ಆ್ಯಪ್ನಗರ

​'ಕ್ರಿಕೆಟಿಗನಾಗಿ ಜಾತಿ ಬಗ್ಗೆ ಮಾತನಾಡಲು ನಾಚಿಕೆಯಾಗುವುದಿಲ್ಲವೇ?' ಜಡೇಜಾ ವಿರುದ್ಧ ಫ್ಯಾನ್ಸ್‌ ಕಿಡಿ!

'ನಾನೆಂದಿಗೂ ರಜಪೂತ್ ಹುಡುಗ' ಎಂದು ಟ್ವೀಟ್‌ ಮಾಡಿದ್ದ ಟೀಮ್‌ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ವಿರುದ್ಧ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka Web 23 Jul 2021, 3:50 pm
ಹೊಸದಿಲ್ಲಿ: ಇತ್ತೀಚೆಗೆ ತಮಿಳುನಾಡು ಪ್ರೀಮಿಯರ್ ಲೀಗ್‌ ಟೂರ್ನಿಯ ಪಂದ್ಯದ ವೇಳೆ ಕಾಮೆಂಟರಿ ಪ್ಯಾನೆಲ್‌ ಜೊತೆ ಮಾತನಾಡುತ್ತಾ 'ನಾನು ಕೂಡ ಬ್ರಾಹ್ಮಣ' ಎಂದು ಹೇಳುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಸುರೇಶ್‌ ರೈನಾ ಒಳಗಾಗಿದ್ದ ಬೆನ್ನಲ್ಲೆ ಇದೀಗ ಟೀಮ್‌ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಕೂಡ ಅದೇ ಪೇಚಿಗೆ ಸಿಲುಕಿದ್ದಾರೆ.
Vijaya Karnataka Web Ravindra jadeja
ರವೀಂದ್ರ ಜಡೇಜಾ (ಚಿತ್ರ: ಟಿಒಐ)


ಭಾರತ ಹಾಗೂ ಕೌಂಟಿ ಚಾಂಪಿಯನ್‌ಷಿಪ್‌ ಇಲೆವೆನ್‌ ನಡುವಿನ ಮೂರು ದಿನಗಳ ಅಭ್ಯಾಸ ಪಂದ್ಯ ಗುರುವಾರ ಡ್ರಾ ಆಗಿತ್ತು. ಅಂದಹಾಗೆ ಈ ಪಂದ್ಯದ ಮೊದಲನೇ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 75 ರನ್‌ ಗಳಿಸಿದ್ದರು ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಅವರು 51 ರನ್‌ಗಳ ಆಕರ್ಷಕ ಅರ್ಧಶತಕ ಸಿಡಿಸಿದ್ದರು.

ಪಂದ್ಯದ ಬಳಿಕ ರವೀಂದ್ರ ಜಡೇಜಾ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ "ನಾನೆಂದಿಗೂ ರಜಪೂತ್‌ ಹುಡುಗ. ಜೈ ಹಿಂದ್‌," ಎಂದು ಬರೆದಿದ್ದರು. ಇದಕ್ಕೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಬಹುತೇಕ ಮಂದಿ ಒಬ್ಬ ಕ್ರಿಕೆಟಿಗನಾಗಿ ಜಾತಿ ಪದವನ್ನು ಬಳಸಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಭ್ಯಾಸ ಪಂದ್ಯದಲ್ಲಿ ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ ಬಾರಿಸಿದ ಜಡೇಜಾ!

ಅಂದಹಾಗೆ, ರವೀಂದ್ರ ಜಡೇಜಾ ಭಾರತ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅರ್ಧಶತಕ ಅಥವಾ ಶತಕ ಸಿಡಿಸಿದಾಗ ಬ್ಯಾಟ್‌ ಮೂಲಕ ತಮ್ಮ ಸಂಸ್ಕೃತಿಗೆ ಗೌರವ ಸಲ್ಲಿಸುವುದು ವಾಡಿಕೆ. ಆದರೆ, ಗುರುವಾರ ಅವರು 'ರಜಪೂತ್‌ ಬಾಯ್‌' ಎಂಬ ಪದ ಬಳಕೆ ಮಾಡಿದ್ದು, ಅಭಿಮಾನಿಗಳನ್ನು ಕೆರಳಿಸಿದೆ.



ಕಳೆದ ಸೋಮವಾರ ನಡೆದಿದ್ದ ಎಲ್‌ವೈಸಿಎ ಕೊವೈ ಕಿಂಗ್ಸ್ ಹಾಗೂ ಸೇಲಂ ಸ್ಪರ್ಟನ್ಸ್‌ ನಡುವಿನ ತಮಿಳುನಾಡು ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ಕಾಮೆಂಟರಿ ಪ್ಯಾನೆಲ್‌ಗೆ ಸುರೇಶ್‌ ರೈನಾ ಸೇರ್ಪಡೆಯಾಗಿದ್ದರು. ಈ ವೇಳೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡುತ್ತಿರುವ ನೀವು, ಇಲ್ಲಿನ ಸಂಸ್ಕೃತಿಗೆ ಹೇಗೆ ಹೊಂದಿಕೊಂಡಿದ್ದೀರಿ ಎಂಬ ಪ್ರಶ್ನೆಯನ್ನು ರೈನಾಗೆ ಕೇಳಲಾಗಿತ್ತು.



ಅದಕ್ಕೆ ಉತ್ತರಿಸಿದ್ದ ರೈನಾ, "ನಾನು ಕೂಡ ಬ್ರಾಹ್ಮಣ. ಕಳೆದ 2004 ರಿಂದ ನಾನು ಚೆನ್ನೈನಲ್ಲಿ ಕ್ರಿಕೆಟ್‌ ಆಡುತ್ತಿದ್ದೇನೆ. ಇಲ್ಲಿನ ಸಂಸ್ಕೃತಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ಜತೆಗೆ, ನನ್ನ ಸಹ ಆಟಗಾರರನ್ನೂ ಇಷ್ಟಪಡುತ್ತೇನೆ. ಅನಿರುದ್ದ್‌ ಶ್ರೀಕಾಂತ್‌, ಬದ್ರಿ (ಎಸ್‌ ಬದ್ರಿನಾಥ್‌), ಬಾಲಾ ಭಾಯ್‌ (ಲಕ್ಷ್ಮಿಪತಿ ಬಾಲಾಜಿ) ಅವರೊಂದಿಗೆ ಆಡಿದ್ದೇನೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಉತ್ತಮ ಆಡಳಿತವಿದೆ. ಅದರಂತೆ ಚೆನ್ನೈ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ. ಸಿಎಸ್‌ಕೆಯ ಒಂದು ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ," ಎಂದು ರೈನಾ ಹೇಳಿದ್ದರು.



ಇನ್ನು, ರವೀಂದ್ರ ಜಡೇಜಾ 'ರಜಪೂತ್' ಪದ ಬಳಕೆ ಮಾಡಿದ ಬೆನ್ನಲ್ಲೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರು. ನೀವು ಮಿಲಿಯನ್‌ ಗಟ್ಟಲೇ ಅಭಿಮಾನಿಗಳನ್ನು ಹೊಂದಿದ್ದೀರಿ. ಹಾಗಾಗಿ, ಕೆಲ ತತ್ವಗಳಿಗೆ ಅನುಗುಣವಾಗಿ ನಡೆದುಕೊಳ್ಳಿ ಹಾಗೂ ಬದುಕಿ ಎಂದು ಅಭಿಮಾನಿಯೊಬ್ಬರು ಜಡೇಜಾಗೆ ಸಲಹೆ ನೀಡಿದರು.



ಮತ್ತೊಬ್ಬ ಅಭಿಮಾನಿ ಇದಕ್ಕೆ ಪ್ರತಿಕ್ರಯಿಸಿ, "ನೀವು ಒಬ್ಬ ಕ್ರಿಕೆಟಿಗನಾಗಿ, ಜಾತಿ ಬಗ್ಗೆ ಮಾತನಾಡಲು ನಾಚಿಕೆಯಾಗುವುದಿಲ್ಲವೆ? ಎಂದೆಂದಿಗೂ ನಾವೆಲ್ಲರೂ ಭಾರತೀಯರು," ಎಂದು ರೀಟ್ವೀಟ್‌ ಮಾಡಿದ್ದರು.



ಸದ್ಯ ರವೀಂದ್ರ ಜಡೇಜಾ, ವಿರಾಟ್‌ ಕೊಹ್ಲಿ ನಾಯಕತ್ವದ ಟೀಮ್‌ ಇಂಡಿಯಾ ಜೊತೆ ಇಂಗ್ಲೆಂಡ್‌ ಪ್ರವಾಸದಲ್ಲಿದ್ದು, ಆಗಸ್ಟ್‌ 4 ರಿಂದ ಆರಂಭವಾಗುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾಗವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌