ಯಾದಗಿರಿ: ಮಾಜಿ ಸಚಿವ ಸುರೇಶ್ಕುಮಾರ ನೇತೃತ್ವದ ಬಿಜೆಪಿ ಸತ್ಯಶೋಧನಾ ಸಮಿತಿ ತಂಡ ಗುರುವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸಿತು.
ತಂಡವು ಜಿಲ್ಲಾಸ್ಪತ್ರೆಯ ಬಹುತೇಕ ವಾರ್ಡ್ಗಳಿಗೆ ಭೇಟಿ ನೀಡಿ,ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳನ್ನು ಮಾತನಾಡಿಸಿ,ಆಸ್ಪತ್ರೆಯಲ್ಲಿನ ಚಿಕಿತ್ಸೆಯ ಬಗ್ಗೆ ವಿವರ ಪಡೆದರು.ಈ ವೇಳೆ ಕೆಲವು ರೋಗಿಗಳು ಈ ಆಸ್ಪತ್ರೆಯಲ್ಲ ಸಮರ್ಪಕವಾಗಿ ಚಿಕಿತ್ಸೆ ನೀಡುವುದಿಲ್ಲ.ಕೇವಲ ತೋರಿಕೆಗೆ ಎಂಬಂತೆ ತಪಾಸಣೆ ನಡೆಸಲಾಗುತ್ತದೆ. ಪ್ರಾಥಮಿಕವಾಗಿ ಚಿಕಿತ್ಸೆ ನೀಡಿ,ಗಂಭೀರ ಸಮಸ್ಯೆ ಇದ್ದರೇ ತಕ್ಷಣವೇ ಬೇರೆ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಸುರೇಶ್ಕುಮಾರ ಅವರು ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಎಂ.ಎಸ್. ಪಾಟೀಲ್ ಅವರಿಂದ ಆಸ್ಪತ್ರೆಯ ಸ್ಥಿಗತಿಗಳ ಕುರಿತು ಸಂಪೂರ್ಣ ಮಾಹಿತಿ ಪಡೆದರು.
ಶಸ್ತ್ರ ಚಿಕಿತ್ಸಕ ಡಾ. ಎಂ.ಎಸ್. ಪಾಟೀಲ್ ಅವರು, ಫೆಬ್ರವರಿ ತಿಂಗಳಲ್ಲಿ ಇಬ್ಬರು ಮಕ್ಕಳು ಮತ್ತು ಜುಲೈ ತಿಂಗಳಲ್ಲಿ 1 ಮಗು ಮೃತಪಟ್ಟಿದೆ. ಹೀಗಾಗಿ ನಮ್ಮಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದರು ಹೇಳಿದರು. ಜಿಲ್ಲಾಸ್ಪತ್ರೆಯಲ್ಲಿ 33 ವೈದ್ಯರು ಇರಬೇಕಿದೆ. 14 ಜನ ಇದ್ದಾರೆ. ಇದಲ್ಲದೇ ನರ್ಸ್ಗಳು ಕೂಡ ತುಂಬ ಕಡಿಮೆ ಪ್ರಮಾಣದಲ್ಲಿದೆ. ಇರುವ ಸಿಬ್ಬಂದಿಗಳಿಂದಲೇ ಉತ್ತಮವಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಬಿಜೆಪಿಯ ಸತ್ಯ ಶೋಧನಾ ಸಮಿತಿಗೆ ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಎಂಎಲ್ಸಿ ಅಶ್ವಥ್ ನಾರಾಯಣ, ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ, ಖಂಡಪ್ಪ ದಾಸನ್, ನಾಗರತ್ನ ಕುಪ್ಪಿ, ಸ್ವಾಮಿದೇವ ದಾಸನಕೇರಿ, ಹಣಮಂತ ಇಟಗಿ ಸೇರಿದಂತೆ ಇನ್ನಿತರರಿದ್ದರು.
ಆ. 24ರಂದು ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಡಿಎಚ್ಒ ಅವರು ಜಿಲ್ಲೆಯಲ್ಲಿ ಒಟ್ಟು 60 ಮಕ್ಕಳು ಮೃತಪಟ್ಟಿದ್ದಾರೆ. ಇದರಲ್ಲಿ ಜಿಲ್ಲಾಸ್ಪತ್ರೆಯಲ್ಲಿ 15ರಿಂದ 20 ಇವೆ ಎಂದಿದ್ದರು. ಆದರೆ,ಬಿಜೆಪಿ ಸತ್ಯಶೋಧನಾ ಸಮಿತಿ ಗುರುವಾರ ಭೇಟಿ ನೀಡಿದಾಗ 3 ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಂ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ. ಸತ್ಯ ಯಾವುದು ಎಂಬುದು ತಿಳಿಯದಂತಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಮಾಗನೂರು ಹೇಳಿದರು.