ಮಂಜುನಾಥ ಜೂಟಿ
ಕಲಬುರಗಿ:ಅಂತೂ ಇಂತೂ ಸರಕಾರ ಗುರುಮಠಕಲ್ ಪಟ್ಟಣಕ್ಕೆ 'ತಾಲೂಕು ಕೇಂದ್ರ ಭಾಗ್ಯ' ಕಲ್ಪಿಸಿದೆ. ಈ ಮೂಲಕ ಅತಿ ಹೆಚ್ಚು ಗುಳೆ ಹೋಗುವ ಕ್ಷೇತ್ರಕ್ಕೆ ಹೊಸ ಪಟ್ಟ ಅರಸಿ ಬಂದಿದೆ. ಹೀಗಾಗಿ ಇನ್ನೊಂದಿಷ್ಟು ಅಭಿವೃದ್ಧಿಯಾಗುವ ನಿರೀಕ್ಷೆ ಗರಿಗೆದರಿದೆ.
ಈ ಹಿಂದೆ ಬಿಜೆಪಿ ಸರಕಾರ ತಾಲೂಕು ಕೇಂದ್ರ ಎಂದು ಘೋಷಣೆ ಮಾಡಿತ್ತು.ನಂತರ ಬದಲಾದ ಸರಕಾರದಿಂದಾಗಿ ಕೊನೆಗೆ ಹಿಂದಿನ ಸರಕಾರ ಎಲ್ಲಾ ನಿರ್ಧಾರಗಳನ್ನು ತಡೆಹಿಡಿದಿತ್ತು.ಆದರೆ,ಕೊನೆಗೆ ಮತ್ತೆ ವಿಧಾನ ಸಭೆ ಚುನಾವಣೆ ಹತ್ತಿರ ಬರುತಿದ್ದಂತೆ ರಾಜ್ಯ ಸರಕಾರ ಗುರುಮಠಕಲ್ಗೆ ತಾಲೂಕು ಕೇಂದ್ರ ಭಾಗ್ಯ ಕಲ್ಪಿಸಿದೆ.
ಗುಳೆ ಖ್ಯಾತಿ ಗುರುಮಠಕಲ್
ಗುರುಮಠಕಲ್ ವಿಧಾನ ಸಭಾ ಕ್ಷೇತ್ರದಲ್ಲಿ ಮಳೆ ಪ್ರಮಾಣ ಕಡಿಮೆ. ಹೀಗಾಗಿ ಇಲ್ಲಿಯ ಜನ ಉದ್ಯೋಗಕ್ಕಾಗಿ ನೆರೆಯ ಮಹಾರಾಷ್ಟ್ರದ ಮುಂಬೈ,ಪುಣೆ,ತೆಲಂಗಾಣಾದ ಹೈದರಾಬಾದ್,ರಾಜ್ಯದ ರಾಜಧಾನಿ ಬೆಂಗಳೂರಿಗೆ ಗುಳೆ ಹೋಗುತ್ತಾರೆ.ಇಲ್ಲಿ ಹೇಳಿಕೊಳ್ಳುವಂತಹ ನೀರಾವರಿ ಯೋಜನೆಗಳಿಲ್ಲ. ಇನ್ನೂ ಕೈಗಾರಿಕೆಗಳು ಇಲ್ಲವೇ ಇಲ್ಲ. ಇರುವವೂ ಸ್ಥಳೀಯರಿಗೆ ಬಲು ದೂರ.ಹೀಗಾಗಿ ಇಲ್ಲಿನ ಜನ ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ಗಂಟು ಮೂಟೆ ಹೊತ್ತು ಗುಳೆ ಹೋಗುತ್ತಾರೆ. ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 200 ಕ್ಕೂ ಹೆಚ್ಚು ಸಣ್ಣ,ಬೃಹತ್ ಕೆರೆಗಳಿದ್ದರೂ ಅವುಗಳಲ್ಲಿ ನೀರಿಲ್ಲ.ಹೂಳು ತುಂಬಿ ಹೋದ್ರೂ ತೆಗೆಸುವ ಗೋಜಿಗೆ ಸರಕಾರ ಮುಂದಾಗಿಲ್ಲ.
ಇದ್ದೂ ಇಲ್ಲದಂತಿರುವ ಸರಕಾರಿ ಕಚೇರಿಗಳು
ಪಟ್ಟಣದಲ್ಲಿ ಸಮುದಾಯ ಆಸ್ಪತ್ರೆ,ಪೊಲೀಸ್ ಠಾಣೆ,ವಿಶೇಷ ತಹಸೀಲ್ದಾರ್,ಬಸ್ ಘಟಕ, ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ,ಐಟಿಐ,ಪ್ರಾಥಮಿಕ,ಪ್ರೌಢ,ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು,ಜೆಸ್ಕಾಂ ಕಚೇರಿ ಇವೆ.ಆದರೆ,ಇವುಗಳಿಗೆ ಸುಸಜ್ಜಿತ ಕಟ್ಟಡಗಳಿಲ್ಲ.ಏನಿದ್ದರೂ ಹಳೇ ಕಟ್ಟಡಗಳೇ ಗತಿಯಾಗಿದೆ.
ಎಲ್ಲ ಸೇವೆಗಳು ಒಂದೇ ಸೂರಿನಲ್ಲಿ ಸಿಗುವಂತಾಗಲಿ
ಪಟ್ಟಣದಲ್ಲಿ ಮಿನಿ ವಿಧಾನ ಸೌಧ ನಿರ್ಮಿಸಿ ಒಂದೇ ಸೂರಿನಡಿ ಎಲ್ಲಾ ಸರಕಾರಿ ಕಚೇರಿ ಪ್ರಾರಂಭಿಸಬೇಕು.ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ,ಲೋಕೋಪಯೋಗಿ,ನೀರಾವರಿ,ಅರಣ್ಯ,ತೋಟಗಾರಿಕೆ,ಕೃಷಿ ಇಲಾಖೆ,ಕಾರ್ಮಿಕ,ಸಮಾಜ ಕಲ್ಯಾಣ,ನ್ಯಾಯಾಲಯ, ಉಪ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಪ್ರವಾಸೋದ್ಯಮ ಇಲಾಖೆ ಕಚೇರಿ ಸ್ಥಾಪಿಸಬೇಕು. ಪಿಜಿ ಸೆಂಟರ್,ಪ್ರಮುಖ ನಗರ ಮತ್ತು ಧಾರ್ಮಿಕ ಕೇಂದ್ರಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಬೇಕು. ಗುರುಮಠಕಲ್ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ,ದಕ್ಷ ಅಧಿಕಾರಿಗಳ ನೇಮಕ ಮಾಡಬೇಕು.ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ,ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.
ಘೋಷಿತ ಹೊಸ ತಾಲೂಕಿನ ವಿಶೇಷತೆಗಳು
ಮಹಾಯೋಗಿನಿ ಮಾಣಿಕೇಶ್ವರಿ ಮಾತಾ,ಮೋತಕಪಲ್ಲಿ ಬಲಭೀಮಶೇನ,ಗುರುಮಠಕಲ್ನ ಖಾಸಾ ಮಠ,ಬೋರಬಂಡಾ ಲಕ್ಷ್ಮೇ ತಿಮ್ಮಪ್ಪ,ಚಿಂತನಹಳ್ಳಿ ಗವಿಸಿದ್ದೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ತಾಣಗಳನ್ನು ಸನಿಹದಲ್ಲಿಯೇ ಇಟ್ಟುಕೊಂಡಿರುವ ಗುರುಮಠಕಲ್ ದಬದಭಿ ಫಾಲ್ಸ್ ಸಹ ಹೊಂದಿದೆ.
ಯಾದಗಿರಿ ಜಿಲ್ಲಾ ಕೇಂದ್ರದಿಂದ 41 ಕಿ.ಮೀ ಹಾಗೂ ಕಲಬುರಗಿಯಿಂದ 110 ಕಿ.ಮೀ ಅಂತರದಲ್ಲಿ ಗುರುಮಠಕಲ್ ಪಟ್ಟಣ ಯಾದಗಿರಿ ಜಿಲ್ಲೆಯಲ್ಲೂ ಇದ್ದರೂ ಸಹ ಲೋಕಸಭಾ ಕ್ಷೇತ್ರ ಮಾತ್ರ ಕಲಬುರಗಿಗೆ ಒಳಪಟ್ಟಿದೆ.
ಜನರು ಏನಂತಾರೆ
ಗುರುಮಠಕಲ್ ತಾಲೂಕು ಕೇಂದ್ರವಾಗಿ ಘೋಷಿಸಿರುವುದು ಸಂತಸದ ಸಂಗತಿ. ಹೊಸ ತಾಲೂಕಿಗೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಸರಕಾರ ಗಡಿ ಭಾಗದ ಅಭಿವೃದ್ಧಿಗೆ ಆಧ್ಯತೆ ನೀಡಬೇಕು.
ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಗುರುಮಠಕಲ್
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ತಾಲೂಕು ಕೇಂದ್ರಗಳನ್ನು ಘೋಷಣೆ ಮಾಡಿತ್ತು. ಇದೇನು ಹೊಸದಲ್ಲ. ಈ ಭಾಗದ ರೈತರು ಗುಳೆ ಹೋಗುತ್ತಿದ್ದಾರೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾರ್ಯ ಮೊದಲು ಆಗಬೇಕು
- ಸಾಯಬಣ್ಣ ಬೋರಬಂಡಾ ಮುಖಂಡರು
ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪ್ರಮುಖವಾಗಿ ಪರಿಗಣಿಸಿ, ಕಡೇಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳಿಯರಿಗೆ ಉದ್ಯೋಗ ದೊರಕಿಸಿಕೊಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. - ಪ್ರಭು ಮುತ್ತಗಿ ಗುರುಮಠಕಲ್.
ಗುರುಮಠಕಲ್ನಲ್ಲಿ ಬರೀ ಇಲ್ಲಗಳದ್ದೇ ಕಾರುಬಾರು, ಯಾವುದೇ ಸಣ್ಣ ಸರಕಾರಿ ಕೆಲಸಕ್ಕೆ ಯಾದಗಿರಿಗೆ ತೆರಳು ಅನಿವಾರ್ಯತೆವಿದೆ. ಹಾಗಾಗಿ ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಸರಕಾರಿ ಕಚೇರಿಗಳನ್ನು ಶೀಘ್ರವೇ ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು
- ಚಂದುಲಾಲ ಚೌಧರಿ ಬಿಜೆಪಿ ಗುರುಮಠಕಲ್ ನಗರ ಅಧ್ಯಕ್ಷ