ಆ್ಯಪ್ನಗರ

ಟ್ರೋಫಿ ಗೆದ್ದು ಪತ್ನಿಯನ್ನು ತಬ್ಬಿ ಸಂಭ್ರಮಿಸಿದ ರವೀಂದ್ರ ಜಡೇಜಾ, ವಿಡಿಯೋ ವೈರಲ್

Ravindra Jadeja Hugs wife Rivaba After IPL Final: ಅತ್ಯಂತ ರೋಚಕವಾಗಿ ಮೂಡಿಬಂದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ದಾಖಲೆಯ ಐದನೇ ಟ್ರೋಫಿ ಗೆದ್ದುಕೊಂಡಿತು. ಮಳೆ ಕಾರಣ ಕಾಯ್ದಿರಿಸಿದ ದಿನದಂದು ನಡೆದ ಫೈನಲ್‌ ಪಂದ್ಯದಲ್ಲಿ (ಮೇ 29ರಂದು) ದಿಟ್ಟ ಪ್ರದರ್ಶನ ನೀಡಿದ ಸಿಎಸ್‌ಕೆ 5 ವಿಕೆಟ್‌ಗಳ ರೋಚಕ ಜಯ ದಾಖಲಿಸಿತು. ಕೊನೇ 2 ಎಸೆತಗಳಲ್ಲಿ 10 ರನ್‌ ಅಗತ್ಯವಿದ್ದಾಗ ಬ್ಯಾಕ್‌ ಟು ಬ್ಯಾಕ್‌ ಬೌಂಡರಿ ಬಾರಿಸಿದ ಜಡೇಜಾ, ಸಿಎಸ್‌ಕೆಗೆ ಜಯ ತಂದರು.

Authored byವಿಜೇತ್ ಕುಮಾರ್‌ ಡಿ.ಎನ್ | Vijaya Karnataka Web 30 May 2023, 4:27 pm

ಹೈಲೈಟ್ಸ್‌:

  • ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ರೋಚಕ ಫೈನಲ್ ಪಂದ್ಯ.
  • ಗುಜರಾತ್‌ ಟೈಟನ್ಸ್‌ ಎದುರು ಲಾಸ್ಟ್‌ ಬಾಲ್ ಥ್ರಿಲ್ಲರ್‌ ಗೆದ್ದುಕೊಟ್ಟ ಆಲ್‌ರೌಂಡರ್‌ ರವೀಂದ್ರ ಜಡೇಜಾ.
  • ಮಳೆ ಅಡಚಣೆ ಎದುರಿಸಿದ ಪಂದ್ಯದಲ್ಲಿ 5 ವಿಕೆಟ್‌ಗಳ ರೋಚಕ ಜಯದೊಂದಿಗೆ 5ನೇ ಟ್ರೋಫಿ ಗೆದ್ದ ಸಿಎಸ್‌ಕೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ravindra Jadeja
ಕುಟುಂಬದವರೊಂದಿಗೆ ಸಂಭ್ರಮಿಸಿದ ರವೀಂದ್ರ ಜಡೇಜಾ (ಚಿತ್ರ: ಬಿಸಿಸಿಐ).
ಅಹ್ಮದಾಬಾದ್ : ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರ ಮನಮೋಹಕ ಆಟದ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನ ಐದನೇ ಐಪಿಎಲ್ ಕಿರೀಟ ಗೆದ್ದುಕೊಂಡಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ತಮ್ಮ ಕೈಚಳಕ ಪ್ರದರ್ಶಿಸಿ ಅಪಾಯಕಾರಿ ಬ್ಯಾಟರ್‌ ಶುಭಮನ್ ಗಿಲ್‌ ವಿಕೆಟ್‌ ಪಡೆದ ಜಡ್ಡು, ಬಳಿಕ ಬ್ಯಾಟಿಂಗ್‌ನಲ್ಲಿ ಕೇವಲ 6 ಎಸೆತಗಳಲ್ಲಿ ಅಜೇಯ 15 ರನ್‌ ಸಿಡಿಸಿ ತಂಡವನ್ನು ಜಯದ ದಡ ಮುಟ್ಟಿಸಿದರು. ಅಂತಿಮ 2 ಎಸೆತಗಳಲ್ಲಿ 10 ರನ್‌ಗಳ ಅಗತ್ಯವಿದ್ದಾಗ, ವಿಕೆಟ್‌ ನೇರವಾಗಿ ಸಿಕ್ಸರ್‌ ಮತ್ತು ಫೈನಲ್‌ ಲೆಗ್‌ ಕಡೆಗೆ ಫೋರ್‌ ಬಾರಿಸಿ ಸಿಎಸ್‌ಕೆಗೆ ಸ್ಮರಣೀಯ ಜಯ ತಂದರು.

ರೋಚಕ ಫೈನಲ್‌ ಓವರ್‌
ಗುಜರಾತ್‌ ಟೈಟನ್ಸ್‌ ತಂಡದ ಅನುಭವಿ ವೇಗದ ಬೌಲರ್‌ ಮೋಹಿತ್‌ ಶರ್ಮಾ ಅದ್ಭುತ ಬೌಲಿಂಗ್‌ ದಾಳಿ ಸಂಘಟಿಸಿದರು. ಅಂತಿಮ ಓವರ್‌ನಲ್ಲಿ ಸಿಎಸ್‌ಕೆ ಗೆಲುವಿಗೆ 13 ರನ್‌ಗಳ ಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಶಿವಂ ದುಬೇ ಮತ್ತು ರವೀಂದ್ರ ಜಡೇಜಾ ಮೊದಲ 3 ಎಸೆತಗಳಲ್ಲಿ ಕೇವಲ 2 ರನ್‌ ಮಾತ್ರವೇ ತೆಗೆಯಲು ಶಕ್ತರಾದರು. ಬಳಿಕ ಅಂತಿಮ 2 ಎಸೆತಗಳಲ್ಲಿ 10 ರನ್‌ಗಳ ಅಗತ್ಯವಿದ್ದಾಗ, ಟೈಟನ್ಸ್‌ ಗೆಲ್ಲುತ್ತದೆ ಎಂದು ಬಾಜಿ ಕಟ್ಟಿದ್ದವರೇ ಹೆಚ್ಚು. ಸಿಎಸ್‌ಕೆ ಅಭಿಮಾನಿಗಳ ಮುಖದಲ್ಲಿ ಕಣ್ಣೀರು ತುಂಬಿಹೋಗಿತ್ತು. ಟೈಟನ್ಸ್‌ ಗೆಲುವು ಖಾತ್ರಿ ಎನ್ನುವಷ್ಟರಲ್ಲಿ ಪವಾಡ ನಡೆದೇ ಹೋಯಿತು. ಬ್ಯಾಟನ್ನು ಖಡ್ಗದಂತೆ ತಿರುಗಿಸಿದ ಜಡ್ಡೂ, ಅಕ್ಷರಶಃ ಜಾದೂ ಮಾಡಿಬಿಟ್ಟರು. ಅಂತಿಮ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿ ಸಿಎಸ್‌ಕೆ ಕೊರಳಿಗೆ ಜಯದ ಮಾಲೆ ತೊಡಿಸಿದರು.
IPL 2023: 'ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ'-ಗೆಲುವಿನ ಬಳಿಕ ಭಾವುಕರಾದ ಎಂಎಸ್‌ ಧೋನಿ!
ಪತ್ನಿಯನ್ನು ತಬ್ಬಿ ಸಂಭ್ರಮಿಸಿದ ಜಡೇಜಾ
ಸಿಎಸ್‌ಕೆ ರೋಚಕ ಗೆಲುವು ದಕ್ಕಿಸಿಕೊಳ್ಳುತ್ತಿದ್ದಂತೆಯೇ ಅಂಗಣಕ್ಕೆ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ನುಗ್ಗಿದ್ದರು. ಮ್ಯಾಚ್ ವಿನ್ನರ್‌ ರವೀಂದ್ರ ಜಡೇಜಾ ಅವರನ್ನು ಎಂಎಸ್ ಧೋನಿ ತಮ್ಮ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಈ ಮಧ್ಯ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಜಡ್ಡು ಪತ್ನಿ ರಿವಾಬಾ ಜಡೇಜಾ ಮತ್ತು ಪುತ್ರಿ ಕಡೆಗೆ ಧಾವಿಸಿದ ರವೀಂದ್ರ ತಮ್ಮ ಕುಟುಂಬದವರನ್ನು ತಬ್ಬಿ ಗೆಲುವಿನ ಮಂದಹಾಸ ಬೀರಿದರು. ಇದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡಿದೆ.


ಗೆಲುವನ್ನು ಧೋನಿಗೆ ಅರ್ಪಿಸಿದ ಜಡ್ಡು
ರೋಚಕ ಗೆಲುವಿನ ಬಳಿಕ ಮಾತನಾಡಿದ ಆಲ್‌ರೌಂಡರ್‌ ರವೀಂದ್ರ ಜಡೇಜಾ, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಒಲಿದ ಐದನೇ ಗೆಲುವನ್ನು ನಾಯಕ ಎಂಎಸ್‌ ಧೋನಿಗೆ ಅರ್ಪಿಸಿದರು.

GT vs CSK - ಹೈ ಸ್ಕೋರಿಂಗ್ ಪಂದ್ಯದಲ್ಲಿ ಜಿಟಿ ಸದ್ದಡಗಿಸಿ 5ನೇ ಟ್ರೋಫಿ ಗೆದ್ದ ಸಿಎಸ್‌ಕೆ!
"ಐದನೇ ಟ್ರೋಫಿ ಗೆಲುವು ಸಾಧ್ಯವಾಗಿರುವುದು ಅಮೋಘ ಅನುಭವ ತಂದುಕೊಟ್ಟಿದೆ. ಇದು ನನ್ನ ಮನೆಯಂಗಣ, ಹೀಗಾಗಿ ಭಾರಿ ಸಂಖೆಯಲ್ಲಿ ಅಭಿಮಾನಿಗಳು ಆಗಮಿಸಿ ಸಿಎಸ್‌ಕೆಗೆ ಬೆಂಬಲ ನೀಡಿದ್ದಾರೆ. ಪ್ರೇಕ್ಷಕರ ಬೆಂಬಲ ಅದ್ಭುತ, ಮಳೆ ಕಾರಣ ತಡರಾತ್ರಿ ವರೆಗೂ ಅವರು ಪಂದ್ಯ ವೀಕ್ಷಣೆಗಾಗಿ ಕಾಯುತ್ತಿದ್ದರು. ಸಿಎಸ್‌ಕೆ ಅಭಿಮಾನಿಗಳಿಗೆ ದೊಡ್ಡ ಧನ್ಯವಾದಗಳು. ಈ ಗೆಲುವನ್ನು ನಮ್ಮ ತಂಡದ ವಿಶೇಷ ಸದಸ್ಯ ಎಂಎಸ್‌ ಧೋನಿ ಅವರಿಗೆ ಅರ್ಪಿಸುತ್ತೇನೆ. ಬ್ಯಾಟ್‌ನ ಸಾಧ್ಯವಾದಷ್ಟು ಜೋರಾಗಿ ಬೀಸಬೇಕು ಎಂಬುದಷ್ಟೇ ನನ್ನ ತಲೆಯಲ್ಲಿತ್ತು. ಯಾವುದು ಬೇಕಾದರೂ ಸಾಧ್ಯ, ಮೋಹಿತ್‌ ಮಂದಗತಿಯ ಎಸೆತ ಎಸೆಯುವಲ್ಲಿ ನಿಸ್ಸೀಮರು. ಹೀಗಾಗಿ ವಿಕೆಟ್‌ ನೇರವಾಗಿ ಬಾರಿಸುವ ಪ್ರಯತ್ನ ನನ್ನದಾಗಿತ್ತು. ಸಿಎಸ್‌ಕೆ ಅಭಿಮಾನಿಗಳು ಇದೇ ರೀತಿ ಬೆಂಬಲ ಮುಂದುವರಿಸಿ, ನಿಮಗಾಗಿ ಮತ್ತಷ್ಟು ಟ್ರೋಫಿ ಗೆದ್ದುಕೊಡುವ ಪ್ರಯತ್ನ ನಮ್ಮದು," ಎಂದು ಜಡೇಜಾ ಹೇಳಿಕೊಂಡರು.

ಲೇಖಕರ ಬಗ್ಗೆ
ವಿಜೇತ್ ಕುಮಾರ್‌ ಡಿ.ಎನ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌