ಆ್ಯಪ್ನಗರ

26/11 ಸೂತ್ರದಾರ ಹಫೀಜ್‌ ಸಯೀದ್‌ಗೆ ಐದು ವರ್ಷ ಜೈಲು, ಪಾಕ್‌ ಕೋರ್ಟ್‌ ಆದೇಶ

ಹಫೀಜ್‌ ಸಯೀದ್‌ ಲಷ್ಕರ್‌ ಇ ತಯ್ಯಬಾ ಉಗ್ರ ಸಂಘಟನೆ ಸಂಸ್ಥಾಪಕನಾಗಿದ್ದಾನೆ. ಜೊತೆಗೆ ಜಮಾತ್‌ ಉದ್‌ ದಾವ ಸಂಘಟನೆ ಮುಖ್ಯಸ್ಥನಾಗಿದ್ದಾನೆ. 26/11 ರ ಮುಂಬೈ ದಾಳಿ ಬಳಿಕ ಈ ಎರಡೂ ಸಂಘಟನೆಗಳ ಮೇಲೆ ವಿಶ್ವಸಂಸ್ಥೆ ಭದ್ರತಾ ಸಂಸ್ಥೆ ನಿಷೇಧ ಹೇರಿದೆ. 2019ರಲ್ಲಿ ಪಾಕಿಸ್ತಾನ ಸರಕಾರವೂ ಇವುಗಳ ಮೇಲೆ ನಿಷೇಧ ಹೇರಿದೆ.

Agencies 12 Feb 2020, 5:19 pm
ಇಸ್ಲಮಾಬಾದ್‌: ಉಗ್ರ ಚಟುವಟಿಕೆಗಳಿಗೆ ಹಣ ಪೂರೈಸಿದ ಆರೋಪದಲ್ಲಿ 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿ ಹಫೀಜ್‌ ಸಯೀದ್‌ಗೆ ಪಾಕಿಸ್ತಾನದ ನ್ಯಾಯಾಲಯ ಐದೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Vijaya Karnataka Web Hafiz Saeed


ಎರಡು ಪ್ರಕರಣದಲ್ಲಿ ತಲಾ ಐದೂವರೆ ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂಪಾಯಿ ದಂಡವನ್ನು ವಿಧಿಸಿ ಲಾಹೋರ್‌ನ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಆದೇಶ ನೀಡಿದೆ. ಆದರೆ ಎರಡೂ ಪ್ರಕರಣಗಳ ಶಿಕ್ಷೆ ಏಕಕಾಲದಲ್ಲಿ ನಡೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಪಾಕಿಸ್ತಾನ ಉಗ್ರ ವಿರೋಧಿ ಕಾಯಿದೆ ಅಡಿಯಲ್ಲಿ ಆತನಿಗೆ ಈ ಶಿಕ್ಷೆ ನೀಡಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಹಫೀಜ್‌ ಸಯೀದ್‌ ಲಷ್ಕರ್‌ ಇ ತಯ್ಯಬಾ ಉಗ್ರ ಸಂಘಟನೆ ಸಂಸ್ಥಾಪಕನಾಗಿದ್ದಾನೆ. ಜೊತೆಗೆ ಜಮಾತ್‌ ಉದ್‌ ದಾವ ಸಂಘಟನೆ ಮುಖ್ಯಸ್ಥನಾಗಿದ್ದಾನೆ. 26/11 ರ ಮುಂಬೈ ದಾಳಿ ಬಳಿಕ ಈ ಎರಡೂ ಸಂಘಟನೆಗಳ ಮೇಲೆ ವಿಶ್ವಸಂಸ್ಥೆ ಭದ್ರತಾ ಸಂಸ್ಥೆ ನಿಷೇಧ ಹೇರಿದೆ.

2017ರಲ್ಲಿ ಪಾಕಿಸ್ತಾನ ಸರಕಾರ ಭಯೋತ್ಪಾದನಾ ಕಾನೂನುಗಳಡಿಯಲ್ಲಿ ಸಯೀದ್‌ ಮತ್ತು ಆತನ ನಾಲ್ವರು ಸಹಾಯಕರನ್ನು ಮೊದಲ ಬಾರಿಗೆ ಬಂಧಿಸಿತ್ತು. ಆದರೆ 11 ತಿಂಗಳ ನಂತರ ಜೈಲಿನಿಂದ ಬಿಡುಗಡೆ ಮಾಡಿತ್ತು.

ಇದಕ್ಕೆ ಅಂತಾರಾಷ್ಟ್ರೀಯ ಸಮುದಾಯದಿಂದ ತೀವ್ರ ಟೀಕೆಗಳು ವ್ಯಕ್ತವಾಗಿತ್ತು. ಅದರಲ್ಲೂ ಪ್ರಮುಖವಾಗಿ ಫ್ರಾನ್ಸ್‌ನ 'ಫೈನಾನ್ಶಿಯಲ್ ಆಕ್ಷನ್‌ ಟಾಸ್ಕ್‌ ಫೋರ್ಸ್‌' ಮತ್ತು ಭಾರತದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಒಂದಷ್ಟು ಸಂಘಟನೆಗಳ ವಿರುದ್ಧ ಸಮರ ಸಾರಿದ್ದ ಪಾಕಿಸ್ತಾನ ಕೆಲವೇ ವಾರಗಳ ಅಂತರದಲ್ಲಿ ಜೈಷ್‌ ಇ ಮೊಹಮ್ಮದ್‌, ಜೆಯುಡಿ ಮೊದಲಾದ ಸಂಘಟನೆಗಳಿಗೆ ಸೇರಿದ 100 ಕ್ಕೂ ಹೆಚ್ಚು ಉಗ್ರರು ಮತ್ತು 200 ಕ್ಕೂ ಹೆಚ್ಚು ಮುಸ್ಲಿಂ ಧರ್ಮಗುರುಗಳನ್ನು ಪಾಕಿಸ್ತಾನ ಬಂಧಿಸಿತ್ತು.

ಇದರ ಜೊತೆಗೆ 2019ರ ಜುಲೈನಲ್ಲಿ ಹಫೀಜ್‌ ಸಯೀದ್‌ ವಿರುದ್ಧ 23 ಕೇಸುಗಳನ್ನು ಜಡಿಯಲಾಗಿತ್ತು. ಅಲ್ಲದೆ ಆತ ಲಾಹೋರ್‌ನಿಂದ ಗುಜ್ರನ್‌ವಾಲಾಗೆ ತೆರಳುತ್ತಿದ್ದಾಗ ಉಗ್ರ ನಿಗ್ರಹ ದಳದವರು ಬಂಧಿಸಿದ್ದರು. ವಿಚಾರಣೆ ವೇಳೆ ಲಾಭರಹಿತ ಸಂಸ್ಥೆಗಳು ಮತ್ತು ಟ್ರಸ್ಟ್‌ಗಳ ಮೂಲಕ ಆತ ಭಾರಿ ಹಣ ಸಂಗ್ರಹಿಸಿ ಅದನ್ನು ಜಮಾತ್‌ ಉದ್‌ ದಾವಾ (ಜಯುಡಿ) ಮೂಲಕ ಭಯೋತ್ಪಾದನೆಗೆ ಬಳಸುತ್ತಿರುವುದು ತಿಳಿದು ಬಂದಿತ್ತು. ಬೆನ್ನಿಗೆ ಈ ಸಂಸ್ಥೆಗಳಿಗೂ ಪಾಕಿಸ್ತಾನ ನಿಷೇಧ ಹೇರಿತ್ತು.

23 ಪ್ರಕರಣಗಳಲ್ಲಿ ಗುಜ್ರನ್‌ವಾಲಾ ಮತ್ತು ಲಾಹೋರ್‌ ಉಗ್ರ ನಿಗ್ರಹ ದಳ ದಾಖಲಿಸಿದ್ದ ಪ್ರಕರಣಗಳು ಸಯೀದ್‌ನನ್ನು ಸುತ್ತಿಕೊಂಡಿದ್ದವು. ಈ ಪ್ರಕರಣದ ವಿಚಾರಣೆ ಗುಜ್ರನ್‌ವಾಲಾ ಭಯೋತ್ಪಾದನಾ ವಿರೋಧಿ ನ್ಯಾಯಾಲಯದಲ್ಲಿ ಮೊದಲಿಗೆ ಆರಂಭವಾಗಿತ್ತು. ನಂತರ ಲಾಹೋರ್ ಭಯೋತ್ಪಾದನಾ ವಿರೋಧಿ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ಇದೀಗ ಲಾಹೋರ್‌ ನ್ಯಾಯಾಲಯ ಸಯೀದ್‌ಗೆ ಶಿಕ್ಷೆ ಪ್ರಕಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ