ಆ್ಯಪ್ನಗರ

ಎರಡು ವರ್ಷದಲ್ಲಿ 115 ರೈತರು ನೇಣಿಗೆ ಶರಣು

ಕಳೆದ ಎರಡು ವರ್ಷಗಳಿಂದ ತೀವ್ರ ಬರಗಾಲ ಕಾಡುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಒಟ್ಟು 115 ರೈತರು ನೇಣಿಗೆ ಶರಣಾಗಿದ್ದಾರೆ.

Vijaya Karnataka 18 Jul 2019, 10:05 pm
ಮಲ್ಲಪ್ಪ ಸಂಕೀನ್‌ ಯಾದಗಿರಿ:ಕಳೆದ ಎರಡು ವರ್ಷಗಳಿಂದ ತೀವ್ರ ಬರಗಾಲ ಕಾಡುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಒಟ್ಟು 115 ರೈತರು ನೇಣಿಗೆ ಶರಣಾಗಿದ್ದಾರೆ.
Vijaya Karnataka Web 115 farmers socid in two years
ಎರಡು ವರ್ಷದಲ್ಲಿ 115 ರೈತರು ನೇಣಿಗೆ ಶರಣು


2017-2018ನೇ ಸಾಲಿನಲ್ಲಿ 61 ಮತ್ತು 2018-19ನೇ ಸಾಲಿನಲ್ಲಿ 54 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆಯೇ ಇದಕ್ಕೆ ಕಾರಣವಾಗಿದೆ. ಸತತ ಎರಡು ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆ ಸರಿಯಾಗಿ ಆಗಿಲ್ಲ. ಹೀಗಾಗಿಯೇ ಸಾಲಬಾಧೆಗೆ ತುತ್ತಾದ ರೈತರು ನೇಣಿಗೆ ಕೊರಳೊಡ್ಡಿದ್ದಾರೆ. ಆದರೆ, ಈ ವರ್ಷ ಸಹ ವರುಣದೇವ ಮುನಿಸಿಕೊಳ್ಳುವ ಎಲ್ಲ ಲಕ್ಷ ಣಗಳು ಗೋಚರಿಸುತ್ತಿವೆ.

ಸಮರ್ಪಕ ಮಳೆಯಾದರೆ ಮಾತ್ರ ರೈತರು ಎಲ್ಲ ಬೆಳೆಗಳನ್ನು ಬೆಳೆಯಲು ಸಾಧ್ಯ. ಆದರೆ, ಕೈಕೊಡುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಬೆಳೆಯೂ ಎರಡು ವರ್ಷ ಒಣಗಿ ಹೋಗಿದೆ. ಹೀಗಾಗಿ ಅನ್ನದಾತರ ಕುಟುಂಬಗಳು ತುಂಬ ಸಂಕಷ್ಟಕ್ಕೀಡಾಗಿವೆ. ಹೆಸರು, ತೊಗರಿ, ಹತ್ತಿ, ಶೇಂಗಾ, ಜೋಳ ಸೇರಿ ಬಹುತೇಕ ಬೆಳೆಗಳು ಕೈಕೊಟ್ಟಿವೆ. ಸ್ವಲ್ಪ ಮಳೆ ಆರಂಭದಲ್ಲಿ ಬಂದಾಗ ಎಲ್ಲರೂ ಖುಷಿಯಿಂದಲೇ ಬಿತ್ತನೆ ಮಾಡಿದ್ದರು. ಆದರೆ, ಆ ಮೇಲೆ ಮಳೆ ತುಂಬ ಕಡಿಮೆ ಆಯಿತು. ಹೀಗಾಗಿ ಜಮೀನಿನಲ್ಲಿ ಬೆಳೆ ಸಂಪೂರ್ಣ ಒಣಗಿ ಹೋಗಿದ ಕಾರಣ ಮಾಡಿದ ಖರ್ಚು ಸಹ ವಾಪಸ್‌ ಬಂದಿರಲಿಲ್ಲ.

ಬೀಜ, ರಸಗೊಬ್ಬರ ಸೇರಿ ಇತರ ಕೃಷಿ ಚಟುವಟಿಕೆಗಳಿಗಾಗಿ ರೈತರು ಸಾಲ ಮಾಡಿಕೊಂಡಿರುತ್ತಾರೆ. ಬೆಳೆ ಬಂದಾಗ ಸಾಲ ಮರುಪಾವತಿ ಮಾಡಿದರಾಯಿತು ಅಂದುಕೊಂಡು ಕೈ ಸಾಲ ಮಾಡುತ್ತಾರೆ. ಆದರೆ, ಬೆಳೆಗಳು ಬಾರದ ಪರಿಣಾಮ ಮಾಡಿದ ಸಾಲ ತೀರಿಸಲಾಗಿದೆ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದು, ಇದು ತೀವ್ರ ಆತಂಕ ಉಂಟು ಮಾಡಿದೆ.

ಸತತ ಎರಡು ವರ್ಷದಿಂದಲೂ ಬರದಿಂದ ಕಂಗೆಟ್ಟಿದ್ದ ರೈತರಿಗೆ ಈ ವರ್ಷವಾದರೂ ಮಳೆ ಬರಬಹುದು ಅಂತಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅದು ಸಂಪೂರ್ಣವಾಗಿ ಸುಳ್ಳಾಗುವ ಸಾಧ್ಯತೆ ಹೆಚ್ಚಳವಾಗಿದೆ. ವರುಣ ಮುನಿಸಿಕೊಂಡಿರುವ ಹಿನ್ನೆಲೆಯಲ್ಲಿ ಅನ್ನದಾತರಿಗೆ ಚಿಂತೆ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಬಿತ್ತನೆ ಮಾಡಲು ಬೀಜ ಮತ್ತು ಗೊಬ್ಬರವನ್ನು ರೈತರು ದಾಸ್ತಾನು ಮಾಡಿಕೊಂಡಿದ್ದಾರೆ. ಕೆಲ ರೈತರು ಬಿತ್ತನೆ ಮಾಡಿದ್ದಾರೆ. ಇನ್ನೂ ಕೆಲವರು ಹಾಗೆಯೇ ಇದ್ದಾರೆ. ಮಳೆ ಬರಲಿ ಎಂದು ಕಾಯುತ್ತಿದ್ದಾರೆ. ಈ ವರ್ಷ ಬರಗಾಲ ಆವರಿಸಿಕೊಂಡರೆ ರೈತರ ಜೀವನ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ಹೆಚ್ಚಳವಾಗಿದೆ.

ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿರುವ ಪರಿಣಾಮ ಕೆಲ ರೈತರು ಉದ್ಯೋಗ ಅರಸಿಕೊಂಡು ಕುಟಂಬ ಸಮೇತ ಬೆಂಗಳೂರು, ಮುಂಬೈ ಹಾಗೂ ಹೈದರಾಬಾದ್‌ ಸೇರಿ ಇತರ ಕಡೆಗೆ ಗುಳೆ ಹೋಗುತ್ತಿದ್ದಾರೆ. ಆದರೆ, ಈ ವರ್ಷವೂ ಮಳೆ ಕೈಕೊಟ್ಟರೆ ಬಹುತೇಕ ರೈತರು ಗುಳೆ ಹೋಗುವುದು ಖಚಿತವಾಗಿದೆ.

ಬರಗಾಲದಿಂದ ಅನ್ನದಾತರು ತತ್ತರಿಸಿ ಹೋಗಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವ ಮೂಲಕ ಅವರ ನೆರವಿಗೆ ಧಾವಿಸಬೇಕು.

- ಸುಭಾಷ್‌ ಐಕೂರು
ರೈತ ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ