಸಾವನ್ನಪ್ಪಿದ್ದಾರೆ.

Vijaya Karnataka Web 12 Nov 2019, 6:41 am
ಇಸ್ಲಾಮಾಬಾದ್‌: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿರುವ ಸಹೃದಯಿ ಮನುಷ್ಯ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಹೊಗಳಿದ್ದಾರೆ. ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನಾ ಕಾರ್ಯಕ್ರಮದ ಬಳಿಕ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಪ್ರಾರ್ಥನೆ ಸಲ್ಲಿಸಲು ತೆರಳಿದ ಭಾರತೀಯ ನಿಯೋಗದಲ್ಲಿ ಮನಮೋಹನ್‌ ಸಿಂಗ್‌ ಸೇರಿ ಹಲವರು ಇದ್ದರು.
Vijaya Karnataka Web Qureshi_with_Manmohan


ಸಿಂಗ್‌ ದಂಪತಿ ಜತೆ ಖುರೇಷಿ ಸಂಭಾಷಣೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ''ನಾನು 90ರ ದಶಕದಲ್ಲಿ ನಿಮ್ಮ ಮನೆಗೆ ಭೇಟಿ ನೀಡಿದ್ದೆ. ನಿಮ್ಮ ಪತ್ನಿ ಗುರುಶರಣ್‌ ಕೌರ್‌ ತಯಾರಿಸಿದ ರುಚಿಕರ ಚಹಾವನ್ನು ಖುದ್ದು ನೀವೇ ಕೈಯಾರೆ ತಂದು ನನಗೆ ನೀಡಿದ್ದಿರಿ. ನನಗೆ ಸಿಕ್ಕ ಒಳ್ಳೆಯ ಆತಿಥ್ಯವನ್ನು ಕಂಡು ಪಾಕಿಸ್ತಾನಿಯರ ಮುಂದೆ ನಾನು ಮನಮೋಹನ್‌ ಸಿಂಗ್‌ ಸಹೃದಯಿ ಮನುಷ್ಯ ಎಂದು ಹೇಳಿದ್ದೆ,'' ಎಂದು ಖುರೇಷಿ ಅವರು ಮನಮೋಹನ್‌ ದಂಪತಿಗೆ ಘಟನೆಯನ್ನು ನೆನಪಿಸುತ್ತಿರುವುದು ವಿಡಿಯೊದಲ್ಲಿದೆ. ಭಾರತೀಯ ನಿಯೋಗದಲ್ಲಿ ಪಂಜಾಬ್‌ ಸಿಎಂ ಕ್ಯಾಪ್ಟನ್‌ ಅಮರೀದರ್‌ ಸಿಂಗ್‌, ಕೇಂದ್ರ ಸಚಿವ ಹರ್ದೀಪ್‌ ಪುರಿ, ಸೋಮ್‌ ಪ್ರಕಾಶ್‌ ಸಹ ಇದ್ದರು.

ಪಾಕ್‌ನಲ್ಲಿಉಗ್ರರ ದಾಳಿಗೆ ಐವರು ಬಲಿ:

ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿಪೊಲೀಸ್‌ ವಾಹನ ಗುರಿ­ಯಾಗಿಟ್ಟುಕೊಂಡು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಪೊಲೀಸರು ಸೇರಿ ಐವರು ಹತರಾಗಿದ್ದಾರೆ. ಸೋಮ­ವಾರ ಬೆಳಗ್ಗೆ ಪಂಜಾಬ್‌ ಪ್ರಾಂತ್ಯದ ರಾಜನ್‌ಪುರ ಜಿಲ್ಲೆಯ ಅರ್ಬಿ ತಿಬ್ಬಾ ಪ್ರದೇಶದಲ್ಲಿಈ ದಾಳಿ ನಡೆದಿದೆ. ದುಷ್ಕರ್ಮಿಗಳ ಅಡಗುದಾಣ ಭೇದಿ­ಸಲು ಪೊಲೀಸರು ಮುಂದಾದಾಗ ಅವರ ವಿರುದ್ಧವೇ ಹಠಾತ್‌ ಗುಂಡಿನ ದಾಳಿಯಾಗಿದೆ. ಇದರಲ್ಲಿಇಬ್ಬರು ಪೊಲೀಸರು ಹಾಗೂ ಮೂವರು ಸ್ಥಳೀ­ಯರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಪೊಲೀಸ್‌ ವ್ಯಾನ್‌ ಕೂಡ ಜಖಂಗೊಂಡಿದೆ. ಇದುವರೆಗೆ ಯಾರೂ ಕೂಡ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ