Please enable javascript.Matheesha Pathirana,IPL 2022: 'ಆಡಮ್‌ ಮಿಲ್ನ್‌ ಔಟ್‌', ಜೂನಿಯರ್‌ ಲಸಿತ್‌ ಮಾಲಿಂಗ ಜೊತೆ ಸಿಎಸ್‌ಕೆ ಒಪ್ಪಂದ! - ipl 2022: chennai super kings sign matheesha pathirana as adam milne’s replacement for rest of 15th edition of indian premier league - Vijay Karnataka

IPL 2022: 'ಆಡಮ್‌ ಮಿಲ್ನ್‌ ಔಟ್‌', ಜೂನಿಯರ್‌ ಲಸಿತ್‌ ಮಾಲಿಂಗ ಜೊತೆ ಸಿಎಸ್‌ಕೆ ಒಪ್ಪಂದ!

Authored byವಿಜೇತ್ ಕುಮಾರ್ | Vijaya Karnataka Web 21 Apr 2022, 5:23 pm
Subscribe

ಹಾಲಿ ಹಾಗೂ ನಾಲ್ಕು ಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ತನ್ನ ಬೌಲಿಂಗ್‌ ವಿಭಾಗದಲ್ಲಿ ಪ್ರಮುಖರ ಅನುಪಸ್ಥಿತಿ ಕಾರಣ ಭಾರಿ ಹಿನ್ನಡೆ ಅನುಭವಿಸಿರುವ ಸಿಎಸ್‌ಕೆ ಈವರೆಗೆ ಆಡಿದ 6 ಪಂದ್ಯಗಳಲ್ಲಿ 5 ಸೋಲುಂಡು ಹತ್ತು ತಂಡಗಳಿರುವ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿಯುವಂತ್ತಾಗಿದೆ. ಗಾಯದ ಮೇಲೆ ಬರೆ ಎಂಬಂತ್ತೆ ಸ್ಟಾರ್ ವಿದೇಶಿ ವೇಗದ ಬೌಲರ್‌ ಆಡಮ್‌ ಮಿಲ್ನ್, ಐಪಿಎಲ್‌ 2022 ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.

ಹೈಲೈಟ್ಸ್‌:

  • ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ.
  • ಕಿವೀಸ್‌ನ ಅನುಭವಿ ವೇಗದ ಬೌಲರ್‌ ಆಡಮ್‌ ಮಿಲ್ನ್‌ ಸೇವೆ ಕಳೆದುಕೊಂಡ ಸಿಎಸ್‌ಕೆ.
  • ಬದಲಿ ಆಟಗಾರನಾಗಿ ಶ್ರೀಲಂಕಾದ ಯುವ ವೇಗದ ಬೌಲರ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
Matheesha Pathirana and Adam Milne IPL 2022
ಮತೀಶ ಪತಿರಣ ಮತ್ತು ಆಡಮ್‌ ಮಿಲ್ನ್ (ಚಿತ್ರ: ಟ್ವಿಟರ್‌).
ಬೆಂಗಳೂರು: ಜಯದ ಫಾರ್ಮುಲಾ ಕಂಡುಕೊಳ್ಳಲು ಹರಸಾಹಸ ನಡೆಸುತ್ತಿರುವ ಹಾಲಿ ಹಾಗೂ ನಾಲ್ಕು ಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಈಗ ಗಾಯದ ಮೇಲೆ ಬರೆ ಎಂಬಂತೆ ತನ್ನ ಅನುಭವಿ ವೇಗದ ಬೌಲರ್‌ ಆಡಮ್‌ ಮಿಲ್ನ್‌ ಅವರ ಸೇವೆಯನ್ನು ಕಳೆದುಕೊಳ್ಳುವಂತ್ತಾಗಿದೆ.
ತೊಡೆಯ ಸ್ನಾಯು ಎಳೆತದ ಗಾಯಕ್ಕೆ ಯುತ್ತಿರುವ ಕಿವೀಸ್‌ ವೇಗಿ ಆಡಮ್‌ ಮಿಲ್ನ್‌, ಐಪಿಎಲ್‌ 2022 ಟೂರ್ನಿಯಿಂದ ಸಂಪೂರ್ಣ ಹೊರಬಿದ್ದಿದ್ದಾರೆ. ಸದ್ಯ 15ನೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 10 ತಂಡಗಳಿರುವ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಸಿಎಸ್ಕೆ, ತನ್ನ ಬೌಲಿಂಗ್‌ ಬಲ ಹೆಚ್ಚಿಸಿಕೊಳ್ಳುವ ಸಲುವಾಗಿ ಜೂನಿಯರ್‌ ಲಸಿತ್‌ ಮಾಲಿಂಗ ಎಂದೇ ಖ್ಯಾತಿ ಪಡೆದಿರುವ ಶ್ರೀಲಂಕಾ ಯುವ ವೇಗಿ ಮತೀಶ ಪತಿರಣ ಅವರೊಟ್ಟಿಗೆ ಒಪ್ಪಂದ ಮಾಡಿಕೊಂಡಿದೆ.

ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ 2.3 ಓವರ್‌ಗಳ ಬೌಲಿಂಗ್‌ ಮಾಡಿದ ಬಳಿಕ ಆಡಮ್‌ ಮಿಲ್ನ್‌ ಗಾಯಗೊಂಡಿದ್ದರು. ಆದರೆ, ಇದರಿಂದ ಈವರೆಗೆ ಚೇತರಿಸಲು ಸಾಧ್ಯವಾಗದೇ ಹೋದ ಕಾರಣ ಟೂರ್ನಿಯಿಂದ ಹೊರ ನಡೆದಿದ್ದಾರೆ. 19 ವರ್ಷದ ಯುವ ವೇಗಿ ಪತಿರಣ, ಶ್ರೀಲಂಕಾದ ಕಿರಿಯರ (19 ವರ್ಷದೊಳಗಿನವರ) ತಂಡದಲ್ಲಿ 2020 ಮತ್ತು 2022ರ ಐಸಿಸಿ ಕಿರಿಯರ ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿ ಗಮನ ಸೆಳೆದಿದ್ದಾರೆ.

ವೈಯಕ್ತಿಕ ಕಾರಣಕ್ಕೆ ಸಿಎಸ್‌ಕೆ ಕ್ಯಾಂಪ್‌ ತೊರೆದ ಡೆವೋನ್‌ ಕಾನ್ವೇ!

ಲಸಿತ್‌ ಮಾಲಿಂಗ ರೀತಿಯಲ್ಲೇ ರೌಂಡ್‌ ಆರ್ಮ್‌ ಬೌಲಿಂಗ್‌ ಆಕ್ಷನ್‌ ಮೈಗೂಡಿಸಿಕೊಂಡಿದ್ದು, ತಮ್ಮ ನಿಖರ ಯಾರ್ಕರ್‌ಗಳ ಮೂಲಕ ಅಪಾಯಕಾರಿ ಬೌಲರ್‌ ಎನಿಸಿಕೊಂಡಿದ್ದಾರೆ. ಆದರೆ, ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ಕೇವಲ ಒಂದು ಪಂದ್ಯ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿರುವ ಅವರಲ್ಲಿ ಅನುಭವದ ಕೊರತೆ ಇದೆ. ಈಗಾಗಗಲೇ ಬಳಲಿ ಬೆಂಡಾಗಿರುವ ಸಿಎಸ್‌ಕೆ ತಂಡದ ಬೌಲಿಂಗ್‌ ವಿಭಾಗಕ್ಕೆ ಈ ಅನನುಭವಿ ವೇಗದ ಬೌಲರ್‌ ಯಾವ ರೀತಿಯ ಬಲ ತಂದುಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಷ್ಟೆ.

ಪತಿರಣ ಬೌಲಿಂಗ್‌ ಶೈಲಿಯ ವಿಡಿಯೋವನ್ನು ಈ ಟ್ವೀಟ್‌ನಲ್ಲಿ ವೀಕ್ಷಿಸಬಹುದಾಗಿದೆ.


ದೀಪಕ್‌ ಚಹರ್‌ ಸೇವೆ ಕಳೆದುಕೊಂಡಿರುವ ಸಿಎಸ್‌ಕೆ
ಇದೇ ವರ್ಷ ಫೆಬ್ರವರಿಯಲ್ಲಿ ನಡೆದ ಆಟಗಾರರ ಬೃಹತ್‌ ಹರಾಜಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನದೇ ವೇಗಿ ದೀಪಕ್‌ ಚಹರ್‌ ಅವರನ್ನು ಮರಳಿ ಖರೀದಿ ಮಾಡುವ ಸಲುವಾಗಿ ಬರೋಬ್ಬರಿ 14 ಕೋಟಿ ರೂ. ಖರ್ಚು ಮಾಡಿತ್ತು. ಆದರೆ, ಚಹರ್‌ ಕಳೆದ ಫೆಬ್ರವರಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ ವೇಳೆ ಗಾಯದ ಸಮಸ್ಯೆಗೆ ತುತ್ತಾದರು. ಬಳಿಕ ಬೆಂಗಳೂರಿನ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರಕ್ಕೊಳಗಾದರೂ, ಬೆನ್ನು ನೋವಿನ ಸಮಸ್ಯೆ ಎದುರಿಸಿ ಐಪಿಎಲ್‌ 2022 ಟೂರ್ನಿಯಿಂದ ಸಂಪೂರ್ಣ ಹೊರಗುಳಿದರು. ದೀಪಕ್‌ ಚಹರ್‌ ಮತ್ತು ಈಗ ಆಡಮ್‌ ಮಿಲ್ನ್‌ ಸೇವೆ ಇಲ್ಲದಂತ್ತಾಗಿರುವುದು ಸಿಎಸ್‌ಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅತ್ಯಂತ ಕಡಿಮೆ ಬೆಲೆಗೆ ಸಿಎಸ್‌ಕೆ ಖರೀದಿಸಿದ 3 ಆಟಗಾರನ್ನು ಹೆಸರಿಸಿದ ಸ್ಟೀಫನ್ ಫ್ಲೆಮಿಂಗ್‌!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ
ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ (ವಿಕೆಟ್‌ಕೀಪರ್‌), ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಹರ್, ಕೆ.ಎಂ, ಆಸಿಫ್, ತುಷಾರ್ ದೇಶಪಾಂಡೆ, ಶಿವಂ ದುಬೇ, ಮಹೀಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಡೆವೊನ್ ಕಾನ್ವೇ, ಡ್ವೇನ್‌ ಪ್ರೆಟೋರಿಯಸ್‌, ಮಿಚೆಲ್‌ ಸ್ಯಾಂಟ್ನರ್‌, ಮತೀಶ ಪತಿರಣ (ಆಡಮ್‌ ಮಿಲ್ನ್‌ ಔಟ್‌), ಸುಭ್ರಾಂಶು ಸೇನಾಪತಿ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜಾರ್ಡನ್, ಕೆ ಭಗತ್ ವರ್ಮಾ.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ