ಆ್ಯಪ್ನಗರ

ಐಸಿಜೆಗೆ ಭಾರತ ಪ್ರವೇಶ ಸಾಧ್ಯತೆ: ಭದ್ರತಾ ಮಂಡಳಿ ಕಾಯಂ ಸದಸ್ಯರಲ್ಲಿ ಹೆಚ್ಚಿದ ಆತಂಕ

ಜಾಗತಿಕ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಭಾರತದ ಅಭ್ಯರ್ಥಿ ದಲ್ವೀರ್‌ ಭಂಡಾರಿ ಗೆಲುವಿನ ಸಾಧ್ಯತೆ ಹೆಚ್ಚಿದ್ದು, ಭದ್ರತಾ ಮಂಡಳಿಯ ಕಾಯಂ ಸದಸ್ಯರು ಆತಂಕಿತರಾಗಿದ್ದಾರೆ. ಭಾರತದ ಅಭ್ಯರ್ಥಿ ಗೆದ್ದುಬಿಟ್ಟರೆ ಭವಿಷ್ಯದಲ್ಲಿ ತಮ್ಮ ಅಧಿಕಾರಗಳಿಗೆ ಕುತ್ತು ಬರಬಹುದು ಎಂಬುದು ಕಾಯಂ ಸದಸ್ಯರ ಆತಂಕಕ್ಕೆ ಕಾರಣ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

PTI 20 Nov 2017, 3:31 pm
ವಿಶ್ವಸಂಸ್ಥೆ: ಜಾಗತಿಕ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಭಾರತದ ಅಭ್ಯರ್ಥಿ ದಲ್ವೀರ್‌ ಭಂಡಾರಿ ಗೆಲುವಿನ ಸಾಧ್ಯತೆ ಹೆಚ್ಚಿದ್ದು, ಭದ್ರತಾ ಮಂಡಳಿಯ ಕಾಯಂ ಸದಸ್ಯರು ಆತಂಕಿತರಾಗಿದ್ದಾರೆ. ಭಾರತದ ಅಭ್ಯರ್ಥಿ ಗೆದ್ದುಬಿಟ್ಟರೆ ಭವಿಷ್ಯದಲ್ಲಿ ತಮ್ಮ ಅಧಿಕಾರಗಳಿಗೆ ಕುತ್ತು ಬರಬಹುದು ಎಂಬುದು ಕಾಯಂ ಸದಸ್ಯರ ಆತಂಕಕ್ಕೆ ಕಾರಣ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.
Vijaya Karnataka Web unsc permanent members unnerved by prospect of indias nominee winning icj election observers
ಐಸಿಜೆಗೆ ಭಾರತ ಪ್ರವೇಶ ಸಾಧ್ಯತೆ: ಭದ್ರತಾ ಮಂಡಳಿ ಕಾಯಂ ಸದಸ್ಯರಲ್ಲಿ ಹೆಚ್ಚಿದ ಆತಂಕ


ಭಂಡಾರಿ ಮತ್ತು ಬ್ರಿಟನ್‌ನ ಕ್ರಿಸ್ಟೋಫರ್‌ ಗ್ರೀನ್‌ವುಡ್‌ ಮಧ್ಯೆ ಕೊನೆಯ ಒಂದು ಸ್ಥಾನಕ್ಕಾಗಿ ಕತ್ತು ಕತ್ತಿನ ಪೈಪೋಟಿ ನಡೆದಿದೆ. ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತಮ್ಮ ಸದಸ್ಯತ್ವ ಉಳಿಸಿಕೊಳ್ಳಲು ಗ್ರೀನ್‌ವುಡ್‌ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಅದೇ ಸ್ಥಾನಕ್ಕೆ ಭಾರತದ ಪ್ರತಿನಿಧಿಯಾಗಿ ದಲ್ವೀರ್‌ ಭಂಡಾರಿ ಸ್ಪರ್ಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭದ್ರತಾ ಮಂಡಳಿಯ ಕಾಯಂ ಸದಸ್ಯರಾಗಿರುವ ಅಮೆರಿಕ, ರಷ್ಯಾ, ಫ್ರಾನ್ಸ್‌ ಮತ್ತು ಚೀನಾ ಗ್ರೀನ್‌ವುಡ್‌ ಬೆಂಬಲಕ್ಕೆ ನಿಂತಿವೆ. ಬ್ರಿಟನ್‌ ಐದನೇ ಕಾಯಂ ಸದಸ್ಯ ರಾಷ್ಟ್ರವಾಗಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದುವರೆಗೆ ನಡೆದ 11 ಸುತ್ತುಗಳ ಚುನಾವಣೆಯಲ್ಲಿ ಭಂಡಾರಿ ಅವರಿಗೆ ಮೂರನೇ ಎರಡರಷ್ಟು ಬಹುಮತ ವ್ಯಕ್ತವಾಗಿದೆ. ಆದರೆ ಭದ್ರತಾ ಮಂಡಳಿಯಲ್ಲಿ ಕೇವಲ ಮೂರು ಮತಗಳಿಂದ ಗ್ರೀನ್‌ವುಡ್‌ಗಿಂತ ಹಿಂದೆ ಬಿದ್ದಿದ್ದಾರೆ.

12ನೇ ಸುತ್ತಿನ ಚುನಾವಣೆ ಸೋಮವಾರ ನಿಗದಿಯಾಗಿದೆ. ಭದ್ರತಾ ಮಂಡಳಿ ಸದಸ್ಯರ ಜತೆ ಶುಕ್ರವಾರ ನಡೆಸಿದ ಸಭೆಯಲ್ಲಿ ಬ್ರಿಟನ್‌, ಮುಖ ಉಳಿಸಿಕೊಳ್ಳುವುದಕ್ಕಾಗಿ ಹೊರ ನಡೆಯುವ ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಿದೆ ಎಂದು ಮೂಲಗಳು ಹೇಳಿವೆ.

ಭಾರತ ಮೂರನೇ ಎರಡರ ಬಹುಮತವನ್ನು ದಾಟಬಹುದೆಂಬ ಆತಂಕದಿಂದ ಐಸಿಜೆ ಚುನಾವಣೆಗೆ ತಡೆಯಾಜ್ಞೆ ತರುವಂತೆಯೂ ಭದ್ರತಾ ಮಂಡಳಿ ಜತೆಗೆ ಅನೌಪಚಾರಿಕ ಸಭೆಯಲ್ಲಿ ಬ್ರಿಟನ್‌ ಪ್ರಸ್ತಾಪಿಸಿದೆ. ಅಂತಹ ಸನ್ನಿವೇಶದಲ್ಲಿ ಐಸಿಜೆಗೆ ಭಾರತದ ಪ್ರತಿನಿಧಿಯೊಬ್ಬರು ಆಯ್ಕೆಯಾಗುವುದನ್ನು ತಡೆಯಲು ಭದ್ರತಾ ಮಂಡಳಿಗೆ ಬಹಳ ಕಠಿಣವಾಗಲಿದೆ.

ಐದು ಕಾಯಂ ಸದಸ್ಯ ರಾಷ್ಟ್ರಗಳು ವೀಟೋ ಅಧಿಕಾರ ಹೊಂದಿದ್ದರೂ ಭಾರತದ ಅಭ್ಯರ್ಥಿ ಆಯ್ಕೆಯಾಗುವುದನ್ನು ತಡೆಯಲು ವೀಟೋ ಬಳಸುವ ಸಾಧ್ಯತೆಯಿದೆ. 'ಇವತ್ತು ಬ್ರಿಟನ್‌, ನಾಳೆ ಅದು ನಮ್ಮ ಸರದಿಯೂ ಆಗಬಹುದು' ಎಂದು ಈ ಐದು ರಾಷ್ಟ್ರಗಳು ಒಟ್ಟಾಗಿ ವಾದಿಸುತ್ತಿವೆ.

'ಐದು ಕಾಯಂ ಸದಸ್ಯರ ಪೈಕಿ ಒಬ್ಬರನ್ನು ಇಂದು ಹೊರಹಾಕಿದರೆ, ಭವಿಷ್ಯದಲ್ಲಿ ಉಳಿದವರಿಗೂ ಕುತ್ತು ಬರಬಹುದು' ಎಂಬುದೇ ಈ ದೇಶಗಳ ಆತಂಕದ ಮೂಲವಾಗಿದೆ.

ಐಸಿಜೆ ಚುನಾವಣೆಯಲ್ಲಿ ಭದ್ರತಾ ಮಂಡಳಿ ಹಾಗೂ ಸಾಮಾನ್ಯ ಸಭೆ ಎರಡರಲ್ಲೂ ರಹಸ್ಯ ಮತದಾನ ನಡೆಯುವುದರಿಂದ ಯಾರು ಯಾರಿಗೆ ಮತ ಹಾಕಿದರೆಂದು ತಿಳಿಯುವುದಿಲ್ಲ.

ಎಲ್ಲ ಸುತ್ತುಗಳ ಮತಗಳನ್ನು ಲೆಕ್ಕಹಾಕಿದರೆ ಭದ್ರತಾ ಮಂಡಳಿಯಲ್ಲಿ ಈವರೆಗೆ ಗ್ರೀನ್‌ವುಡ್‌ 9 ಮತಗಳನ್ನು ಪಡೆದಿದ್ದರೆ, ಭಂಡಾರಿ ಐದು ಮತಗಳನ್ನು ಪಡೆದಿದ್ದಾರೆ.

ತನ್ನ ಪ್ರತಿನಿಧಿಯನ್ನು ಗೆಲ್ಲಿಸಿಕೊಳ್ಳಲು ಭಾರತ ಸರಕಾರ ಹಾಗೂ ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಪ್ರತಿನಿಧಿ ಭದ್ರತಾ ಮಂಡಳಿ ಸದಸ್ಯರ ಮನವೊಲಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ