ಆ್ಯಪ್ನಗರ

ಅನಗತ್ಯ ಕಾರಣ ಕೊಟ್ಟ ಡೀನ್‌ ಎಲ್ಗರ್‌ಗೆ ಬಿಸಿ ಮುಟ್ಟಿಸಿದ ಟೀಮ್‌ ಇಂಡಿಯಾ ಫ್ಯಾನ್ಸ್‌!

ಕುಣಿಯಲು ಬರದೇ ಇದ್ದವರು ನೆಲವನ್ನೇ ಡೊಂಕು ಎಂದರಂತೆ. ಈ ಮಾತು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೀನ್‌ ಎಲ್ಗರ್‌ ಅವರಿಗೆ ಪಕ್ಕಾ ಒಪ್ಪುತ್ತದೆ. ಟೀಮ್‌ ಇಂಡಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಹರಿಣ ಪಡೆಯ ಹೀನಾಯ ಪ್ರದರ್ಶನಕ್ಕೆ ಹೋಟೆಲ್‌ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆಯನ್ನು ದೂರಿದ್ದಾರೆ.

Vijaya Karnataka Web 20 Oct 2019, 4:18 pm
ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಟೀಮ್ ಇಂಡಿಯಾ ವಿರುದ್ಧದ ಮಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಈಗಾಗಲೇ 0-2 ಅಂತರದಲ್ಲಿ ಸೋತು ಸುಣ್ಣವಾಗಿದೆ. ಈಗಾಗಲೇ ಸರಣಿ ಸೋಲಿಗೆ ಹಲವು ಸಬೂಬುಗಳನ್ನು ದಕ್ಷಿಣ ಆಫ್ರಿಕಾ ತಂಡದ ನೀಡಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್‌ ಡೀನ್‌ ಎಲ್ಗರ್‌, ಭಾರತದಲ್ಲಿನ ಹೋಟೆಲ್‌ಗಳು ಮತ್ತು ಆಹಾರ ಸರಿಯಿಲ್ಲ ಎಂದು ಅನಗತ್ಯವಾಗಿ ದೂರಿದ್ದಾರೆ.
Vijaya Karnataka Web Dean Elgar comments on indian food


"ಇದೊಂದು ಸವಾಲಿನ ಪ್ರವಾಸ. ಒಬ್ಬ ವ್ಯಕ್ತಿಯಾಗಿ ಮತ್ತು ಒಬ್ಬ ಕ್ರಿಕೆಟರ್‌ ಆಗಿ ನಿಮ್ಮ ಸಾಮರ್ಥ್ಯ ಇಲ್ಲಿ ಪರೀಕ್ಷಿಸಲಾಗುತ್ತದೆ. ಸಣ್ಣ ಪ್ರದೇಶ ಮತ್ತು ಸಣ್ಣ ಪುಟ್ಟ ಹೋಟೆಲ್‌ಗಳಿಗೆ ಬಂದಂತಹ ಸಂದರ್ಭದಲ್ಲಿ ನಿಮ್ಮ ವ್ಯಕ್ತಿತ್ವದ ಪರೀಕ್ಷೆ ನಡೆಯುತ್ತದೆ. ತಿನ್ನುವ ಆಹಾರದಲ್ಲೂ ಸವಾಲು ಎದುರಾಗುತ್ತದೆ. ಭಾರತದಲ್ಲಿ ಸಾಕಷ್ಟು ಪಾಠ ಕಲಿಯಲು ಸಿಗುತ್ತದೆ," ಎಂದು ಡೀನ್‌ ಎಲ್ಗರ್‌ ರಾಂಚಿ ಟೆಸ್ಟ್‌ ಪಂದ್ಯಕ್ಕೂ ಮುನ್ನ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಸಿಕ್ಸ್‌ ಹೊಡೆದು ದ್ವಿಶತಕ ಬಾರಿಸಿದ ಹಿಟ್‌ಮ್ಯಾನ್‌, ಸೆಹ್ವಾಗ್‌, ಗವಾಸ್ಕರ್‌ ಎಲೈಟ್‌ ಸಾಲಿಗೆ ರೋಹಿತ್‌!

ಎಲ್ಗರ್‌ ಅವರ ಈ ಕಾಮೆಂಟ್‌ಗಳು ಟೀಮ್‌ ಇಂಡಿಯಾದ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ. ಟ್ವಿಟರ್‌ ಮೂಲಕ ತರಾಟೆಗೆ ತೆಗೆದುಕೊಂಡಿರುವ ಫ್ಯಾನ್ಸ್‌, ದಕ್ಷಿಣ ಆಫ್ರಿಕಾ ತಂಡ ತನ್ನ ಹೀನಾಯ ಸೋಲಿಗೆ ಇಲ್ಲ ಸಲ್ಲದ ಕಾರಣಗಳನ್ನು ಕೊಡಲಾರಂಭಿಸಿದೆ ಎಂದು ಜಾಡಿಸಿದ್ದಾರೆ.

"ದಕ್ಷಿಣ ಆಫ್ರಿಕಾ ತಂಡದ ವೈಫಲ್ಯಕ್ಕೆ ಕಾರಣಗಳು ಸಿದ್ದವಾಗುತ್ತಿವೆ. ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಿದ ಬಳಿಕ ಈ ಆಟಗಾರ ಸರಣಿ ಸಬೂಬು ನೀಡಲಿದ್ದಾನೆ. ಹೋಟೆಲ್‌ ಸರಿಯಿಲ್ಲ, ಊಟ ಸರಿಯಿಲ್ಲ... ಇತ್ಯಾದಿ ಇತ್ಯಾದಿ.. ಕ್ರಿಕೆಟ್‌ ಕುರಿತಾದ ಯಾವುದೇ ಕಾರಣ ಇಲ್ಲಿಲ್ಲ," ಎಂದು ಅಭಿಮಾನಿಯೊಬ್ಬ ಟ್ವೀಟ್‌ ಮಾಡಿದ್ದಾನೆ.

ಭಾರತ - ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌ ಪಂದ್ಯದ ಸ್ಕೋರ್‌ ಕಾರ್ಡ್‌

ಮತ್ತೊಬ್ಬ ಫ್ಯಾನ್‌ "ಡೀನ್‌ ಎಲ್ಗರ್‌ ನಿಮ್ಮ ಸಮಸ್ಯೆ ನನಗೆ ಅರ್ಥವಾಗೊದೆ. ಎರಡು ಟೆಸ್ಟ್‌ ಪಂದ್ಯಗಳನ್ನು ಸೋತ ಬಳಿಕ ಏನಾದರು ಒಂದು ಕಾರಣ ನೀಡಲೇಬೇಕು. ಇದಕ್ಕೆ ಹೋಟೆಲ್‌ ಮತ್ತು ಫುಡ್‌ ಉತ್ತಮ ನೆಪ. ಬಿಸಿಸಿಐ ಮತ್ತು ಸೌರವ್‌ ಗಂಗೂಲಿ ದಯವಿಟ್ಟು ಈ ಆಟಗಾರನಿಗೆ ಒಳ್ಳೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಿಕೊಡಿ. ಇಲ್ಲವಾದರೆ ಮತ್ತೊಂದು ಟೆಸ್ಟ್‌ ಸೋತ ಬಳಿಕವೂ ಇಂಥದ್ದೇ ಕಾರಣವನ್ನು ಈತ ನೀಡಲಿದ್ದಾನೆ," ಎಂದು ಜಾಡಿಸಿದ್ದಾರೆ.

ಸರಣಿಯ ಮೊದಲ ಪಂದ್ಯದಲ್ಲಿ 203 ರನ್‌ಗಳ ಜಯ ದಾಖಲಿಸಿದ ಭಾರತ ತಂಡ, ಎರಡನೇ ಪಂದ್ಯದಲ್ಲಿ ಮೊತ್ತ ಮೊದಲ ಬಾರಿ ದಕ್ಷಿಣ ಆಫ್ರಿಕಾ ತಂಡಕ್ಕೆ ಫಾಲೋ ಆನ್‌ ಹೇರಿ ಇನಿಂಗ್ಸ್‌ ಮತ್ತು 137 ರನ್‌ಗಳ ಭರ್ಜರಿ ಜಯದೊಂದಿಗೆ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು. ಈ ಮೂಲಕ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಂಕಪಟ್ಟಿಯಲ್ಲಿ 200 ಅಂಕಗಳನ್ನು ದಾಖಲಿತ್ತು. ಇದೀಗ ರಾಂಚಿ ಟೆಸ್ಟ್ನಲ್ಲಿ 40 ಅಂಕ ಬಾಚಿಕೊಂಡು ಸರಣಿ ವೈಟ್‌ವಾಷ್‌ ಮಾಡುವುದನ್ನು ಎದುರು ನೋಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌