ಆ್ಯಪ್ನಗರ

'ಡಿಆರ್‌ಎಸ್‌ ಡ್ರಾಮಾ' ಬಗ್ಗೆ ಸಿಎಸ್‌ಕೆ ಕೋಚ್‌ ಸ್ಟೀಫನ್‌ ಫ್ಲೆಮಿಂಗ್ ಅಸಮಾಧಾನ!

ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಕಾದಾಟ ನಡೆಸಿದಾಗಲೆಲ್ಲಾ ಜಿದ್ದಾಜಿದ್ದಿನ ಪೈಪೋಟಿ ಮೂಡಿಬರುವುದು ನಿಶ್ಚಿತ. ಅಂತೆಯೇ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 59ನೇ ಪಂದ್ಯದಲ್ಲಿ ಸ್ಕೋರ್‌ ಬೋರ್ಡ್‌ನಲ್ಲಿ ಹೆಚ್ಚು ರನ್‌ಗಳು ಕಾಣಿಸದೇ ಇದ್ದರೂ ಕೂಡ ಇತ್ತಂಡಗಳ ನಡುವಣ ಕಾದಾಟ ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದಿತ್ತು. ಅತ್ಯಂತ ಸ್ಪರ್ಧಾತ್ಮಕವಾಗಿ ಮೂಡಿಬಂದ ಪಂದ್ಯದಲ್ಲಿ ಗೆಲುವು ಕೊನೆ ಮುಂಬೈ ಕೈ ಹಿಡಿದಿತ್ತು. ಆದರೆ, ಡಿಆರ್‌ಎಸ್‌ ವ್ಯವಸ್ಥೆ ಕೈಕೊಡದೇ ಇದ್ದಿದ್ದರೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಅದೃಷ್ಟ ಬೇರೆಯದ್ದೇ ಆಗಿರುತ್ತಿತ್ತೇನೋ ಎಂದನ್ನಿಸುತ್ತದೆ.

Authored byವಿಜೇತ್ ಕುಮಾರ್ | Vijaya Karnataka Web 13 May 2022, 4:16 pm

ಹೈಲೈಟ್ಸ್‌:

  • ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ.
  • ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ವಿಕೆಟ್‌ಗಳ ಜಯ ದಾಖಲಿಸಿದ ಮುಂಬೈ ಇಂಡಿಯನ್ಸ್‌.
  • ಡಿಆರ್‌ಎಸ್‌ ಅಲಭ್ಯತೆ ಬಗ್ಗೆ ಅಸಮಾಧಾನ ತೋಡಿಕೊಂಡ ಸಿಎಸ್‌ಕೆ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Stephen Fleming CSK Coach 2022
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ (ಚಿತ್ರ: ಬಿಸಿಸಿಐ/ಐಪಿಎಲ್‌).
ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡಗಳಾದ ಮುಂಬೈ ಇಂಡಿಯನ್ಸ್‌ (5 ಬಾರಿ) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (4 ಬಾರಿ) ನಡುವಣ ಕಾದಾಟ ಕ್ರಿಕೆಟ್‌ ಪ್ರಿಯರಿಗೆ ರಸದೌತಣ ಬಡಿಸುವುದು ನಿಶ್ಚಿತ. ಇತ್ತಂಡಗಳ ನಡುವಣ ಕಾದಾಟವನ್ನು ಎಲ್‌-ಕ್ಲಾಸಿಕೊ ಎಂದೇ ಬಣ್ಣಿಸಲಾಗುತ್ತದೆ.
ಐಪಿಎಲ್‌ 2022 ಟೂರ್ನಿಯಲ್ಲಿ ಇತ್ತಂಡಗಳು ಮುಖಾಮುಖಿಯಾದ ಎರಡೂ ಲೀಗ್‌ ಪಂದ್ಯಗಳು ಅತ್ಯಂತ ರೋಚಕವಾಗಿ ಮೂಡಿಬಂದಿವೆ. ಅದರಲ್ಲೂ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಲೋಸ್ಕೋರಿಂಗ್‌ ಪಂದ್ಯವಾದರೂ ತೀರ ಕಷ್ಟ ಪಟ್ಟು 5 ವಿಕೆಟ್‌ಗಳ ಜಯ ದಕ್ಕಿಸಿಕೊಂಡಿತು.

ಅಂದಹಾಗೆ ಈ ಪಂದ್ಯ ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. ಅದೇನೆಂದರೆ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಲು ಬಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮೊದಲ ಮೂರು ಓವರ್‌ಗಳ ವರೆಗೆ ಡಿಆರ್‌ಎಸ್‌ ಸೇವೆಯ ಲಭ್ಯತೆ ಇರಲಿಲ್ಲ. ಆ ಮೂರು ಓವರ್‌ಗಳಲ್ಲಿ ಚೆನ್ನೈ ಮೂರು ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಐಪಿಎಲ್ 2022 ಟೂರ್ನಿಯ ಅಂಕಪಟ್ಟಿ

ಅದರಲ್ಲೂ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಎಡಗೈ ಓಪನರ್‌ ಹಾಗೂ ಇನ್‌ಫಾರ್ಮ್‌ ಬ್ಯಾಟರ್‌ ಡೆವೋನ್‌ ಕಾನ್ವೇ ಗೋಲ್ಡನ್ ಡಕ್‌ ಆದರು. ಎಡಗೈ ವೇಗದ ಬೌಲರ್‌ ಡೇನಿಯೆಲ್‌ ಸ್ಯಾಮ್ಸ್‌ ಬೌಲಿಂಗ್‌ನಲ್ಲಿ ಕಾನ್ವೇ ಅವರ ಪ್ಯಾಡ್‌ಗೆ ಬಡಿದಿದ್ದ ಚೆಂಡು ಲೆಗ್‌ಸ್ಟಂಪ್‌ನಿಂದ ಹೊರ ಹೋಗುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾದರೂ, ಆನ್‌ಫೀಲ್ಡ್‌ ಅಂಪೈರ್‌ ಔಟ್‌ ತೀರ್ಪನ್ನು ನೀಡಿದ್ದರು.

ಆದರೆ, ಅಂಪೈರ್‌ ತೀರ್ಪನ್ನು ಪ್ರಶ್ನಿಸಿ ಡಿಆರ್‌ಎಸ್‌ ತೆಗೆದುಕೊಳ್ಳಲು ಸಿಎಸ್‌ಕೆಗೆ ಸಾಧ್ಯವಾಗಿರಲಿಲ್ಲ. ಏಕೆಂದರೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವಿದ್ಯತ್‌ ಕೊರತೆ ಸಮಸ್ಯೆ ಎದುರಾಗಿದ್ದ ಕಾರಣ ಡಿಆರ್‌ಎಸ್‌ ತಂತ್ರಜ್ಞಾನದ ಬಳಕೆಗೆ ಅಡಚಣೆ ಎದುರಾಗಿತ್ತು. ವಿದ್ಯುತ್‌ ಸಮಸ್ಯೆ ಬಗೆ ಹರಿದ ಬಳಿಕ ಡಿಆರ್‌ಎಸ್‌ ತಂತ್ರಜ್ಞಾನದ ಸೇವೆ ಲಭ್ಯವಾಯಿತು. ಆದರೆ, ಆ ಹೊತ್ತಿಗಾಗಲೇ ಸಿಎಸ್‌ಕೆ ತಂಡದ ಇಬ್ಬರು ಬ್ಯಾಟರ್‌ಗಳು ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಾಗಿತ್ತು. ಈ ಬಗ್ಗೆ ಚೆನ್ನೈ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಅಸಮಾಧಾನ ಹೊರಹಾಕಿದ್ದಾರೆ.

"ಆ ಸಮಯದಲ್ಲಿ ಹೀಗಾಗಿದ್ದು ದುರದೃಷ್ಟಕರ ಎನ್ನಬಹುದು. ಇದರಿಂದ ಖಂಡಿತಾ ನಮಗೆ ಬೇಸರವಾಗಿದೆ. ಆದರೂ ಇವೆಲ್ಲಾ ಆಟದ ಒಂದು ಭಾಗವಷ್ಟೇ ಎಂದು ಭಾವಿಸಿ ಮುನ್ನಡೆಯಬೇಕಾಗುತ್ತದೆ. ಆದರೆ, ಅಲ್ಲಿ ನಡೆದ ಸತತ ಬೆಳವಣಿಗೆಗಳು ನಮಗೆ ವಿರುದ್ಧವಾಗಿದ್ದಂತೂ ಖಂಡಿತಾ. ನಮ್ಮ ತಂಡ ಇನ್ನು ಉತ್ತಮ ಆಟ ಆಡಬಹುದಿತ್ತು. ಉತ್ತಮ ಆರಂಭ ನಮಗೆ ಸಿಗದೇ ಹೋಯಿತು," ಎಂದು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಫ್ಲೆಮಿಂಗ್‌ ಹೇಳಿದ್ದಾರೆ.

ಸಿಎಸ್‌ಕೆ ಓಪನರ್‌ ಡೆವೋನ್‌ ಕಾನ್ವೇಗೆ ಡಿಆರ್‌ಎಸ್‌ ನಿರಾಕರಿಸಲು ಇದೇ ಕಾರಣ!

ತಂಡದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ: ಪ್ಲೆಮಿಂಗ್‌
ಚೆನ್ನೈ ಸೂಪರ್‌ ಕಿಂಗ್ಸ್‌, ಐಪಿಎಲ್‌ 2022 ಟೂರ್ನಿಯಲ್ಲಿ ಸ್ಪರ್ಧೆಯಿಂದ ಹೊರಬಿದ್ದ ಎರಡನೇ ತಂಡವಾಗಿದೆ. ಮುಂಬೈ ವಿರುದ್ಧದ 5 ವಿಕೆಟ್‌ಗಳ ಸೋಲು ತಂಡಕ್ಕೆ ಪ್ಲೇ-ಆಫ್ಸ್‌ ತಲುಪಲು ಇದ್ದ ಅಲ್ಪ ಮಾರ್ಗವನ್ನು ಮುಚ್ಚಿಹಾಕಿದೆ. ಈ ಆವೃತ್ತಿಯಲ್ಲಿ ತಂಡ ನೀಡಿದ ಕೆಟ್ಟ ಪ್ರದರ್ಶನದ ಬಗ್ಗೆ ಮಾತನಾಡಿರುವ ಸಿಎಸ್‌ಕೆ ಮುಖ್ಯ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌, ಬಹುತೇಕ ಹೊಸ ಆಟಗಾರರಿದ್ದು, ತಂಡವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.

"ನಮ್ಮ ತಂಡದ ಬಗ್ಗೆ ಇನ್ನು ಅರಿತುಕೊಳ್ಳುವುದರಲ್ಲೇ ಇದ್ದೇವೆ. ಮುಂದಿನ ಎರಡು ಪಂದ್ಯಗಳಲ್ಲಿ ನಮ್ಮ ತಂಡದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಭಾವಿಸಿದ್ದೇವೆ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದಕ್ಕೂ, ಅಷ್ಟೇನು ಉತ್ತಮ ಪ್ರದರ್ಶನ ನೀಡದೇ ಇರುವುದಕ್ಕೂ ನಡುವೆ ಇರುವ ಅಂತರ ಬಹಳಾ ಕಮ್ಮಿ. ಹೀಗಾಗಿ ಇಂತಹ ಆವೃತ್ತಿಗಳಲ್ಲಿ ಆ ಸಂಗತಿಗಳನ್ನು ಅರ್ಥಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ಹೀಗಾಗಿ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೂ, ಕೆಲ ವಿಭಾಗಗಳಲ್ಲಿ ನಮ್ಮ ತಂಡದ ಪ್ರದರ್ಶನ ಸುಧಾರಿಸುವ ಅಗತ್ಯತೆ ಖಂಡಿತಾ ಇದೆ," ಎಂದು ಹೇಳಿದ್ದಾರೆ.

ತಿಣುಕಾಡಿ ಗೆದ್ದ ಮುಂಬೈ, ಪ್ಲೇ-ಆಫ್ಸ್‌ ರೇಸ್‌ನಿಂದ ಹೊರಬಿದ್ದ ಚೆನ್ನೈ!

ಸಿಎಸ್‌ಕೆ-ಎಂಐ ಪಂದ್ಯದ ಸಂಕ್ಷಿಪ್ತ ಸ್ಕೋರ್‌
ಚೆನ್ನೈ ಸೂಪರ್‌ ಕಿಂಗ್ಸ್: 16 ಓವರ್‌ಗಳಲ್ಲಿ 97 ರನ್‌ಗಳಿಗೆ ಆಲ್‌ಔಟ್‌ (ಎಂಎಸ್‌ ಧೋನಿ 36*; ಡೇನಿಯೆಲ್‌ ಸ್ಯಾಮ್ಸ್‌ 16ಕ್ಕೆ 3, ರೈಲಿ ಮೆರಿಡಿತ್‌ 27ಕ್ಕೆ 2, ಕುಮಾರ ಕಾರ್ತಿಕೇಯ 22ಕ್ಕೆ 2).
ಮುಂಬೈ ಇಂಡಿಯನ್ಸ್‌: 14.5 ಓವರ್‌ಗಳಲ್ಲಿ 5 ವಿಕೆಟ್‌ಗೆ 103 ರನ್‌ (ತಿಲಕ್‌ ವರ್ಮಾ 34*, ರೋಹಿತ್‌ ಶರ್ಮಾ 18, ಹೃತಿಕ್‌ ಶೋಕೀನ್‌ 18; ಮುಖೇಶ್‌ ಚೌಧರಿ 23ಕ್ಕೆ 3).
ಪಂದ್ಯಶ್ರೇಷ್ಠ: ಡೇನಿಯೆಲ್‌ ಸ್ಯಾಮ್ಸ್‌
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌