ಆ್ಯಪ್ನಗರ

ಇಲ್ಲಿನ ನರಸಿಂಹ ಸ್ವಾಮಿಯನ್ನು ದರ್ಶನ ಮಾಡಬೇಕೆಂದರೆ ಎದೆಮಟ್ಟದ ನೀರಿನಲ್ಲೇ ನಡೆಯಬೇಕು..!

ಬೀದರ್‌ನ ಮಂಗಳಪೇಟೆಯಲ್ಲಿರುವ ಶ್ರೀ ಝರಣೀ ನರಸಿಂಹ ಸ್ವಾಮಿ ದೇವಾಲಯವು ಗುಹಾಂತರ ದೇವಾಲಯವಾಗಿದ್ದು, ಎದೆಮಟ್ಟದ ನೀರಿನಲ್ಲೇ ನಡೆದುಕೊಂಡು ಹೋಗಬೇಕು. ಈ ಗುಹೆಯಲ್ಲಿ ನರಸಿಂಹ ಸ್ವಾಮಿಯು ನೆಲೆಗೊಂಡಿದ್ದಾದರೂ ಹೇಗೆ ಎನ್ನುವುದಕ್ಕೆ ಪೌರಾಣಿಕ ಕಥೆಯೊಂದಿದೆ.

Vijaya Karnataka Web 23 Oct 2019, 3:40 pm
ದೇಗುಲಗಳ ಬೀಡಾದ ಕರ್ನಾಟಕದಲ್ಲಿರುವ ಒಂದೊಂದು ದೇಗುಲಗಳೂ ಒಂದೊಂದು ಐತಿಹಾಸಿಕ ಹಿನ್ನಲೆಯಿಂದ, ವೈಶಿಷ್ಟ್ಯ, ವಿಶೇಷತೆ ಹಾಗೂ ಪವಾಡಗಳಿಂದ ಪ್ರಸಿದ್ಧಿಯನ್ನು ಪಡೆದಿದೆ. ಅಂತಹ ಒಂದು ದೇಗುಲವೇ ಶ್ರೀ ಝರಣೀ ನರಸಿಂಹ ಕ್ಷೇತ್ರ. ಸ್ಮಾರಕಗಳ ನಗರವೇಂದೇ ಹೆಸರು ಪಡೆದ ಬೀದರ್‌ನಲ್ಲಿದೆ ಈ ಗುಹಾಂತರ ದೇವಾಲಯ. ಹಲವಾರು ನರಸಿಂಹ ಸ್ವಾಮಿ ದೇವಸ್ಥಾನಗಳಿದ್ದರೂ ಝರಣಿ ನರಸಿಂಹ ಸ್ವಾಮಿ ದೇವಾಲಯವು ವಿಶೇಷ ದೇವಾಲಯವಾಗಿ ಹೆಸರುವಾಸಿಯಾಗಿದೆ.
Vijaya Karnataka Web Narsimha_Jharna_Bidar


ವಿಶೇಷತೆ
ಕ್ರಿ.ಪೂರ್ವ 400ಕ್ಕಿಂತಲೂ ಹಿಂದಿನ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ಮಹಾವಿಷ್ಣುವಿನ ಅವತಾರವಾದ ಉಗ್ರನರಸಿಂಹನು ಇಲ್ಲಿ ನೆಲೆಸಿದ್ದಾನೆ. ದೇವಾಲಯದ ಸುತ್ತಲೂ ಹಚ್ಚ ಹಸಿರಿನ ಪರ್ವತಗಳು, ಪ್ರಶಾಂತ ವಾತಾವರಣ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಬೀದರ್‌ ಜಿಲ್ಲೆಯ ಮಂಗಳ ಪೇಟ್‌ ಎಂಬಲ್ಲಿ ಈ ಗುಹಾಕ್ಷೇತ್ರವಿದೆ. ಗುಹೆಯಲ್ಲಿಯೇ ಎದೆಮಟ್ಟವಿರುವ ನೀರಿನ ಆಳದಲ್ಲಿ ಇಳಿದು 600 ಮೀಟರ್‌ ನಡೆದುಕೊಂಡು ಹೋಗಿ ಗರ್ಭಗುಡಿಯಲ್ಲಿ ನೆಲೆಸಿರುವ ನರಸಿಂಹನ ಉದ್ಭವ ಮೂರ್ತಿಯನ್ನು ದರ್ಶನ ಮಾಡಬೇಕು. ನರಸಿಂಹ ಸ್ವಾಮಿಯ ಪಾದ ಕಮಲದಿಂದ ನೀರುವ ಪ್ರವಹಿಸುವ ಕಾರಣದಿಂದಾಗಿ ಈ ಕ್ಷೇತ್ರವನ್ನು ಜಲ ನರಸಿಂಹ ಸ್ವಾಮಿ ದೇವಾಲಯವೆಂದೂ ಕರೆಯುತ್ತಾರೆ.

ಸ್ಥಳ ಪುರಾಣ
ಪುರಾಣದ ಪ್ರಕಾರ ಶಿವನು ಈ ಗುಹೆಯಲ್ಲಿ ತಪಸ್ಸು ಮಾಡುತ್ತಿರುವಾಗ ಜಲಾಸುರನೆಂಬ ರಾಕ್ಷಸನು ತಪಸ್ಸನ್ನು ಭಗ್ನಗೊಳಿಸಲು ಮುಂದಾಗುತ್ತಾನೆ. ಆಗ ಲಕ್ಷ್ಮೀ ನರಸಿಂಹ ಸ್ವಾಮಿಯು ಜಲಾಸುರನನ್ನು ಸಂಹಾರ ಮಾಡಲು ಮುಂದಾದಾಗ ಜಲಾಸುರನು ಸ್ವಾಮಿಯಲ್ಲಿ'ತಮ್ಮ ಪಾದ ಕಮಲದಲ್ಲಿ ನೀರಾಗಬೇಕು' ಎನ್ನುವ ಕೋರಿಕೆಯನ್ನು ಮುಂದಿಡುತ್ತಾನೆ. ಇದಕ್ಕೆ ಒಪ್ಪಿದ ನರಸಿಂಹ ಸ್ವಾಮಿಯು ತನ್ನ ಪಾದ ಕಮಲದಡಿ ನೀರಾಗುವಂತೆ ಅನುಗ್ರಹಿಸುತ್ತಾನೆ. ಜಲಾಸುರನು ತನ್ನ ಹೆಸರನ್ನು ಬಳಸಿ ಈ ಕ್ಷೇತ್ರವನ್ನು ಭಕ್ತರು ಕರೆಯುವಂತಾಗಬೇಕು ಎಂದು ವಿನಂತಿ ಮಾಡಿಕೊಂಡದ್ದರಿಂದ ಈ ಪುಣ್ಯ ಕ್ಷೇತ್ರಕ್ಕೆ ಜಲ ನರಸಿಂಹಸ್ವಾಮಿ ಎಂಬ ಹೆಸರು ಬಂದಿತು.

ಸ್ಥಳ ವಿಶೇಷತೆ
ಶಿವ ಹಾಗೂ ನರಸಿಂಹ ಇಬ್ಬರೂ ಈ ಸ್ಥಳದಲ್ಲಿ ಪೂಜಿಸಲ್ಪಡುತ್ತಾರೆ. ನರಸಿಂಹ ಸ್ವಾಮಿಯ ಮೂರ್ತಿಯ ಪಕ್ಕದಲ್ಲೇ ಶಿವಲಿಂಗವನ್ನೂ ಇಡಲಾಗಿದೆ. ಹಾಗಾಗಿ ಹರಿಹರರಿಬ್ಬರೂ ಇರುವ ಪುಣ್ಯಸ್ಥಳವೆಂದು ಇದನ್ನು ಕರೆಯಲಾಗುತ್ತದೆ. ಗುಹೆಯ ಕೊನೆಯಲ್ಲಿ ಕಲ್ಲಿನ ಗೋಡೆಯ ಮೇಲೆ ನರಸಿಂಹನ ಕೆತ್ತಿದ ವಿಗ್ರಹವಿದೆ. ನರಸಿಂಹ ಜಯಂತಿಯಂದು 9ದಿನಗಳ ಕಾಲ ವಿಜೃಂಭಣೆಯ ಉತ್ಸವವು ಇಲ್ಲಿ ನಡೆಯುತ್ತದೆ. ಈ ಗುಹೆಯಲ್ಲಿರುವ ನೀರು ಎಲ್ಲಿಂದ ಬರುತ್ತದೆ ಎನ್ನುವುದು ಇದುವರೆಗೂ ಯಾರಿಗೂ ಕಂಡುಹಿಡಿಯಲಾಗಿಲ್ಲ.


ದೇಶದಲ್ಲೇ ವಿಶಿಷ್ಟವಾದ ಈ ಕ್ಷೇತ್ರದಲ್ಲಿ ವರ್ಷದ 365 ದಿನಗಳೂ ನೀರು ಹರಿಯುತ್ತಲೇ ಇರುತ್ತದೆ. ಕೆಂಪು ಕಲ್ಲಿನಿಂದ ಕೆತ್ತಲ್ಪಟ್ಟಿರುವ ಈ ಗುಹೆಯೊಳಗೆ ಸುಮಾರು ಒಂದು ಕಿ.ಮೀವರೆಗೂ ನೀರಿನಲ್ಲೇ ನಡೆದುಕೊಂಡು ಹೋಗಿ ನರಸಿಂಹ ಸ್ವಾಮಿಯ ದರ್ಶನ ಮಾಡುವುದು ಪುಳಕವನ್ನು ನೀಡುತ್ತದೆ. ಇಲ್ಲಿ ಹರಿಯುವ ನೀರಿನಲ್ಲಿ ಸಲ್ಫರ್‌ ಇದ್ದು ಚರ್ಮದ ಸಮಸ್ಯೆಗಳನ್ನು ನಿವಾರಿಸುವುದು ಎನ್ನಲಾಗುತ್ತದೆ. ಹೆಚ್ಚಿನ ಭಕ್ತರು ಸಂತಾನ ಪ್ರಾಪ್ತಿಗಾಗಿ ಇಲ್ಲಿಗೆ ಆಗಮಿಸುತ್ತಾರೆ.

ಒಂದೇ ಸಮಯದಲ್ಲಿ 8ರಿಂದ 9ಜನ ಮಾತ್ರ ಪ್ರವೇಶಿಸಬಹುದಾದ ಗುಹೆ ಇದಾಗಿದ್ದು, ಮಕ್ಕಳನ್ನು ಕರೆತರುವಾಗ ಹೆಗಲ ಮೇಲೆ ಕೂರಿಸಿಕೊಂಡೇ ಸಾಗಬೇಕು. ಇಲ್ಲಿಗೆ ಬರುವ ಭಕ್ತರು ಎರಡು ಜೊತೆ ವಸ್ತ್ರಗಳನ್ನು ಜೊತೆಯಲ್ಲಿಟ್ಟುಕೊಂಡು ಬರುವುದು ಒಳ್ಳೆಯದು.

ಹೋಗುವುದು ಹೇಗೆ?
ಬೆಂಗಳೂರಿನಿಂದ ಈ ದೇವಾಲಯವು ಸುಮಾರು 670 ಕಿ.ಮೀ ದೂರದಲ್ಲಿದೆ. ಜಲನರಸಿಂಹ ಸ್ವಾಮಿ ದೇವಸ್ಥಾನಕ್ಕೆ ವಿಮಾನದ ಮೂಲಕ ತೆರಳುವುದಾದರೆ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಸ್ಸಿನ ಮೂಲಕ ಬೀದರ್‌ ಜಲನರಸಿಂಹ ಸ್ವಾಮಿ ದೇವಾಲಯಕ್ಕೆ ತೆರಳಬಹುದು. ರೈಲಿನ ಮೂಲಕವಾದರೆ ಬೀದರ್‌ ರೈಲ್ವೇ ನಿಲ್ದಾಣ ಇಲ್ಲಿಗೆ ಸಮೀಪದ ನಿಲ್ದಾಣವಾಗಿದೆ. ಬೀದರ್‌ನಿಂದ ಸುಮಾರು 4.8 ಕಿ.ಮೀ ದೂರದಲ್ಲಿದೆ ಈ ದೇವಾಲಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ