ಆ್ಯಪ್ನಗರ

IND vs NZ: 'ಟೀಮ್ ಇಂಡಿಯಾದ ಜಾದುಗಾರ', ಸ್ಟಾರ್‌ ಆಟಗಾರನ ಗುಣಗಾನ ಮಾಡಿದ ರೋಹಿತ್‌ ಶರ್ಮಾ!

India vs New Zealand ODI Series 2023: ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಕ್ಲೀನ್‌ ಸ್ವೀಪ್‌ ಸಾಧನೆ ಮೆರೆದಿದೆ. ಸರಣಿಯ ಮೂರೂ ಪಂದ್ಯಗಳಲ್ಲಿ ಅಧಿಕಾರಯುತ ಆಟವಾಡಿದ ಭಾರತ ತಂಡದ ಕಿವೀಸ್‌ ಪಡೆಯ ಸವಾಲನ್ನು ಸುಲಭವಾಗಿ ಮೆಟ್ಟಿನಿಂತಿತು. ಇಂದೋರ್‌ನ ಹೋಲ್ಕರ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 90 ರನ್‌ಗಳ ಜಯ ದಾಖಲಿ ಅಬ್ಬರಿಸಿದ ಭಾರತ ತಂಡ, 2023ರಲ್ಲಿ ಸತತ ಎರಡು ಏಕದಿನ ಕ್ರಿಕೆಟ್‌ ಸರಣಿಗಳನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.

Authored byವಿಜೇತ್ ಕುಮಾರ್ | Vijaya Karnataka Web 25 Jan 2023, 12:21 am

ಹೈಲೈಟ್ಸ್‌:

  • ನ್ಯೂಜಿಲೆಂಡ್‌ ವಿರುದ್ಧ ನಡೆದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಕ್ಲೀನ್ ಸ್ವೀಪ್‌ ಮಾಡಿದ ಭಾರತ ತಂಡ.
  • ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ 90 ರನ್‌ಗಳ ಜಯ ದಾಖಲಿಸಿತ್ತು.
  • ಕೊನೇ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದು ಮಿಂಚಿದ ಶಾರ್ದುಲ್ ಠಾಕೂರ್‌ ಪಂದ್ಯ ಶ್ರೇಷ್ಠ ಗೌರವ ಪಡೆದರು.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Shardul Thakur in IND vs NZ 3rd ODI
ಟೀಮ್ ಇಂಡಿಯಾ ಆಲ್‌ರೌಂಡರ್‌ ಶಾರ್ದುಲ್‌ ಠಾಕೂರ್‌ (ಚಿತ್ರ: ಟಿಒಐ).
ಬೆಂಗಳೂರು: ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 90 ರನ್‌ಗಳ ಭರ್ಜರಿ ಜಯ ದಾಖಲಿಸಿದ ಟೀಮ್ ಇಂಡಿಯಾ, 3-0 ಅಂತರದ ಕ್ಲೀನ್‌ ಸ್ವೀಪ್‌ ಸಾಧನೆ ಮೆರೆದಿದೆ. ಇದು ಏಕದಿನ ಕ್ರಿಕೆಟ್‌ ನಲ್ಲಿ ಟೀಮ್ ಇಂಡಿಯಾ ಗೆದ್ದ ಸತತ 7ನೇ ಪಂದ್ಯವಾಗಿದೆ. ಇದೇ ವರ್ಷ ಸತತ ಎರಡು ಸರಣಿಗಳಲ್ಲಿ ಕ್ಲೀನ್ ಸ್ವೀಪ್‌ ಸಾಧನೆ ಮೆರೆದಿದೆ.
ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಜನವರಿ 24ರಂದು (ಮಂಗಳವಾರ) ನಡೆದ ಪಂದ್ಯದಲ್ಲಿ ಭಾರತ ತಂಡದ ಪರ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಮತ್ತು ಯುವ ಓಪನರ್‌ ಶುಭಮನ್ ಗಿಲ್‌ (112) ಶತಕ ಬಾರಿಸಿ ಅಬ್ಬರಿಸಿದರೂ, ಆಲ್‌ರೌಂಡರ್‌ ಶಾರ್ದುಲ್‌ ಠಾಕೂರ್‌ ಪಂದ್ಯ ಶ್ರೇಷ್ಠ ಗೌರವ ಪಡೆದರು. ಮೊದಲಿಗೆ ಬ್ಯಾಟಿಂಗ್‌ನಲ್ಲಿ 17 ಎಸೆತಗಳಲ್ಲಿ 25 ರನ್‌ಗಳ ಅಮೂಲ್ಯ ಕೊಡುಗೆ ಕೊಟ್ಟ ಶಾರ್ದುಲ್‌, ಬಳಿಕ ಬೌಲಿಂಗ್‌ನಲ್ಲಿ 45ಕ್ಕೆ 3 ವಿಕೆಟ್‌ ಪಡೆದರು. ಅದರಲ್ಲೂ ನ್ಯೂಜಿಲೆಂಡ್‌ ತಂಡದ ಪ್ರಮುಖ ಬ್ಯಾಟರ್‌ಗಳಾದ ಡ್ಯಾರಿಲ್‌ ಮಿಚೆಲ್‌, ಟಾಮ್‌ ಲೇಥಮ್ ಮತ್ತು ಗ್ಲೆನ್‌ ಫಿಲಿಪ್‌ ಅವರನ್ನು ಔಟ್‌ ಮಾಡಿ ನಿರ್ಣಾಯಕ ಪಾತ್ರ ವಹಿಸಿದರು. ಪರಿಣಾಮ 386 ರನ್‌ಗಳ ಗುರಿ ಬೆನ್ನತತ್ತಿದ್ದ ನ್ಯೂಜಿಲೆಂಡ್‌ ತಂಡ 295 ರನ್‌ಗಳಿಗೆ ಆಲ್‌ಔಟ್ ಆಯಿತು.

IND vs NZ: ನ್ಯೂಜಿಲೆಂಡ್‌ನ ಬಗ್ಗುಬಡಿದು ಒಡಿಐನಲ್ಲಿ ನಂ.1 ಪಟ್ಟ ಪಡೆದ ಟೀಮ್ ಇಂಡಿಯಾ!
ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಆಲ್‌ರೌಂಡರ್‌ ಶಾರ್ದುಲ್‌ ಠಾಕೂರ್‌ ಅವರ ಸಾಮರ್ಥ್ಯವನ್ನು ಗುಣಗಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಭಾರತ ತಂಡದಲ್ಲಿ ಶಾರ್ದುಲ್‌ನ ಜಾದುರಾಗ ಎಂದೇ ಕರೆಯಲಾಗುತ್ತದೆ ಎಂದಿದ್ದಾರೆ.

"ಕಾನ್ವೇ ಮತ್ತು ನಿಕೋಲ್ಸ್‌ ಅದ್ಭುತವಾಗಿ ಆಡುತ್ತಿದ್ದರು. ಆದರೆ, ಆಗ ಅಗತ್ಯವಿದ್ದ ವಿಕೆಟ್‌ ತಂದುಕೊಡುವಲ್ಲಿ ಶಾರ್ದುಲ್‌ ಠಾಕೂರ್‌ ಯಶಸ್ವಿಯಾದರು. ಪಂದ್ಯದ ದಿಕ್ಕನ್ನೇ ಬದಲಾಯಿದ ಸಂಗತಿಯದು. ಅಂದಹಾಗೆ ಟೀಮ್ ಇಂಡಿಯಾದಲ್ಲಿ ಶಾರ್ದುಲ್‌ನ ಜಾದುಗಾರ ಎಂದೇ ಕರೆಯುತ್ತೇವೆ. ಇಂದು ಅಂಥದ್ದೇ ಜಾದು ಪ್ರದರ್ಶಿಸಿದ್ದಾರೆ," ಎಂದು ರೋಹಿತ್ ಹೇಳಿದ್ದಾರೆ.

IND vs NZ: ಕಿವೀಸ್‌ ಎದುರು ಶತಕ ಬಾರಿಸಿ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಶುಭಮನ್ ಗಿಲ್‌!
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ತಂಡವಾಗಿರುವ ಟೀಮ್ ಇಂಡಿಯಾ, ಈಗ ಕಿವೀಸ್‌ ವಿರುದ್ಧದ ಒಡಿಐ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್‌ ಮಾಡುವ ಮೂಲಕ ಏಕದಿನ ಕ್ರಿಕೆಟ್‌ ಶ್ರೇಯಾಂಕ ಪಟ್ಟಿಯಲ್ಲೂ ಅಗ್ರ ಸ್ಥಾನ ಪಡೆದುಕೊಂಡಿದೆ. ಅಂದಹಾಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡ ವಿಶ್ವದ 2ನೇ ಶ್ರೇಯಾಂಕಿತ ತಂಡವಾಗಿದೆ.

IND vs NZ ನಡುವಣ 3ನೇ ಪಂದ್ಯದ ಸಂಕ್ಷಿಪ್ತ ಸ್ಕೋರ್‌:
ಭಾರತ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 385 ರನ್‌ (ಶುಭಮನ್‌ ಗಿಲ್‌ 112, ರೋಹಿತ್‌ ಶರ್ಮಾ 101, ಹಾರ್ದಿಕ್‌ ಪಾಂಡ್ಯ 54; ಬ್ಲೇರ್ ಟಿಕ್ನರ್‌ 76ಕ್ಕೆ 3, ಜಾಕೊಬ್‌ ಡಫಿ 100ಕ್ಕೆ 3).
ನ್ಯೂಜಿಲೆಂಡ್‌: 41.2 ಓವರ್‌ಗಳಲ್ಲಿ 295 ರನ್‌ಗಳಿಗೆ ಆಲ್‌ಔಟ್‌ (ಡೆವೋನ್‌ ಕಾನ್ವೇ 138, ಹೆನ್ರಿ ನಿಕೋಲ್ಸ್‌ 42, ಡ್ಯಾರಿಲ್‌ ಮಿಚೆಲ್‌ 24, ಮೈಕಲ್‌ ಬ್ರೇಸ್‌ವೆಲ್‌ 26, ಮಿಚೆಲ್‌ ಸ್ಯಾಂಟ್ನರ್‌ 34, ಶಾರ್ದುಲ್‌ ಠಾಕೂರ್‌ 45ಕ್ಕೆ 3, ಕುಲ್ದೀಪ್‌ ಯಾದವ್‌ 62ಕ್ಕೆ 3, ಯುಜ್ವೇಂದ್ರ ಚಹಲ್ 43ಕ್ಕೆ 2).
ಪಂದ್ಯ ಶ್ರೇಷ್ಠ: ಶಾರ್ದುಲ್‌ ಠಾಕೂರ್‌ (3 ವಿಕೆಟ್‌)

IND vs NZ: 'ರೋಹಿತ್‌-ಗಿಲ್ ಅಬ್ಬರ'-ಒಡಿಐನಲ್ಲಿ ಭಾರತದ ಟಾಪ್ 10 ಆರಂಭಿಕ ಜೊತೆಯಾಟಗಳು!
ಮೂರು ಪಂದ್ಯಗಳ ಟಿ20 ಸರಣಿಭಾರತ ತಂಡ ಈಗ ನ್ಯೂಜಿಲೆಂಡ್‌ ಎದುರು 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಜ.27ರಂದು ನಡೆಯಲಿದೆ. ಈ ಸರಣಿಯಲ್ಲಿ ಭಾರತ ತಂಡವನ್ನು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮುನ್ನಡೆಸಲಿದ್ದಾರೆ.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌