ಆ್ಯಪ್ನಗರ

ಫೈನಲ್‌ ಟೆಸ್ಟ್‌ನಲ್ಲಿ ರೋಹಿತ್‌ ಆಡುವ ಸಾಧ್ಯತೆ ಇನ್ನೂ ಇದೆ: ಕೋಚ್‌ ರಾಹುಲ್ ದ್ರಾವಿಡ್‌!

India vs England 5th Test: ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಬಾಕಿ ಉಳಿದಿರುವ ಐದನೇ ಹಾಗೂ ಅಂತಿಮ ಪಂದ್ಯ ಸಲುವಾಗಿ ಆಂಗ್ಲರ ನಾಡಿಗೆ ತೆರಳಿರುವ ಟೀಮ್ ಇಂಡಿಯಾ, ಐತಿಹಾಸಿಕ ಸರಣಿ ಗೆಲುವಿನ ಮಹದಾಸೆಯೊಂದಿಗೆ ಜುಲೈ 1-5ರವರೆಗೆ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಅಂದಹಾಗೆ ಕೋವಿಡ್‌-19 ಕಾರಣ ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಆಡುವುದು ಬಹುತೇಕ ಅನುಮಾನವಾಗಿದೆ. ಆದರೆ, ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

Authored byವಿಜೇತ್ ಕುಮಾರ್ | Vijaya Karnataka Web 29 Jun 2022, 11:53 pm

ಹೈಲೈಟ್ಸ್‌:

  • ಭಾರತ ಮತ್ತು ಇಂಗ್ಲೆಂಡ್‌ ನಡುವಣ ಟೆಸ್ಟ್‌ ಕ್ರಿಕೆಟ್‌ ಸರಣಿಯ 5ನೇ ಹಾಗೂ ನಿರ್ಣಾಯಕ ಪಂದ್ಯ.
  • ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಜುಲೈ 1ರಿಂದ 5ರವರೆಗೆ ಮಹತ್ವದ ಪಂದ್ಯ ಜರುಗಲಿದೆ.
  • ರೋಹಿತ್‌ ಶರ್ಮಾ ಅಲಭ್ಯತೆ ಬಗ್ಗೆ ಮಾಹಿತಿ ನೀಡಿದ ಕೋಚ್‌ ರಾಹುಲ್ ದ್ರಾವಿಡ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Rahul Dravid and Rohit Sharma
ರಾಹುಲ್‌ ದ್ರಾವಿಡ್‌ ಮತ್ತು ರೋಹಿತ್‌ ಶರ್ಮಾ (ಚಿತ್ರ: ಟಿಒಐ).
ಲಂಡನ್‌: ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಲಭ್ಯತೆ ಈವರೆಗೆ ಖಾತ್ರಿಯಾಗಿಲ್ಲ. ಈ ಮಧ್ಯ ಪಂದ್ಯಕ್ಕೆ ಬ್ಯಾಕಪ್‌ ಕ್ಯಾಪ್ಟನ್‌ ಆಗಿ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಜವಾಬ್ದಾರಿ ಹೊರಿಸುವ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ಹಂಚಿಕೊಂಡಿವೆ ಎಂದು ವರದಿಯಾಗಿದೆ. ಆದರೆ, ಅಂತಿಮ ಟೆಸ್ಟ್‌ ಪಂದ್ಯದಿಂದ ರೋಹಿತ್‌ ಇನ್ನೂ ಸಂಪೂರ್ಣವಾಗಿ ಹೊರಬಿದ್ದಿಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬುಧವಾರ ಮತ್ತು ಗುರುವಾರ ಸತತ ಆರ್‌ಟಿ-ಪಿಸಿಆರ್‌ ಟೆಸ್ಟ್‌ ನಡೆಸಲಾಗುವುದು. ಇದರ ವರದಿ ಬಂದ ಬಳಿಕವಷ್ಟೇ ರೋಹಿತ್‌ ಲಭ್ಯತೆ-ಅಲಭ್ಯತೆ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಟೀಮ್ ಇಂಡಿಯಾ ಕೋಚ್‌ ಹೇಳಿದ್ದಾರೆ.
ಜೂನ್‌ 23ರಿಂದ 26ರವರೆಗೆ ನಡೆದ ಲೈಸ್ಟರ್‌ಶೈರ್‌ ವಿರುದ್ಧದ ಅಭ್ಯಾಸ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿದ್ದ ರೋಹಿತ್‌ ಶರ್ಮಾ, ಎರಡನೇ ಇನಿಂಗ್ಸ್‌ನಲ್ಲಿ ಕಣಕ್ಕಿಳಿಯಲಿಲ್ಲ. ಅವರ ಕೋವಿಡ್‌ ರಾಪಿಡ್‌ (ಆರ್‌ಎಟಿ) ಟೆಸ್ಟ್‌ನಲ್ಲಿ ಪಾಸಿಟೀವ್‌ ಫಲಿತಾಂಶ ಬಂದಿತ್ತು. ಈ ಕಾರಣಕ್ಕೆ ಅವರನ್ನು ಹೋಟೆಲ್‌ನಲ್ಲಿ ಐಸೊಲೇಷನ್‌ನಲ್ಲಿ ಇರಿಸಲಾಯಿತು.

ಇತ್ತೀಚಿನ ವರದಿಗಳ ಪ್ರಕಾರ ರೋಹಿತ್‌ ಅವರ ಮತ್ತೊಂದು ಟೆಸ್ಟ್‌ನಲ್ಲಿ ಪಾಸಿಟೀವ್‌ ಬಂದಿದ್ದು, ಟೆಸ್ಟ್‌ ಪಂದ್ಯದಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಆದರೆ, ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಮುಖ್ಯ ಕೋಚ್‌ ಇನ್ನು ಎರಡು ಬಾರಿ ರೋಹಿತ್‌ ಅವರನ್ನು ಕೋವಿಡ್‌ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದರ ಫಲಿತಾಂಶ ಬಂದ ಬಳಿಕ ಅವರ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ. ಸದ್ಯಕ್ಕೆ ಅವರು ಇನ್ನೂ ಸಂಪೂರ್ಣವಾಗಿ ಹೊರಬಿದ್ದಿಲ್ಲ ಎಂದಿದ್ದಾರೆ.

ಇಂಗ್ಲೆಂಡ್‌ ವಿರುದ್ಧ 5ನೇ ಟೆಸ್ಟ್‌ನಿಂದ ರೋಹಿತ್‌ ಶರ್ಮಾ ಔಟ್‌!: ಜಸ್‌ಪ್ರಿತ್ ಬುಮ್ರಾ ನಾಯಕ?

"ರೋಹಿತ್‌ ಶರ್ಮಾ ಇನ್ನು ಸಂಪೂರ್ಣವಾಗಿ ಹೊರಗುಳಿದಿಲ್ಲ. ಪಂದ್ಯ ಆರಂಭಕ್ಕೆ ಇನ್ನು 36 ಗಂಟೆಗಳು ಬಾಕಿ ಇದೆ. ಅಷ್ಟರಲ್ಲಿ ಎರಡು ಬಾರಿ ಕೋವಿಡ್‌-19 ಪತ್ತೆ ಪರೀಕ್ಷೆಗೆ ಒಳಪಡಲಿದ್ದಾರೆ. ನಮ್ಮ ವೈದ್ಯಕೀಯ ತಂಡ ಅವರ ಆರೋಗ್ಯದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪಂದ್ಯ ಆಡಬೇಕಾದರೆ ಅವರ ವರದಿಯಲ್ಲಿ ನೆಗೆಟೀವ್‌ ಫಲಿತಾಂಶ ಬರಬೇಕು. ಇನ್ನು ಎರಡು ದಿನ ಬಾಕಿ ಇದೆ. ಕಾದು ನೋಡಬೇಕಷ್ಟೆ," ಎಂದು ಸುದ್ದಿಗೋಷ್ಠಿಯಲ್ಲಿ ದ್ರಾವಿಡ್‌ ಹೇಳಿದ್ದಾರೆ.

ಇದೇ ವೇಳೆ ರೋಹಿತ್‌ ಅನುಪಸ್ಥಿತಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ನಾಯಕತ್ವ ವಹಿಸಿಕೊಳ್ಳಲಿರುವ ಬಗ್ಗೆ ದ್ರಾವಿಡ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. "ಬುಮ್ರಾ ಕ್ಯಾಪ್ಟನ್‌ ಆಗುತ್ತಾರೆ ಎಂದು ನಾನು ಈಗಲೇ ಹೇಳುವುದು ಸರಿಯಲ್ಲ. ಈ ಸಲುವಾಗಿ ಬಿಸಿಸಿಐನ ಅಧಿಕೃತ ಹೇಳಿಕೆಗಾಗಿ ನೀವು ಕಾಯಬೇಕಾಗುತ್ತದೆ," ಎಂದು ದ್ರಾವಿಡ್‌ ಹೇಳಿದ್ದಾರೆ. ಒಂದು ವೇಳೆ ಬುಮ್ರಾ ಕ್ಯಾಪ್ಟನ್‌ ಆದರೆ, ಮಾಜಿ ನಾಯಕ ಕಪಿಲ್‌ ದೇವ್‌ ಬಳಿಕ ಭಾರತ ತಂಡವನ್ನು ಮುನ್ನಡೆಸಿದ ಮೊದಲ ವೇಗದ ಬೌಲರ್‌ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲಿದ್ದಾರೆ.

ಭಾರತ ಟೆಸ್ಟ್ ತಂಡದ ಯಾವುದೇ ಕ್ರಮಾಂಕದಲ್ಲಿ ಆಡಲು ಸಿದ್ದ ಎಂದ ಹನುಮ ವಿಹಾರಿ!

ಐದನೇ ಟೆಸ್ಟ್‌ಗೆ ಭಾರತ ತಂಡ ಹೀಗಿದೆ
ರೋಹಿತ್‌ ಶರ್ಮಾ (ನಾಯಕ), ಜಸ್‌ಪ್ರೀತ್‌ ಬುಮ್ರಾ (ಉಪನಾಯಕ), ಶುಭಮನ್‌ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ಚೇತೇಶ್ವರ್‌ ಪೂಜಾರ, ರವೀಂದ್ರ ಜಡೇಜಾ, ಆರ್‌ ಅಶ್ವಿನ್‌, ರಿಷಭ್ ಪಂತ್‌ (ವಿಕೆಟ್‌ಕೀಪರ್), ಶ್ರೀಕರ್‌ ಭರತ್‌ (ವಿಕೆಟ್‌ಕೀಪರ್), ಶಾರ್ದುಲ್‌ ಠಾಕೂರ್‌, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಪ್ರಸಿಧ್ ಕೃಷ್ಣ, ಮೊಹಮ್ಮದ್‌ ಸಿರಾಜ್.
ಬ್ಯಾಕಪ್‌ ಓಪನರ್‌: ಮಯಾಂಕ್ ಅಗರ್ವಾಲ್‌
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌