ಆ್ಯಪ್ನಗರ

ಈ ದೇವಾಲಯದಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ಶಿವ ಪಾರ್ವತಿಯ ಭೇಟಿ ನಡೆಯುತ್ತದೆ..!

ದಕ್ಷಿಣ ಕನ್ನಡ ಜಿಲ್ಲೆಯ ಕಾವಳ ಮೂಡೂರಿನಲ್ಲಿರುವ ಕಾರಿಂಜೇಶ್ವರ ದೇವಾಲಯವು ಭೂಕೈಲಾಸವೆಂದೇ ಪ್ರಸಿದ್ಧ. ಇಲ್ಲಿ ಶಿವ ಹಾಗೂ ಪಾರ್ವತಿಯ ಪ್ರತ್ಯೇಕ ದೇವಾಲಯವಿದ್ದು ವರ್ಷಕ್ಕೆ ಒಂದು ಬಾರಿ ಮಾತ್ರ ಶಿವ ಹಾಗೂ ಪಾರ್ವತಿ ದೇವಿಯ ಭೇಟಿ ನಡೆಯುತ್ತದೆ. ಈ ದೇವಾಲಯದ ಬಗ್ಗೆ ಇನ್ನಷ್ಟು ಮಾಹಿತಿ ಈ ಲೇಖನದಲ್ಲಿದೆ.

Vijaya Karnataka Web 21 Feb 2020, 2:46 pm
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದಲ್ಲಿರುವ ಶ್ರೀ ಕಾರಿಂಜೇಶ್ವರ ದೇವಾಲಯವು ಕರಾವಳಿಯ ಭೂ ಕೈಲಾಸವೆಂದೇ ಪ್ರಸಿದ್ಧಿಯನ್ನು ಪಡೆದಿದೆ. ನಾಲ್ಕು ಯುಗಗಳಲ್ಲೂ ಈ ದೇವಾಲಯದ ಉಲ್ಲೇಖವಿದ್ದು ಕೃತಯುಗದಲ್ಲಿ ರೌದ್ರಗಿರಿ, ದ್ವಾಪರಯುಗದಲ್ಲಿ 'ಭೀಮಶೈಲ', ತ್ರೇತಾಯುದಲ್ಲಿ 'ಗಜೇಂದ್ರಗಿರಿ' ಹಾಗೂ ಕಲಿಯುಗದಲ್ಲಿ 'ಕಾರಿಂಜ'ವೆಂದು ಕರೆಯಲ್ಪಡುವ ಈ ದೇವಾಲಯವು ಸಮುದ್ರ ಮಟ್ಟದಿಂದ 1500 ಸಾವಿರ ಅಡಿ ಎತ್ತರದಲ್ಲಿದೆ. ವಿಶೇಷವೆಂದರೆ ಈ ಶಿವ ಕ್ಷೇತ್ರದಲ್ಲಿ ಶಿವನಿಗೂ, ಪಾರ್ವತಿಗೂ ಪ್ರತ್ಯೇಕವಾದ ದೇವಾಲಯವಿದೆ. ಈ ದೇವಾಲಯದ ವಿಶೇಷತೆಯ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Vijaya Karnataka Web karinjeshwara temple
Worldwide Hindu Temples


ಐತಿಹಾಸಿಕ ಹಿನ್ನೆಲೆ
ಐತಿಹಾಸಿಕ ಹಿನ್ನಲೆಯ ಪ್ರಕಾರ ಸುಮಾರು ಎಂಟುನೂರು ವರ್ಷಗಳ ಹಿಂದೆ ಕಾರಿಂಜತ್ತಾಯ ಮತ್ತು ಇಚ್ಳತ್ತಾಯ ಎಂಬ ಬ್ರಾಹ್ಮಣ ಸಹೋದರರು ಉತ್ತರ ಕನ್ನಡ ಜಿಲ್ಲೆಯ ಕುಂಬಲದಿಂದ ಸನಾತನ ಸಂಸ್ಕೃತಿಯ ಪ್ರಚಾರಕ್ಕಾಗಿ ಬಂದಿದ್ದರು. ಈ ಪ್ರಚಾರಕರಲ್ಲಿ ಇಚ್ಳತ್ತಾಯ ನೆಲೆಯೂರಿದ ಸ್ಥಳವನ್ನು ಇಚ್ಲಂಪಾಡಿಯೆಂದೂ, ಕಾರಿಂಜತ್ತಾಯ ನೆಲೆಯೂರಿದ ಸ್ಥಳವನ್ನು ಕಾರಿಂಜ ಎಂದು ಕರೆಯಲಾಯಿತು. ಕಾರಿಂಜದಲ್ಲಿ ದಟ್ಟ ಹಸಿರಿನ ಮಧ್ಯೆ ಇರುವ ಬೆಟ್ಟದಲ್ಲಿ ಶಿವ ದೇವಾಲಯವನ್ನು ನಿರ್ಮಾಣ ಮಾಡಲಾಯಿತು. ಈ ಕ್ಷೇತ್ರವೇ ಮುಂದೆ ಕಾರಿಂಜೇಶ್ವರವೆಂದು ಪ್ರಸಿದ್ಧಿ ಪಡೆಯಿತು.

ಹಸಿರಿನಿಂದ ಕೂಡಿದ ಈ ಬೆಟ್ಟವನ್ನು ಏರಬೇಕೆಂದರೆ ಸುಮಾರು ಐನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಬೇಕು. ಮೊದಲೇ ಹೇಳಿರುವಂತೆ ಇಲ್ಲಿ ಶಿವ ಹಾಗೂ ಪಾರ್ವತಿಯರ ಪ್ರತ್ಯೇಕ ದೇವಸ್ಥಾನಗಳಿದ್ದು ಶಿವ ಹಾಗೂ ಪಾರ್ವತಿಯರು ಇಲ್ಲಿ ಭೇಟಿಯಾಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಅದುವೇ ಶಿವರಾತ್ರಿಯ ಸಮಯದಲ್ಲಿ ನಡೆಯುವ ಉತ್ಸವದಂದು. ಮಹಾಶಿವರಾತ್ರಿಯಂದು ಇಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಜಾತ್ರೋತ್ಸವದಂದು ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿಯ ದೇವಾಲಯಕ್ಕೆ ತರುವ ಮೂಲಕ ಶಿವ ಪಾರ್ವತಿಯರ ಭೇಟಿ ನಡೆಯುತ್ತದೆ.

ಹಚ್ಚ ಹಸಿರಿನ ಪ್ರಕೃತಿಯ ಬಯಲೇ ಇಲ್ಲಿನ ಗಣಪನಿಗೆ ಆಲಯ..!

ಪೌರಾಣಿಕ ಹಿನ್ನೆಲೆಯ ಪ್ರಕಾರ ಶಿವನು ಪಾರ್ವತಿ ದೇವಿಯ ಸಂಗವನ್ನು ಬಯಸಿ ಬೆಟ್ಟದಿಂದ ಕೆಳಗೆ ಇಳಿದು ಬರುತ್ತಾನೆ. ಆದರೆ ಕೆಳಗೆ ಬಂದು ತಲುಪಿದಾಗ ಪಾರ್ವತಿಯು ಋತುಮತಿಯಾಗಿರುವುದನ್ನು ತಿಳಿದು, ವೇಗವಾಗಿಯೇ ಕಡಿದಾದ ಬೆಟ್ಟವನ್ನು ಏರುತ್ತಾನೆ. ಹೀಗಾಗಿ ಇಂದಿಗೂ ಕೂಡಾ ಉತ್ಸವದ ಸಮಯದಲ್ಲಿ ಅರ್ಚಕರು ಶಿವನ ವಿಗ್ರಹವನ್ನು ಕೆಳಗೆ ತಂದು ಅಷ್ಟೇ ವೇಗವಾಗಿ ಓಡಿಕೊಂಡು ಬೆಟ್ಟವನ್ನು ಏರುತ್ತಾರೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗೂ ಈ ಕಡಿದಾದ ಬೆಟ್ಟವನ್ನು ನಿಧಾನವಾಗಿ ಹತ್ತಿಕೊಂಡು ಏರುವುದರಲ್ಲಿ ಏದುಸಿರು ಬರುತ್ತದೆ. ಶಿವರಾತ್ರಿಯಂದು ಅರ್ಚಕರು ಓಡಿಕೊಂಡೇ ಬೆಟ್ಟವನ್ನು ಏರುವಂತಹ ಸನ್ನಿವೇಶವು ಈ ಸ್ಥಳದ ಪವಾಡ ಶಕ್ತಿಯಾದ ಶಿವನ ಪ್ರಭಾವವನ್ನು ತಿಳಿಸುತ್ತದೆ.


ಗುಡ್ಡದ ಬುಡದಲ್ಲಿರುವ ಗದಾ ತೀರ್ಥದಲ್ಲಿ ಜಲಪ್ರೋಕ್ಷಣೆಯನ್ನು ಮಾಡಿದರೆ ಬೆಟ್ಟದ ಹಾದಿಯ ನಡುವೆ ವಿನಾಯಕನ ಗುಡು ಕಾಣುತ್ತದೆ. ಇಲ್ಲಿಂದ ಬೃಹತ್‌ ಬಂಡೆಯನ್ನೇ ಕಡಿದು ಮಾಡಿರುವಂತಹ ಮೆಟ್ಟಿಲುಗಳನ್ನು ಏರುತ್ತಾ ಹೋದರೆ ಪಾರ್ವತಿ ದೇವಿಯ ಗುಡಿ ಸಿಗುತ್ತದೆ. ಈ ಪಾರ್ವತಿ ದೇವಿಯ ಗುಡಿಗೆ ರಸ್ತೆಯ ಮೂಲಕ ವಾಹನದಲ್ಲಿ ಹೋಗಬಹುದು. ಆದರೆ ಅಲ್ಲಿಂದ ಶಿವನನ್ನು ದರ್ಶನವನ್ನು ಮಾಡಲು ಬೆಟ್ಟವನ್ನು ಏರಬೇಕು. ಇಲ್ಲಿ ಕಲ್ಲಿನಿಂದ ಮಾಡಿರುವ 'ಉಕ್ಕಡದ ದ್ವಾರ'ವು ಕಾಣಸಿಗುತ್ತದೆ. ಅಲ್ಲಿಂದ ಗಿಡ ಗಂಟಿಗಳ ನಡುವೆ ಮಾಡಿರುವ 118 ಮೆಟ್ಟಿಲುಗಳನ್ನು ಹತ್ತಿ ಹೋದರೆ ಬೆಟ್ಟದ ತುದಿಯಲ್ಲಿಯಲ್ಲಿರುವ ಶಿಲಾಮಯ ದೇಗುಲದಲ್ಲಿ ಶಿವನ ದರ್ಶನ ಪಡೆಯಬಹುದು.

ಗರ್ಭಗುಡಿಯೊಳಗೆ ಸದಾ ಸ್ಥಿರವಾಗಿರುವ ನೆರಳು; ಈ ದೇವಾಲಯದ ಹಿಂದಿರುವ ಅಚ್ಚರಿ ಏನು ಗೊತ್ತಾ?

ಪಾಂಡವರಿಗೂ ಇದೆ ನಂಟು
ಕಡಿದಾದ ಬಂಡೆಗಳಿಂದ ಆವೃತ್ತವಾಗಿರುವ ಈ ಬೆಟ್ಟವು ಸುಮಾರು 25 ಎಕರೆಯಷ್ಟು ವ್ಯಾಪ್ತಿಯನ್ನು ಹೊಂದಿದೆ. ಈ ಕ್ಷೇತ್ರದ ಸುತ್ತಲೂ ಕೊಡ್ಯಮಲೆ ಅರಣ್ಯವು ಸುತ್ತುವರಿದಿದೆ. ಬೆಟ್ಟ ಹತ್ತುವ ಮೊದಲು ಬಲಭಾಗದಲ್ಲಿ ಗದೆಯಾಕಾರವಿರುವ ಕರೆಯಿದೆ. ಭೀಮನು ತನ್ನ ಗದೆಯನ್ನು ನೆಲದ ಮೇಲೆ ಎಸೆದಾಗ ಅಲ್ಲಿ ಕೆರೆಯು ರೂಪುಗೊಂಡಿತು ಎಂಬ ನಂಬಿಕೆ ಇದೆ. ಹಾಗಾಗಿ ಈ ಕೆರೆಯನ್ನು ಗದಾ ತೀರ್ಥವೆಂದು ಕರೆಯಲಾಗುತ್ತದೆ. ಶಿವ ದೇವಾಲಯವಿರುವ ಬೆಟ್ಟದ ಮೇಲೆ ಭೀಮನ ಹೆಬ್ಬೆರಳಿನಿಂದ ಉಂಟಾದ 'ಅಂಗುಷ್ಠ ತೀರ್ಥ', ನೆಲದ ಮೇಲೆ ಮಂಡಿಯೂರಿದಾಗ ಉಂಟಾದ 'ಜಾನುತೀರ್ಥ' ಎನ್ನುವ ಪುಟ್ಟ ಕೊಳಗಳೂ ಇಲ್ಲಿದೆ. ವರ್ಷಪೂರ್ತಿ ದೇವಾಲಯಕ್ಕೆ ಈ ಕೆರೆಗಳಿಂದಲೇ ನೀರು ಪೂರೈಕೆಯಾಗುತ್ತಿದ್ದು, ಯಾವ ಕಾಲದಲ್ಲೂ ಇಲ್ಲಿ ನೀರು ಬತ್ತದೇ ಇರುವುದು ನಿಜಕ್ಕೂ ಪವಾಡವೇ ಸರಿ. ದೇವಳದ ಪಕ್ಕದಲ್ಲಿರುವ 'ಹಂದಿಕೆರೆ'ಯೂ ಅರ್ಜುನನು ತನ್ನ ಬಾಣದಿಂದ ನಿರ್ಮಾಣ ಮಾಡಿದನೆಂದು ಹೇಳಲಾಗುತ್ತದೆ.

ದೇಶದಲ್ಲಿರುವ ಈ ದೇವಾಲಯಗಳ ಹಿನ್ನಲೆ ತಿಳಿದರೆ ಅಚ್ಚರಿಗೊಳಗಾಗುವಿರಿ!

ಬೆಟ್ಟದ ವಿಶೇಷತೆ
ಬೆಟ್ಟದ ಮೇಲೆ ಬೃಹತ್‌ ಶಿಲಾ ಬೆಟ್ಟದತ್ತ ಕೂಗಿದರೆ ಸ್ಪಷ್ಟ ಪ್ರತಿಧ್ವನಿ ನೀಡುವ ಪ್ರತಿಧ್ವನಿ ಕಲ್ಲು ಇದೆ. ಸತ್ಯ ಪ್ರಮಾಣ ಮಾಡುತ್ತಿದ್ದ ಸೀತಾದೇವಿ ಪ್ರಮಾಣ ಕಲ್ಲೂ ಇದೆ. ನಿತ್ಯವೂ ಇಲ್ಲಿ ವಾನರ ಸೇನೆಗೆ ಅನ್ನ ನೈವೇದ್ಯವನ್ನು ನೀಡಲಾಗುತ್ತದೆ. ಆಷಾಢ ಹಾಗೂ ಶ್ರಾವಣ ಮಾಸದಲ್ಲಿ ಕರಾವಳಿಯಾದ್ಯಂತ ಅಮಾವಾಸ್ಯೆಯಂದು ಮಾಡುವ ತೀರ್ಥಸ್ನಾನ ಇಲ್ಲಿನ ಇನ್ನೊಂದು ವಿಶೇಷತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ