ಆ್ಯಪ್ನಗರ

ನನ್ನದು ಭಾವೋದ್ವೇಗವಿಲ್ಲದ ಶ್ರದ್ಧೆ: ಶಿಖರ್‌ ಧವನ್‌

ವಿಜಯ ಕರ್ನಾಟಕದ ಸಹೋದರ ಪತ್ರಿಕೆ ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಡೆಲ್ಲಿ ಡ್ಯಾಷಿಂಗ್‌ ಕ್ರಿಕೆಟರ್‌ ಶಿಖರ್‌ ಧವನ್‌ ಜತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

TNN 18 May 2019, 3:30 pm
ಮುಂಬಯಿ: ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ಜತೆ ಟೀಮ್‌ ಇಂಡಿಯಾದ ಇನಿಂಗ್ಸ್‌ ಆರಂಭಿಸಲಿರುವ ಎಡಗೈ ಸ್ಫೋಟಕ ಆಟಗಾರ ಶಿಖರ್‌ ಧವನ್‌ಗೆ ಇದು 2ನೇ ಏಕದಿನ ವಿಶ್ವಕಪ್‌. ಇವರು ಫಾರ್ಮ್‌ನಲ್ಲಿದ್ದ ದಿನ ಬೌಲರ್‌ಗಳ 'ದಿನದ ಭವಿಷ್ಯ' ಸರಿ ಇಲ್ಲ ಎಂದೇ ಅರ್ಥ. ಆದರೆ, ಆಡಲು ಕ್ರೀಸಿಗೆ ತೆರಳುವಾಗ ಯಾವ ಭಾವದಲ್ಲಿರುತ್ತಾರೋ ಔಟಾಗಿ ಪೆವಿಲಿಯನ್‌ಗೆ ವಾಪಸಾಗುವಾಗಲೂ ಅದೇ ಭಾವದಲ್ಲಿರುತ್ತಾರೆ ಎಂಬ ದೂರು ಇವರ ವಿರುದ್ಧ ಕೇಳಿಬರುತ್ತಲೇ ಇರುತ್ತದೆ.
Vijaya Karnataka Web Shikhar


ಹಾಗಂತ ಧವನ್‌ಗೆ ಭಾವೋದ್ವೇಗವಿಲ್ಲ ಎಂದರ್ಥವೇ? ವಿಜಯ ಕರ್ನಾಟಕದ ಸಹೋದರ ಪತ್ರಿಕೆ ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಡೆಲ್ಲಿ ಡ್ಯಾಷಿಂಗ್‌ ಕ್ರಿಕೆಟರ್‌ ಈ ಎಲ್ಲ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಮೈದಾನದಲ್ಲಿ ನಿಮ್ಮ ನಡವಳಿಕೆ ಬಗ್ಗೆ?
ನಾನು ಭಾವೋದ್ವೇಗಕ್ಕೊಳಗಾಗುವುದು ಕಡಿಮೆ. ಉದ್ವೇಗಕ್ಕೊಳಗಾಗುವುದರಿಂದ ಯಾವುದೇ ಪ್ರಯೋಜನವಿಲ್ಲ. ಯಾವಾಗಲೂ ನಿರಾಳವಾಗಿರಲು ಬಯಸುವವನು ನಾನು. ಹಾಗಂತ ಶ್ರದ್ಧೆ ಇಲ್ಲ ಎಂದರ್ಥವಲ್ಲ.

ನಿಕಟ ಪೈಪೋಟಿಯ ಪಂದ್ಯಗಳ ವೇಳೆ ನೀವು ಒತ್ತಡಗಳನ್ನು ನಿಭಾಯಿಸುವ ಪರಿ?
ನಾನು ಒತ್ತಡಗಳನ್ನು ನಿಭಾಯಿಸುತ್ತೇನೆಯೇ ಹೊರತು ಒತ್ತಡಗಳು ನನ್ನನ್ನು ನಿಯಂತ್ರಿಸಲು ನಾನು ಬಿಡುವುದಿಲ್ಲ. ಮೈದಾನದಲ್ಲಿ ಯಾವಾಗಲೂ ಶಾಂತಚಿತ್ತನಾಗಿರುತ್ತೇನೆ.

ನಿಮ್ಮ ಏಕದಿನ ಮತ್ತು ಟೆಸ್ಟ್‌ ವೃತ್ತಿಬದುಕಿನ ನಡುವೆ ವ್ಯತ್ಯಾಸವಿದೆಯೇ?
ಟೆಸ್ಟ್‌ ಕ್ರಿಕೆಟಿನಲ್ಲಿ ನನ್ನ ದಾಖಲೆ ಉತ್ತಮವಾಗಿದೆ. ಸರಾಸರಿ ಹೆಚ್ಚೂಕಡಿಮೆ 41-42. ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ ಸರಣಿ ವೇಳೆ ಪರಿಸ್ಥಿತಿ ಕಠಿಣವಾಗಿತ್ತು. ಕ್ಷೇತ್ರರಕ್ಷಣೆ ಬಿಗಿಯಾಗಿತ್ತು. ಬ್ಯಾಟ್ಸ್‌ಮನ್‌ಗಳು ತುಂಬ ಎಚ್ಚರಿಕೆಯಲ್ಲಿ ಆಡಬೇಕಿತ್ತು. ಆದರೆ, ಸೀಮಿತ ಓವರ್‌ಗಳ ಪಂದ್ಯದಲ್ಲಿ ಪರಿಸ್ಥಿತಿ ಬೇರೆಯೇ ತೆರನಾಗಿರುತ್ತದೆ.

ಕಿರಿಯ ಆಟಗಾರರ ಜತೆ ನಿಮ್ಮ ಒಡನಾಟ?
ನಾನು ಹಿರಿಯ ಆಟಗಾರನಾಗಿರುವುದರಿಂದ ಪೃಥ್ವಿ ಶಾ, ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌ ಮುಂತಾದವರಿಗೆ ಮಾರ್ಗದರ್ಶನ ನೀಡಬಹುದು. ಆದರೆ, ಅವರೂ ವೃತ್ತಿಪರರಾಗಿದ್ದು ಈ ಹಂತಕ್ಕೆ ಬಂದಿದ್ದಾರೆ ಎಂಬುದರ ಅರಿವು ನನಗಿದೆ. ಹೀಗಾಗಿ ಕೆಲವು ಸಂದರ್ಭಗಳಲ್ಲಿ ಅವರಿಂದಲೇ ನಾವು ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಅವರಿಂದಲೂ ಕಲಿಯುವಂಥದ್ದಿರುತ್ತದೆ. ಅಂತೆಯೇ ರೋಹಿತ್‌ ಶರ್ಮಾರಂಥವರಿಂದಲೂ ಕಲಿಯುವಂಥದ್ದು ಸಾಕಷ್ಟಿರುತ್ತದೆ.

ಕ್ರಿಕೆಟ್‌ ಬದುಕಿನಲ್ಲಿನ ಏರಿಳಿತದ ಬಗ್ಗೆ ಬೇಸರವಿದೆಯೇ?
(ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವಾಗ ಧವನ್‌ಗೆ 27 ವರ್ಷ. ಅದಾದ ನಂತರವೂ ಅವರಿಗೆ ತಂಡದಲ್ಲಿ ಸ್ಥಾನ ಕಾಯಂ ಎಂದೇನೂ ಇರಲಿಲ್ಲ)
ನಾನು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ. ಕಳೆದ 5-6 ವರ್ಷಗಳಲ್ಲಿ ನನ್ನ ವೃತ್ತಿಬದುಕಿನಲ್ಲಿ ಸಾಕಷ್ಟು ಏರಿಳಿತಗಳು ಸಂಭವಿಸಿವೆ. ಆದರೆ, ನಾನು ಬದುಕಿಗೆ ಬೆಲೆ ನೀಡುವವನು. ಗೆದ್ದಾಗ ಆ ಸಂಭ್ರಮವನ್ನು ಅನುಭವಿಸಬೇಕು. ಸೋತಾಗ ಪಶ್ಚಾತ್ತಾಪ ಪಡಬೇಕು. ಒತ್ತಡದ ಸಂದರ್ಭಗಳಲ್ಲಿ ಧೃತಿಗೆಡಬಾರದು.

ವರ್ಷ 33
ಪದಾರ್ಪಣೆ : ಆಸ್ಪ್ರೇಲಿಯಾ ವಿರುದ್ಧ, ವಿಜಾಗ್‌ನಲ್ಲಿ. ದಿನಾಂಕ : 20-10-2010
ಜೆರ್ಸಿ ನಂ.25
ಒಟ್ಟು ಪಂದ್ಯ 128
ರನ್‌ 5355
ಅರ್ಧಶತಕ 27
ಶತಕ 16
ಸರಾಸರಿ 44.62
ಸ್ಟ್ರೈಕ್‌ ರೇಟ್‌ 93.79.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌