ಆ್ಯಪ್ನಗರ

ನಾವು ಯುದ್ಧದ ಮೈದಾನದಲ್ಲಿದ್ದೇವೆ: ಮತ್ತಷ್ಟು ದಾಳಿಯ ಸುಳಿವು ನೀಡಿದ ಫ್ರಾನ್ಸ್ ಸಚಿವ!

ನೈಸ್ ನಗರದ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಫ್ರಾನ್ಸ್ ಆಂತರಿಕ ಸಚಿವ ಗೆರಾಲ್ಡ್ ಡರ್ಮನಿನ್, ನಾವು ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಹೋರಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Vijaya Karnataka Web 30 Oct 2020, 4:32 pm
ಪ್ಯಾರಿಸ್: ಇಲ್ಲಿನ ನೈಸ್ ನಗರದ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಫ್ರಾನ್ಸ್ ಆಂತರಿಕ ಸಚಿವ ಗೆರಾಲ್ಡ್ ಡರ್ಮನಿನ್, ನಾವು ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಹೋರಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
Vijaya Karnataka Web Gerald Darmanin
ಸಂಗ್ರಹ ಚಿತ್ರ


ನಾವು ಯುದ್ಧದ ಮೈದಾನದಲ್ಲಿದ್ದು, ನಮ್ಮ ಶತ್ರು ಇಸ್ಲಾಮಿಕ್ ಭಯೋತ್ಪಾದನೆ ಎಂದು ಗೆರಾಲ್ಡ್ ಡರ್ಮನಿನ್ ಘೋಷಿಸಿದ್ದಾರೆ. ಈ ಯುದ್ಧ ಸುದೀರ್ಘವಾಗಿದ್ದು, ಅಂತಿಮ ಜಯ ನಮ್ಮದಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಫ್ರಾನ್ಸ್‌ನ ಚರ್ಚ್‌ನಲ್ಲಿ ಮಹಿಳೆಯ ಶಿರಚ್ಛೇದ: ಆಗಂತುಕನ ದಾಳಿಗೆ ಮೂವರು ಬಲಿ!

ಇದೇ ವೇಳೆ ಫ್ರಾನ್ಸ್‌ನಲ್ಲಿ ಇಂತಹ ಮತ್ತಷ್ಟು ಭಯೋತ್ಪಾದಕ ದಾಳಿಗಳು ನಡೆಯಲಿವೆ ಎಂದು ಶಂಕೆ ವ್ಯಕ್ತಪಡಿಸಿರುವ ಡರ್ಮನಿನ್, ನಾವು ಈ ದಾಳಿಗಳನ್ನು ಧೈರ್ಯವಾಗಿ ಎದುರಿಸಲಿದ್ದೇವೆ ಎಂದು ಭರವಸೆ ನೀಡಿದರು.

ನಮ್ಮ ಶತ್ರುಗಳು ಬಿಡಿಬಿಯಾಗಿ ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಗುರುತಿಸುವುದು ಸವಾಲಿನ ಕೆಲಸ. ಆದರೆ ದೇಶದ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಜನತೆಯ ಸಹಕಾರದೊಂದಿಗೆ ನಾವು ಈ ಯುದ್ಧವನ್ನು ಗೆಲ್ಲಲಿದ್ದೇವೆ ಎಂದು ಡರ್ಮನಿನ್ ವಿಶ್ವಾಸ ವ್ಯಕ್ತಪಡಿಸಿದರು.

ಮೂಲಭೂತವಾದಿಗಳ ತಾಣವಾಗುತ್ತಿದೆ ಫ್ರಾನ್ಸ್: ಸರಣಿ ದಾಳಿಗಳ ಸ್ಥೂಲ ಪರಿಚಯ!

ಇಸ್ಲಾಮಿಕ್ ಭಯೋತ್ಪಾದನೆ ಫ್ರಾನ್ಸ್‌ನ ಅತಿದೊಡ್ಡ ಶತ್ರು ಎಂದು ಘೋಷಿಸಿರುವ ಡರ್ಮನಿನ್, ಆಂತರಿಕ ಹಾಗೂ ಬಾಹ್ಯ ದುಷ್ಟ ಶಕ್ತಿಗಳೊಂದಿಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

ನಿನ್ನೆ(ಅ.29) ನೈಸ್ ನಗರದ ಚರ್ಚ್‌ವೊಂದಕ್ಕೆ ಏಕಾಏಕಿ ನುಗ್ಗಿದ ಭಯೋತ್ಪಾದಕ, ಹರಿತವಾದ ಚಾಕುವಿನಿಂದ ಓರ್ವ ಮಹಿಳೆಯ ಕತ್ತು ಸೀಳಿದ್ದನ್ನಲ್ಲದೇ ಇತರ ಇಬ್ಬರನ್ನು ಇರಿದು ಕೊಂದಿದ್ದ.

ಫ್ರಾನ್ಸ್ ಭಯೋತ್ಪಾದಕ ದಾಳಿ ಖಂಡಿಸಿದ ಪ್ರಧಾನಿ: ಉಗ್ರವಾದದ ವಿರುದ್ಧ ಜಂಟಿ ಹೋರಾಟಕ್ಕೆ ಕರೆ!

ಫ್ರಾನ್ಸ್‌ನಲ್ಲಿ ನಡೆದ ಈ ಭೀಕರ ಘಟನೆಯನ್ನು ಭಾರತವೂ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳೂ ಉಗ್ರವಾಗಿ ಖಂಡಿಸಿವೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ