ಆ್ಯಪ್ನಗರ

ಆಕ್ರೋಶದ ಸುನಾಮಿ: ಸಲ್ಮಾನ್‌ ರಶ್ದಿ, 'ದಿ ಸಟಾನಿಕ್‌ ವರ್ಸಸ್‌' ಹಾಗೂ 33 ವರ್ಷ ಹಿಂದಿನ ಫತ್ವಾ

Salman Rushdie The Satanic Verses | ಭಾರತ 75ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿರುವಾಗ ಇದೇ ದೇಶದಲ್ಲಿ ಹುಟ್ಟಿ, ಮುಕ್ತ ಚಿಂತನೆಗಳಿಗಾಗೇ ಬದುಕಿದ ಅಷ್ಟೇ ವಯಸ್ಸಿನ ಸಲ್ಮಾನ್‌ ರಶ್ದಿ 'ಕೃತಕ ಆಮ್ಲಜನಕ'ದ ನೆರವಿನಿಂದ ಉಸಿರಾಡುತ್ತಿದ್ದಾರೆ.

Authored byಎನ್‌. ಸಚ್ಚಿದಾನಂದ | Vijaya Karnataka Web 13 Aug 2022, 2:50 pm
ಸೆಲೆಬ್ರಿಟಿ ಲೇಖಕ ಸಲ್ಮಾನ್‌ ರಶ್ದಿ ಮೇಲೆ ನ್ಯೂಯಾರ್ಕ್‌ನಲ್ಲಿ ನಡೆದ ದಾಳಿ ಮತ್ತೆ ಅವರ ವಿವಾದಾತ್ಮಕ ಕಾದಂಬರಿ ‘ದಿ ಸಟಾನಿಕ್ ವರ್ಸಸ್’ ಅನ್ನು ಸುದ್ದಿ ಕೇಂದ್ರಕ್ಕೆ ಎಳೆದು ತಂದಿದೆ. ಒಂದು ಪುಸ್ತಕದ ಕಾರಣಕ್ಕೆ ಕಳೆದ 33 ವರ್ಷಗಳಿಂದ ಕೊಲೆ ಬೆದರಿಕೆಯನ್ನು ಎದುರಿಸುತ್ತಲೇ ಬಂದ ರಶ್ದಿ ಹಾಡಹಗಲೇ ಸಭಿಕರ ಎದುರು ಅಮೆರಿಕದಂಥ ದೇಶದಲ್ಲಿ ದಾಳಿಗೆ ಗುರಿಯಾಗಿದ್ದು, ಜಗತ್ತನ್ನೇ ಬೆಚ್ಚಿ ಬೀಳಿಸಿದೆ; ಲೇಖಕ, ಚಿಂತಕ ವರ್ಗ ದಿಗ್ಭ್ರಮೆಗೊಳಗಾಗಿದೆ.
Vijaya Karnataka Web Author Salman Rushdie


'ದಿ ಸಟಾನಿಕ್‌ ವರ್ಸಸ್‌' ವಿವಾದ

1981ರಲ್ಲಿ ತಮ್ಮ ಎರಡನೇ ಕಾದಂಬರಿ ‘ದಿ ಮಿಡ್‌ನೈಟ್‌ ಚಿಲ್ಡ್ರನ್‌’ಗೆ ಮ್ಯಾನ್‌ ಬೂಕರ್‌ ಪ್ರಶಸ್ತಿ ಪಡೆಯುವುದರೊಂದಿಗೆ ಸಲ್ಮಾನ್‌ ರಶ್ದಿ ಜನಪ್ರಿಯತೆ ದೇಶ, ಸಾಹಿತ್ಯ ವಲಯದ ಗಡಿಗಳನ್ನು ದಾಟಿ ಮುನ್ನಡೆದಿತ್ತು. ಅವರ ಹೆಸರು ವಿಶ್ವದೆಲ್ಲೆಡೆ ಜನನಿತವಾಗಿತ್ತು. ಇಂಥಹ ಸೆಲೆಬ್ರಿಟಿ ಸ್ಟೇಟಸ್‌ ಪಡೆದಿದ್ದ ಲೇಖಕ ರಶ್ದಿ 1988ರ ಸೆಪ್ಟೆಂಬರ್‌ನಲ್ಲಿ 'ದಿ ಸಟಾನಿಕ್‌ ವರ್ಸಸ್‌' ಕಾದಂಬರಿ ಹೊರತಂದಿದ್ದರು. ಈ ಪುಸ್ತಕ ಮಳಿಗೆಯ ಸ್ಟ್ಯಾಂಡ್‌ ಏರುವಷ್ಟರಲ್ಲಿ ವಿವಾದದ ಉರುಳು ರಶ್ದಿಯನ್ನು ಸುತ್ತಿಕೊಂಡಿತ್ತು.

ಸಲ್ಮಾನ್‌ ರಶ್ದಿಗೆ ಮ್ಯಾನ್‌ ಬೂಕರ್‌ ಪ್ರಶಸ್ತಿ ತಂದಿತ್ತ ಮಿಡ್‌ನೈಟ್ಸ್‌ ಚಿಲ್ಡ್ರನ್ಸ್‌ ಕಾದಂಬರಿ (Pic credit: RHUK)


ಪುಸ್ತಕದಲ್ಲಿ ಪ್ರವಾದಿ ಮೊಹಮ್ಮದ್‌ ಅವರ ಕಾಲ್ಪನಿಕ ಪಾತ್ರದ ಉಲ್ಲೇಖ ಹಾಗೂ ಕುರಾನ್‌ ವ್ಯಾಖ್ಯಾನಗಳನ್ನು ಚಿತ್ರಿಸಿದ್ದು ಮುಸ್ಲಿಮರ ಕಣ್ಣು ಕೆಂಪಗಾಗಿಸಿತ್ತು.

ಇಸ್ಲಾಂನಲ್ಲಿ ಒಬ್ಬನೇ ದೇವರು ಎಂಬ ಕಟ್ಟುನಿಟ್ಟಾದ ನಂಬಿಕೆಯಿದ್ದರೆ, ಕಾದಂಬರಿಯಲ್ಲಿದ್ದ ಕುರ್‌ಆನ್‌ ಸಾಲುಗಳಲ್ಲಿ ಮೂರು ದೇವರಿಗೆ ಪ್ರಾರ್ಥನೆ ಮಾಡಲು ಅವಕಾಶವಿದೆ ಎಂದು ಕೆಲವು ವಿದ್ವಾಂಸರು ಆಕ್ಷೇಪಿಸಿದ್ದರು. ಹೀಗೆ ಮುಸ್ಲಿಂ ಧರ್ಮಗುರುಗಳು, ವಿದ್ವಾಂಸರು ಇನ್ನೂ ಕೆಲವು ಆರೋಪಗಳನ್ನೆಲ್ಲಾ ಮಾಡಿದರು. ಆದರೆ ಇದು ಇಷ್ಟಕ್ಕೇ ನಿಲ್ಲಲಿಲ್ಲ.

Salman Rushdie attacked | ನ್ಯೂಯಾರ್ಕ್‌ | ವೇದಿಕೆಯಲ್ಲಿ ಲೇಖಕ ಸಲ್ಮಾನ್‌ ರಶ್ದಿ ಮೇಲೆ ಹಲ್ಲೆ, ಇರಿತ: ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ದಾಖಲು
ಪುಸ್ತಕದಲ್ಲಿ ಪ್ರವಾದಿಯನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಎಂದು ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮುಸ್ಲಿಮರಂತೂ ಸೈಟಿನಿಕ್‌ ವರ್ಸಸ್‌ ಅನ್ನು ಧರ್ಮನಿಂದನೆ ಎಂದೇ ಪರಿಗಣಿಸಿದರು. ಬ್ರಿಟನ್‌, ಪಾಕಿಸ್ತಾನ ಮೊದಲಾದೆಡೆ ಪ್ರತಿಭಟನೆಗಳು ನಡೆದು ರಾಶಿ ರಾಶಿ ಪುಸ್ತಕಗಳು ಬೆಂಕಿಗೆ ಆಹುತಿಯಾದವು. ಪಾಕಿಸ್ತಾನದಲ್ಲಂತೂ ಗಲಭೆಗೆ 6 ಜನ ಜೀವವನ್ನೇ ಕಳೆದುಕೊಂಡರು.

ಇರಾನ್‌ ಮಾತ್ರವಲ್ಲದೆ ಆ ಕಾಲದಲ್ಲಿ ಸುಮಾರು 20 ದೇಶಗಳು ಈ ಪುಸ್ತಕಕ್ಕೆ ನಿಷೇಧ ಹೇರಿದವು. ಶ್ರೀನಗರ, ಕಾಶ್ಮೀರದಲ್ಲೂ ಗಲಭೆಗಳು ನಡೆದು, ಭಾರತದ ಪ್ರಧಾನಿಯಾಗಿದ್ದ ಆಗಿನ ರಾಜೀವ್‌ ಗಾಂಧಿಯವರೂ ಅಕ್ಟೋಬರ್‌ 1988ರಲ್ಲಿ ಚುನಾವಣೆಗೂ ಮುನ್ನ ಈ ಪುಸ್ತಕಕ್ಕೆ ನಿಷೇಧ ಹೇರಿದರು.

ಫತ್ವಾ

ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಇರಾನ್‌ನ ಅಂದಿನ ಸರ್ವೋಚ್ಚ ನಾಯಕ ಅಯಾತ್ ಉಲ್ಲಾ ರುಹೊಲ್ಲಾ ಖೊಮೇನಿ ಅವರು ರಶ್ದಿ ವಿರುದ್ಧ ಫತ್ವಾ ಹೊರಡಿಸಿದರು. ಫೆಬ್ರವರಿ 14, 1989ರಂದು ಹೊರಡಿಸಿದ ಈ ಆದೇಶದಲ್ಲಿ ರಶ್ದಿಯನ್ನು ಕೊಲ್ಲುವಂತೆ ಖೊಮೇನಿ ಮುಸ್ಲಿಮರಿಗೆ ಕರೆ ನೀಡಿದ್ದರು. ಮತ್ತೊಂದು ಹೆಜ್ಜೆ ಮುಂದಿಟ್ಟ ಇರಾನ್‌ ಧಾರ್ಮಿಕ ಸಂಘಟನೆಯೊಂದು ರಶ್ದಿ ತಲೆ ತೆಗೆದವರಿಗೆ 30 ಲಕ್ಷ ಡಾಲರ್‌ (ಇವತ್ತಿನ ಲೆಕ್ಕದಲ್ಲಿ ಸುಮಾರು 24 ಕೋಟಿ ರೂಪಾಯಿ) ಬಹುಮಾನ ನೀಡುವುದಾಗಿಯೂ ಘೋಷಿಸಿತು.

ಇರಾನ್‌ ಸರಕಾರ ಇದರಿಂದ ಅಂತರ ಕಾಪಾಡಿಕೊಂಡಿತಾದರೂ ಸುಪ್ರೀಂ ಲೀಡರ್‌ನ ಮಾತಿನ ಮುಂದೆ ಅವೆಲ್ಲ ಲೆಕ್ಕಕ್ಕೆ ಬರಲಿಲ್ಲ. ಭಾರತದಲ್ಲಿ ಹುಟ್ಟಿ, ಬ್ರಿಟನ್‌ನಲ್ಲಿ ಬೆಳೆದಿದ್ದ ಜಾಹೀರಾತಿನ ಸಾಲುಗಳನ್ನು ಬರೆಯುತ್ತಿದ್ದ ರಶ್ದಿಗೆ ಅಂದಿನಿಂದ ಜೀವ ಬೆದರಿಕೆ ಎನ್ನುವುದು ಮಾಮೂಲಿಯಾಯಿತು.

ಹಾಗೆ ಫತ್ವಾ ಹೊರಡಿಸಿದ ವರ್ಷವೇ ಖೊಮೇನಿ ನಿಧನರಾದರು. ಆದರೆ ಫತ್ವಾ ಹಾಗೆಯೇ ಉಳಿದುಕೊಂಡುಬಿಟ್ಟಿತು. ಈ ಫತ್ವಾ ರಶ್ದಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕಾದಂಬರಿಗೆ ಸಂಬಂಧಿಸಿದವರಿಗೆಲ್ಲಾ ಪಾಠ ಕಲಿಸುವಂತೆ ಮುಸ್ಲಿಂ ಧರ್ಮಗುರು ಖೊಮೇನಿ ಕರೆ ಕೊಟ್ಟಿದ್ದರು.

ಪುಸ್ತಕದ ಅನುವಾದ ಮಾಡಿದ, ಮುದ್ರಣ ಮಾಡಿದ ಪ್ರಕಾಶಕರ ಮೇಲೂ ದಾಳಿಗಳು ನಡೆದವು. ಕಾದಂಬರಿಯ ಇಟಾಲಿಯನ್ ಅನುವಾದಕ ಎಟ್ಟೋರ್ ಕ್ಯಾಪ್ರಿಯೊಲೊ ಅವರು 1991ರಲ್ಲಿ ಮಿಲನ್‌ನಲ್ಲಿ ಚೂರಿ ಇರಿತಕ್ಕೊಳಗಾಗಿ ಗಾಯಗೊಂಡರು.

1991ರಲ್ಲಿ ಜಪಾನಿನ ವಿದ್ವಾಂಸ ಮತ್ತು ರಶ್ದಿಯವರ ಕಾದಂಬರಿಯ ಅನುವಾದಕ ಹಿತೋಷಿ ಇಗರಾಶಿ ಅವರನ್ನು ಇರಿದು ಕೊಲ್ಲಲಾಯಿತು. ಪುಸ್ತಕದ ನಾರ್ವೆ ಪ್ರಕಾಶಕ ವಿಲಿಯಂ ನೈಗಾರ್ಡ್ ಅವರು 1993ರಲ್ಲಿ ಓಸ್ಲೋದಲ್ಲಿ ಮೂರು ಬಾರಿ ಗುಂಡಿನ ದಾಳಿಗೆ ಗುರಿಯಾದರು. ಆದರೆ ಅದೃಷ್ಟವಶಾತ್ ಬದುಕುಳಿಯುವಲ್ಲಿ ಯಶಸ್ವಿಯಾದರು.

ತಲೆ ಮರೆಸಿಕೊಂಡ ರಶ್ದಿ

ಆದರೆ, ರಶ್ದಿ ಮಾತ್ರ ಯಾರ ಕೈಗೂ ಸಿಕ್ಕಿರಲಿಲ್ಲ. ಫತ್ವಾ ಹೊರಡಿಸಿದ ನಂತರ ಬ್ರಿಟನ್‌-ಇರಾನ್‌ ಸಂಬಂಧವೇ ಹಳಸಿದ ಬಳಿಕ ಸಲ್ಮಾನ್‌ ರಶ್ದಿ ಹೆಸರು ಬದಲಿಸಿಕೊಂಡು, ಸುಮಾರು 10 ವರ್ಷಗಳು ಅಜ್ಞಾತರಾದರು. ಬ್ರಿಟನ್‌ನಲ್ಲಿ ವಾಸವಾಗಿದ್ದ ಅವರು, ಹೆಚ್ಚಾಗಿ ವೇಲ್ಸ್‌ನ ಹಳ್ಳಿಯಲ್ಲಿ ಜೋಸೆಫ್‌ ಆಂಟನ್ ಹೆಸರಿನಲ್ಲಿ ಉಳಿದುಕೊಂಡಿದ್ದರು. ಬ್ರಿಟನ್‌ ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಸರ್ಕಾರ ರಶ್ದಿಗೆ 24 ಗಂಟೆಗಳ ಪೊಲೀಸ್ ರಕ್ಷಣೆಯನ್ನೂ ನೀಡಿತ್ತು.

ಮುಂದೆ 1998ರ ಹೊತ್ತಿಗೆ ಮೊಹಮ್ಮದ್ ಖಟಾಮಿ ನೇತೃತ್ವದ ಸುಧಾರಣಾವಾದಿ ಸರ್ಕಾರ ಇರಾನ್‌ನಲ್ಲಿ ಅಧಿಕಾರಕ್ಕೆ ಬಂದಾಗ, ನಾವು ಫತ್ವಾವನ್ನು ಜಾರಿಗೊಳಿಸುವುದಿಲ್ಲ ಎಂದು ಬ್ರಿಟನ್‌ಗೆ ಇರಾನ್‌ ಭರವಸೆಯನ್ನೂ ನೀಡಿತು. ಬೆದರಿಕೆಗಳು ಕಡಿಮೆಯಾಗುತ್ತಾ ಬಂದಂತೆ 2001ರ ಸೆಪ್ಟೆಂಬರ್‌ ನಂತರ ಅಲಿಯಾಸ್‌ ಹೆಸರುಗಳನ್ನೆಲ್ಲಾ ತೆಗೆದು, ಸಲ್ಮಾನ್‌ ರಶ್ದಿ ನಿಧಾನಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದರು.

ಆದರೆ, ಧಾರ್ಮಿಕ ಮುಖಂಡರು ಇದಕ್ಕೆ ಸಿದ್ಧರಿರಲಿಲ್ಲ. ಖಟಾಮಿ ಸರ್ಕಾರ ಪತನವಾಗುತ್ತಲೇ ಮತ್ತೆ ಫತ್ವಾ ಸದ್ದು ಮಾಡಲಾರಂಭಿಸಿತು. ಇತ್ತೀಚೆಗೆ, ಅಂದರೆ 2015ರಲ್ಲೂ ಖೊಮೇನಿಯ ಉತ್ತರಾಧಿಕಾರಿ ಅಯತೊಲ್ಲಾ ಅಲಿ ಖಮೇನಿ ಅವರು ರಶ್ದಿಯನ್ನು ಧರ್ಮಭ್ರಷ್ಟ ಎಂದಿದ್ದಲ್ಲದೆ, ಅವರ ಹತ್ಯೆಯನ್ನು ಇಸ್ಲಾಂನಿಂದ ಅಧಿಕೃತಗೊಳಿಸಲಾಗುವುದು ಎಂದೇ ಗುಡುಗಿದ್ದರು. 2016ರಲ್ಲಿ ಇರಾನ್‌ನ 40ಕ್ಕೂ ಹೆಚ್ಚು ಮಾಧ್ಯಮಗಳೆಲ್ಲಾ ಸೇರಿ 6 ಲಕ್ಷ ಡಾಲರ್‌ ಹಣ ಸಂಗ್ರಹಿಸಿ, ಬಹುಮಾನದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿ ಕೊಲೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದವು.

ಹೀಗೆ ಫತ್ವಾ ಜೀವಂತವಾಗಿತ್ತಾದರೂ ಏನೂ ನಡೆಯದೇ ಇದ್ದ ಹಿನ್ನೆಲೆಯಲ್ಲಿ ಸ್ವತಃ ಸಲ್ಮಾನ್‌ ರಶ್ದಿ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಲಾರಂಭಿಸಿದರು. ತೀರಾ ಇತ್ತೀಚೆಗೆ, ಅಂದರೆ 2019ರಲ್ಲಿ ಪ್ಯಾರಿಸ್‌ನಲ್ಲಿ ಏಜೆನ್ಸ್ ಫ್ರಾನ್ಸ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ರಶ್ದಿ, ಶಸ್ತ್ರಸಜ್ಜಿತ ಪೊಲೀಸರನ್ನು ಜತೆಗಿಟ್ಟುಕೊಂಡೇ ಜಗತ್ತು ಫತ್ವಾದಿಂದ ಹಿಂದೆ ಸರಿದಿದೆ ಎಂದು ನಂಬಿರುವುದಾಗಿ ಹೇಳಿದ್ದರು.

“ವಿಷಯಗಳು ಬಹಳ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ. ಇದು ತುಂಬಾ ಹಳೆಯ ವಿಷಯ. ಈಗ ಜನರನ್ನು ಕೊಲ್ಲುವ ವಿಷಯ ಬಿಟ್ಟು ಭಯಪಡಬೇಕಾದ ಅನೇಕ ವಿಷಯಗಳಿವೆ,” ಎಂದು ತಿಳಿಸಿದ್ದರು ನಾಲ್ವರನ್ನು ಮದುವೆಯಾಗಿ, ಇಬ್ಬರು ಮಕ್ಕಳನ್ನು ಪಡೆದು ಸದ್ಯಕ್ಕೆ ಒಂಟಿಯಾಗಿರುವ ರಶ್ದಿ.

ಇದೀಗ ಫತ್ವಾ, ಜೀವ ಬೆದರಿಕೆಯನ್ನು ಜಗತ್ತು ಹಾಗೂ ಸಲ್ಮಾನ್‌ ರಶ್ದಿ ಮರೆಯುತ್ತಿದ್ದ ಹೊತ್ತಲ್ಲೇ ನ್ಯೂಯಾರ್ಕ್‌ನ ಸಾಹಿತ್ಯ ಕಾರ್ಯಕ್ರಮದಲ್ಲಿ ಧುತ್ತೆಂದು ಆಗಂತುಕನ ಆಗಮನವಾಗಿ ಜಗತ್ತು ಬೆಚ್ಚಿ ಬಿದ್ದಿದೆ. 15-20 ಬಾರಿ ಇರಿತಕ್ಕೆ ಗುರಿಯಾಗಿರುವ ರಶ್ದಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಕಣ್ಣೊಂದನ್ನು ಕಳೆದುಕೊಳ್ಳಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಕೈಗೆ ಸಂಬಂಧಿಸಿದ ನರಗಳೂ ತುಂಡಾಗಿದ್ದು, ಅವರ ಯಕೃತ್‌ಗೂ ತೀವ್ರ ಗಾಯಗಳಾಗಿವೆ. 75ರಲ್ಲೂ 'ಮುಕ್ತ'ವಾಗಿ ಉಸಿರಾಡುತ್ತಿದ್ದವರು ವೆಂಟಿಲೇಟರ್‌ನಲ್ಲಿ ಕೃತಕ ಆಮ್ಲಜನಕದ ಆಶ್ರಯದಲ್ಲಿದ್ದಾರೆ .

ಹೀಗೆ, ಇಪ್ಪತ್ನಾಲ್ಕು ವರ್ಷದ ಯುವಕ ಎಪ್ಪತ್ತೈದು ವರ್ಷದ ಸಲ್ಮಾನ್ ರಶ್ದಿ ಮೇಲೆ ನಡೆಸಿರುವ ಈ ಹಲ್ಲೆ ತಲೆಮಾರುಗಳಲ್ಲಿ ಆಗಿರುವ ಮನಸ್ಥಿತಿಯ ಬದಲಾವಣೆಯಂತೆ ಗೋಚರಿಸುತ್ತದೆ. ವಿಶಾಲವಾದ ದುರ್ಬೀನಿನಿಂದ ನೋಡುವ ಕಣ್ಣುಗಳು ಈಗ ಊದುಗೊಳುವೆಯಂತೆ ಸಂಕುಚಿತಗೊಳ್ಳುತ್ತಿವೆಯೇ ಎಂಬ ಸಂದೇಹ ಮೂಡಿಸುತ್ತದೆ. ಈಗ ನಮ್ಮೆದುರು ಎರಡು ಪ್ರತಿಮೆಗಳಿವೆ. ಒಂದು, ಎಪ್ಪತ್ತೈದರ ವಯಸ್ಸಿನಲ್ಲೂ ಸಂಕುಚಿತತೆ ತಂದುಕೊಳ್ಳದ ಸ್ಪಷ್ಟದೃಷ್ಟಿಯ ರಶ್ದಿ, ಎರಡನೆಯದು, ಇಪ್ಪತ್ನಾಲ್ಕರ ವಯಸ್ಸಿನಲ್ಲೇ ಧರ್ಮಾಂಧತೆಯ ಕಣ್ಣಿನ ಪೊರೆ ತಂದುಕೊಂಡ ಹಲ್ಲೆಕೋರ.
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ