ಆ್ಯಪ್ನಗರ

ಹೊಸಪೇಟೆಯಲ್ಲಿ ರಾಹುಲ್‌ ಗಾಂಧಿ ರಣಕಹಳೆ

ಹಿಂದೆ ನೋಡುತ್ತ ಗಾಡಿ ಓಡಿಸಿದರೆ ಅಪಘಾತವಾಗದೆ ಇನ್ನೇನು? ಪಿಎಂ ಮೋದಿ ಹಿಂದೆ ನೋಡುತ್ತ ಅಧಿಕಾರ ನಡೆಸುತ್ತಿದ್ದಾರೆ!

Vijaya Karnataka Web 10 Feb 2018, 3:51 pm
ಹೊಸಪೇಟೆ: ಹಿಂದೆ ಏನಾಗಿದೆ ಎಂದು ನೋಡುತ್ತ ದೇಶವನ್ನು ಮುನ್ನಡೆಸಬೇಡಿ. ಮುಂದೆ ಏನಾಗಬೇಕು ಎಂಬುದನ್ನು ನೋಡುತ್ತ ದೇಶವನ್ನು ಮುನ್ನಡಿಸಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಿವಿಮಾತು ಹೇಳಿದ್ದಾರೆ.
Vijaya Karnataka Web rahul kickstarts poll campaign in karnataka
ಹೊಸಪೇಟೆಯಲ್ಲಿ ರಾಹುಲ್‌ ಗಾಂಧಿ ರಣಕಹಳೆ


ಮೂರು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಶನಿವಾರ ಬಳ್ಳಾರಿಯ ಹೊಸಪೇಟೆಯಲ್ಲಿ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಪ್ರಚಾರ ಕ್ಯಾಂಪೇನ್‌ಗೆ ಚಾಲನೆ ನೀಡಿ ಮಾತನಾಡುತ್ತ, ಪ್ರಧಾನಿ ಮೋದಿ ಮಾಡಬೇಕಿದ್ದ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮುಂದಿನ ಭವಿಷ್ಯವನ್ನು ನೋಡುತ್ತ ಅಧಿಕಾರ ನಡೆಸುತ್ತಿದ್ದಾರೆ ಎಂದರು.

ಕರ್ನಾಟಕ ಜನರು ತಮ್ಮ ಭವಿಷ್ಯವನ್ನು ನಿರ್ಣಯಿಸಬೇಕಿದೆ. ಒಂದೆಡೆ ಕಾಂಗ್ರೆಸ್‌ ಇದೆ, ಮತ್ತೊಂದೆಡೆ ಬಿಜೆಪಿ ಇದೆ. ಯಾರು ಸತ್ಯವನ್ನು ಹೇಳುತ್ತಾರೋ ಅವರನ್ನು ಬೆಂಬಲಿಸಿ. ಸುಳ್ಳು ಹೇಳುವವರನ್ನು ಬೆಂಬಲಿಸಿ ಪ್ರಯೋಜನವಿಲ್ಲ. ಇದುವರೆಗೆ ಪ್ರಧಾನಿ ಮೋದಿಜಿ ಒಂದು ರೂಪಾಯಿಯನ್ನಾದರು ನಿಮಗೆ ಕೊಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದರು.

ಕರ್ನಾಟಕದ ಜನತೆಗೆ ನೀಡಿದ ಭರವಸೆಗಳನ್ನು ಸಿಎಂ ಸಿದ್ದರಾಮಯ್ಯ ಈಡೇರಿಸಿದ್ದಾರೆ. ಬಡವರಿಗೆ, ಹಿಂದುಳಿದ ವರ್ಗದವರಿಗೆ ಎಲ್ಲರಿಗೂ ರಾಜ್ಯ ಸರಕಾರ ಅಭಿವೃದ್ಧಿ ಯೋಜನೆಗಳನ್ನು ತಲುಪಿಸಿದೆ. ಯೋಜನೆಗಳು ಶೇ.90ರಷ್ಟು ಜನರಿಗೆ ತಲುಪಿದೆ ಎಂದರು.

ಬಿಜೆಪಿ ಸರಕಾರ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆದಿದೆ. ಬಳ್ಳಾರಿಯ ಗಣಿ ಸಂಪತ್ತನ್ನು ದೋಚಿದ್ದಾರೆ. ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರು ಕಬ್ಬಿಣದ ಅಧಿರಿನ ಲೂಟಿಕೋರರಾದ ರೆಡ್ಡಿ ಸಹೋದರರ ಗಣರಾಜ್ಯ ಬಳ್ಳಾರಿ ಎಂದಿದ್ದಾರೆ ಎಂದರು.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಪರಾಧ ಪ್ರಮಾಣ ಹೆಚ್ಚಾಗಿದೆ. ನರೇಂದ್ರ ಮೋದಿ ಅವರಿಗೆ ಪ್ರಧಾನಿಯಾಗಿ ಮುಂದುವರಿಯುವ ನೈತಿಕ ಅರ್ಹತೆ ಇಲ್ಲ. ಕರ್ನಾಟಕ ಸರಕಾರದ ಕುರಿತು ಬಂಡಲ್‌ಗಟ್ಟಲೆ ಸುಳ್ಳುಗಳನ್ನು ಪ್ರಧಾನಿ ಮೋದಿ ಹೋದಲ್ಲಿ ಬಂದಲ್ಲಿ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ರಾಹುಲ್‌ ಆರೋಪಿಸಿದರು.

2002ರ ಗಲಭೆ ನಂತರ ಕರ್ನಾಟಕದ ಜನತೆ ಮೋದಿ ಅವರನ್ನು ನಂಬುವುದಿಲ್ಲ. ಕಾಂಗ್ರೆಸ್‌ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಕರ್ನಾಟಕದ ಜನತೆಗೆ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಆಶಿಸುತ್ತಿದ್ದಾರೆ. ಬಳ್ಳಾರಿ ಜತೆಗೆ ಸೋನಿಯಾ ಗಾಂಧಿ ಅವರಿಗೆ ಭಾವನಾತ್ಮಕ ಸಂಬಂಧವಿದೆ. 1999ರಲ್ಲಿ ಲೋಕಸಭೆ ಚುನಾವಣೆಯನ್ನು ಸುಷ್ಮಾ ಸ್ವರಾಜ್‌ ವಿರುದ್ಧ ಸೋನಿಯಾ ಗಾಂಧಿ ಗೆದ್ದಿದ್ದರು. ಬಳ್ಳಾರಿಯ ಎಲ್ಲ 9 ವಿಧಾನಸಭೆ ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದು ರಾಹುಲ್‌ ಗಾಂಧಿ ವಿಶ್ವಾಸ ವ್ಯಕ್ತ ಪಡಿಸಿದರು.

ರಫೆಲ್‌ ಡೀಲ್‌ನಲ್ಲಿ ನಡೆದಿದೆ ಬೃಹತ್‌ ಭ್ರಷ್ಟಾಚಾರ
ಪ್ರಧಾನಿ ಮೋದಿ ಅರು ರಫೆಲ್‌ ಡೀಲ್‌ನ ಮಾಹಿತಿಯನ್ನು ಹೊರಗೆ ಬಿಟ್ಟುಕೊಡುತ್ತಿಲ್ಲ ಏಕೆ? ಇವತ್ತು ಬಿಜೆಪಿ ಸರಕಾರದ ಅಡಿಯಲ್ಲಿ ನಡೆದ ಅತಿದೊಡ್ಡ ಭ್ರಷ್ಟಾಚಾರ ರಫೆಲ್‌ ಡೀಲ್‌ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

ಉದ್ಯೋಗ ರಚನೆ ಬಗ್ಗೆ ಮೋದಿ ಮೌನಿಯಾಗಿದ್ದಾರೆ. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ. ಆದರೆ ಬೆಂಗಳೂರಿಗೆ ಭೇಟಿ ನೀಡಿದಾಗ ಕಾಂಗ್ರೆಸ್‌ ಸರಕಾರವನ್ನು ಟೀಕಿಸಿದ್ದಾರೆ. ಪ್ರಧಾನಿ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಜನ ಬಯಸುತ್ತಾರೆ ಎಂದರು.

ನೋಟು ನಿಷೇಧ ಒಂದು ಮೂರ್ಖತನದ ನಿರ್ಧಾರ. ಅಧಿಕಾರ ಹೇಗೆ ನಡೆಸಬೇಕು ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರನ್ನು ನೋಡಿ ಪ್ರಧಾನಿ ಮೋದಿ ಕಲಿಯಬೇಕು ಎಂದು ರಾಹುಲ್‌ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ