ಆ್ಯಪ್ನಗರ

ಗಬ್ಬಾ ಟೆಸ್ಟ್‌ನಿಂದಲೂ ಜಡೇಜಾ ಔಟ್, ರಿಷಭ್ ಪಂತ್‌ ಚೇತರಿಕೆ!

ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್‌ ಹಿನ್ನಡೆ ಅನುಭವಿಸಿದರ ಹೊರತಾಗಿ ಸ್ಟಾರ್‌ ಆಟಗಾರರ ಗಾಯದ ಸಮಸ್ಯೆಗಳಿಂದ ಮರ್ಮಾಘಾತಕ್ಕೀಡಾಗಿದೆ. ಆಲ್‌ರೌಂಡರ್‌ ರವೀಂದ್ರ ಜಡೇಜಾ ಹೆಬ್ಬೆರಳಿನ ಗಾಯದ ಸಮಸ್ಯೆ ಕಾರಣ ಸರಣಿಯಿಂದಲೇ ಹೊರ ಬಿದಿದ್ದಾರೆ.

Vijaya Karnataka Web 10 Jan 2021, 8:11 am

ಹೈಲೈಟ್ಸ್‌:

  • ಭಾರತ ತಂಡಕ್ಕೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸತತ ಗಾಯದ ಸಮಸ್ಯೆ.
  • ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರಿಗೆ ಗಾಯ.
  • ಹೆಬ್ಬೆರಳಿನ ಗಾಯಕ್ಕೆ ತುತ್ತಾದ ರವೀಂದ್ರ ಜಡೇಜಾ ಸರಣಿಯಿಂದಲೇ ಔಟ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Jadeja and pant in sydney test 2021
ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಗಾಯಗೊಂಡ ಕ್ಷಣ (ಚಿತ್ರ: ಬಿಸಿಸಿಐ/ಟಿಒಐ).
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಸತತ ಗಾಯದ ಸಮಸ್ಯೆಗಳಿಂದ ಕಂಗಾಲಾಗಿದೆ. ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಹೆಬ್ಬೆರಳು ಗಾಯ ಮಾಡಿಕೊಂಡಿದ್ದು, ಇದೀಗ ಸರಣಿಯಿಂದಲೇ ನಿರ್ಗಮಿಸಿದ್ದಾರೆ.
ಅಂದಹಾಗೆ ಈ ನಡುವೆ ಶುಭಸುದ್ದಿಯೊಂದು ಹೊರಬಿದ್ದಿದ್ದು, ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡುವಾಗ ಮೊಣಕೈಗೆ ಗಾಯ ಮಾಡಿಕೊಂಡಿದ್ದ ರಿಷಭ್ ಪಂತ್‌ ಚೇತರಿಸಿದ್ದು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಲು ಲಭ್ಯವಾಗಲಿದ್ದಾರೆ. ಪಂತ್‌ ಆಸೀಸ್‌ನ ವೇಗಿ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಪುಲ್‌ ಶಾಟ್‌ ಹೊಡೆಯುವ ಪ್ರಯತ್ನದಲ್ಲಿ ಮೊಣಕೈಗೆ ಪೆಟ್ಟು ತಿಂದಿದ್ದರು. ಇದೇ ಕಾರಣ ಭಾರತ ತಂಡದ 2ನೇ ಇನಿಂಗ್ಸ್‌ ಫೀಲ್ಡಿಂಗ್‌ ವೇಳೆ ಕೀಪಿಂಗ್‌ಗೆ ಇಳಿದಿರಲಿಲ್ಲ. ಅವರ ಸ್ಥಾನದಲ್ಲಿ ವೃದ್ಧಿಮಾನ್ ಸಹಾ ಕೀಪಿಂಗ್ ಮಾಡಿದ್ದರು.

"ರವೀಂದ್ರ ಜಡೇಜಾ ಅವರ ಎಡಗೈನ ಹೆಬ್ಬೆರಳಿನ ಮೂಳೆ ಸರಿದುಕೊಂಡಿದೆ. ಹೀಗಾಗಿ ಬ್ಯಾಟಿಂಗ್‌ ಮಾಡಲು ಗ್ಲೌ ತೊಡಲು ಅವರಿಂದ ಸಾಧ್ಯವಾಗುವುದಿಲ್ಲ. ಈ ಮೂಲಕ ಕನಿಷ್ಠ ಎಂದರೂ 3-4 ವಾರಗಳ ಕಾಲ ವಿಶ್ರಾಂತಿ ಅವರಿಗೆ ಬೇಕಿದ್ದು, ಜನವರಿ 15ರಂದು ಗಬ್ಬಾದಲ್ಲಿ ಆರಂಭವಾಗಲಿರುವ 4ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಪಂತ್‌ ಅವರ ಗಾಯದ ಸಮಸ್ಯೆ ಗಂಭೀರವಾಗಿಲ್ಲ. ಹೀಗಾಗಿ ಸಿಡ್ನಿ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಲಿದ್ದಾರೆ," ಎಂದು ಬಿಸಿಸಿಐನ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಸಿಡ್ನಿ ಟೆಸ್ಟ್‌ ಪಂದ್ಯದ ಸ್ಕೋರ್‌ ಕಾರ್ಡ್‌

ಸಿಡ್ನಿ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡುವಾಗ ಪ್ಯಾಟ್‌ ಕಮಿನ್ಸ್‌ ಎಸೆದ ಬೌನ್ಸರ್‌ನಲ್ಲಿ ರಿಷಭ್ ಪಂತ್‌ ಮೊಣಕೈಗೆ ಪೆಟ್ಟು ತಿಂದು ನರಳಾಡಿದರು. "ಬ್ಯಾಟಿಂಗ್‌ ವೇಳೆ ಪಂತ್‌ ಅವರ ಎಡ ಮೊಣಕೈಗೆ ಪೆಟ್ಟು ಬಿದ್ದಿದೆ. ಅವರನ್ನು ಹೆಚ್ಚುವರಿ ತಪಾಸಣೆ ಸಲುವಾಗಿ ಸ್ಕ್ಯಾನಿಂಗ್‌ಗೆ ಕಳುಹಿಸಲಾಗಿದೆ," ಎಂದು ಬಿಸಿಸಿಐ ಟ್ವೀಟ್‌ ಮೂಲಕ ಮಾಹಿತಿ ನೀಡಿತ್ತು.

67 ಎಸೆತಗಳಲ್ಲಿ 36 ರನ್‌ಗಳಿಸಿ ಉತ್ತಮವಾಗಿ ಬ್ಯಾಟ್‌ ಮಾಡುತ್ತಿದ್ದ ಪಂತ್‌, ವೇಗಿ ಕಮಿನ್ಸ್‌ ನೀಡಿದ ಬೌನ್ಸರ್‌ ಪೆಟ್ಟಿನಿಂದ ವಿಚಲಿತರಾಗಿ ಅಂತಿಮವಾಗಿ ಜಾಶ್‌ ಹೇಝಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿದರು.

ಇದಾದ ಬಳಿಕ ಅಜೇಯ 28 ರನ್‌ಗಳಿಸಿ ಭಾರತ ತಂಡದ ಮೊಯತ್ತವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಮುಖ್ಯ ಪಾತ್ರ ವಹಿಸಿದ ರವೀಂದ್ರ ಜಡೇಜಾ ಅವರ ಎಡಗೈನ ಹೆಬ್ಬೆರಳಿಗೆ ಚೆಂಡು ಬಡಿದಿತ್ತು. ಇದು ಅವರ ಬೌಲಿಂಗ್‌ ಮಾಡುವ ಕೈ ಆದ್ದರಿಂದ ಚೆಂಡನ್ನು ಹಿಡಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗ ಭಾರತ ತಂಡ ಪ್ರಮುಖ ಸ್ಪಿನ್ನರ್‌ನ ಸೇವೆ ಕಳೆದುಕೊಳ್ಳುವಂತ್ತಾಗಿದೆ. ಜಡೇಜಾ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದ್ದರು. ಜೊತೆಗೆ ಅದ್ಭುತ ಕ್ಷೇತ್ರರಕ್ಷಣೆ ಮೂಲಕ ಸ್ಟೀವ್‌ ಸ್ಮಿತ್‌ ಅವರನ್ನು ರನ್‌ ಔಟ್‌ ಮಾಡಿ ಮಿಂಚಿದ್ದರು.

'ಪೂಜಾರ ಬ್ಯಾಟ್ ಮಾಡಲು ಹೆದರುತ್ತಾರೆ', ಟೀಕಾಸ್ತ್ರ ಪ್ರಯೋಗಿಸಿದ ಬಾರ್ಡರ್!

ಈ ಬಾರಿ ಆಸೀಸ್‌ ಪ್ರವಾಸದಲ್ಲಿ ಟೀಮ್‌ ಇಂಡಿಯಾ ಸತತ ಗಾಯದ ಸಮಸ್ಯೆಗಳಿಂದ ಜರ್ಜರಿತವಾಗಿದೆ. ಮೊದಲಿಗೆ ಸರಣಿ ಆರಂಭಕ್ಕೂ ಮುನ್ನ ಇಶಾಂತ್‌ ಶರ್ಮಾ ಸೇವೆ ಇಲ್ಲವಾದರೆ, ನಂತರ ಮೊದಲ ಟೆಸ್ಟ್‌ನಲ್ಲಿ ಮೊಹಮ್ಮದ್‌ ಶಮಿ, ಎರಡನೇ ಟೆಸ್ಟ್‌ನಲ್ಲಿ ಉಮೇಶ್‌ ಯಾದವ್‌, ಅಭ್ಯಾಸ ಬೇಳೆ ಕೆಎಲ್‌ ರಾಹುಲ್ ಗಾಯಗೊಂಡು ಸರಣಿಯಿಂದ ಹೊರನಡೆದರು. ವಿರಾಟ್‌ ಕೊಹ್ಲಿ ಪೆಟರ್ನಿಟಿ ರಜೆ ತೆಗೆದುಕೊಂಡು ಸರಣಿಯಿಂದ ಹೊರಗುಳಿದಿದ್ದಾರೆ.

ಸಿಡ್ನಿ ಟೆಸ್ಟ್‌ನ ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 55 ಓವರ್‌ಗಳಲ್ಲಿ 2 ವಿಕೆಟ್‌ಗೆ 166 (ವಿಲ್‌ ಪುಕೋವ್‌ಸ್ಕಿ 62, ಡೇವಿಡ್‌ ವಾರ್ನರ್ 5, ಮಾರ್ನಸ್‌ ಲಾಬುಶೇನ್ 91, ಸ್ಟೀವ್ ಸ್ಮಿತ್‌ 131, ಮಿಚೆಲ್ ಸ್ಟಾರ್ಕ್ 24; ರವೀಂದ್ರ ಜಡೇಜಾ 62ಕ್ಕೆ 4, ಮೊಹಮ್ಮದ್‌ ಸಿರಾಜ್ 67ಕ್ಕೆ 1, ನವದೀಪ್‌ ಸೈನಿ 65ಕ್ಕೆ 2, ಜಸ್‌ಪ್ರೀತ್ ಬುಮ್ರಾ 66ಕ್ಕೆ 2).
ಭಾರತ: ಪ್ರಥಮ ಇನಿಂಗ್ಸ್‌ 100.4 ಓವರ್‌ಗಳಲ್ಲಿ 244/10 (ರೋಹಿತ್ ಶರ್ಮಾ 26, ಶುಭಮನ್ ಗಿಲ್ 50, ಚೇತೇಶ್ವರ್ ಪೂಜಾರ 50, ಅಜಿಂಕ್ಯ ರಹಾನೆ 22, ರಿಷಭ್ ಪಂತ್ 36, ರವೀಂದ್ರ ಜಡೇಜಾ 28*; ಜಾಶ್ ಹೇಝಲ್‌ವುಡ್‌ 43ಕ್ಕೆ 2, ಪ್ಯಾಟ್‌ ಕಮಿನ್ಸ್‌ 29ಕ್ಕೆ 4, ಮಿಚೆಲ್‌ ಸ್ಟಾರ್ಕ್ 61ಕ್ಕೆ 1).
ಆಸ್ಟ್ರೇಲಿಯಾ: 2ನೇ ಇನಿಂಗ್ಸ್‌ 64 ಓವರ್‌ಗಳಲ್ಲಿ 4 ವಿಕೆಟ್‌ಗೆ 182 (ಮಾರ್ನಸ್‌ ಲಾಬುಶೇನ್ 73, ಸ್ಟೀವ್ ಸ್ಮಿತ್‌ 58*, ಕ್ಯಾಮರೂನ್ ಗ್ರೀನ್ 20*; ನವದೀಪ್‌ ಸೈನಿ 47ಕ್ಕೆ 2).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌