ಆ್ಯಪ್ನಗರ

ಹಕ್ಕಾನಿ ಸಂಘಟನೆ ಸ್ಥಾಪಕ ಜಲಾಲುದ್ದೀನ್‌ ಹಕ್ಕಾನಿ ಸಾವು

ಅಫಘಾನಿಸ್ತಾನದ ಉಗ್ರಗಾಮಿ ಸಂಘಟನೆಗಳಲ್ಲೇ ಅತ್ಯಂತ ಅಪಾಯಕಾರಿಯಾದ ಹಕ್ಕಾನಿ ಸಂಘಟನೆಯ ಸ್ಥಾಪಕ ಜಲಾಲುದ್ದೀನ್‌ ಹಕ್ಕಾನಿ (79) ಮೃತಪಟ್ಟಿದ್ದಾನೆ.

Vijaya Karnataka Web 4 Sep 2018, 9:16 pm
ಕಾಬೂಲ್‌: ಅಫಘಾನಿಸ್ತಾನದ ಉಗ್ರಗಾಮಿ ಸಂಘಟನೆಗಳಲ್ಲೇ ಅತ್ಯಂತ ಅಪಾಯಕಾರಿಯಾದ ಹಕ್ಕಾನಿ ಸಂಘಟನೆಯ ಸ್ಥಾಪಕ ಜಲಾಲುದ್ದೀನ್‌ ಹಕ್ಕಾನಿ (79) ಮೃತಪಟ್ಟಿದ್ದಾನೆ.
Vijaya Karnataka Web jalaluddin_haqqani


ಹತ್ತು ವರ್ಷಗಳಿಂದ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದ ಜಲಾಲುದ್ದೀನ್‌, ಅನಾರೋಗ್ಯದಿಂದ ಮೃತಪಟ್ಟಿರುವುದನ್ನು ತಾಲಿಬಾನ್‌ ಉಗ್ರ ಸಂಘಟನೆ ಮಂಗಳವಾರ ಖಚಿತಪಡಿಸಿದೆ. 1970ರಲ್ಲಿ ಹಕ್ಕಾನಿ ಉಗ್ರ ಸಂಘಟನೆ ಆರಂಭಿಸಿದ ಆತ, 1995ರಲ್ಲಿ ತಾಲಿಬಾನ್‌ ಜತೆ ಕೈಜೋಡಿಸಿದ. ಅಫಘಾನಿಸ್ತಾನದ ಸಂಸತ್‌ ಮೇಲಿನ ದಾಳಿ, ಅಮೆರಿಕದ ಸೇನಾ ನೆಲೆಗಳ ಮೇಲಿನ ದಾಳಿ ಸೇರಿದಂತೆ ಪ್ರಮುಖ ದಾಳಿಗಳನ್ನು ಹಕ್ಕಾನಿ ಸಂಘಟನೆ ನಡೆಸಿದೆ.

ಜತೆಗೆ ರಷ್ಯಾ-ಅಫಘಾನಿಸ್ತಾನ ಯುದ್ಧದಲ್ಲೂ ಸಂಘಟನೆ ಪ್ರಮುಖ ಪಾತ್ರ ವಹಿಸಿತ್ತು. ಅಫಘಾನಿಸ್ತಾನ ಭದ್ರತಾ ಪಡೆಗಳು ಮತ್ತು ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳನ್ನು ಗುರಿಯಾಸಿಕೊಂಡು ಅನೇಕ ದಾಳಿ ನಡೆಸಿದೆ. ಹಕ್ಕಾನಿ ಸಂಘಟನೆ ಅತಿ ಹೆಚ್ಚಿನ ಆತ್ಮಾಹುತಿ ಬಾಂಬ್‌ ದಾಳಿಕೋರರನ್ನು ಹೊಂದಿದ್ದು, ಕಾಬೂಲ್‌ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅನೇಕ ಆತ್ಮಾಹುತಿ ಬಾಂಬ್‌ ದಾಳಿಗಳನ್ನು ನಡೆಸಿದೆ. ಅಲ್ಲದೇ ಅಫಘಾನಿಸ್ತಾನದಲ್ಲಿ ಭಾರತ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಗುರಿಯಾಗಿಸಿಕೊಂಡು 2008ರಲ್ಲಿ ದಾಳಿ ನಡೆಸಿತ್ತು. ಆ ಸಮಯದಲ್ಲಿ 58 ಮಂದಿ ಮೃತಪಟ್ಟಿದ್ದರು.

1996ರಲ್ಲಿ ಕಾಬೂಲ್‌ ನಗರವನ್ನು ತಾಲಿಬಾನ್‌ ವಶಪಡಿಸಿಕೊಳ್ಳಲು ಹಕ್ಕಾನಿ ಸಂಘಟನೆ ನೆರವಾಗಿತ್ತು. ಆಗ ಜಲಾಲುದ್ದೀನ್‌ನನ್ನು ಸಚಿವನಾಗಿ ನೇಮಿಸಲಾಗಿತ್ತು. ಆತ 2001ರವರೆಗೆ ಆ ಹುದ್ದೆಯನ್ನು ನಿರ್ವಹಿಸಿದ. ಅದೇ ವರ್ಷ ತಾಲಿಬಾನ್‌ಅನ್ನು ಅಮೆರಿಕ ಹಿಮ್ಮೆಟಿಸಿ, ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತು. ನಂತರ ಹಕ್ಕಾನಿ ಸಂಘಟನೆ ವಿರುದ್ಧ ಅಮೆರಿಕ ನಿರಂತರ ಡ್ರೋನ್‌ ದಾಳಿ ನಡೆಸಿತು.

ಸುಲಲಿತವಾಗಿ ಅರೇಬಿಕ್‌ ಮಾತನಾಡುತ್ತಿದ್ದ ಜಲಾಲುದ್ದೀನ್‌, ಅಲ್‌ಖೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ ಲಾಡೆನ್‌ ಸೇರಿದಂತೆ ಪ್ರಮುಖ ಜಿಹಾದಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಪ್ರಸ್ತುತ ಹಕ್ಕಾನಿ ಸಂಘಟನೆಯನ್ನು ಜಲಾಲುದ್ದೀನ್‌ನ ಮಗ ಸಿರಾಜುದ್ದೀನ್‌ ಮುನ್ನಡೆಸುತ್ತಿದ್ದು, ಆತ ತಾಲಿಬಾನ್‌ನಲ್ಲೂ ಪ್ರಮುಖ ಉಪ ನಾಯಕನಾಗಿ ಗುರುತಿಸಿಕೊಂಡಿದ್ದಾನೆ.

ಆತ್ಮಾಹುತಿ ದಾಳಿಗಳು

ಮೇ 2017ರಲ್ಲಿ ಕಾಬೂಲ್‌ನಲ್ಲಿ ಟ್ರಕ್‌ ಮೂಲಕ ಈ ಸಂಘಟನೆ ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಸುಮಾರು 150 ಮಂದಿ ಮೃತಪಟ್ಟಿದ್ದರು. ಪಾಕಿಸ್ತಾನದ ಗಡಿ ಪ್ರದೇಶ ಉತ್ತರ ವಝೀರಿಸ್ತಾನ್‌ನಲ್ಲಿ ಹಕ್ಕಾನಿ ಸಂಘಟನೆ ಅಡಗು ತಾಣಗಳಾಗಿ ಮಾಡಿಕೊಂಡಿತ್ತು. ನಂತರ 2014ರಲ್ಲಿ ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆ ನಡೆಸಿ, ಅನೇಕ ಉಗ್ರರನ್ನು ಹೊಡೆದುರುಳಿಸಿತು. ಈ ವೇಳೆ ಅನೇಕ ಉಗ್ರರು ಆ ಪ್ರದೇಶದಿಂದ ಪರಾರಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ