ಮಲ್ಲಪ್ಪ ಸಂಕೀನ್,
ಯಾದಗಿರಿ: ಕುಡಿವ ನೀರು ಕಲುಷಿತಗೊಂಡಿದ್ದರಿಂದ ಕ್ರೀಡಾ ಶಾಲೆಯ ಮಕ್ಕಳ ಆರೋಗ್ಯ ಕೈ ಕೊಟ್ಟಿದ್ದು, ಬಹುತೇಕರು ಮನೆ ಕಡೆ ಓಡಿದ್ದಾರೆ. ಉಳಿದವರಿಗೆ ಆತಂಕ ಉಂಟು ಮಾಡಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸ್ತಕ ವರ್ಷದಿಂದಲೇ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ವಸತಿ ನಿಲಯ ಆರಂಭಿಸಲಾಗಿದೆ. ಒಟ್ಟು 30 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಈ ಪೈಕಿ 20 ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಬರೀ 10 ಜನರು ಮಾತ್ರ ವಸತಿ ನಿಲಯದಲ್ಲಿ ಇದ್ದಾರೆ.
ವಸತಿ ನಿಲಯದಲ್ಲಿರುವ 10 ಜನ ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿನಿಯರು ಭಾನುವಾರ ತಡರಾತ್ರಿ ವಾಂತಿ ಮಾಡಿಕೊಂಡಿದ್ದಾರೆ. ಇದೀಗ ಈ ವಿದ್ಯಾರ್ಥಿನಿಯರು ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಮಲ್ಲಿಕಾರ್ಜುನ ನಾಯಕ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾನೆ. ಈತನಿಗೆ ಭಾನುವಾರ ತಡರಾತ್ರಿ ಪ್ರಾಥಮಿಕ ಚಿಕಿತ್ಸೆ ಸರಕಾರಿ ಆಸ್ಪತ್ರೆಯಲ್ಲಿ ಕೊಡಿಸಲಾಗಿದೆ. ಆತನು ಶಾಲೆಗೆ ಹೋಗಿಲ್ಲ. ಬದಲಾಗಿ ವಸತಿ ನಿಲಯದಲ್ಲಿ ಇದ್ದುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾನೆ.
ವಾಂತಿ-ಭೇದಿ, ಶೀತ, ಕೆಮ್ಮು, ಮೆ- ಕೈ ನೋವು, ಕೈ-ಕಾಲಿನಲ್ಲಿ ನಿಶಕ್ತಿ, ಹೊಟ್ಟೆ ನೋವು, ತಲೆನೋವು ಹೀಗೆ ಹಲವಾರು ಸಾಂಕ್ರಾಮಿಕ ರೋಗಗಳು ಮಕ್ಕಳನ್ನು ತೀವ್ರವಾಗಿ ಕಾಡುತ್ತಿದೆ. ಇವುಗಳಿಂದ ಬಳಲುತ್ತಿರುವ ಮಕ್ಕಳು ಹೆದರಿ ಊರಿಗೆ ಹೋಗಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಅವರು ವಾಪಸ್ ಬರುವ ಸಾಧ್ಯತೆ ಇದೆ.
ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಕ್ರೀಡೆಯ ಮೇಲೆ ಆಸಕ್ತಿ ಬೆಳೆಸಲು ವಸತಿ ನಿಲಯ ಆರಂಭಿಸಿರುವ ಪ್ರಮುಖ ಉದ್ದೇಶವಾಗಿದೆ. ಕಬಡ್ಡಿ, ಓಟದ ಸ್ಪರ್ಧೆ, ಖೋ ಖೋ, ವಾಲಿಬಾಲ್, ಹೈ ಜಂಪ್, ಲಾಂಗ್ ಜಂಪ್ ಸೇರಿದಂತೆ ಸಮಗ್ರವಾಗಿ ಕ್ರೀಡೆಯ ಕುರಿತು ತರಬೇತಿ ನೀಡಲಾಗುತ್ತದೆ. ಉತ್ತಮವಾಗಿ ತರಬೇತಿ ನೀಡುವುದಕ್ಕಾಗಿಯೇ ಒಬ್ಬ ತರಬೇತಿದಾರರನ್ನು ನೇಮಿಸಲಾಗಿದೆ.
ವಸತಿ ನಿಲಯ ಆರಂಭದ ದಿನದಿಂದಲೂ ಮಕ್ಕಳಿಗೆ ಕುಡಿಯಲು ಅಶುದ್ಧವಾದ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ನೀರು ಕೊಡುತ್ತಿಲ್ಲ. ಹೀಗಾಗಿ ಈ ನೀರಿನಿಂದಲೇ ನಾನಾ ರೋಗಗಳು ಆವರಿಸಿಕೊಂಡಿರುವ ಪರಿಣಾಮ ಮಕ್ಕಳು ಹೈರಾಣು ಆಗಿದ್ದಾರೆ. ಅವರ ನೂರೆಂಟು ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.
ಕ್ರೀಡಾ ವಸತಿ ನಿಲಯದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಬಹಳಷ್ಟು ವಿದ್ಯಾರ್ಥಿಗಳು ಚಿಕಿತ್ಸೆಗೆ ಊರಿಗೆ ತೆರಳಿದ್ದಾರೆ. ಉಳಿದಿರುವ ವಿದ್ಯಾರ್ಥಿಗಳ ಪೈಕಿ ಕೆಲವರು ಭಾನುವಾರ ರಾತ್ರಿ ವಾಂತಿ ಮಾಡಿಕೊಂಡಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಎಲ್ಲರಿಗೂ ಚಿಕಿತ್ಸೆ ಕೊಡಿಸಲಾಗಿದೆ. ನೀರಿನಿಂದಲೇ ಈ ಸಮಸ್ಯೆ ಆಗಿದೆ. ಹೀಗಾಗಿ ಮಕ್ಕಳಿಗೆ ಕುಡಿಯಲು ಶುದ್ಧ ನೀರು ಪೂರೈಕೆ ಮಾಡಲಾಗುವುದು.
-ಬಸನಗೌಡ ಪಾಟೀಲ ಆಲ್ದಾಳ, ಸಹಾಯಕ ನಿರ್ದೇಶಕ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯಾದಗಿರಿ