ಆ್ಯಪ್ನಗರ

ಕೆಟ್ಟ ಮೇಲೆ ಬುದ್ಧಿ ಬಂತು; ನಂ.3 ಕ್ರಮಾಂಕಕ್ಕೆ ಮರಳುವ ಸೂಚನೆ ನೀಡಿದ ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧ ಮೂರನೇ ಕ್ರಮಾಂಕವನ್ನು ಬಿಟ್ಟುಕೊಟ್ಟಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದಿದ್ದರು. ಆದರೆ ಈ ಯೋಜನೆಯು ಟೀಮ್ ಇಂಡಿಯಾ ಪಾಲಿಗೆ ವ್ಯತಿರಿಕ್ತ ಪರಿಣಾಮವನ್ನು ಬೀರಿತ್ತು.

Vijaya Karnataka Web 15 Jan 2020, 12:10 pm
ಮುಂಬಯಿ: ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-1ರ ಅಂತರದ ಹಿನ್ನೆಡೆಗೊಳಗಾಗಿದೆ. ಅಲ್ಲದೆ ಸರಣಿ ಗೆಲ್ಲಲು ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 10 ವಿಕೆಟ್‌ಗಳ ಅಂತರದ ಸೋಲು ಭಾರತ ಕಳೆದ 15 ವರ್ಷಗಳಲ್ಲಿ ಎದುರಿಸಿದ ಹೀನಾಯ ಸೋಲಾಗಿದೆ. ಈ ಮಧ್ಯೆ ಎಚ್ಚೆತ್ತುಕೊಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮೂರನೇ ಕ್ರಮಾಂಕಕ್ಕೆ ಹಿಂತಿರುಗುವ ಸೂಚನೆ ನೀಡಿದ್ದಾರೆ.
Vijaya Karnataka Web ವಿರಾಟ್ ಕೊಹ್ಲಿ


ಪಂದ್ಯದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಆಡಿರುವುದರ ಬಗ್ಗೆ ಕೇಳಿದಾಗ, "ಈ ಹಿಂದೆಯೂ ಹಲವು ಬಾರಿ ಚರ್ಚಿಸಲಾಗಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಎಲ್ ರಾಹುಲ್‌ರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಬದಲಾವಣೆ ತಂದಿದ್ದೆವು. ಆದರೆ ನಮ್ಮ ರಣತಂತ್ರವು ಫಲಿಸಲಿಲ್ಲ. ನಾನು ನಾಲ್ಕನೇ ಕ್ರಮಾಂಕದಲ್ಲಿ ಆಡಿದಾಗೆಲ್ಲ ಫಲಿತಾಂಶ ಉತ್ತಮವಾಗಿರಲಿಲ್ಲ. ನಾವಿದನ್ನು ಮರು ಆಲೋಚನೆ ಮಾಡಲಿದ್ದೇವೆ" ಎಂದು ಕೊಹ್ಲಿ ತಿಳಿಸಿದರು.

ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ದ್ವಿತೀಯ ವಿಕೆಟ್‌ಗೆ 121 ರನ್‌ಗಳ ಜತೆಯಾಟ ನೀಡಿದ್ದರು. ಇವರಿಬ್ಬರು ಅನುಕ್ರಮವಾಗಿ 74 ಹಾಗೂ 47 ರನ್ ಗಳಿಸಿದ್ದರು. ಆದರೆ ಆಸೀಸ್ ಬೌಲರ್‌ಗಳಿಗೆ ಹೆಚ್ಚು ಗೌರವ ಕೊಟ್ಟು ಬ್ಯಾಟಿಂಗ್ ಮಾಡಿರುವುದು ಹಿನ್ನೆಡೆಗೆ ಕಾರಣವಾಯಿತು.

ಆಸೀಸ್‌ ವಿರುದ್ಧದ ಹೀನಾಯ ಸೋಲಿಗೆ ಕಾರಣ ಕೊಟ್ಟ ಕ್ಯಾಪ್ಟನ್‌ ಕೊಹ್ಲಿ

"ಇದು ಕೆಲವು ಆಟಗಾರರಿಗೆ ಅವಕಾಶ ನೀಡುವ ವಿಚಾರವಾಗಿದೆ. ಆಗೊಮ್ಮೆ ಹೀಗೊಮ್ಮೆ ಬ್ಯಾಟ್ಸ್‌ಮನ್‌ಗಳಿಗೆ ಬಡ್ತಿ ನೀಡುವ ಮೂಲಕ ಪ್ರಯೋಗ ಮಾಡುತ್ತಿದ್ದೇವೆ. ಒಂದು ಪಂದ್ಯದಿಂದ ಅಭಿಮಾನಿಗಳು ಗಾಬರಿಗೊಳ್ಳದೆ ರಿಲ್ಯಾಕ್ಸ್ ಆಗಿರಬೇಕು. ನನಗೆ ಪ್ರಯೋಗ ಮಾಡುವ ಅನುಮತಿಯಿದೆ. ಆದರೆ ಕೆಲವೊಮ್ಮೆ ವೈಫಲ್ಯ ಅನುಭವಿಸುತ್ತೇವೆ. ಇಂದು ನಮ್ಮ ಯೋಜನೆಗಳು ಫಲಿಸಲಿಲ್ಲ" ಎಂದು ವಿರಾಟ್ ಸೇರಿಸಿದರು.

"ಎಲ್ಲ ಮೂರು ವಿಭಾಗದಲ್ಲೂ ನಾವು ಕೆಟ್ಟದಾಗಿ ಆಡಿದೆವು. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಉತ್ತಮವಾಗಿ ಆಡದಿದ್ದರೆ ಅವರು ನಿಮ್ಮನ್ನು ಗಾಯಗೊಳಿಸಲಿದ್ದಾರೆ. ನಾವು ಹೆಚ್ಚು ಬದ್ಧತೆಯನ್ನು ತೋರಿರಲಿಲ್ಲ" ಎಂದು ಕೊಹ್ಲಿ ನುಡಿದರು.

ಏಕದಿನದಲ್ಲಿ ಟೀಮ್ ಇಂಡಿಯಾ ಹಾಗೂ ವಿರಾಟ್ ಕೊಹ್ಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿರುವ ಮೂರನೇ ಕ್ರಮಾಂಕವನ್ನು ಬಿಟ್ಟು ನಾಲ್ಕನೇ ಕ್ರಮಾಂಕದಲ್ಲಿ ಆಡಿರುವುದಕ್ಕೆ ಭಾರತದ ಬಹುತೇಕ ಮಾಜಿ ಆಟಗಾರರು ಅಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ವಿವಿಎಸ್ ಲಕ್ಷ್ಮಣ್, ಸಂಜಯ್ ಮಂಜ್ರೇಕರ್, ಹರ್ಭಜನ್ ಸಿಂಗ್ ಹೀಗೆ ಎಲ್ಲರೂ ವಿರಾಟ್ ಕೊಹ್ಲಿ ನಿರ್ಧಾರವು ತಪ್ಪಾಗಿದ್ದು, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪ್ರಯೋಗಕ್ಕೆ ಮುಂದಾಗಬಾರದಿತ್ತು ಎಂದಿದ್ದಾರೆ.

2020ರ ಮೊದಲ ಬಲವಾದ ಹೊಡೆತ; 15 ವರ್ಷದಲ್ಲೇ ಹೀನಾಯ ಸೋಲಿಗಿರುವ 5 ಪ್ರಮುಖ ಕಾರಣಗಳು

ಸಚಿನ್ ತೆಂಡೂಲ್ಕರ್ ಎಂದಿಗೂ ಓಪನರ್ ಸ್ಥಾನ ಬಿಟ್ಟು ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಯಸಿರಲಿಲ್ಲ. ವಿಶ್ವ ಶ್ರೇಷ್ಠ ಆಟಗಾರ ಅತಿ ಹೆಚ್ಚು ಎಸೆತಗಳನ್ನುಎದುರಿಸಬೇಕು. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಯೋಗಕ್ಕೆ ಮುಂದಾಗಬಾರದಿತ್ತು ಎಂದು ಲಕ್ಷ್ಮಣ್ ನಿಜಾಂಶವನ್ನು ವಿವರಿಸಿದರು.

ಟೀಮ್ ಇಂಡಿಯಾಗಾಗಿ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅನೇಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಹಾಗಾಗಿ ಬದಲಾವಣೆಯ ಅವಶ್ಯಕತೆಯೇ ಇರಲಿಲ್ಲ ಎಂದು ಹರ್ಭಜನ್ ಸಿಂಗ್ ಸೇರಿಸಿದರು.

ಇದಕ್ಕೊಂದು ಅಂಶವನ್ನು ಸೇರಿಸಿದ ಮಂಜ್ರೇಕರ್, ಶ್ರೇಯಸ್ ಅಯ್ಯರ್‌ ಅವರನ್ನು ಐದನೇ ಕ್ರಮಾಂಕಕ್ಕೆ ಹಿಂಬಡ್ತಿ ನೀಡಿರುವುದು ಸರಿಯಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಅವರು ನೆಲೆಯೂರಿದ್ದರು. ಇದನ್ನೇ ಆವರ್ತಿಸಿದ್ದಲ್ಲಿ ಮತ್ತದೇ ಹಳೆಯ ಸಮಸ್ಯೆ ಎದುರಾಗಲಿದೆ ಎಂದು ಎಚ್ಚರಿಸಿದರು.

ವಾಂಖೆಡೆ ಮೈದಾನದಲ್ಲಿ ಪ್ರತಿಧ್ವನಿಸಿದ ಸಿಎಎ-ಎನ್‌‌ಆರ್‌ಸಿ ಪ್ರತಿಭಟನೆಯ ಕಾವು

ಅಂದ ಹಾಗೆ 28ನೇ ಓವರ್‌ನಲ್ಲಿ ಕ್ರೀಸಿಗಿಳಿದಿದ್ದ ವಿರಾಟ್ ಕೊಹ್ಲಿ 14 ಎಸೆತಗಳಲ್ಲಿ ಸಿಕ್ಸರ್ ನೆರವಿನಿಂದ 16 ರನ್ ಗಳಿಸಿದ್ದರು. ಇದನ್ನು ಬೊಟ್ಟು ಮಾಡಿರುವ ಆಸ್ಟ್ರೇಲಿಯಾದ ಮಾಜಿ ಬ್ಯಾಟಿಂಗ್ ದಿಗ್ಗಜ ಮ್ಯಾಥ್ಯೂ ಹೇಡನ್, ನಾನು ಕೊಹ್ಲಿಯನ್ನು 28ನೇ ಓವರ್‌ ಬಳಿಕ ಕ್ರೀಸಿಗಿಳಿಯುವುದನ್ನು ನೋಡಲು ಬಯಸುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌