ಯಾದಗಿರಿ: ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ತುಂಬಾ ಕಳಪೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ. ಹೀಗಾಗಿ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತæ ಜಿಪಂ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ ಅವರು, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ಗಳಿಗೆ ತಾಕೀತು ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಶ್ರುಕವಾರ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ನಾನಾ ಇಲಾಖೆಯ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ, ತಪ್ಪು ಮಾಡಿದ್ದರೆ ತಿದ್ದುಕೊಂಡು,ಮುಂದಿನ ದಿನಗಳಲ್ಲಿ ಯಾವುದೇ ಲೋಪಗಳಾಗದಂತೆ ಕೆಲಸ ಮಾಡುವಂತೆ ಸೂಚಿಸಿದರು. ಇಲ್ಲದೆ ಹೋದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡಗಳನ್ನು ಈಗಾಗಲೇ ನಿರ್ಮಿಸಲಾಗುತ್ತಿದೆ. ಕಾಮಗಾರಿ ನಾನಾ ಹಂತದಲ್ಲಿದೆ. ಆದರೆ, ಸರಿಯಾಗಿ ಮಾಡುತ್ತಿಲ್ಲ. ಗುಣಮಟ್ಟದಿಂದ ಮಾಡುತ್ತಿಲ್ಲ ಎಂದು ಹಲವರು ದೂರು ನೀಡಿದ್ದಾರೆ ಎಂದು ಜಿಪಂ ಉಪಾಧ್ಯಕ್ಷರು ಹೇಳಿದಾಗ, ಉತ್ತರಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಂ. ಡೊಳ್ಳಿ, ಕಳಪೆ ಕಾಮಗಾರಿ ಮಾಡಿಲ್ಲ. ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡು, ಗುಣಮಟ್ಟದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಹಾಗಿದ್ದರೆ ಖುದ್ದು ತಾವು ಇನ್ನಿತರ ಅಧಿಕಾರಿಗಳೊಂದಿಗೆ ಭೇಟಿ ನೀಡುತ್ತೇವೆ. ಆಗ ಒಂದು ವೇಳೆ ಮಮಗಾರಿ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಕಳಪೆ ಮಟ್ಟದ್ದು ಎಂದು ಕಂಡು ಬಂದರೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಮುಲಾಜಿಲ್ಲದೇ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಈಗಾಗಲೇ 19.50 ಲಕ್ಷ ರೂ. ಅನುದಾನ ಬಂದಿದ್ದು ನಾನಾ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಉತ್ತರಿಸಿದರು.
ಬಳಿಕ ಮಾತನಾಡಿದ ಸದಸ್ಯ ರಾಜಶೇಖರಗೌಡ ವಜ್ಜಲ್ ಅವರು, ಸರಕಾರದ ಯೋಜನೆಗಳನ್ನು ಅರ್ಹ ವ್ಯಕ್ತಿಗಳಿಗೆ ಸಮರ್ಪಕವಾಗಿ ತಲುಪಿಸುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆ ಪ್ರಗತಿ ಕುರಿತಂತೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜಿಪಂ ಸಿಇಒ ಡಾ. ಅವಿನಾಶ್ ಮೆನನ್, ಜಿಪಂ ಉಪ ಕಾರ್ಯದರ್ಶಿ ವಸಂತರಾವ್ ಕುಲಕರ್ಣಿ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳಿದ್ದರು.
ವಿಶಿಷ್ಟ ಚೇತನ ವಿದ್ಯಾರ್ಥಿಗಳಿಗೆ
2 ಲಕ್ಷ ಪ್ರೋತ್ಸಾಹ ಧನ ವಿತರಣೆ
ಜಿಲ್ಲೆಯಲ್ಲಿರುವ ವಿಕಲಚೇತನರಾದ ವಿಶಿಷ್ಟ ಚೇತನ ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹ ಧನ 2 ಲಕ್ಷ ರೂ. ನೀಡಲಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಮಾರುತಿ ಹುಜರಾತಿ ಹೇಳಿದರು.
ಈಗಾಗಲೇ ಹಲವು ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲಾಗಿದೆ. ಸಾಧನಾ ಸಲಕರಣೆಗಳನ್ನು ಸಹ ನೀಡಲಾಗಿದೆ. ಸರಕಾರದ ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಿದರು.
ಪಶು ಪಾಲನಾ ಇಲಾಖೆ ಅಧಿಕಾರಿ ಷಣ್ಮುಖ ಅವರು ,ಔಷಧ ಹಾಗೂ ರಾಸಾಯನಿಕ ಸಾಮಾಗ್ರಿಗಳ ಸರಬರಾಜು 17.25 ಲಕ್ಷ ರೂ. ಬಿಡುಗಡೆ ಮಾಡಿದ್ದು ಇದರಲ್ಲಿ 14.01 ಲಕ್ಷ ರೂ. ಖರ್ಚು ಮಾಡಲಾಗುವುದು. ಪಶು ಆಸ್ಪತ್ರೆಯ 14 ಕಟ್ಟಡಗಳ ದುರಸ್ಥಿ ಕಾರ್ಯ ಮಾಡಲು ಪಿಆರ್ಇಡಿಗೆ ವಹಿಸಲಾಗಿದೆ ಎಂದು ತಿಳಿಸಿದರು.