Interesting Facts About Beautiful Meenakshi Temple In Madurai Tamil Nadu
Meenakshi Temple: ಮಧುರೈ ಮೀನಾಕ್ಷಿ ಸನ್ನಿಧಿಯ ವಾಸ್ತುವೈಭವ: ಇಲ್ಲಿವೆ ಅದ್ಭುತ ದೇಗುಲದ ಆಸಕ್ತಿಕರ ಸಂಗತಿಗಳು
ದಕ್ಷಿಣ ಭಾರತದ ದೇಗುಲಗಳು ಅದರದ್ದೇ ಆದ ಭವ್ಯ ವಾಸ್ತುಶಿಲ್ಪಕ್ಕೆ ಹೆಸರುವಾಸಿ. ನಮ್ಮ ಪೂರ್ವಿಕರು ಸೃಷ್ಟಿಸಿರುವ ಈ ಅದ್ಭುತಗಳು ಇಂದಿಗೂ ಕೌತುಕದ ಕಣಜಗಳೇ. ಅಂತಹ ಸುಂದರ ದೇವಾಲಯಗಳಲ್ಲಿ ಇದು ಕೂಡಾ ಒಂದು.
Authored byಸುನೀಲ್ | Vijaya Karnataka Web23 Jan 2023, 4:35 pm
ಮಧುರೈ ಮೀನಾಕ್ಷಿ ದೇವಸ್ಥಾನ... ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಐತಿಹಾಸಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದಲೂ ಇದು ಅತ್ಯಂತ ಮಹತ್ವದ ದೇವ ಸನ್ನಿಧಿ. ಇಲ್ಲಿನ ಭವ್ಯತೆ, ವಾಸ್ತು ವೈಭವ ಎಲ್ಲರನ್ನೂ ಸೆಳೆಯದೇ ಇರದು. ಭಾರತದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ದೇವಸ್ಥಾನಗಳಲ್ಲಿ ಮಧುರೈ ಮೀನಾಕ್ಷಿ ತಾಯಿಯ ಸನ್ನಿಧಾನ ಕೂಡಾ ಒಂದು. ಇಂತಹ ಮಹತ್ವಪೂರ್ಣ ದೇಗುಲದ ಬಗೆಗಿನ ಒಂದಷ್ಟು ಕುತೂಹಲಕಾರಿ ಸಂಗತಿಗಳು ಇಲ್ಲಿವೆ. | Image Courtesy : wikipedia/Mamichaelraj
ಸಾವಿರ ಕಂಬಗಳ ಭವ್ಯ ಮಂಟಪ
ವೈಗೈ ನದಿಯ ದಕ್ಷಿಣದ ದಂಡೆಯಲ್ಲಿದೆ ಅರುಲ್ಮಿಗು ಮೀನಾಕ್ಷಿ ಸುಂದರೇಶ್ವರರ್ ದೇವಾಲಯ. ಮಧುರೈ ಮೀನಾಕ್ಷಿ ದೇವಸ್ಥಾನ ಎಂದೇ ಇದು ಖ್ಯಾತಿ. ಶಕ್ತಿಯ ರೂಪವಾದ ಮೀನಾಕ್ಷಿ ಮತ್ತು ಶಿವನ ರೂಪವಾದ ಸುಂದರೇಶ್ವರರ್ಗೆ ಸಮರ್ಪಿತವಾದ ದೇವ ಸನ್ನಿಧಿ ಇದು. 6ನೇ ಶತಮಾನದ ಶಾಸನ, ಗ್ರಂಥಗಳಲ್ಲಿ ಈ ದೇವಿಯ ದೇವಾಲಯದ ಉಲ್ಲೇಖವಿದೆ. ಪಾಂಡಯನ್ ಚಕ್ರವರ್ತಿ ಸದಯವರ್ಮನ್ ಕುಲಶೇಖರನ್ I (ಕ್ರಿಶ 1190 -ಕ್ರಿಶ1205 ) ಈ ದೇವಾಲಯವನ್ನು ನಿರ್ಮಿಸಿದ್ದಾಗಿ ಉಲ್ಲೇಖ ಸಿಗುತ್ತದೆ. ತನ್ನದೇ ಆದ ಭವ್ಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ದೇವ ಸನ್ನಿಧಿ ಇದು. ಅಂತ ಸುಂದರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾದ ಸಂಗತಿಗಳಲ್ಲಿ ಒಂದು ಭವ್ಯವಾದ ಸಾವಿರ ಕಂಬಗಳ ಅದ್ಭುತ ಮಂಟಪ. ಇದನ್ನು ಆಯಿರಂ ಕಾಲ್ ಮಂಡಪಂ ಎಂದೂ ಕರೆಯಲಾಗುತ್ತದೆ. ಆಯಿರಂ ಎಂದರೆ ತಮಿಳುನಾಡಿನಲ್ಲಿ ಸಾವಿರ ಎಂದರ್ಥ. ಇದೊಂದು ಅದ್ಭುತ ವಾಸ್ತುಶಿಲ್ಪಕ್ಕೆ ಸಾಕ್ಷಿ. ಈ ಮಂಟಪದ ವೈಭವವನ್ನು ಕಣ್ತುಂಬಿಕೊಳ್ಳುವ ಕ್ಷಣವೇ ಅದ್ಭುತ. ಇನ್ನು ದೇವಾಲಯದ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರೆ ನೀವು ಹಲವಾರು ಪ್ರಾಚೀನ ವರ್ಣಚಿತ್ರಗಳನ್ನೂ ನೋಡಬಹುದು. | Image Courtesy : wikipedia/brad.coy
ಅದ್ಭುತ ರಾಜಗೋಪುರಗಳು
ಮಧುರೈ ಮೀನಾಕ್ಷಿ ದೇಗುಲದ ಮತ್ತೊಂದು ಆಕರ್ಷಣೆ ಎಂದರೆ ಅದ್ಭುತ ರಾಜಗೋಪುರಗಳು. ಇಲ್ಲಿ ನೀವು 14 ಗೋಪುರಗಳನ್ನು ನೋಡಬಹುದು. ಇವುಗಳಲ್ಲಿ ನಾಲ್ಕು ಪ್ರಮುಖವಾದವುಗಳಾಗಿದ್ದು, ನಾಲ್ಕು ದಿಕ್ಕಿನಲ್ಲಿ ಈ ಗೋಪುರಗಳಿವೆ. ಇವುಗಳಲ್ಲಿ ದಕ್ಷಿಣದ ಗೋಪುರವು ಅತ್ಯಂತ ಎತ್ತರವಾಗಿದ್ದು, ಇದರ ಎತ್ತರ 170 ಅಡಿ ಎಂದರೆ ಸುಮಾರು 52 ಮೀಟರ್. ಇದನ್ನು 16ನೇ ಶತಮಾನದ ಕೊನೆಯಲ್ಲಿ ಪುನರ್ನಿರ್ಮಿಸಲಾಯಿತು. 1216-1238 ಅವಧಿಯಲ್ಲಿ ಮಾರವರ್ಮನ್ ಸುಂದರ ಪಾಂಡ್ಯನ್ ನಿರ್ಮಿಸಿದ ಪೂರ್ವದ ಗೋಪುರವು ಅತ್ಯಂತ ಹಳೆಯದು. ಇಲ್ಲಿರುವ ಪ್ರತಿ ಗೋಪುರವೂ ಬಹು ಅಂತಸ್ತಿನ ರಚನೆಗಳು. ಜತೆಗೆ, ಇದರಲ್ಲಿ ಸುಂದರ ಕೆತ್ತನೆ, ಶಿಲ್ಪಗಳನ್ನೂ ನೋಡಬಹುದು. ಮಧುರೈ ಮೀನಾಕ್ಷಿ ದೇವಾಲಯದ ಗೋಪುರಗಳೂ ಇಲ್ಲಿನ ಹೆಗ್ಗುರುತಾಗಿದೆ. ಒಳಗಿನ ಗೋಪುರವು ಚಿಕ್ಕದಾಗಿವೆ ಮತ್ತು ವಿವಿಧ ದೇವಾಲಯಗಳಿಗೆ ಪ್ರವೇಶ ದ್ವಾರಗಳಾಗಿ ಕಾರ್ಯನಿರ್ವಹಿಸುತ್ತದೆ. ದೇವಾಲಯದ ಸಂಕೀರ್ಣದೊಳಗೆ ಒಂಭತ್ತು ಅಂತಸ್ತಿನ 4 ಗೋಪುರಗಳಿವೆ. | Image Courtesy : wikipedia/KennyOMG
ಮೀನಾಕ್ಷಿ ದೇವಸ್ಥಾನದಲ್ಲಿ ಸುಂದರ ಕಲ್ಯಾಣಿಯೊಂದಿದೆ. ಈ ಕಲ್ಯಾಣಿಯನ್ನು ಪೋರ್ತಮರೈ ಕುಲಂ ಅರ್ಥಾತ್ ಬಂಗಾರದ ಕಮಲ ಇರುವ ಕೊಳ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಈ ಕಲ್ಯಾಣಿಗೆ ಆದಿ ತೀರ್ಥಂ, ಶಿವಗಂಗಾ ಮತ್ತು ಉತ್ತಮ ತೀರ್ಥಂ ಎಂದೂ ಕರೆಯಲಾಗುತ್ತದೆ. ಈ ಕೊಳದ ಗೋಡೆಗಳಲ್ಲಿ ಸುಂದರ ಚಿತ್ರಗಳನ್ನೂ ನೋಡಬಹುದು. ಇನ್ನು ಕೊಳದಲ್ಲಿ ಬಂಗಾರದ ತಾವರೆಯ ಆಕೃತಿ ಕೂಡಾ ಕಣ್ಮನ ಸೆಳೆಯುತ್ತದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಅರಸರಿಗೆ ಸ್ಥಳೀಯ ಆಡಳಿತಗಾರರಾಗಿದ್ದ ನಾಯಕರು ದೇವಾಲಯದ ಸಂಕೀರ್ಣವನ್ನು ವಿಸ್ತರಿಸಿದರು. 1516ರಲ್ಲಿ ಸಾಳುವನರಸನ ನಾಯಕನು ಯಾತ್ರಿಕರು ಸ್ನಾನ ಮಾಡಲು ಪವಿತ್ರ ಕೊಳವನ್ನು ನಿರ್ಮಿಸಿದ್ದಾಗಿ ಉಲ್ಲೇಖ ಸಿಗುತ್ತದೆ. ಅದಕ್ಕೆ ಎಜುಕಡಲ್ ಎಂದರೆ ಏಳು ಸಮುದ್ರಗಳು ಎಂದು ಹೆಸರಿಸಿದ್ದರು. ಅದೇ ಈ ಸ್ವರ್ಣ ಕಮಲದ ಕಲ್ಯಾಣಿ. ಚೆಟ್ಟಿಯಪ್ಪ ನಾಯಕರ್ ಅವರು ಸುವರ್ಣ ಕಮಲದ ಕಲ್ಯಾಣಿಯ ಉತ್ತರದ ಸ್ತಂಭವನ್ನು ಮತ್ತು ಸನ್ನಧಿ ಗೋಪುರದ ಮುಂಭಾಗದಲ್ಲಿರುವ ದ್ವಾರಪಾಲ ಮಂಟಪವನ್ನು ಪುನರ್ನಿರ್ಮಿಸಿದ್ದಾಗಿ ಉಲ್ಲೇಖ ಸಿಗುತ್ತದೆ. | Image Courtesy : wikipedia/Bernard Gagnon
ಈ ದೇವಾಲಯದ ಪ್ರಧಾನ ದೇವತೆ ಮೀನಾಕ್ಷಿ. ಇದು ಪಾರ್ವತಿ ದೇವಿಯ ರೂಪ. ಈ ದೇವರ ವಿಗ್ರಹವನ್ನು ಪಚ್ಚೆ ಬಣ್ಣದ ಕಲ್ಲಿನಲ್ಲಿ ಕೆತ್ತಲಾಗಿದೆ. ಈ ಅಪೂರ್ವ ದೇವಸ್ಥಾನದ ಮತ್ತೊಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಇಲ್ಲಿರುವ ಸುಮಾರು 33000 ಶಿಲ್ಪಗಳು. ದೇಗುಲದ ತುಂಬಾ ಸಾಕಷ್ಟು ಅದ್ಭುತ ಶಿಲ್ಪಗಳನ್ನು ನೋಡಬಹುದು. ದೇವಾಲಯದ ಗೋಪುರಗಳು, ಕಂಬಗಳಲ್ಲಿರುವ ಕೆತ್ತನೆಗಳು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸದೇ ಇರದು. ಇನ್ನು ಬೆಳ್ಳಿಯ ಪೀಠದ ಮೇಲೆ ನಿರ್ಮಿಸಲಾದ ನಟರಾಜನ ವಿಶಾಲವಾದ ಶಿಲ್ಪ ಇಲ್ಲಿನ ಹೆಗ್ಗುರುತು ಕೂಡಾ ಹೌದು. | Image Courtesy : wikipedia/MADHURANTHAKAN JAGADEESAN
ಈ ದೇವಾಲಯದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಅಗತ್ಯ ಮರು ನಿರ್ಮಾಣ, ಗೋಪುರಗಳ ಸ್ವಚ್ಛತೆ, ಗೋಪುರದಲ್ಲಿರುವ ಶಿಲ್ಪಗಳನ್ನು ಸರಿ ಪಡಿಸಿ ಬಣ್ಣ ಬಳಿಯುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಅಂದರೆ, ದೇವಾಲಯದ ವೈಭವ ಶಾಶ್ವತವಾಗಿ ಉಳಿಯುವ ಸಲುವಾಗಿ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹೀಗಾಗಿ, ದೇವಾಲಯ ಈಗಲೂ ತನ್ನ ಅದೇ ಸೌಂದರ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಇಲ್ಲಿನ ಸುಂದರ ಕೆತ್ತನೆಗಳು, ಭವ್ಯವಾದ ಮೂರ್ತಿಗಳು, ಕುಸುರಿ ಕೌಶಲ್ಯ ನಮ್ಮನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ದ ಅನುಭವವನ್ನು ತರದೇ ಇರದು. | Image Courtesy : wikipedia/Richard Mortel
"2007ರ ಸೆಪ್ಟೆಂಬರ್ನಿಂದ ಪತ್ರಿಕೋದ್ಯಮದ ಪಯಣ ಶುರು. ಪ್ರಮುಖ ದಿನಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿ ವೃತ್ತಿ ಜೀವನ ಆರಂಭ. ಇದಾದ ಆರು ತಿಂಗಳ ಬಳಿಕ ನ್ಯೂಸ್ ಚಾನೆಲ್ನಲ್ಲಿ ಕೆಲಸ. 2008ರಿಂದ ಶುರುವಾದ ಸುದ್ದಿ ವಾಹಿನಿಯ ಪಯಣ ನ್ಯೂಸ್ ಡೆಸ್ಕ್ನ ವಿವಿಧ ಜವಾಬ್ದಾರಿಗಳ ನಿರ್ವಹಣೆಯೊಂದಿಗೆ 2019ರ ತನಕ ಸಾಗಿತ್ತು. ಅಲ್ಲಿಂದ ಮತ್ತೊಂದು ಬದಲಾವಣೆಯ ಕ್ಷಣ. 2019ರಿಂದ ಡಿಜಿಟಲ್ ಮಾಧ್ಯಮದಲ್ಲಿ ಹೊಸ ಕಲಿಕೆಯೊಂದಿಗೆ ಹೊಸ ಜೀವನ ಶುರು. ಇಲ್ಲಿಂದ ಈ ಕ್ಷಣದವರೆಗೆ ವಿಜಯ ಕರ್ನಾಟಕ ಬಳಗದೊಂದಿಗೆ ನನ್ನ ವೃತ್ತಿ ಬದುಕು ಸಾಗಿದೆ. ಇಷ್ಟು ವರ್ಷದ ಪಯಣದಲ್ಲಿ ವಿವಿಧ ಸಂಸ್ಥೆಗಳಲ್ಲಿ ಹಲವು ವಿಭಾಗಗಳಲ್ಲಿ ಕೆಲಸದ ಅನುಭವ ಪಡೆದ ತೃಪ್ತಿ ನನ್ನದು. ಎಲ್ಲಾ ಪತ್ರಕರ್ತರಿಗೂ ಪ್ರಮುಖವಾಗಿರುವ ಓದು ನನ್ನ ಹವ್ಯಾಸಗಳಲ್ಲಿ ಒಂದು. ಬಿಡುವಾದಾಗ ಪ್ರವಾಸಕ್ಕೆ ಹೋಗುವುದು ಕೂಡಾ ನನ್ನ ಜೀವನದ ಖುಷಿಯ ಭಾಗ. "... ಇನ್ನಷ್ಟು ಓದಿ
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
We use cookies and other tracking technologies to provide services in line with the preferences you reveal while browsing the Website to show personalize content and targeted ads, analyze site traffic, and understand where our audience is coming from in order to improve your browsing experience on our Website. By continuing to browse this Website, you consent to the use of these cookies. If you wish to object such processing, please read the instructions described in our privacy policy/cookie policy.