ಆ್ಯಪ್ನಗರ

ಶಬರಿಮಲೆ ಮಕರಜ್ಯೋತಿಯ ಹಿಂದಿರುವ ಸತ್ಯಾಸತ್ಯತೆ ಏನು ಗೊತ್ತಾ?

ಸೂರ್ಯನು ತನ್ನ ಪಥವನ್ನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಿಸುವ ಸಮಯವೇ ಮಕರ ಸಂಕ್ರಾಂತಿ. ಶಬರಿ ಮಲೆಯಲ್ಲಿ ಈ ದಿನ ನಡೆಯುವ ವಿದ್ಯಾಮಾನ ಮಕರ ಜ್ಯೋತಿ. ಈ ಮಕರ ಜ್ಯೋತಿಯು ಮಾನವ ನಿರ್ಮಿತವೇ ಅಥವಾ ಪವಾಡವೇ ಎನ್ನುವುದರ ಕುರಿತಾಗಿ ಮಾಹಿತಿ ಇಲ್ಲಿದೆ ನೋಡಿ.

Vijaya Karnataka Web 15 Jan 2020, 7:14 am
ಮಕರ ಸಂಕ್ರಾಂತಿಯಂದು ಶಬರಿ ಮಲೆಯಲ್ಲಿ ಕಾಣಿಸಿಕೊಳ್ಳುವ ಮಕರ ಜ್ಯೋತಿ ಪ್ರಮುಖ ವಿಶೇಷತೆ. ಇಲ್ಲಿ ಕಾಣಿಸಿಕೊಳ್ಳುವ ಮಕರ ಜ್ಯೋತಿಯನ್ನು ನೋಡಲು ಸಾವಿರಾರು ಮಾಲಾಧಾರಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. 41 ದಿನಗಳ ಕಠಿಣ ವ್ರತವನ್ನು ಆಚರಿಸಿದ ಭಕ್ತನು ಶಬರಿಮಲೆಯ ಪೊನ್ನಂಬಲ ಮೇಡುವಿನಲ್ಲಿ ಕಾಣಿಸುವ ಮಕರ ಜ್ಯೋತಿಯನ್ನು ಕಂಡು ಧನ್ಯನಾಗುತ್ತಾನೆ.
Vijaya Karnataka Web makara jyothi


ಮಂಡಲ ಪೂಜೆಯು ಮುಗಿದ ನಂತರ ಡಿಸೆಂಬರ್‌ 27ರಂದು ಮುಚ್ಚಿರುವ ದೇವಾಲಯದ ಬಾಗಿಲನ್ನು ಜನವರಿ 13ರಂದು ತೆರೆಯಲಾಯಿತು. 18 ಮೆಟ್ಟಿಲುಗಳ ಪೂಜಾ ಕಾರ್ಯ ನಡೆದ ನಂತರ ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಅಯ್ಯಪ್ಪ ಭಕ್ತರು ಎದುರು ನೋಡುವಂತಹ ಮಕರ ಜ್ಯೋತಿಯು ಈ ಬಾರಿ ಕಾಣಿಸಿಕೊಳ್ಳಲಿರುವುದು ಮಾತ್ರ ಜನವರಿ 15, ಬುಧವಾರದಂದು 6.30ಕ್ಕೆ. ಅಯ್ಯಪ್ಪನ ದರುಶನಕ್ಕೆ ಜನವರಿ 13 ರಿಂದ ಜನವರಿ 21ರವರೆಗೆ ಭಕ್ತರು ಇಲ್ಲಿಗೆ ಭೇಟಿ ನೀಡಬಹುದು.

ಮಕರ ಸಂಕ್ರಾಂತಿ 2020: ಎಳ್ಳು ಬೆಲ್ಲ ಬೀರಿ ಸಂತಸವನ್ನು ಹಂಚುವ ಶುಭದಿನ
ತಿರುವಾಭರಣದ ವಿಶೇಷತೆ ಏನು?
ಮಕರ ಜ್ಯೋತಿಯಂದು ಪಂದಳಂ ರಾಜನ ಅರಮನೆಯಿಂದ ತಿರುವಾಭರಣಗಳನ್ನು ಮಕರ ಸಂಕ್ರಾಂತಿಯಂದು ತಂದು ಅಯ್ಯಪ್ಪನಿಗೆ ಅಲಂಕಾರ ಮಾಡಲಾಗುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಮಕರ ಸಂಕ್ರಾಂತಿಯಂದು ಅಯ್ಯಪ್ಪನಿಗೆ ಈ ತಿರುವಾಭರಣಗಳಿಂದ ಅಲಂಕರಿಸುತ್ತಾರೆ. ಪೂಜನೀಯವಾದ ಈ ಆಭರಣಗಳು ಪಂದಳ ರಾಜರು ತಮ್ಮ ವಂಶಸ್ಥನಾದ ಅಯ್ಯಪ್ಪನಿಗೆ ಪ್ರೀತಿಯಿಂದ ಮಾಡಿಸಿದ ಒಡವೆಗಳಾಗಿವೆ. ಇದನ್ನು ಸಂಕ್ರಾಂತಿಯಂದು ಅಯ್ಯಪ್ಪ ಸನ್ನಿಧಾನಕ್ಕೆ ತೆಗೆದುಕೊಂಡು ಹೋಗುವ ಹಾಗೂ ಅಲ್ಲಿಂದ ಮರಳಿ ಅರಮನೆಗೆ ಸೇರಿಸುವ ಜವಾಬ್ದಾರಿಯೂ ಈ ಪಂದಳ ಮನೆತನದವರದೇ ಆಗಿರುತ್ತದೆ. ಇರುಮುಡಿ ಇಲ್ಲದಿದ್ದರೂ ಹದಿನೆಂಟು ಮೆಟ್ಟಲನ್ನು ಹತ್ತುವ ಅವಕಾಶ ಪಂದಳ ರಾಆಜಮನೆತನಕ್ಕೆ ಮಾತ್ರ ಇದೆ.

ಮೂರು ಆಭರಣಗಳ ಪೆಟ್ಟಿಗೆಯಲ್ಲಿ ಒಂದು ಅಯ್ಯಪ್ಪನ ಆಭರಣದ ಪೆಟ್ಟಿಗೆಯಾದರೆ ಇನ್ನೆರಡು ಪೆಟ್ಟಿಗೆಯಲ್ಲಿ ಮಾತೆಯ ಆಭರಣಗಳಿರುತ್ತದೆ. ಪಂದಳ ಅರಮನೆಯಲ್ಲಿ ಪೂಜೆಯು ನೆರವೇರಿಸಿದ ನಂತರ ಪಲ್ಲಕ್ಕಿಯಲ್ಲಿರಿಸಿ ಶಬರಿಗಿರಿಗೆ ಹೊತ್ತೊಯ್ಯಲಾಗುತ್ತದೆ. ಹೀಗೆ ಅಯ್ಯಪ್ಪನ ಆಭರಣಗಳನ್ನು ತೆಗೆದುಕೊಂಡು ಹೋಗುವವರೂ ಕೂಡಾ ಅಯ್ಯಪ್ಪ ದೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯ.

ಪಂದಳ ಅರಮನೆಯಿಂದ ಆಭರಣಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಗರುಡವೂ ಕಾವಲು ಕಾಯುತ್ತದೆ ಎನ್ನುತ್ತಾರೆ. ಇದರಂತೆ ಸಮಯಕ್ಕೆ ಸರಿಯಾಗಿ ಗರುಡನೂ ಕಾಣಿಸಿಕೊಳ್ಳುತ್ತದೆ. ಹೀಗೆ ಆಭರಣಗಳು ಅರಮನೆಯಿಂದ ಅಯ್ಯಪ್ಪನ ಸನ್ನಿಧಾನಕ್ಕೆ ಸಂಕ್ರಾಂತಿಯಂದು ಸಂಜೆ ಬಂದು ಸೇರುತ್ತದೆ. ಈ ಚಿನ್ನದ ಆಭರಣಗಳಿಂದ ಅಯ್ಯಪ್ಪನ್ನು ಅಲಂಕರಿಸಿ ದ್ವಾರವನ್ನು ತೆರೆಯುವ ಸಮಯಕ್ಕೆ ಪೊನ್ನಂಬಲಮೇಡು ಗಿರಿಯಲ್ಲಿ ಮಕರ ಜ್ಯೋತಿಯೂ ಕಾಣಿಸಿಕೊಳ್ಳುತ್ತದೆ. ಈ ಮಕರ ಜ್ಯೋತಿಯು ಮೂರು ಬಾರಿ ಬೆಳಗುತ್ತದೆ. ಇದನ್ನೇ ಮಕರವಿಲಕ್ಕು ಎಂದು ಕರೆಯುತ್ತಾರೆ.

ಮಕರ ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲದ ವಿಶೇಷತೆ ಏನು ಗೊತ್ತಾ?

ಮಕರಜ್ಯೋತಿಯ ಹಿಂದಿರುವ ಸತ್ಯಾಸತ್ಯತೆ
ಶಬರಿಗಿರಿಯ ವಿರುದ್ಧದಿಕ್ಕಿನಲ್ಲಿರುವ ಗಿರಿಯೇ ಪೊನ್ನಂಬಲಮೇಡು. ಈ ಪೊನ್ನಂಬಲಮೇಡು ಗಿರಿಯ ತುತ್ತ ತುದಿಯಲ್ಲಿ ಈ ಮಕರ ಜ್ಯೋತಿಯು ಕಾಣಿಸಿಕೊಳ್ಳುತ್ತದೆ. ಮಕರ ಜ್ಯೋತಿಯ ಸಮಯದಲ್ಲಿ ಇಲ್ಲಿ ವೇದಿಕೆಯನ್ನು ನಿರ್ಮಿಸಿ, ಬೃಹತ್‌ ಬಾಣಲೆಗೆ ಕರ್ಪೂರವನ್ನು ಹಾಕಿ ಮೂರು ಬಾರಿ ಉರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಕೆಲವೊಂದು ಮೂಲಗಳ ಪ್ರಕಾರ ಪೊನ್ನಂಬಲಮೇಡುವಿನಲ್ಲಿ ವಾಸವಾಗಿದ್ದ ಗಿರಿಜನರು ವರ್ಷದಲ್ಲಿ ಒಮ್ಮೆ ಅಯ್ಯಪ್ಪನಿಗೆ ಪೂಜೆ ಮಾಡಿ, ಕರ್ಪೂರಹಾಕಿ ಕಾಷ್ಠವನ್ನು ಉರಿಸುತ್ತಿದ್ದರು, ಅದನ್ನೇ ಮಕರ ಜ್ಯೋತಿ ಎಂದು ಕರೆಯಲಾಗುತ್ತಿತ್ತು. ನಂತರದಲ್ಲಿ ಗಿರಿಜನರು ಅಲ್ಲಿಂದ ಅವಸಾನವಾದ ನಂತರ ಈ ಕಾರ್ಯವನ್ನು ವಿದ್ಯುತ್‌ ಇಲಾಖೆಯವರು ನಡೆಸಿಕೊಂಡು ಬರುತ್ತಿದ್ದಾರೆಂದು ಹೇಳಲಾಗುತ್ತಿದೆ. ಶಬರಿ ಮಲೆಗೆ ವಿದ್ಯುತ್‌ ಪೂರೈಸುವ ಕೋಚುಪಾಂಬ ಪವರ್‌ ಸ್ಟೇಷನ್‌ ಇಲ್ಲಿಯೇ ಇರುವುದರಿಂದ, ಇಲ್ಲಿಗೆ ಅತಿಕ್ರಮ ಪ್ರವೇಶವನ್ನೂ ನಿಷೇಧಿಸಲಾಗಿದೆ. ಈ ಪ್ರದೇಶದ ಭದ್ರತೆಯನ್ನು ಕೇರಳ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯು ನೋಡಿಕೊಳ್ಳುತ್ತಿದೆ.

ಎಷ್ಟೇ ವಾದಗಳು- ವಿವಾದಗಳು ನಡೆದರೂ ಅಯ್ಯಪ್ಪನ ಮೇಲಿರುವ ಭಕ್ತರ ನಂಬಿಕೆಗೆ ಎಳ್ಳಷ್ಟೂ ಅಡ್ಡಿಯಾಗಿಲ್ಲ ಎನ್ನುವುದು ಕಠಿಣ ವ್ರತವನ್ನು ಪಾಲಿಸಿ, ಬರಿಗಾಲಿನಲ್ಲಿ ಕಲ್ಲು ಮುಳ್ಳುಗಳನ್ನು ತುಳಿದು, ಬೆಟ್ಟವನ್ನು ಹತ್ತಿ, ಮಕರ ಜ್ಯೋತಿಯನ್ನು ಕಂಡು ಭಕ್ತಿಯ ಪರಾಕಾಷ್ಟೆಯನ್ನು ತಲುಪಿ ' ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಉದ್ಘರಿಸುವ ಧ್ವನಿಗಳಲ್ಲಿ ಕಂಡುಬರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ