ಆ್ಯಪ್ನಗರ

ಇನಿಂಗ್ಸ್‌ ಆರಂಭದಲ್ಲೇ ವಿರಾಟ್‌ ಕೊಹ್ಲಿ ವಿಕೆಟ್ ಪಡೆಯುವ ರಣತಂತ್ರ ವಿವರಿಸಿದ ವಸೀಮ್ ಅಕ್ರಮ್!

ಕ್ರಿಕೆಟ್‌ ಜಗತ್ತು ಕಂಡ ಶ್ರೇಷ್ಟ ಬ್ಯಾಟ್ಸ್‌ಮನ್‌ಗಳ ಪೈಕಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಕೂಡ ಒಬ್ಬರು. ಅಂದಹಾಗೆ 2019ರ ನವೆಂಬರ್‌ ಬಳಿಕ ವಿರಾಟ್‌ ಕೊಹ್ಲಿ ತಮ್ಮ ಶ್ರೇಷ್ಠ ಲಯದಲ್ಲಿಲ್ಲ. ಈ ಸಂದರ್ಭದಲ್ಲಿ ಭಾರತ ತಂಡದೊಂದಿಗೆ ಇಂಗ್ಲೆಂಡ್‌ ಪ್ರವಾಸದಲ್ಲಿರುವ ವಿರಾಟ್‌ ಕೊಹ್ಲಿ ಆತಿಥೇಯರ ಎದುರು ಮಹತ್ವದ ಟೆಸ್ಟ್‌ ಪಂದ್ಯವನ್ನು ಆಡಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ವೇಗದ ಬೌಲರ್‌ ವಸೀಮ್‌ ಅಕ್ರಮ್‌, ಇನಿಂಗ್ಸ್‌ ಆರಂಭದಲ್ಲೇ ವಿರಾಟ್‌ ಕೊಹ್ಲಿ ವಿಕೆಟ್‌ ಪಡೆಯುವ ರಣತಂತ್ರ ವಿವರಿಸಿದ್ದಾರೆ.

Authored byವಿಜೇತ್ ಕುಮಾರ್ | Vijaya Karnataka Web 23 Jun 2022, 6:12 pm

ಹೈಲೈಟ್ಸ್‌:

  • ವಿರಾಟ್‌ ಕೊಹ್ಲಿ ವಿಕೆಟ್‌ ಪಡೆಯುವ ರಣತಂತ್ರ ವಿವರಿಸಿದ ವಸೀಮ್‌ ಅಕ್ರಮ್‌.
  • 2003ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬಳಿಕ ನಿವೃತ್ತಿ ಘೋಷಿಸಿದ್ದ ಪಾಕ್‌ ದಿಗ್ಗಜ.
  • ಏಕದಿನ ಕ್ರಿಕೆಟ್‌ನಲ್ಲೇ ದಾಖಲೆಯ 502 ವಿಕೆಟ್‌ಗಳನ್ನು ಪಡೆದಿರುವ ಎಡಗೈ ವೇಗಿ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Virat Kohli in England
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ (ಚಿತ್ರ: ಟಿಒಐ).
ಬೆಂಗಳೂರು: ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳ ಪೈಕಿ ಒಬ್ಬರಾದ ಪಾಕಿಸ್ತಾನ ತಂಡದ ಮಾಜಿ ನಾಯಕ ವಸೀಮ್‌ ಅಕ್ರಮ್‌, ತಮ್ಮ ವೃತ್ತಿಬದುಕಿನ ದಿನಗಳಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ಪಾಲಿನ ಸಿಂಹ ಸ್ವಪ್ನವಾಗಿದ್ದರು. ಕಿಂಗ್‌ ಆಫ್‌ ಸ್ವಿಂಗ್‌ ಖ್ಯಾತಿಯ ಎಡಗೈ ವೇಗದ ಬೌಲರ್‌, ಇತ್ತೀಚೆಗಷ್ಟೇ ಇಂಗ್ಲೆಂಡ್‌ನಲ್ಲಿ ನಡೆದ ಪ್ರದರ್ಶನ ಪಂದ್ಯವೊಂದರಲ್ಲಿ ಪಾಲ್ಗೊಂಡು ಇಂಗ್ಲೆಂಡ್‌ನ ಮಾಜಿ ದಿಗ್ಗಜ ಬ್ಯಾಟಟರ್‌ ಮೈಕಲ್‌ ಅಥರ್ಟನ್‌ ಅವರನ್ನು ಯಾರ್ಕರ್‌ ಮೂಲಕ ಕ್ಲೀನ್‌ ಬೌಲ್ಡ್‌ ಮಾಡಿದ್ದರು.
ಔಟ್‌ ಸ್ವಿಂಗ್‌, ಇನ್‌ಸ್ವಿಂಗ್ ಮತ್ತು ರಿವರ್ಸ್‌ ಸ್ವಿಂಗ್‌ ಎಸೆತಗಳ ಮಾಸ್ಟರ್‌ ಆಗಿರುವ ವಸೀಮ್‌ ಅಕ್ರಮ್‌, ಇದೀಗ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಅವರನ್ನು ಇನಿಂಗ್ಸ್‌ ಆರಂಭದಲ್ಲೇ ಔಟ್‌ ಮಾಡುವುದು ಹೇಗೆ? ಎಂಬ ರಣತಂತ್ರವನ್ನು ವಿವರಿಸಿದ್ದಾರೆ.

"ವಿರಾಟ್‌ ಕೊಹ್ಲಿ ಎದುರು ನಾನು ಆತ್ಮವಿಶ್ವಾಸದಲ್ಲಿ ಬೌಲಿಂಗ್‌ ಮಾಡುತ್ತಿದ್ದೆ. ಅವರೇನಾದರೂ 3ನೇ ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದಿದ್ದರೆ, ಅಂದರೆ ಆಗಲೇ 2 ವಿಕೆಟ್‌ಗಳ ಪತನವಾಗಿ ಅವರು ಕ್ರೀಸ್‌ಗೆ ಆಗಷ್ಟೇ ಕಾಲಿಟ್ಟಿದ್ದ ಸಂದರ್ಭದಲ್ಲಿ ನಾನು ದಾಳಿ ನಡೆಸುತ್ತಿದ್ದೆ. ಚೆಂಡನ್ನು ಮಧ್ಯದ ಸ್ಟಂಪ್‌ ನೇರದಲ್ಲಿ ಪಿಚ್‌ ಮಾಡಿ ಔಟ್‌ ಸ್ವಿಂಗ್‌ ಆಗುವಂತೆ ಮಾಡುತ್ತಿದ್ದೆ. ಅಥವಾ ಇನ್‌ಸ್ವಿಂಗ್‌ ಮಾಡುವ ಪ್ರಯತ್ನ ಮಾಡುತ್ತಿದ್ದೆ. ಈ ರಣತಂತ್ರ ಕೆಲಸ ಮಾಡದೇ ಇದ್ದರೆ, ನನ್ನ ಎರಡನೇ ಯೋಜನೆ ಬಳಕೆಗೆ ತರುತ್ತಿದ್ದೆ," ಎಂದು ಅಕ್ರಮ್‌ ಹೇಳಿದ್ದಾರೆ.

'ನಿಮ್ಮ ವೈಫಲ್ಯ ನಮಗೆ ನೋವು ತಂದಿದೆ' : ವಿರಾಟ್‌ ಕೊಹ್ಲಿಗೆ ಕಪಿಲ್‌ ದೇವ್‌ ವಿಶೇಷ ಸಂದೇಶ!

"ಪ್ಲಾನ್‌ 'ಬಿ' ಮೂಲಕ ನಾನು ಬೌನ್ಸರ್‌ಗಳ ಪ್ರಯೋಗ ಮಾಡುತ್ತಿದ್ದೆ. ಡೀಪ್‌ ಸ್ಕ್ವೇರ್‌ ಲೆಗ್‌ ಫೀಲ್ಡರ್‌ ನಿಲ್ಲಿಸಿ ಕೊಹ್ಲಿಯನ್ನು ಬ್ಯಾಕ್‌ ಫುಟ್‌ನಲ್ಲಿ ಆಡುವಂತೆ ಮಾಡುತ್ತಿದ್ದೆ. ಈ ರೀತಿಯ ಸಣ್ಣ ಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಂಡಾಗ ಮಾತ್ರ ಅವರ ಎದುರು ಪ್ರಾಬಲ್ಯ ಮೆರೆಯಲು ಸಾಧ್ಯವಾಗುತ್ತದೆ," ಎಂದು ಅಕ್ರಮ್ ವಿವರಿಸಿದ್ದಾರೆ.

90ರ ದಶಕದ ಅತ್ಯಂತ ಅಪಾಯಕಾರಿ ಬೌಲರ್‌ ವಸೀಮ್‌ ಅಕ್ರಮ್‌, ಟೆಸ್ಟ್‌ ಕ್ರಿಕೆಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅದೇ ವಿರಾಟ್‌ ಕೊಹ್ಲಿ, ಆಧುನಿಕ ಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್‌ ಆಗಿದ್ದು, ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದ್ದಾರೆ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿರಾಟ್‌ ಕೊಹ್ಲಿ ಈವರೆಗೆ 71 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆ ಮುರಿಯಬಲ್ಲ ನೆಚ್ಚಿನ ಬ್ಯಾಟರ್‌ ಎನಿಸಿದ್ದಾರೆ.

ಪಾಕಿಸ್ತಾನ ತಂಡ ದೀರ್ಘಕಾಲ ಆಡಿರುವ 56 ವರ್ಷದ ಮಾಜಿ ಕ್ರಿಕೆಟಿಗ ವಸೀಮ್‌ ಅಕ್ರಮ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಿದ 104 ಪಂದ್ಯಗಳಿಂದ 414 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಆಡಿದ 356 ಪಂದ್ಯಗಳಿಂದ ಬರೋಬ್ಬರಿ 502 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳುವುದು ಪಕ್ಕಾ ಎಂದ ಅಝರುದ್ದೀನ್‌!

ಟೀಮ್ ಇಂಡಿಯಾ ಈಗ ಇಂಗ್ಲೆಂಡ್‌ ಪ್ರವಾಸದಲ್ಲಿದೆ. ಲೈಸ್ಟರ್ಶೈರ್‌ ಎದುರು ಜೂನ್‌ 23ರಿಂದ 27ರವರೆಗೆ ಅಭ್ಯಾಸ ಪಂದ್ಯವನ್ನು ಆಡಲಿರುವ ರೋಹಿತ್‌ ಶರ್ಮಾ ಬಳಗ ಇಂಗ್ಲೆಂಡ್‌ ಎದುರು ಜುಲೈ 1ರಿಂದ 5ರವರೆಗೆ ನಡೆಯಲಿರುವ ಫೈನಲ್‌ ಟೆಸ್ಟ್‌ ಪಂದ್ಯದಲ್ಲಿ ಕಾದಾಡಲಿದೆ. ಕಳೆದ ವರ್ಷ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಿದ್ದ ಸಂದರ್ಭದಲ್ಲಿ ನಡೆದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 4 ಪಂದ್ಯಗಳ ಮುಕ್ತಾಯಕ್ಕೆ ಭಾರತ 2-1ರ ಪ್ರಾಬಲ್ಯ ಮೆರೆದಿತ್ತು. ಆದರೆ, 5ನೇ ಟೆಸ್ಟ್‌ ಆರಂಭಕ್ಕೂ ಮುನ್ನ ಭಾರತದ ಬಳಗದಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡ ಕಾರಣ ಪಂದ್ಯವನ್ನು ಮುಂದೂಡಲಾಗಿತ್ತು. ಈ ಪಂದ್ಯ ಈಗ ಜುಲೈನಲ್ಲಿ ನಡೆಯಲಿದೆ.

ಭಾರತ ಟೆಸ್ಟ್‌ ಕ್ರಿಕೆಟ್‌ ತಂಡ
ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಹನುಮ ವಿಹಾರಿ, ಶ್ರೇಯಸ್‌ ಅಯ್ಯರ್‌, ರವೀಂದ್ರ ಜಡೇಜಾ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಕೆ.ಎಸ್‌ ಭರತ್‌ (ವಿಕೆಟ್‌ಕೀಪರ್‌), ಶಾರ್ದುಲ್ ಠಾಕೂರ್‌, ಆರ್‌ ಅಶ್ವಿನ್‌, ಮೊಹಮ್ಮದ್‌ ಶಮಿ, ಮೊಹ್ಮದ್‌ ಸಿರಾಜ್‌, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಪ್ರಸಿಧ್‌ ಕೃಷ್ಣ.
ಕಾಯ್ದಿರಿಸಲ್ಪಟ್ಟ ಆಟಗಾರ: ಮಯಾಂಕ್ ಅಗರ್ವಾಲ್.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌