ಆ್ಯಪ್ನಗರ

ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿದ ಬಿಸಿಸಿಐ ನೂತನ ಬಾಸ್ ಸೌರವ್ ಗಂಗೂಲಿ

ಹಿಂದೊಮ್ಮೆ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಅದೇ ರೀತಿಯಾಗಿ ಭ್ರಷ್ಟಾಚಾರ ರಹಿತವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಮುನ್ನಡೆಸುವುದಾಗಿ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಭರವಸೆ ನೀಡಿದ್ದಾರೆ.

Vijaya Karnataka Web 23 Oct 2019, 4:39 pm
ಮುಂಬಯಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷರಾಗಿ ಪದವಿ ವಹಿಸಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿದ್ದಾರೆ.
Vijaya Karnataka Web sourav-ganguly-08


ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ಹಿಂದೊಮ್ಮೆ ಭಾರತ ತಂಡವನ್ನು ಮುನ್ನಡೆಸಿದ ಅದೇ ರೀತಿಯಾಗಿ ಮುನ್ನಡೆಸುವುದಾಗಿ ತಿಳಿಸಿದ್ದಾರೆ.

ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರೊಂದಿಗೆ ಸುಪ್ರೀಂ ಕೋರ್ಟ್ ನೇಮಿತ ಕ್ರಿಕೆಟ್ ಆಡಳಿತಗಾರರ ಸಮಿತಿ (ಸಿಒಎ) ಮೇಲ್ನೋಟವು ಕೊನೆಗೊಂಡಿದೆ.

ವಿಶ್ವಾಸಾರ್ಹತೆಯಲ್ಲಿ ಯಾವುದೇ ರಾಜಿಗೂ ತಯಾರಿಲ್ಲ. ಭಾರತವನ್ನು ಮುನ್ನಡೆಸಿದ ರೀತಿಯಲ್ಲೇ ಭ್ರಷ್ಟಾಚಾರ ಮುಕ್ತ ಆಡಳಿತ ಬಿಸಿಸಿಐಯಲ್ಲಿ ಎಲ್ಲರಿಗೂ ಸಮಾನ ಎಂದು ಬಂಗಾಳ ಹುಲಿ ಆಗಿರುವ ದಾದಾ ಭರವಸೆ ನೀಡಿದರು.

ಬಿಸಿಸಿಐ ಅಧ್ಯಕ್ಷರಾದ ಬಳಿಕ ಧೋನಿ ಬಗ್ಗೆ ಗಂಗೂಲಿ ಆಡಿದ ಮೊದಲ ಮಾತೇನು?

47ರ ಹರೆಯದ ಗಂಗೂಲಿ ಬಿಸಿಸಿಐ 39ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅಂದ ಹಾಗೆ ಮುಂದಿನ ಒಂಬತ್ತು ತಿಂಗಳುಗಳ ಕಾಲ ಮಾತ್ರ ಅಧಿಕಾರದಲ್ಲಿರಲಿದ್ದಾರೆ. ಲೋಧಾ ಸಮಿತಿ ಶಿಫಾರಸಿನ ಪ್ರಕಾರ ನೂತನ ಕೂಲಿಂಗ್ ಆಫ್ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಆರು ವರ್ಷಗಳ ವರೆಗೆ ಅಧಿಕಾರ ಹೊಂದಬಹುದಾಗಿದೆ. ತದಾ ಬಳಿಕ ಮೂರು ವರ್ಷಗಳ ಕೂಲಿಂಗ್ ಆಫ್ ಅವಧಿಯನ್ನು ಪೂರೈಸಬೇಕಿದೆ. ಹಾಗಾಗಿ ಗಂಗೂಲಿ ಅಧಿಕಾರವಧಿ ಮುಂದಿನ ಜುಲೈವರೆಗೆ ಸೀಮಿತಗೊಳ್ಳಲಿದೆ.

ಇದೀಗ ಅಧಿಕೃತ; ಬಿಸಿಸಿಐಯಲ್ಲಿ ದಾದಾಗಿರಿ ಆರಂಭ; ನೂತನ ಅಧ್ಯಕ್ಷ ಪದವಿ ವಹಿಸಿದ ಸೌರವ್ ಗಂಗೂಲಿ!

ವಿರಾಟ್ ಕೊಹ್ಲಿ ಜತೆ ಮಾತುಕತೆ ಯಾವಾಗ?
ಈ ನಡುವೆ ಬಿಸಿಸಿಐ ಅಧ್ಯಕ್ಷರಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆ ನಾಳೆ (ಅಕ್ಟೋಬರ್ 24) ಮಾತುಕತೆ ನಡೆಸಲಿದ್ದೇನೆ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನ ಅತಿ ಮುಖ್ಯ ವ್ಯಕ್ತಿಯಾಗಿದ್ದಾರೆ. ನಾವು ಅವರ ಮಾತುಗಳನ್ನು ಆಲಿಸಲಿದ್ದೇವೆ. ಅಭಿಪ್ರಾಯ ಹಾಗೂ ಪರಸ್ಪರ ಗೌರವ ಇರಲಿದೆ ಎಂದು ದಾದಾ ಸೇರಿಸಿದರು.

ಭಾರತೀಯ ಕ್ರಿಕೆಟ್‌ಗಿನ್ನು ಒಳ್ಳೆಯ ಕಾಲ; ದಾದಾ ಬಿಸಿಸಿಐ ಬಾಸ್; ಟ್ವಿಟರ್‌ನಲ್ಲಿ ಸಂಭ್ರಮಾಚರಣೆ

ಅದೇ ಹೊತ್ತಿಗೆ ವಿರಾಟ್ ಕೊಹ್ಲಿಗೆ ಬೇಕಾದ ಎಲ್ಲ ರೀತಿಯ ಬೆಂಬಲವನ್ನು ನೀಡಲಾಗುವುದು ಎಂಬುದನ್ನು ಗಂಗೂಲಿ ಖಚಿತಪಡಿಸಿದರು.

ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೌರವ್ ಗಂಗೂಲಿ, ಬಿಸಿಸಿಐ ಘನತೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಲಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ಗೆ ಮೊದಲ ಆದ್ಯತೆ ನೀಡುವುದಾಗಿ ಘೋಷಿಸಿದ್ದರು. ಸ್ವಹಿತಾಸಕ್ತಿ ಸಂಘರ್ಷ ನಿಯಮ, ಮಹೇಂದ್ರ ಸಿಂಗ್ ಧೋನಿ ಭವಿಷ್ಯ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯಗಳ ಆಯೋಜನೆಯ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌