ಆ್ಯಪ್ನಗರ

ವಿಕೆಟ್ ಟೇಕಿಂಗ್ ಬೌಲರ್‌ಗಳಿಂದ ಭಾರತಕ್ಕೆ ವಿಶ್ವಕಪ್‌ನಲ್ಲಿ ನೆರವು: ದ್ರಾವಿಡ್

ಮುಂಬರುವ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ವಿಕೆಟ್ ಟೇಕಿಂಗ್ ಬೌಲರ್‌ಗಳಿಂದ ಭಾರತಕ್ಕೆ ಪ್ರಯೋಜನವಾಗಲಿದೆ ಎಂದು ಮಾಜಿ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 18 May 2019, 2:03 pm
ಮುಂಬಯಿ: ಮುಂಬರುವ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಹೈ ಸ್ಕೋರಿಂಗ್ ಪಂದ್ಯಗಳನ್ನು ನಿರೀಕ್ಷಿಸಲಾಗುತ್ತಿದೆ. ಹಾಗಾಗಿ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಿರಲಿದೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, ಭಾರತ ತಂಡದಲ್ಲಿ ವಿಕೆಟ್ ಟೇಕಿಂಗ್ ಬೌಲರ್‌ಗಳಿರುವುದು ಪ್ರಯೋಜನವಾಗಲಿದೆ ಎಂದರು.
Vijaya Karnataka Web world-cup-2019


ಕಳೆದ ವರ್ಷ ಭಾರತ ಎ ತಂಡದ ಜತೆಗೆ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಅನುಭವದಿಂದ ಹೇಳ ಬಯಸುವುದೇನೆಂದರೆ ವಿಶ್ವಕಪ್‌ನಲ್ಲಿ ಹೈ ಸ್ಕೋರಿಂಗ್ ಪಂದ್ಯಗಳನ್ನು ನಿರೀಕ್ಷೆ ಮಾಡಬಹುದು. ಹಾಗಾಗಿ ಪಂದ್ಯದ ಮಧ್ಯಂತರ ಓವರ್‌ಗಳಲ್ಲಿ ವಿಕೆಟ್ ಕಬಳಿಸುವುದು ಅತಿ ಮುಖ್ಯ. ನನಗನಿಸುತ್ತದೆ ಈ ವಿಷಯದಲ್ಲಿ ಭಾರತ ಅದೃಷ್ಟ ತಂಡವಾಗಿದೆ ಎಂದರು.

ಜಸ್ಪ್ರೀತ್ ಬುಮ್ರಾ, ಕುಲ‌್‌ದೀಪ್ ಯಾದವ್ ಹಾಗೂ ಯುಜ್ವೇಂದ್ರ ಚಹಲ್‌ರಂತಹ ವಿಕೆಟ್ ಟೇಕಿಗ್ ಬೌಲರ್‌ಗಳನ್ನು ನಾವು ಹೊಂದಿದ್ದೇವೆ. ಹೈ ಸ್ಕೋರಿಂಗ್ ಪಂದ್ಯದ ಮಧ್ಯೆ ವಿಕೆಟ್ ಪಡೆಯುವ ಮೂಲಕ ಎದುರಾಳಿಗಳನ್ನು ನಿಯಂತ್ರಿಸಬಹುದಾಗಿದೆ ಎಂದು ವಿವರಿಸಿದರು.

ಕಳೆದ ಎರಡು ವರೆ ವರ್ಷಗಳಿಂದ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಎಲ್ಲದಕ್ಕಿಂತಲೂ ಮಿಗಿಲಾಗಿ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದೆ. ನನಗನಿಸುತ್ತದೆ ಇದೊಂದು ಅತ್ಯಂತ ಕಠಿಣ ವಿಶ್ವಕಪ್ ಆಗಿರಲಿದೆ. ಪ್ರತಿಯೊಂದು ತಂಡವು ಉತ್ತಮ ಪೂರ್ವ ಸಿದ್ಧತೆಯನ್ನೇ ನಡೆಸಿದೆ ಎಂದರು.

ಭಾರತ ಫೇವರಿಟ್ ಎಂಬ ಪ್ರಶ್ನೆ ಬಂದಾಗ ಹಾಗೆಯೇ ನಿರೀಕ್ಷೆ ಮಾಡೋಣ. ಸೆಮಿಫೈನಲ್ ಪ್ರವೇಶಿಸಿ ಅಲ್ಲಿಂದ ಬಳಿಕ ನಾಲ್ಕು ಉತ್ತಮ ತಂಡಗಳ ನಡುವಣ ಕದನವಾಗಿರಲಿದೆ ಎಂದರು.

ಬೌಲಿಂಗ್ ಅತಿ ಮುಖ್ಯ ಘಟಕವೆನಿಸಲಿದೆ. ಉತ್ತಮವಾಗಿ ಬೌಲಿಂಗ್ ಮಾಡಿದ ತಂಡಕ್ಕೆ ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಸೇರಿಸಿದರು.

ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ದ್ರಾವಿಡ್ ಪ್ರಶಂಸೆಯ ಮಾತುಗಳನ್ನಾಡಿದರು. ಕೊಹ್ಲಿ ಸದಾ ಸುಧಾರಣೆಯನ್ನು ಕಾಣುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ 50 ಶತಕಗಳ ದಾಖಲೆಯನ್ನು ತಲುಪಲು ತುಂಬಾನೇ ವರ್ಷಗಳು ಬೇಕಾಗಲಿದೆ ಎಂದು ಅಂದುಕೊಳ್ಳಲಾಗಿತ್ತು. ಆದರೆ ಕೊಹ್ಲಿ ಈಗಾಗಲೇ 40ರ ಅಸುಪಾಸಿಗೆ ಬಂದು ತಲುಪಿದ್ದಾರೆ ಎಂದರು.

ಟೀಮ್ ಇಂಡಿಯಾದ ಕೆಟ್ಟ ಟೂರ್ನಿಯಲ್ಲೂ ಕೊಹ್ಲಿ ವೈಯಕ್ತಿಕವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದುವೇ ಕೊಹ್ಲಿ ಪ್ಲಸ್ ಪಾಯಿಂಟ್ ಆಗಿದೆ. ಮೊದಲ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಪ್ರವಾಸವನ್ನು ಹೊರುತುಪಡಿಸಿ ಮತ್ತದೇ ರಾಷ್ಟ್ರಗಳಿಗೆ ಎರಡನೇ ಬಾರಿಗೆ ತೆರಳಿದಾಗ ಉತ್ತಮ ಆಟಗಾರನಾಗಿ ಮೂಡಿ ಬಂದಿದ್ದರು ಎಂಬುದನ್ನು ಉಲ್ಲೇಖಿಸಿದರು.

ಏತನ್ಮಧ್ಯೆ ಮಹೇಂದ್ರ ಸಿಂಗ್ ಧೋನಿ ಬಗ್ಗೆಯೂ ಗುಣಗಾನ ಮಾಡಿರುವ ದ್ರಾವಿಡ್, ಬಿಗ್ ಮ್ಯಾಚ್‌ ಪ್ಲೇಯರ್ ಎಂದು ಕೊಂಡಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌