ಆ್ಯಪ್ನಗರ

ಕೊನೆಗೂ ಮೌನ ಮುರಿದ ವಿಲಿಯರ್ಸ್; ವಿಶ್ವಕಪ್ ತಂಡ ಸೇರಲು ಬೇಡಿಕೆ ಮುಂದಿಟ್ಟಿದ್ದಾರೆಯೇ?

ಏಕದಿನ ವಿಶ್ವಕಪ್‌ನಲ್ಲಿ ಎದ್ದಿರುವ ವಿವಾದಗಳಿಗೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ತಂಡಕ್ಕೆ ಸೇರಲು ಯಾವುದೇ ರೀತಿಯ ಒತ್ತಡವನ್ನು ಹೇರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Vijaya Karnataka Web 12 Jul 2019, 5:58 pm
ಹೊಸದಿಲ್ಲಿ: ಪ್ರಸಕ್ತ ಸಾಗುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಅಭಿಯಾನ ಕೊನಗೊಂಡಿರುವಂತೆಯೇ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಇತ್ತೀಚೆಗಿನ ವಿವಾದಗಳಿಗೆ ಸಂಬಂಧಿಸಿದ್ದಂತೆಯೇ ಕೊನೆಗೂ ಮೌನ ಮುರಿದಿದ್ದಾರೆ.
Vijaya Karnataka Web ab-de-villiers


ಏಕದಿನ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ವಿಲಿಯರ್ಸ್ ತಮ್ಮ ನಿವೃತ್ತಿ ನಿರ್ಧಾರ ಬದಲಾಯಿಸಿ ತಂಡವನ್ನು ಸೇರಲು ಬಯಸಿದ್ದರು ಎಂಬ ಮಾಹಿತಿಯು ಸೋರಿಕೆಯಾಗಿತ್ತು. ಆದರೆ ವಿಲಿಯರ್ಸ್‌ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಆಯ್ಕೆ ಸಮಿತಿ ಮುಂದಾಗಿರಲಿಲ್ಲ. ಇದಾದ ಬೆನ್ನಲ್ಲೇ ವಿವಾದಗಳು ಹುಟ್ಟಿಕೊಂಡಿತು.

ಈ ಬಗ್ಗೆ ಎದ್ದಿರುವ ಎಲ್ಲ ವಿವಾದಗಳಿಗೂ ನಾಲ್ಕು ಪುಟಗಳ ಸ್ಪಷ್ಟನೆಯೊಂದಿಗೆ ವಿಲಿಯರ್ಸ್ ಟ್ವಿಟರ್‌ನಲ್ಲಿ ಉತ್ತರ ನೀಡಿದ್ದಾರೆ. ಅಲ್ಲದೆ ವಿಶ್ವಕಪ್ ತಂಡಕ್ಕೆ ಸೇರಲು ಯಾವುದೇ ಬೇಡಿಕೆ ಮುಂದಿಟ್ಟಿರಲಿಲ್ಲ ಎಂಬುದನ್ನು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿಶ್ವಕಪ್ ಅಭಿಯಾನದ ವೇಳೆಯಲ್ಲಿ ಅನಗತ್ಯ ವಿವಾದವನ್ನು ಸೃಷ್ಟಿಸದಿರುವ ಹಿನ್ನಲೆಯಲ್ಲಿ ಆರೋಪಗಳಿಗೆ ಉತ್ತರಿಸಲು ವಿಳಂಬವಾಗಿದೆ ಎಂಬುದನ್ನು ವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ.

2018 ಮೇ ತಿಂಗಳಲ್ಲಿ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿದ್ದೆ. ಅತಿಯಾದ ಕೆಲಸದೊತ್ತಡವೇ ಇದಕ್ಕೆ ಕಾರಣವಾಗಿದೆ. ಅಲ್ಲದೆ ಪತ್ನಿ ಹಾಗೂ ಮಗುವಿನೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದೆ. ಹಣದಾಸೆಗೆ ನಾನು ನಿವೃತ್ತಿ ಸಲ್ಲಿಸಿದ್ದೇನೆಂಬ ಆರೋಪ ಕೇಳಿಬಂದಿದೆ. ಇದು ಸಂಪೂರ್ಣ ತಪ್ಪಾಗಿದ್ದು, ಜಗತ್ತಿನಾದ್ಯಂತ ಅನೇಕ ಶ್ರೀಮಂತ ಆಫರ್‌ಗಳನ್ನು ತೊರೆದಿದ್ದೇನೆ. ಅಲ್ಲದೆ ಫ್ಯಾಮಿಲಿ ಜತೆ ಕಳೆಯುವ ನಿಟ್ಟಿನಲ್ಲಿ ವಿದೇಶಗಳಲ್ಲಿ ಆಡುವ ಸಮಯವನ್ನು ಎಂಟರಿಂದ ಮೂರು ತಿಂಗಳಿಗೆ ಕಡಿತಗೊಳಿಸಿದ್ದೇನೆ ಎಂದಿದ್ದಾರೆ.

ಅಲ್ಲಿಂದ ಬಳಿಕ ತಿಂಗಳುಗಳ ಕಾಲ ನನಗೂ ಹಾಗೂ ಕ್ರಿಕೆಟ್ ದಕ್ಷಿಣ ಆಫ್ರಿಕಾ ನಡುವೆ ಯಾವುದೇ ಸಂಪರ್ಕವಿರಲಿಲ್ಲ. ನಾನು ಅವರನ್ನು ಕರೆ ಮಾಡಲಿಲ್ಲ. ಅವರೂ ನನ್ನನ್ನುಸಂಪರ್ಕಿಸಿಲ್ಲ. ನಾನು ನನ್ನ ನಿರ್ಧಾರವನ್ನು ಪ್ರಕಟಿಸಿದ್ದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಕೋಚ್ ಒಟಿಸ್ ಗಿಬ್ ಮಾರ್ಗದರ್ಶನ ಹಾಗೂ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಮುಂದಕ್ಕೆ ಹೆಜ್ಜೆಯನ್ನಿಟ್ಟಿತ್ತು.

ಶಾಲಾ ಕಾಲಘಟ್ಟದಿಂದಲೇ ನಾನು ಹಾಗೂ ಫಾಫ್ ಜತೆಗೆ ಉತ್ತಮ ಭಾಂದವ್ಯ ಬೆಳೆಸಿದ್ದೇನೆ. ವಿಶ್ವಕಪ್ ತಂಡ ಆಯ್ಕೆಗಿಂತಲೂ ಎರಡು ದಿನದ ಮೊದಲು ನಾನು ಅವರೊಂದಿಗೆ ಚಾಟ್ ಮಾಡಿದ್ದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಉತ್ತಮ ಫಾರ್ಮ್ ಕಾಪಾಡಿಕೊಂಡಿದ್ದರಿಂದ ಒಂದು ವರ್ಷ ಹಿಂದೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ಅಗತ್ಯವಿದ್ದರೆ ಮಾತ್ರ ವಿಶ್ವಕಪ್ ಆಯ್ಕೆಗೆ ಲಭ್ಯವಿರುತ್ತೇನೆ ಎಂದಿದ್ದೆ.

ನಾನು ಯಾವುದೇ ಬೇಡಿಕೆ ಮುಂದಿಟ್ಟಿರಲಿಲ್ಲ. ವಿಶ್ವಕಪ್ ತಂಡದ ಆಯ್ಕೆಗೂ ಮುನ್ನ ದಿನ ತಂಡವನ್ನು ಸೇರಿಕೊಳ್ಳಲು ಯಾವುದೇ ಒತ್ತಡವನ್ನು ಹೇರಿಲ್ಲ. ನನ್ನ ಕಡೆಯಿಂದ ಯಾವುದೇ ಸುಡುವ ಸಮಸ್ಯೆಗಳಿರಲಿಲ್ಲ ಎಂದರು.

ಆದರೆ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಸೋಲಿನ ಬಳಿಕ ನಮ್ಮ ಖಾಸಗಿ ಮಾತುಕತೆಯು ಮೀಡಿಯಾದಲ್ಲಿ ಸೋರಿಕೆಯಾದವು. ಬಳಿಕ ನನ್ನ ಮೇಲೆ ಆರೋಪಗಳನ್ನು ಹೋರಿಸಲಾಯಿತು. ಈ ಎಲ್ಲ ವಿಷಯಗಳನ್ನು ನಾನಾಗಲಿ, ಫಾಫ್ ಆಗಲಿ ಲೀಕ್ ಮಾಡಿಲ್ಲ. ಆದರೆ ವಿಮರ್ಶೆ ಬಯಸಿದ ಯಾರೋ ಬಹಿರಂಗ ಮಾಡಿದ್ದಾರೆ ಎಂದು ನುಡಿದರು.

ಪರಿಣಾಮ ನನ್ನನ್ನು ಸ್ವಾರ್ಥಿ ಎಂದೆಲ್ಲ ಬಿಂಬಿಸಲಾಯಿತು. ಆದರೆ ನನ್ನ ಆತ್ಮಸಾಕ್ಷಿಯು ಸ್ಪಷ್ಟವಾಗಿದ್ದು, ಪ್ರಾಮಾಣಿಕ ಕಾರಣಗಳಿಗಾಗಿ ನಿವೃತ್ತಿ ಸಲ್ಲಿಸಿದ್ದೇನೆ. ವಿಶ್ವಕಪ್‌ಗೆ ಲಭ್ಯತೆಯ ಬಗ್ಗೆ ಕೇಳಿದಾಗ ಬಾಗಿಲು ತೆರೆದುಕೊಳ್ಳಲು ಒಪ್ಪಿಕೊಂಡಿದ್ದೆ. ಅಲ್ಲಿಂದ ಬಳಿಕ ತಂಡವು ಮುಂದಕ್ಕೆ ಸಾಗಿತು. ನನಗೂ ಯಾವುದೇ ಸಮಸ್ಯೆಗಳಿರಲಿಲ್ಲ. ಯಾರ ವಿರುದ್ಧವೂ ದ್ವೇಷವೂ ಇಲ್ಲ ಎಂದು ಉತ್ತರಿಸಿದರು.

ನನ್ನ ಜೀವನದ ಈ ಹಂತದಲ್ಲಿ ಕುಟುಂಬದ ಜತೆಗೆ ಕಾಲ ಕಳೆಯಲು ಬಯಸುತ್ತೇನೆ. ಹಾಗೆಯೇ ದಕ್ಷಿಣ ಆಫ್ರಿಕಾ ಹಾಗೂ ವಿಶ್ವದ ಆಯ್ದ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸಲಿದ್ದೇನೆ ಎಂದು ಸೇರಿಸಿದರು.

ಓರ್ವ ಕ್ರಿಕೆಟಿಗ, ನಾಯಕನಾಗಿ ನನ್ನ ದೇಶಕ್ಕಾಗಿ ಕೊಡುಗೆ ಸಲ್ಲಿಸಿರುವುದಕ್ಕೆ ಅತೀವ ಹೆಮ್ಮೆಯಿದೆ. ದಕ್ಷಿಣ ಆಫ್ರಿಕಾ ತಂಡದ ಜತೆಗೆ ನನ್ನ ಬಾಂಧವ್ಯವು ಹಿಂದಿನಂತೆಯೇ ಶಕ್ತಿಶಾಲಿಯಾಗಿರಲಿದೆ. ಹಾಗೆಯೇ ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಬೆಂಬಲಿಸಲು ಹಾಗೂ ಮಾರ್ಗದರ್ಶನ ನೀಡಲು ನಾನು ಸದಾ ಲಭ್ಯವಿರುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌