ಮಲ್ಲಪ್ಪ ಸಂಕೀನ್
ಯಾದಗಿರಿ: ಇತಿಹಾಸ ಪ್ರಸಿದ್ಧವಾಗಿರುವ ಕೃಷ್ಣೆ-ಭೀಮೆಯ ಸಂಗಮ ತಾಣವಾಗಿರುವ ಶಹಾಪುರ ತಾಲೂಕಿನ ಸಂಗಮ ಗ್ರಾಮದಲ್ಲಿರುವ ಸಂಗಮೇಶ್ವರ ದೇವಾಲಯದಲ್ಲಿ ಪೂಜೆ ಮಾಡುವ ವಿಚಾರವಾಗಿ ಅರ್ಚಕರ ಮತ್ತು ಸ್ವಾಮಿಜಿ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿರುವುದರಿಂದ ದೇವಾಲಯಕ್ಕೆ ಬೀಗ ಹಾಕಲಾಗಿದೆ. ಸಂಗಮೇಶ್ವರ ದಿಗ್ಬಂಧನದಲ್ಲಿದ್ದು ದರುಶನ ಪಡೆಯಲು ಭಕ್ತರು ಪರಡಾಡುವಂತಾಗಿದೆ.
ಸಗರನಾಡಿನ ಸೆರಗಿನಂಚಿನಲ್ಲಿರುವ ಸಂಗಮ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಎರಡು ವರ್ಷಗಳ ಇತಿಹಾಸವಿದೆ. ದೇವರ ಪೂಜೆಗಾಗಿ ದೇವಸ್ಥಾನದ ಪ್ರಧಾನ ಅರ್ಚಕ ಸಂಗಯ್ಯ ಸ್ವಾಮಿ ಮತ್ತು ಜನರು ಸೇರಿಕೊಂಡು ನಿಯೋಜನೆ ಮಾಡಿರುವ ಪೂಜ್ಯ ಶ್ರೀ ಕರುಣೇಶ್ವರ ಸ್ವಾಮೀಜಿ ನಡುವೆ ತೀವ್ರ ತಿಕ್ಕಾಟ ನಡೆದಿದೆ.
ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಸರಕಾರ ನೇಮಿಸಿರುವ ಅರ್ಚಕರೇ ಪೂಜೆ ಮಾಡಬೇಕು. ಸಂಗಮೇಶ್ವರ ದೇವಸ್ಥಾನದ ಪೀಠಾಧಿಪತಿಗಳನ್ನಾಗಿ ಶ್ರೀ ಕರುಣೇಶ್ವರ ಸ್ವಾಮೀಜಿಯವರನ್ನು ಭಕ್ತರು ನೇಮಕ ಮಾಡಿದ್ದಾರೆ. ದೇವಸ್ಥಾನದ ಹೆಸರಿನಲ್ಲಿ ಟ್ರಸ್ಟ್ ಮಾಡಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಕಳೆದೊಂದು ವರ್ಷದಿಂದ ಪ್ರಧಾನ ಅರ್ಚಕ ಸಂಗಯ್ಯ ಸ್ವಾಮಿ ಮತ್ತು ಶ್ರೀ ಕರುಣೇಶ್ವರ ಸ್ವಾಮೀಜಿ ನಡುವೆ ತಿಕ್ಕಾಟ ನಡೆಯುತ್ತಿದೆ.
ಶ್ರೀ ಕರುಣೇಶ್ವರ ಸ್ವಾಮೀಜಿ ಮೂಲತಃ ಜೇವರ್ಗಿ ತಾಲೂಕಿನ ಆಲೂರಿನವರು. ಸದ್ಯ ಚಿಂಚೋಳಿ ತಾಲೂಕಿನ ನಿಡಗುಂದಾ ಶ್ರೀನಂದೀಶ್ವರಮಠದ ಪೀಠಾಧೀಪತಿ ಆಗಿದ್ದಾರೆ. ಸಂಗಮ ಗ್ರಾಮದ ಭಕ್ತರೇ ದೇವಸ್ಥಾನ ಅಭಿವೃದ್ಧಿಯಾಗಲಿ ಎಂದು ಅವರನ್ನು ಮೂರು ವರ್ಷಗಳ ಹಿಂದೆ ಕರೆದುಕೊಂಡು ಬಂದಿದ್ದಾರೆ.
ಅರ್ಚಕರು ಮತ್ತು ಸ್ವಾಮಿಜಿ ಒಬ್ಬರನ್ನು ಕಂಡರೇ ಮತ್ತೊಬ್ಬರಿಗೆ ಆಗುತ್ತಿಲ್ಲ. ತಾರಕ್ಕೇರಗಿದ್ದು ಇದೀಗ ಪ್ರಧಾನ ಅರ್ಚಕ ಅವರು ಸಂಗಯ್ಯ ಸ್ವಾಮಿ ಅವರು ಶ್ರೀ ಕರುಣೇಶ್ವರಸ್ವಾಮೀಜಿ ಮತ್ತು ಅವರ ಆಪ್ತರು ಎನ್ನಲಾದ ಶಾಂತಯ್ಯಸ್ವಾಮಿ ದೇವಸ್ಥಾನಕ್ಕೆ ಬೀಗ ಜಡಿದು ನಮ್ಮನ್ನು ಹೊರಹಾಕಿದ್ದಾರೆ. ಹೀಗಾಗಿ ನ್ಯಾಯ ಕೊಡಿಸುವಂತೆ ತಹಸೀಲ್ದಾರಗೆ ಲಿಖತವಾಗಿ ದೂರು ನೀಡಿದ್ದಾರೆ. ಇಬ್ಬರ ಕಿತ್ತಾಟದಿಂದಾಗಿ ಭಕ್ತರು ಮಾತ್ರ ದೇವರ ದರ್ಶನ ವಂಚಿತರಾಗಿದ್ದಾರೆ.
ಶ್ರೀ ಕರುಣೇಶ್ವರ ಸ್ವಾಮೀಜಿ ಮತ್ತವರ ಆಪ್ತ ಶಾಂತಯ್ಯ ಸ್ವಾಮಿ ನಮ್ಮನ್ನು ದೇವಸ್ಥಾನದಿಂದ ಹೊರ ಹಾಕಿ ಬೀಗ ಹಾಕಿದ್ದಾರೆ. ನನಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ತಹÜಸೀಲ್ದಾರಗೆ ದೂರು ನೀಡಿದ್ದೇನೆ. ನ್ಯಾಯ ದೊರೆಯುವರೆಗೂ ಹೋರಾಟ ಮಾಡುತ್ತೇನೆ.
-ಸಂಗಯ್ಯ ಸ್ವಾಮಿ, ದೇವಸ್ಥಾನದ ಅರ್ಚಕರು
ಸಂಗಮೇಶ್ವರ ದೇವಸ್ಥಾನಕ್ಕೆ ಬೀಗವನ್ನು ನಾನು ಶಾಂತಯ್ಯ ಸ್ವಾಮಿ ಮೂಲಕ ಹಾಕಿಸಿಲ್ಲ.ಅವರು ಮತ್ತು ಊರಿನವರು ಕೆಲವರು ಕೂಡಿ ಸ್ವಯಂ ಪ್ರೇರಿತವಾಗಿ ಹಾಕಿದ್ದಾರೆ. ನಾನು ಇಲ್ಲಿಗೆ ಬಂದ ಮೇಲೆ ದೇವಸ್ಥಾನ ಅಭಿವೃದ್ದಿ ಆಗುತ್ತಿದೆ. ನನ್ನ ಏಳ್ಗೆ ಸಹಿಸಿಕೊಳ್ಳದೇ ಕೆಲವರು ಷಡ್ಯಂಂತ್ರ ಮಾಡಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪ ಸಂಪೂರ್ಣ ಸುಳ್ಳಾಗಿದೆ.
-ಶ್ರೀ ಕರುಣೇಶ್ವರ ಸ್ವಾಮೀಜಿ ಸಂಗಮೇಶ್ವರ ದೇವಸ್ಥಾನದ ಪೀಠಾಧಿಪತಿಗಳು
ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಬೀಗ ಹಾಕಿರುವುದು ಕಾನೂನು ಬಾಹಿರವಾಗಿದೆ. ಈ ದೇವಸ್ಥಾನದ ಪೀಠಾಧಿಪತಿಯನ್ನಾಗಿ ಯಾರನ್ನೂ ನೇಮಕ ಮಾಡಲು ಬರುವುದಿಲ್ಲ. ಸ್ಥಳಕ್ಕೆ ತಹಸೀಲ್ದಾರರನ್ನು ಕಳುಹಿಸಿ ಹಾಕಿರುವ ಬೀಗವನ್ನು ತೆಗೆಯಿಸುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುವುದು.
-ಡಾ.ಬಿ.ಸಿ.ಸತೀಶ್, ಅಪರ ಜಿಲ್ಲಾಧಿಕಾರಿ