ಆ್ಯಪ್ನಗರ

ಪ್ರವಾಹಕ್ಕೆ ಕೊಚ್ಚಿ ಹೋದ ಪಂಪ್‌ಸೆಟ್‌; ಒಣಗುತ್ತಿರುವ ಭತ್ತ

ಕೃಷ್ಣೆ ಮತ್ತು ಭೀಮೆ ಜಿಲ್ಲೆಯಲ್ಲಿ ಬೋರ್ಗರೆಯುತ್ತಿದ್ದರೂ ಈ ನೀರು ಬಳಕೆ ಮಾಡಲಾಗದ ಪರಿಣಾಮ ಸಾವಿರಾರು ಎಕರೆ ಭತ್ತದ ಬೆಳೆಗಳು ಒಣಗುವ ಹಂತಕ್ಕೆ ಬಂದು ತಲುಪಿವೆ.

Vijaya Karnataka 18 Aug 2019, 4:40 pm
ಮಲ್ಲಪ್ಪ ಸಂಕೀನ್‌, ಯಾದಗಿರಿ :ಕೃಷ್ಣೆ ಮತ್ತು ಭೀಮೆ ಜಿಲ್ಲೆಯಲ್ಲಿ ಬೋರ್ಗರೆಯುತ್ತಿದ್ದರೂ ಈ ನೀರು ಬಳಕೆ ಮಾಡಲಾಗದ ಪರಿಣಾಮ ಸಾವಿರಾರು ಎಕರೆ ಭತ್ತದ ಬೆಳೆಗಳು ಒಣಗುವ ಹಂತಕ್ಕೆ ಬಂದು ತಲುಪಿವೆ.
Vijaya Karnataka Web flooded pumpset drying paddy
ಪ್ರವಾಹಕ್ಕೆ ಕೊಚ್ಚಿ ಹೋದ ಪಂಪ್‌ಸೆಟ್‌; ಒಣಗುತ್ತಿರುವ ಭತ್ತ


ಎರಡು ನದಿ ಸಮೀಪ ಇರುವ ಬಹುತೇಕ ಭತ್ತದ ಗದ್ದೆಗಳು ಮತ್ತು ಇತರ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಆದರೆ, ನದಿಯಿಂದ ಸುಮಾರು 1ರಿಂದ 2 ಕಿಮೀ ದೂರದಲ್ಲಿರುವ ಬೆಳೆಗಳು ಹಾಗೂ ಭತ್ತದ ಗದ್ದೆಗಳಿಗೆ ನೀರು ಬಂದಿಲ್ಲ. ಹೀಗಾಗಿ ಅವು ಮುಳುಗಡೆ ಆಗಿಲ್ಲ. ನದಿಯಿಂದ ದೂರವಿರುವ ರೈತರಿಗೆ ಈಗ ಭತ್ತಕ್ಕೆ ನೀರು ಹರಿಸಬೇಕು ಎಂದರೆ ಪಂಪ್‌ಸೆಟ್‌ಗಳು ನೀರು ಪಾಲಾಗಿವೆ. ಇತ್ತ ಗದ್ದೆಗಳು ಒಣುತ್ತಿವೆ. ಹೀಗಾಗಿ ನದಿಯಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ಗಂಗೆ ಉಕ್ಕಿ ಹರಿಯುತ್ತಿದ್ದರೂ ಸಹ ಸದ್ಬಳಕೆ ಮಾಡಿಕೊಳ್ಳಲು ಆಗದ ಹಿನ್ನೆಲೆಯಲ್ಲಿ ಅನ್ನದಾತರು ಸಂಕಷ್ಟದಲ್ಲಿದ್ದಾರೆ.

ಭತ್ತ ಬೆಳೆಯಲು ಸಾಕಷ್ಟು ನೀರಿನ ಅವಶ್ಯಕತೆ ಇದೆ. ಆಗಾಗ ಗದ್ದೆಗಳಿಗೆ ಬಿಟ್ಟರೆ ಬೆಳೆ ಹುಲುಸಾಗಿ ಬರುತ್ತದೆ. ಆದರೆ, ಕೊರತೆ ಉಂಟಾದರೆ ಬೆಳೆ ನಷ್ಟವಾಗುತ್ತದೆ. ಇದರಿಂದ ರೈತರು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

ನೀರು ಇಲ್ಲದ ಹಿನ್ನೆಲೆಯಲ್ಲಿ ಗದ್ದೆಗಳು ಬಿರುಕು ಬಿಟ್ಟಿವೆ. ಏನು ಮಾಡಬೇಕು ಎಂಬುದು ರೈತರಿಗೆ ತಿಳಿಯದ ಸಂಗತಿಯಾಗಿದೆ. ನೆರೆ ಹಾವಳಿ ವಿಪರೀತವಾಗಿ ಆಗಿರುವ ಹಿನ್ನೆಲೆಯಲ್ಲಿ ಇವರ ಸಂಕಷ್ಟವನ್ನು ಕೇಳೋರೇ ಇಲ್ಲದಂತಾಗಿದೆ.

ಬೆಳೆ ಚನ್ನಾಗಿ ಬರಲಿ ಅಂದುಕೊಂಡು ತುಂಬಾ ಅಚ್ಚುಕಟ್ಟಾಗಿ ನಾಟಿ ಮಾಡಿಸಿದ್ದಾರೆ. ಇದಲ್ಲದೆ ರಸಗೊಬ್ಬರಕ್ಕಾಗಿ ಸಾವಿರಾರು ರೂ. ಖರ್ಚು ಮಾಡಿದ್ದಾರೆ. ಕೃಷಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಗದ್ದೆಯಲ್ಲಿ ಬೆಳೆದಿದ್ದ ಕಳೆ ಸಹ ಕೀಳಿಸಿದ್ದಾರೆ. ಆದರೆ, ಎಲ್ಲವೂ ವ್ಯರ್ಥವಾಗಿದೆ ಎನ್ನುವುದು ರೈತರ ಅಳಲು.

ಕೌಳೂರು, ಗುರುಸುಣಿಗಿ, ನಾಯ್ಕಲ್‌, ಬಬಲಾದ, ತುಮಕೂರ, ಚನ್ನೂರ (ಜೆ), ಹೆಡಗಿಮದ್ರಾ, ಅಬ್ಬೆತುಮಕೂರ, ಶೆಳ್ಳಗಿ, ದೇವಾಪುರ, ಹೇಮನೂರ, ಮರಕಲ್‌, ನಾಗರಾಳ, ಹಾವಿನಾಳ, ತಿಂಥಣಿ, ಶಿವಪುರ, ಕೊಂಕಲ್‌, ಅನಕಸೂಗೂರು, ಐಕೂರು, ಹಯ್ಯಾಳ (ಬಿ), ಇಟಗಿ, ರೋಟ್ನಡಗಿ, ಬೆಂಡೆಬೆಂಬಳಿ, ಯಕ್ಷಿಂತಿ, ಗೌಡೂರ, ಟೊಣ್ಣೂರು ಹೀಗೆ ಹಲವಾರು ಗ್ರಾಮಗಳು ಕೃಷ್ಣಾ ಮತ್ತು ಭೀಮಾ ನದಿ ವ್ಯಾಪ್ತಿಯಲ್ಲಿ ಬರುತ್ತಿವೆ. ಪಂಪ್‌ಸೆಟ್‌ಗಳು ನೀರೊಳಗೆ ಮುಳುಗಿವೆ. ಇತ್ತ ನದಿಯಲ್ಲಿ ನೀರು ಸಹ ಕಡಿಮೆ ಆಗುತ್ತಿಲ್ಲ. ಹೀಗಾಗಿ ನದಿಪಾತ್ರದಿಂದ ದೂರವಿರುವ ಭತ್ತದ ಗದ್ದೆಗಳು ಭಣ ಭಣ ಎನ್ನುತ್ತಿವೆ.

ಭೀಮಾ ಮತ್ತು ಕೃಷ್ಣಾ ನದಿಯಲ್ಲಿ ಪ್ರವಾಹ ಕಡಿಮೆ ಆಗದ ಹಿನ್ನೆಲೆಯಲ್ಲಿ ಬಹುತೇಕ ರೈತರ ಪಂಪ್‌ಸೆಟ್‌ಗಳು ನೀರೊಳಗ ಮುಳುಗಡೆ ಆಗಿವೆ. ನೀರು ಕಡಿಮೆ ಆಗಿದ್ದರೆ ಮಾತ್ರ ನದಿ ತೀರದಿಂದ ದೂರವಿರುವ ಭತ್ತದ ಗದ್ದೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಆದರೆ, ನೀರಿನ ಪ್ರಮಾಣ ಇಳಿಕೆ ಆಗದ ಹಿನ್ನೆಲೆಯಲ್ಲಿ ಪಂಪ್‌ಸೆಟ್‌ಗಳು ನದಿ ಪಾಲಾಗಿವೆ.

ಭತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತಿವೆ. ಈಗಾಗಲೇ ಬಿರುಕು ಬಿಟ್ಟಿವೆ. ನದಿಯಲ್ಲಿಯೇ ಪಂಪ್‌ಸೆಟ್‌ಗಳು ಮುಳುಗಿವೆ. ಹಿಗಾಗಿ ನದಿಯಿಂದ ದೂರವಿರುವ ರೈತರು ತಮ್ಮ ಗದ್ದೆಗಳಿಗೆ ನೀರು ಹರಿಸಲಾಗುತ್ತಿಲ್ಲ. ಇವರಿಗೆ ಸರಕಾರ ಸೂಕ್ತ ಪರಿಹಾರ ನೀಡಲಿ.

- ಸುಭಾಷ್‌ ಐಕೂರ, ರೈತ ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ