ಆ್ಯಪ್ನಗರ

ವಿಶ್ವಕಪ್‌ನಲ್ಲಿ ಮೀಸೆ ತಿರುವಿ ತೊಡೆ ತಟ್ಟಲ್ಲ ಗಬ್ಬರ್ ಸಿಂಗ್; ಭಾವನಾತ್ಮಕ ಸಂದೇಶ ಹಂಚಿದ ಧವನ್

ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಗಬ್ಬರ್ ಸಿಂಗ್ ಎಂದೇ ಖ್ಯಾತಿ ಪಡೆದಿರುವ ಶಿಖರ್ ಧವನ್ ಗಾಯದಿಂದಾಗಿ ಏಕದಿನ ವಿಶ್ವಕಪ್‌ನಲ್ಲಿ ಉಳಿದಿರುವ ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ. ಇದೀಗ ಅಭಿಮಾನಿಗಳ ಜತೆಗೆ ಭಾವನಾತ್ಮಕ ಸಂದೇಶ ಹಂಚಿದ್ದಾರೆ.

Vijaya Karnataka Web 19 Jun 2019, 9:47 pm
ಹೊಸದಿಲ್ಲಿ: ಹೆಬ್ಬೆರಳಿನ ಗಾಯದಿಂದಾಗಿ ಪ್ರಸಕ್ತ ಸಾಗುತ್ತಿರುವ ಐಸಿಸಿ 2019 ಏಕದಿನ ವಿಶ್ವಕಪ್‌ನಿಂದ ಹೊರಗಟ್ಟಲ್ಪಟ್ಟಿರುವ ಭಾರತ ಕ್ರಿಕೆಟ್ ತಂಡದ ಅನುಭವಿ ಎಡಗೈ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಶಿಖರ್ ಧವನ್, ಅಭಿಮಾನಿಗಳ ಜತೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
Vijaya Karnataka Web shikhar-dhawan-05


ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ಧವನ್ ಹೆಬ್ಬೆರಳಿಗೆ ಗಾಯಮಾಡಿಕೊಂಡಿದ್ದರು. ನೋವಿನ ನಡುವೆಯೂ ಕೆಚ್ಚೆದೆಯ ಇನ್ನಿಂಗ್ಸ್ ಕಟ್ಟಿದ ಧವನ್, ಅಮೋಘ ಶತಕ ಮೂಲಕ ಟೀಮ್ ಇಂಡಿಯಾಗೆ ಸ್ಮರಣೀಯ ಗೆಲುವು ಒದಗಿಸಿಕೊಡುವಲ್ಲಿ ನೆರವಾಗಿದ್ದರು. ಈ ಮೂಲಕ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು.

ಮೈದಾನದಲ್ಲಿ ಕ್ಯಾಚ್ ಹಿಡಿದಾಗ ತೊಡೆ ತಟ್ಟಿ ಮೀಸೆ ತಿರುವಿ ಶಿಖರ್ ಧವನ್ ತಮ್ಮದೇ ಆದ ವಿಶಿಷ್ಟ ರೀತಿಯ ಸಂಭ್ರಮಾಚಾರಣೆಯ ಮೂಲಕ ಅಭಿಮಾನಿಗಳ ಹೃದಯ ಗೆದಿದ್ದರು. ಅಷ್ಟೇ ಯಾಕೆ ತಮ್ಮ ಕೆಚ್ಚೆದೆಯ ಬ್ಯಾಟಿಂಗ್‌ನಿಂದ ಗಬ್ಬರ್ ಸಿಂಗ್ ಎಂದೇ ಹೆಸರುವಾಸಿಯಾಗಿದ್ದರು. ಪ್ರಸ್ತುತ ಗಬ್ಬರ್ ಸ್ಟೈಲ್ ಅನ್ನು ಟೀಮ್ ಇಂಡಿಯಾ ಮಿಸ್ ಮಾಡಲಿದೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಭಾವನಾತ್ಮಕ ಸಂದೇಶವನ್ನು ಧವನ್ ಹಂಚಿಕೊಂಡಿದ್ದಾರೆ. ನಾನು ಇನ್ನು ಮುಂದೆ ವಿಶ್ವಕಪ್‌ನ ಭಾಗವಲ್ಲ ಎಂದು ಘೋಷಿಸಲು ತುಂಬಾನೇ ಭಾವುಕವಾಗಿದ್ದೇನೆ. ನಿಗದಿತ ಸಮಯದೊಳಗೆ ಹೆಬ್ಬೆರಳಿನ ಗಾಯ ವಾಸಿಯಾಗಿಲ್ಲ. ಆದರೂ ಶೋ ನಡೆಯಲೇಬೇಕು. ನನ್ನ ತಂಡದ ಸಹ ಆಟಗಾರರು, ಕ್ರಿಕೆಟ್ ಪ್ರೀತಿಸುವವರು ಹಾಗೂ ಸಂಪೂರ್ಣ ದೇಶದ ಪ್ರೀತಿ ಹಾಗೂ ಬೆಂಬಲಕ್ಕೆ ಆಭಾರಿಯಾಗಿದ್ದೇನೆ. ಜೈ ಹಿಂದ್ ಎಂದು ಧವನ್ ನುಡಿದರು.

ಧವನ್ ಹಂಚಿರುವ ವೀಡಿಯೋದಲ್ಲಿ ಅವರ ಕಣ್ಣುಗಳಲ್ಲಿ ತೀಕ್ಷ್ಣತೆಯನ್ನು ಕಾಣಬಹುದಾಗಿತ್ತು. ಅಲ್ಲದೆ ಗಾಯದ ನಡುವೆಯೂ ಕಠಿಣ ಜಿಮ್ ತರಬೇತಿ ಮುಂದುವರಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಮರಳಲು ಅತೀವ ಉತ್ಸುಕರಾಗಿದ್ದರು. ಆದರೆ ಗಾಯದಿಂದಾಗಿ ವಿಶ್ವಕಪ್‌ನ ಉಳಿದಿರುವ ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌