ಆ್ಯಪ್ನಗರ

ಲಖನೌದಲ್ಲಿರುವ ಭಾರತ ತಂಡದ ಭವಿಷ್ಯದ ಆಟಗಾರನನ್ನು ಹೆಸರಿಸಿದ ರಾಹುಲ್‌!

ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ದೊಡ್ಡ ಮೊತ್ತದ ಪಂದ್ಯದಲ್ಲಿ 6 ವಿಕೆಟ್‌ಗಳ ಗೆಲುವು ಪಡೆಯುವ ಮೂಲಕ ಲಖನೌ ಸೂಪರ್‌ ಜಯಂಟ್ಸ್‌ ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮೊಟ್ಟ ಮೊದಲ ಜಯ ದಕ್ಕಿಸಿಕೊಂಡಿತು. ಗೆಲುವಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ನಾಯಕ ಕೆ.ಎಲ್‌ ರಾಹುಲ್‌, ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು. ವಿಶೇಷವಾಗಿ ಯುವ ಆಟಗಾರರಾದ ರವಿ ಬಿಷ್ನೋಯ್ ಮತ್ತು ಆಯುಷ್‌ ಬದೋನಿ ಅವರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Authored byರಮೇಶ ಕೋಟೆ | Vijaya Karnataka Web 1 Apr 2022, 2:24 pm

ಹೈಲೈಟ್ಸ್‌:

  • ಪ್ರಸ್ತುತ ನಡೆಯುತ್ತಿರುವ 2022ರ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿ.
  • ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ಗೆ 6 ವಿಕೆಟ್‌ ಜಯ.
  • ತಂಡದ ಪರಿಪೂರ್ಣ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಾಯಕ ಕೆ.ಎಲ್‌ ರಾಹುಲ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web LSG
ಲಖನೌ ಸೂಪರ್‌ ಜಯಂಟ್ಸ್‌ (ಚಿತ್ರ: ಐಪಿಎಲ್‌)
ಮುಂಬೈ: ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿ ಆರು ವಿಕೆಟ್‌ಗಳ ಗೆಲುವು ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಲಖನೌ ಸೂಪರ್‌ ಜಯಂಟ್ಸ್ ನಾಯಕ ಕೆ.ಎಲ್ ರಾಹುಲ್ ಇದು ತಂಡದ ಪರಿಪೂರ್ಣ ಪ್ರದರ್ಶನ ಎಂದು ಹೊಗಳಿದ್ದಾರೆ.
ಗುರುವಾರ ರಾತ್ರಿ ಬ್ರೆಬೌರ್ನ್‌ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ನೀಡಿದ್ದ 211 ರನ್‌ಗಳ ಕಠಿಣ ಸವಾಲು ಬೆನ್ನತ್ತಿದ್ದ ಲಖನೌ ತಂಡ, ಕ್ವಿಂಟನ್‌ ಡಿ ಕಾಕ್ (61) ಹಾಗೂ ಎವಿನ್ ಲೆವಿಸ್‌(55*) ಅವರ ಅರ್ಧಶತಕಗಳ ನೆರವಿನಿಂದ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತ್ತು. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಮೊಟ್ಟ ಮೊದಲ ಜಯ ತನ್ನದಾಗಿಸಿಕೊಂಡಿತು.

ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಲಖನೌ ಸೂಪರ್‌ ಜಯಂಟ್ಸ್ ನಾಯಕ ಕೆ.ಎಲ್‌ ರಾಹುಲ್‌, "ಅದ್ಭುತ ಫಾರ್ಮ್‌ನಲ್ಲಿರುವ ಕ್ವಿಂಟನ್‌ ಡಿ ಕಾಕ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಎವಿನ್‌ ಲೆವಿಸ್‌ ತಮ್ಮ ಬ್ಯಾಟಿಂಗ್‌ ಮೇಲೆ ಸಾಕಷ್ಟು ಕೆಲಸ ಮಾಡಿದ್ದಾರೆ, ಇದೀಗ ಅವರು ಚೆಂಡನ್ನು ಚೆನ್ನಾಗಿ ಹೊಡೆಯುತ್ತಿದ್ದಾರೆ. ಇದರ ಜೊತೆಗೆ ಹಲವು ಆಟಗಾರರು ಫಾರ್ಮ್‌ನಲ್ಲಿ ಇರುವುದು ನಾಯಕನ ಮೊಗದಲ್ಲಿ ಮಂದಹಾಸ ಮೂಡಿಸಿದೆ," ಎಂದು ಸಂತಸ ವ್ಯಕ್ತಪಡಿಸಿದರು.

ಚೆನ್ನೈ Vs ಲಖನೌ ಪಂದ್ಯದ ಸ್ಕೋರ್‌ಕಾರ್ಡ್

ಮೊದಲು ಬ್ಯಾಟ್‌ ಮಾಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ಕೂಡ ಲಖನೌ ಬೌಲರ್‌ಗಳನ್ನು ಬೆಂಡೆತ್ತಿತ್ತು. ರಾಬಿನ್‌ ಉತ್ತಪ್ಪ(50), ಮೊಯೀನ್‌ ಅಲಿ(35) ಹಾಗೂ ಶಿವಂ ದುಬೇ(49) ಅವರ ಬ್ಯಾಟಿಂಗ್‌ ಸಹಾಯದಿಂದ ಸಿಎಸ್‌ಕೆ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 210 ರನ್‌ ಬೃಹತ್‌ ಮೊತ್ತ ದಾಖಲಿಸಿತ್ತು. ಅಂದಹಾಗೆ ಲಖನೌ ಪರ ರವಿ ಬಿಷ್ಣೋಯ್‌ 4 ಓವರ್‌ಗಳಿಗೆ 24 ರನ್‌ ನೀಡಿ ಪ್ರಮುಖ ಎರಡು ವಿಕೆಟ್‌ ಕಬಳಿಸಿದ್ದರು. ಇವರನ್ನು ಬಿಟ್ಟರೆ ಇನ್ನುಳಿದ ಬೌಲರ್‌ಗಳು ದುಬಾರಿಯಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, "ರವಿ ಬಿಷ್ಣೋಯ್‌ ದೊಡ್ಡ ಹೃದಯದ ಹುಡುಗ. ಆತ ಸಣ್ಣ ಹುಡುಗನಾದರೂ ಕಠಿಣ ಹೋರಾಟ ನಡೆಸಬಲ್ಲ. ತೇವವಾಗಿದ್ದ ಚೆಂಡಿನಲ್ಲಿ ಅವರು ಶಕ್ತಿಯುತವಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಯುವ ಸ್ಪಿನ್ನರ್‌ನಿಂದ ನನಗೆ ತುಂಬಾ ಖುಷಿಯಾಗುತ್ತಿದೆ. ಆತ ಇನ್ನಷ್ಟು ಕಲಿಯಬೇಕು, ಇನ್ನಷ್ಟು ಬೆಳೆಯಬೇಕು ಹಾಗೂ ಅದನ್ನು ನಾವು ನೋಡಬೇಕು," ಎಂದು ಕೆ.ಎಲ್‌ ರಾಹುಲ್‌ ತಿಳಿಸಿದ್ದಾರೆ.

IPL 2022: 200+ ರನ್‌ಚೇಸ್‌ ಮಾಡಿ ಸಿಎಸ್‌ಕೆಗೆ ಮರ್ಮಾಘಾತ ನೀಡಿದ ಎಲ್‌ಎಸ್‌ಜಿ!

ಮತ್ತೊಂದೆಡೆ ಗುಜರಾತ್ ಟೈಟನ್ಸ್‌ ವಿರುದ್ಧ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಆಯುಷ್‌ ಬದೋನಿ, ತನ್ನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕೇವಲ 9 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್‌ ಸೇರಿದಂತೆ ಅಜೇಯ 19 ರನ್‌ ಸಿಡಿಸಿದ್ದರು. ಆ ಮೂಲಕ ತಂಡದ ಗೆಲುವಿನಲ್ಲಿ ಅಳಿಲು ಸೇವೆ ಸಲ್ಲಿಸಿದ್ದರು.

"ಬದೋನಿ ಅವರ ಬ್ಯಾಟಿಂಗ್‌ನ ಕೆಲವು ವಿಡಿಯೋಗಳನ್ನು ನಾನು ವೀಕ್ಷಿಸಿದ್ದೇನೆ. ಈತನ ಬ್ಯಾಟಿಂಗ್‌ ನಿಜಕ್ಕೂ ಅದ್ಬುತವಾಗಿದೆ. 360 ಡಿಗ್ರಿಯಲ್ಲಿ ಬ್ಯಾಟ್‌ ಮಾಡುವ ಈ ಯುವಕ ಭಾರತ ತಂಡಕ್ಕೆ ಹಾಗೂ ಸೀಮಿತ ಓವರ್‌ಗಳ ಸ್ವರೂಪಕ್ಕೆ ಹೇಳಿ ಮಾಡಿಸಿದ ಆಟಗಾರ," ಎದು ಆಯುಷ್‌ ಬದೋನಿ ಅವರನ್ನು ಕೆ.ಎಲ್‌ ರಾಹುಲ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

IPL 2022: 211 ರನ್‌ ಚೇಸ್‌ಗೆ ರೂಪಿಸಿದ್ದ ಗೇಮ್ ಪ್ಲಾನ್‌ ತಿಳಿಸಿದ ಆಯುಷ್‌ ಬದೋನಿ!

ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 6 ವಿಕೆಟ್‌ ಗೆಲುವು ದಾಖಲಿಸಿದ ಸಂಭ್ರಮದಲ್ಲಿ ತೇಲುತ್ತಿರುವ ಲಖನೌ ಸೂಪರ್‌ ಜಯಂಟ್ಸ್‌ ತಂಡ ಏಪ್ರಿಲ್‌ 4 ರಂದು ಡಿ ವೈ ಪಾಟೀಲ್‌ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೆಣಸಲಿದೆ.
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌