ಆ್ಯಪ್ನಗರ

ಧೋನಿಗೆ ಎಲ್ಲೆಡೆಯಿಂದ ಹೊಗಳಿಕೆಯ ಮಹಾಪೂರ

ಭಾರತ ತಂಡದ ಮಾಜಿ ಕಪ್ತಾನ, ಪ್ರಸ್ತುತ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಕೆಲವೊಮ್ಮೆ ನಿಧಾನಗತಿಯ ಬ್ಯಾಟಿಂಗ್‌ಗಾಗಿ ಟೀಕೆಗೆ ಒಳಗಾಗುತ್ತಾರೆ. ಆದರೆ ಪಂದ್ಯ ಗೆಲ್ಲಿಸಿಕೊಡುವ ಚಾಕಚಕ್ಯತೆ ಹೊಂದಿರುವ ಧೋನಿಗೆ ಈ ಬಾರಿ ಮತ್ತೊಮ್ಮೆ ಎಲ್ಲರ ಪ್ರಶಂಸೆ ಕೇಳಿಬಂದಿದೆ.

Agencies 29 Jun 2019, 4:11 pm
ಮ್ಯಾಂಚೆಸ್ಟರ್‌: ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ 56 ರನ್‌ ಬಾರಿಸಿ ತಂಡಕ್ಕೆ ಆಸರೆಯಾದ ಮಹೇಂದ್ರ ಸಿಂಗ್‌ ಧೋನಿಯ ಆಟಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಧೋನಿಯ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಧೋನಿ ಕ್ರಿಕೆಟ್‌ನ ಲೆಜೆಂಡ್‌ ಎಂದಿದ್ದಾರೆ.
Vijaya Karnataka Web MSD


ಮಾಜಿ ನಾಯಕ ಸೌರವ್‌ ಗಂಗೂಲಿ ಕೂಡ ಧೋನಿ ಪರ ಬ್ಯಾಟ್‌ ಬೀಸಿದ್ದು, ಕೊನೆಯ ಹಂತದಲ್ಲಿ ಅವರು ನೀಡಿದ ಜತೆಯಾಟ ತಂಡದ ಗೆಲುವಿಗೆ ನೆರವು ನೀಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ವಿಶ್ವಕಪ್‌ನಲ್ಲಿ ಧೋನಿ ಆಟ ಮಸುಕಾಗಿದೆ ಎಂದು ಹಿರಿಯ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಟೀಕೆ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದಲ್ಲಿ ಚರ್ಚೆ ನಡೆದು ಅಭಿಮಾನಿಗಳ ನಡುವೆ ಕಚ್ಚಾಟಕ್ಕೂ ಕಾರಣವಾಗಿತ್ತು.

ಸಿಕ್ಸರ್‌ಗಾಗಿ ಬ್ಯಾಟ್‌ ಬದಲು
ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್‌ನ ಕೊನೆಯ ಎಸೆತ ಆಡಲು ಬ್ಯಾಟ್‌ ಬದಲಿಸಿಕೊಂಡಿದ್ದ ಧೋನಿಯ ನಿಗೂಢ ಕ್ರಮದ ಬಗ್ಗೆಯೂ ಸೋಶಿಯಲ್‌ ಮೀಡಿಯಾಗಳಲ್ಲಿ ಚರ್ಚೆ ನಡೆದಿದೆ. ಒಶೇನ್‌ ಥಾಮಸ್‌ ಎಸೆದ ಕೊನೆಯ ಓವರ್‌ನಲ್ಲಿ ಒಂದು ಸಿಕ್ಸ್‌ ಹಾಗೂ ಒಂದು ಫೋರ್‌ ಹೊಡೆದಿದ್ದ ಧೋನಿ, ಕೊನೆಯ ಎಸೆತಕ್ಕೆ ಮೊದಲು ಬ್ಯಾಟ್‌ ಬದಲಿಸಿ ಮತ್ತೊಂದು ಸಿಕ್ಸ್‌ ಹೊಡೆದಿದ್ದರು. ಅದು 79 ಮೀಟರ್‌ ದೂರಕ್ಕೆ ಚಿಮ್ಮಿತ್ತು.

ರೋಹಿತ್‌ ಅಸಮಾಧಾನ
ತಮಗೆ ಔಟ್‌ ತೀರ್ಪು ನೀಡಿದ ಥರ್ಡ್‌ ಅಂಪೈರ್‌ ಮೈಕೆಲ್‌ ಗೌಫ್‌ ಬಗ್ಗೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಟ್ವಿಟರ್‌ ಮೂಲಕ ಅಸಮಾಧಾನ ತೋಡಿಕೊಂಡಿದ್ದಾರೆ. ರೋಹಿತ್‌ 18 ರನ್‌ ಪೇರಿಸಿದ್ದ ವೇಳೆ ಕೆಮರ್‌ ರೋಚ್‌ ಎಸೆದ ಓವರ್‌ನಲ್ಲಿ ಚೆಂಡು ಪ್ಯಾಡ್‌ ಸವರಿಕೊಂಡು ವಿಕೆಟ್‌ಕೀಪರ್‌ ಶಾಯ್‌ ಹೋಪ್‌ ಕೈ ಸೇರಿತ್ತು. ಫೀಲ್ಡ್‌ ಅಂಪೈರ್‌ ರಿಚರ್ಡ್‌ ಇಲ್ಲಿಂಗ್‌ವರ್ಥ್‌ 'ನಾಟೌಟ್‌' ನೀಡಿದ ಕಾರಣ ವಿಂಡೀಸ್‌ ರಿವ್ಯೂ ಕೇಳಿತ್ತು. ಆದರೆ, ಥರ್ಡ್‌ ಅಂಪೈರ್‌ 'ಔಟ್‌' ಎಂದು ಘೋಷಿಸಿದ್ದರು.

ಬ್ರಾತ್‌ವೇಟ್‌ಗೆ ದಂಡಅಂಪೈರ್‌ ತೀರ್ಪಿನ ವಿರುದ್ಧ ಮುನಿಸು ವ್ಯಕ್ತಪಡಿಸಿ ಐಸಿಸಿ ನಿಯಮ ಉಲ್ಲಂಘಿಸಿರುವ ವಿಂಡೀಸ್‌ ಆಲ್‌ರೌಂಡರ್‌ ಕಾರ್ಲೋಸ್‌ ಬ್ರಾತ್‌ವೇಟ್‌ಗೆ ಮ್ಯಾಚ್‌ ರೆಫರಿ ಕ್ರಿಸ್‌ ಬ್ರಾಡ್‌ ಪಂದ್ಯ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಿದ್ದಾರೆ. ಜತೆಗೆ ಎರಡು ಡಿಮೆರಿಟ್‌ ಅಂಕಗಳ ಶಿಕ್ಷೆಗೂ ವಿಂಡೀಸ್‌ ಆಲ್‌ರೌಂಡರ್‌ ಗುರಿಯಾಗಿದ್ದಾರೆ. ತಮ್ಮ ಓವರ್‌ನಲ್ಲಿ (ಇನಿಂಗ್ಸ್‌ನ 42ನೇ ಓವರ್‌) ಅಂಪೈರ್‌ 'ವೈಡ್‌' ತೀರ್ಪು ನೀಡಿದ್ದರಿಂದ ಬ್ರಾತ್‌ವೇಟ್‌ ಮುನಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌