ಆ್ಯಪ್ನಗರ

ಈಕ್ವೆಡಾರ್‌ನಲ್ಲಿ ಮುನಿದ ಪೃಥ್ವಿ

ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 77 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

ಏಜೆನ್ಸೀಸ್ 17 Apr 2016, 9:01 pm
ಕ್ವಿಟೊ: ಜಪಾನ್‌ನಲ್ಲಿ ಸಂಭವಿಸಿದ ಪ್ರಬಲ 3 ಭೂಕಂಪನಗಳಿಂದ ಉಂಟಾಗಿರುವ ಅಪಾರ ಸಾವು-ನೋವು, ಆಸ್ತಿ-ಪಾಸ್ತಿಯ ತೀವ್ರ ಹಾನಿಯ ರಕ್ಷಣಾ ಮತ್ತು ಪರಿಹಾರ ಕಾರ್ಯಚರಣೆ ಭರದಿಂದ ಸಾಗಿರುವ ಬೆನ್ನ ಹಿಂದೆಯೇ, ಲ್ಯಾಟಿನ್‌ ಅಮೆರಿಕ ರಾಷ್ಟ್ರ ‘ಈಕ್ವೆಡಾರ್‌’ನಲ್ಲಿ ಶನಿವಾರ ಸಂಜೆ ಮುನಿದ ಭುವಿಗೆ 77 ಜನರು ಬಲಿಯಾಗಿರುವುದು ವಿಶ್ವಾದ್ಯಂತ ಜನರಲ್ಲಿ ಆತಂಕ ಹೆಚ್ಚಿಸಿದೆ.
Vijaya Karnataka Web powerful earthquake kills 77 in ecuador
ಈಕ್ವೆಡಾರ್‌ನಲ್ಲಿ ಮುನಿದ ಪೃಥ್ವಿ


ಈಕ್ವೆಡಾರ್‌ನ ಉತ್ತರ ಭಾಗದ ಕರಾವಳಿ ಪಟ್ಟಣ ಮ್ಯೂಸ್ನೆ, ರಾಜಧಾನಿ ನಗರ ಕ್ವಿಟೊ ಮತ್ತು ವಾಣಿಜ್ಯ ನಗರಿ ಗಯಾಖಿಲ್‌ ಸುತ್ತಮುತ್ತಲ ಪ್ರದೇಶದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪನಕ್ಕೆ ಒಟ್ಟು 77 ಜನರು ಮೃತಪಟ್ಟು, 600ಕ್ಕಿಂತ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಈಕ್ವೆಡಾರ್‌ ಕಾಲಮಾನದ ಪ್ರಕಾರ, ಶನಿವಾರ ಸಂಜೆ 6.58ಕ್ಕೆ ಭೂಮಿ ಬಲವಾಗಿ ಕಂಪಿಸಿತು. ಅದಾದ 11 ನಿಮಿಷಗಳ ತರುವಾಯ ಭೂಮಿ ಮತ್ತೆ ಕಂಪಿಸಿತು ಎಂಬ ಅಮೆರಿಕ ಭೂಗರ್ಭ ಸಮೀಕ್ಷಾ ಇಲಾಖೆಯ ಮಾಹಿತಿಯನ್ನು ಈಕ್ವೆಡಾರ್‌ ಉಪಾಧ್ಯಕ್ಷ ಜಾಜ್‌ರ್‍ ಗ್ಲಾಸ್‌ ದೃಢಪಡಿಸಿದ್ದಾರೆ.

ಭೂಕಂಪನ ಸುದ್ದಿ ಕೇಳಿದ ಈಕ್ವೆಡಾರ್‌ ಅಧ್ಯಕ್ಷ ರಫೇಲ್‌ ಕೊರಿಯಾ ಅವರು ತಮ್ಮ ವ್ಯಾಟಿಕನ್‌ ಸಿಟಿ ಪ್ರವಾಸ ಮೊಟಕು ಮಾಡಿ, ತಾಯ್ನಾಡಿಗೆ ಹಿಂದಿರುಗಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ನೆರವಾಗುತ್ತಿದ್ದಾರೆ.

ಭೂಕಂಪದ ಹಿನ್ನೆಲೆಯಲ್ಲಿ ಈಕ್ವೆಡಾರ್‌ನ 6 ಪ್ರಾಂತ್ಯಗಳಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ರಾಜಧಾನಿ ನಗರಿ ಕ್ವಿಟೊದ ಅರ್ಧಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ವಿದ್ಯುತ್‌ ಮತ್ತು ದೂರವಾಣಿ ಸಂಪರ್ಕ ಕಡಿದುಹೋಗಿದೆ.

1979ರ ನಂತರ ಸಂಭವಿಸಿರುವ ಭೀಕರ ದುರಂತ ಇದಾಗಿದ್ದು, ಕ್ವಿಟೊದಲ್ಲಿ ಹಲವಾರು ಕಟ್ಟಡಗಳು ಹಾನಿಗೊಂಡಿವೆ. ಈಡ್ವೆಡಾರ್‌ನ ಸಮುದ್ರ ತೀರದ ಪ್ರಸಿದ್ಧ ಪ್ರವಾಸಿ ತಾಣ ಪೆಡೆರ್‌ನೇಲ್ಸ್‌ ಮತ್ತು ಸುತ್ತಮುತ್ತಲ ಹಳ್ಳಿಗಳಿಗೆ ತೀವ್ರ ಹಾನಿ ಉಂಟಾಗಿದ್ದು, ದುರಂತ ತಾಣವಾಗಿ ಮಾರ್ಪಟ್ಟಿದೆ ಎಂದು ಮೇಯರ್‌ ಗೇಬ್ರಿಯಲ್‌ ಅಲ್ಸಿವರ್‌ ತಿಳಿಸಿದ್ದಾರೆ.

ಈಕ್ವೆಡಾರ್‌ನ ವಾಯವ್ಯ ಕರಾವಳಿ ಭಾಗದಲ್ಲಿ 10 ಕಿ.ಮೀ. ಆಳದವರೆಗೆಕಂಪನ ಕೇಂದ್ರಬಿಂದು ನೆಟ್ಟಿತ್ತು ಎಂದು ಅಮೆರಿಕದ ಭೂಗರ್ಭ ಸಮೀಕ್ಷಾ ಇಲಾಖೆ ತಿಳಿಸಿದೆ.

ಈಕ್ವೆಡಾರ್‌ನ ಕರಾವಳಿ ಭಾಗದಲ್ಲಿ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಫೆಸಿಫಿಕ್‌ ಸುನಾಮಿ ಎಚ್ಚರಿಕಾ ಕೇಂದ್ರ ಮುನ್ಸೂಚನೆ ನೀಡಿದೆ.

ಕ್ವಿಟೊದಲ್ಲಿ ಸತತ 40 ಸೆಕೆಂಡುಗಳ ಕಾಲ ಬಲವಾಗಿ ಭೂಮಿ ಕಂಪಿಸಿದ್ದರಿಂದ ಭಯಭೀತರಾದ ಜನರು ಮನೆಯಿಂದ ಹೊರಬಂದು, ಬೀದಿಗಳಲ್ಲೇ ದಿನದೂಡುತ್ತಿದ್ದಾರೆ.

ರಾಜಧಾನಿ ನಗರಿ ಕ್ವಿಟೊಗೆ ದಕ್ಷಿಣ ದಿಕ್ಕಿಗೆ 300 ಕಿ.ಮೀ. ದೂರದಲ್ಲಿರುವ ಬಂದರು ನಗರ ಗಯಾಖಿಲ್‌ನಲ್ಲಿ ಸೇತುವೆಯೊಂದುಕುಸಿದ ಪರಿಣಾಮ, ಸೂಪರ್‌ ಮಾರ್ಕೆಟ್‌ ಸಂಪೂರ್ಣ ಹಾನಿಗೊಂಡಿದೆ.

ಕರಾವಳಿ ನಗರ ‘ಮಂತಾ’ದಲ್ಲಿ ಹಲವಾರು ರಸ್ತೆಗಳು ಬಿರುಕುಬಿಟ್ಟಿವೆ. ವಿದ್ಯುತ್‌ ಮತ್ತು ದೂರವಾಣಿ ಸಂಪರ್ಕ ಕಡಿದುಹೋಗಿದೆ. ನಿಯಂತ್ರಣ ಟವರ್‌ಗೆ ತೀವ್ರ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಮಂತಾ ಏರ್‌ಪೋರ್ಟ್‌ ಮುಚ್ಚಲಾಗಿದೆ. ಮುಂಜಾಗ್ರತಾ ಕ್ರಮವಾಗಿ, ಇಲ್ಲಿನ ಅತಿದೊಡ್ಡ ತೈಲ ಸಂಸ್ಕರಣಾ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ನೆರೆಯ ಪೆರುವಿನ ಉತ್ತರ ಕರಾವಳಿಯಲ್ಲಿ ಸುನಾಮಿ ಕಟ್ಟೆಚ್ಚರ ಘೋಷಿಸಲಾಗಿದೆ. ದಕ್ಷಿಣ ಕೊಲಂಬಿಯಾದಲ್ಲೂ ಭೂಕಂಪನದ ಅನುಭವವಾಗಿದೆ.

ಈಕ್ವೆಡಾರ್‌ನ ಕರಾವಳಿ ಪಟ್ಟಣ ಮ್ಯೂಸ್ನೆ ಮತ್ತು ರಾಜಧಾನಿ ನಗರ ಕ್ವಿಟೊದಸುತ್ತಮುತ್ತಲ ಪ್ರದೇಶದ ಜನರು ಎತ್ತರದ ಜಾಗಗಳಲ್ಲಿ ಆಶ್ರಯ ಪಡೆದಿದ್ದಾರೆ. ತೀವ್ರ ಹಾನಿಗೊಂಡಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಚರಣೆ ಬಿರುಸಿನಿಂದ ನಡೆಯುತ್ತಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ಈಕ್ವೆಡಾರ್‌ ರಾಷ್ಟ್ರವು ಪದೇಪದೆ ಜ್ವಾಲಾಮುಖಿ ಮತ್ತು ಭೂಕಂಪನಗಳಿಗೆ ತುತ್ತಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ