ಆ್ಯಪ್ನಗರ

ಲಂಕಾ ಸರಣಿ ಸ್ಫೋಟ: ಅಮಾಯಕರ ಮಾರಣಹೋಮಕ್ಕೆ ವಿಶ್ವದ ಖಂಡನೆ

ಶ್ರೀಲಂಕಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಮೂವರು ಭಾರತೀಯರೂ ಸೇರಿದಂತೆ 207 ಮಂದಿ ಮೃತಪಟ್ಟಿದ್ದಾರೆ. ಈ ಕೃತ್ಯವನ್ನು ಭಾರತ, ಬ್ರಿಟನ್‌, ಅಮೆರಿಕ, ಜಪಾನ್ ಸೇರಿದಂತೆ ವಿಶ್ವದ ಹಲವು ದೇಶಗಳು ಕಟುವಾಗಿ ಖಂಡಿಸಿವೆ.

Vijaya Karnataka Web 21 Apr 2019, 9:15 pm
ಕೊಲಂಬೋ: ಕೊಲಂಬೋ: ಶ್ರೀಲಂಕಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟಗಳನ್ನು ಜಾಗತಿಕ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
Vijaya Karnataka Web Lanka Blasts


ಈಸ್ಟರ್ ಹಬ್ಬದ ದಿನವಾದ ಭಾನುವಾರ ಚರ್ಚ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಒಟ್ಟು 8 ಕಡೆ ಬಾಂಬ್‌ಗಳು ಸ್ಫೋಟಿಸಿದ್ದು 30ಕ್ಕೂ ಅಧಿಕ ವಿದೇಶೀಯರು ಸೇರಿದಂತೆ ಈ ವರೆಗೆ 207 ಮಂದಿ ಮೃತಪಟ್ಟಿದ್ದಾರೆ. 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರ ಪೈಕಿ ಭಾರತ, ಬ್ರಿಟಿಷ್, ಡಚ್‌ ಮತ್ತು ಅಮೆರಿಕನ್ ಪ್ರಜೆಗಳೂ ಸೇರಿದ್ದಾರೆ. ಜಪಾನ್ ನಾಗರಿಕರು ಗಾಯಗೊಂಡಿದ್ದಾರೆ.

ಲಂಕಾದಲ್ಲಿ ಭಯೋತ್ಪಾದಕರು ನಡೆಸಿದ ಮಾರಣಹೋಮವನ್ನು ಭಾರತ ತೀಕ್ಷ್ಣವಾಗಿ ಖಂಡಿಸಿದ್ದು, ವೈದ್ಯಕೀಯ ತಂಡಗಳ ರವಾನೆ ಸೇರಿದಂತೆ ಅಗತ್ಯ ನೆರವುಗಳನ್ನು ನೀಡಲು ಸಿದ್ಧ ಎಂದು ಹೇಳಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಲಂಕಾ ವಿದೇಶಾಂಗ ಸಚಿವರಿಗೆ ಈ ವಿಷಯ ತಿಳಿಸಿದ್ದಾರೆ.

ದಾಳಿಗಳಲ್ಲಿ ಮೂವರು ಭಾರತೀಯರು ಮೃತಪಟ್ಟಿರುವುದನ್ನು ರಾಷ್ಟ್ರೀಯ ಆಸ್ಪತ್ರೆ ಮೂಲಗಳು ಕೊಲಂಬೋದಲ್ಲಿರುವ ಭಾರತೀಯ ಹೈಕಮಿಷನ್‌ಗೆ ಖಚಿತಪಡಿಸಿವೆ. ಈ ಕುರಿತು ಇನ್ನಷ್ಟು ವಿವರಗಳನ್ನು ಪಡೆಯಲಾಗುತ್ತಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಖಂಡನೆ:
ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ಭಾರತ ಖಂಡಿಸುತ್ತದೆ. ಅಮಾಐಕ ಜನರನ್ನು ಕೊಲ್ಲುವ ವಿವೇಕಹೀನ ಹಿಂಸಾಚಾರಕ್ಕೆ ನಾಗರಿಕ ಜಗತ್ತಿನಲ್ಲಿ ಜಾಗವಿಲ್ಲ. ಈ ಸಂಕಷ್ಟದ ಸಮಯದಲ್ಲಿ ಶ್ರೀಲಂಕಾದ ಜತೆ ಭಾರತ ದೃಢವಾಗಿ ನಿಲ್ಲುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಖಂಡನೆ:
ಈ ಹೇಡಿತನದ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ನಮ್ಮ ವಲಯದಲ್ಲಿ ಇಂತಹ ಘೋರ ಕೃತ್ಯಗಳಿಗೆ ಅವಕಾಶವಿಲ್ಲ. ಶ್ರೀಲಂಕಾದ ಬೆಂಬಲಕ್ಕೆ ಭಾರತ ದೃಢವಾಗಿ ನಿಲ್ಲುತ್ತದೆ. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಭಾವಪೂರ್ಣ ಸಂತಾಪಗಳು' ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.






ಬ್ರಿಟಿಷ್ ಪ್ರಧಾನಿ ತೆರೆಸಾ ಮೇ 'ಇದೊಂದು ಆಘಾತಕಾರಿ ಘಟನೆ' ಎಂದು ಬಣ್ಣಿಸಿದ್ದಾರೆ. 'ಚರ್ಚ್‌ಗಳು ಮತ್ತು ಹೋಟೆಲ್‌ಗಳ ಮೇಲೆ ನಡೆದ ಭಯೋತ್ಪಾದಕ ದಾಳಿ ನಿಜಕ್ಕೂ ಆಘಾತಕಾರಿ. ಈ ದುರದೃಷ್ಟಕರ ಘಟನೆಗಳಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ಕುಟುಂಬಗಳಿಗೆ ತೀವ್ರ ಸಂತಾಪಗಳು' ಎಂದು ಥೆರೆಸಾ ಮೇ ಟ್ವೀಟ್ ಮಾಡಿದ್ದಾರೆ.


'ಜನತೆ ತಮ್ಮ ನಂಬಿಕೆಯ ಧರ್ಮಾಚರಣೆಗಳನ್ನು ಧೈರ್ಯದಿಂದ ಅನುಸರಿಸಲು ಸಾಧ್ಯವಾಗುವಂತಹ ವಾತಾವರಣ ನಿರ್ಮಾಣವಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು' ಎಂದು ಬ್ರಿಟಿಷ್ ಪ್ರಧಾನಿ ಹೇಳಿದ್ದಾರೆ.

'ಈಸ್ಟರ್ ಹಬ್ಬದ ದಿನ ಶ್ರೀಲಂಕಾದ ಚರ್ಚ್‌ಗಳು ಮತ್ತು ಹೋಟೆಲ್‌ಗಳ ಮೇಲೆ ಮಾರಕ ದಾಳಿ ನಡೆದ ಆಘಾತಕಾರಿ ವರದಿಗಳು ಬಂದಿವೆ' ಎಂದು ಡಚ್ ಪ್ರಧಾನಿ ಮಾರ್ಕ್ ರಟ್ಟೆ ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೋರಿಸನ್ 'ಇದೊಂದು ಭಯಾನಕ ಉಗ್ರರ ದಾಳಿ' ಎಂದು ಬಣ್ಣಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಲಂಕಾ ಜನತೆಯ ದುಃಖದಲ್ಲಿ ನಾವೂ ಭಾಗಿಯಾಗುತ್ತೇವೆ. ಯಾವ ಬಗೆಯ ನೆರವು ಅಗತ್ಯವಿದ್ದರೂ ನೀಡಲು ಸಿದ್ಧರಾಗಿದ್ದೇವೆ' ಎಂದು ಹೇಳಿಕೆ ನೀಡಿದ್ದಾರೆ.

ಇದೊಂದು ವಿನಾಶಕಾರಿ ದಾಳಿ ಎಂದು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಬಣ್ಣಿಸಿದ್ದಾರೆ. 'ಎಲ್ಲ ಸ್ವರೂಪದ ಭಯೋತ್ಪಾದನೆಯನ್ನು ನ್ಯೂಜಿಲೆಂಡ್ ಖಂಡಿಸುತ್ತದೆ. ಮಾರ್ಚ್ 15ರಂದು ನಮ್ಮ ನೆಲದಲ್ಲೂ (ಕ್ರೈಸ್ಟ್‌ಚರ್ಚ್‌) ಇಂತಹದೊಂದು ದಾಳಿ ನಡೆದಿದ್ದು, ಭಯೋತ್ಪಾದನೆ ವಿರುದ್ಧ ಸಮರದಲ್ಲಿ ನಮ್ಮ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಿದೆ' ಎಂದು ಅವರು ಹೇಳಿದ್ದಾರೆ.

ಜೆರುಸಲೇಂನ ಕ್ಯಾಥೊಲಿಕ್ ಚರ್ಚ್‌ ಕೂಡ ಘಟನೆಯನ್ನು ಖಂಡಿಸಿದ್ದು, 'ಹಬ್ಬದ ಆಚರಣೆಯಲ್ಲಿದ್ದವರ ಮೇಲೆ ಅವರು ದಾಳಿ ನಡೆಸಿದ್ದಾರೆ. ಭಯೋತ್ಪಾದಕರು ಇದಕ್ಕೆ ತಕ್ಕ ಶಿಕ್ಷೆ ಅನುಭವಿಸಲಿದ್ದಾರೆ' ಎಂದು ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ