ಆ್ಯಪ್ನಗರ

'ಹಿಂದೂಸ್ತಾನ್‌ ಕೊ ಧೋನಿ ಕಾ ರೀಪ್ಲೇಸ್ಮೆಂಟ್‌ ಮಿಲ್‌ ಗಯಾ': ಅಖ್ತರ್‌ ಅಚ್ಚರಿಯ ಹೇಳಿಕೆ!

ಟೀಮ್‌ ಇಂಡಿಯಾದಲ್ಲಿ ಎಂಸ್‌ ಧೋನಿ ಆಡಿ 5 ತಿಂಗಳೇ ಕಳೆದಿದೆ. ಈ ಸಂದರ್ಭದಲ್ಲಿ ಭಾರತ ತಂಡ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಧೋನಿ ಸ್ಥಾನ ತುಂಬಬಲ್ಲ ಆಟಗಾರನನ್ನು ಕಂಡುಕೊಂಡಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಅಭಿಪ್ರಾಯ ಪಟ್ಟಿದ್ದಾರೆ.

Vijaya Karnataka Web 21 Jan 2020, 2:28 pm
ಹೊಸದಿಲ್ಲಿ: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಎಂಎಸ್‌ ಧೋನಿ ಸ್ಥಾನವನ್ನು ತುಂಬಬಲ್ಲ ಆಟಗಾರನನ್ನು ಕೊನೆಗೂ ಕಂಡುಕೊಳ್ಳುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಹೇಳಿದ್ದಾರೆ.
Vijaya Karnataka Web shoaib akhtar and ms dhoni 2020


"ಹಿಂದೂಸ್ತಾನ್‌ ಕೊ ಆಖಿರ್‌ ಧೋನಿ ಕಾ ರೀಪ್ಲೇಸ್ಮೆಂಟ್‌ ಮಿಲ್‌ ಗಯಾ," ಎಂದು ಶೊಯೇಬ್‌ ಅಖ್ತರ್‌ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಟೀಮ್‌ ಇಂಡಿಯಾ, ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ 0-1 ಅಂತರದ ಹಿನ್ನಡೆಯಿಂದ ಹೊರಬಂದು 2-1 ಅಂತರದಲ್ಲಿ ಸರಣಿ ಗೆದ್ದ ಬಳಿಕ ಅಖ್ತರ್‌ ಹೀಗೊಂದು ವಿಮರ್ಶೆ ನಡೆಸಿದ್ದಾರೆ.

"ಭಾರತಕ್ಕೆ ಧೋನಿ ಸ್ಥಾನ ತುಂಬಬಲ್ಲ ಆಟಗಾರ ಸಿಕ್ಕಿದ್ದಾನೆ. ಸೂಪರ್‌ ಫಿಟ್‌ ಆಗಿರುವ ಮನೀಶ್‌ ಪಾಂಡೆ ರೂಪದಲ್ಲಿ ಟೀಮ್‌ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಧೋನಿ ಒದಗಿಸುತ್ತಿದ್ದ ಬಲ ಮತ್ತೆ ಸಿಕ್ಕಿದೆ. ಶ್ರೇಯಸ್‌ ಅಯ್ಯರ್‌ ಕೂಡ ಪರಿಪೂರ್ಣ ಆಟಗಾರನ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಭಾರತ ತಂಡ ಕೆಳ ಕ್ರಮಾಂಕದವರೆಗೂ ಬ್ಯಾಟಿಂಗ್‌ ಬಲ ಹೊಂದಲು ಸಾಧ್ಯವಾಗಿದೆ," ಎಂದು ಅಖ್ತರ್‌ ಹೇಳಿದ್ದಾರೆ.

ಗಂಟೆಗೆ 175 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಿದ ಜೂನಿಯರ್‌ ಮಾಲಿಂಗ!

2019ರ ಜುಲೈನಲ್ಲಿ ಅಂತ್ಯಗೊಂಡ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಸೋಲುಂಡಿತ್ತು. ಈ ಪಂದ್ಯದ ಬಳಿಕ ಅನಿರ್ಧಿಷ್ಟಾವಧಿ ಕಾಲ ವಿಶ್ರಾಂತಿ ತೆಗೆದುಕೊಂಡಿರುವ ಧೋನಿ ಅವರನ್ನು ಬಿಸಿಸಿಐ ಇತ್ತೀಚೆಗಷ್ಟೇ ತನ್ನ ವಾರ್ಷಿಕ ಒಪ್ಪಂದದಿಂದಲೂ ಹೊರಗಿಟ್ಟಿದೆ.

"ಈ ಆಟಗಾರರು ಐಪಿಎಲ್‌ನಲ್ಲಿ ಪಳಗಿದ್ದಾರೆ. ಹೀಗಾಗಿ ಒತ್ತಡ ನಿಭಾಯಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ. ಎಷ್ಟೇ ದೊಡ್ಡ ಹೆಸರಿದ್ದರೂ ಅವರು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೆ ದೊಡ್ಡ ಇನಿಂಗ್ಸ್‌ ಒಂದನ್ನು ಆಡುತ್ತಾರೆ," ಎಂದು ಭಾರತ ತಂಡದ ಯುವ ಆಟಗಾರರನ್ನು ಅಖ್ತರ್‌ ಹೊಗಳಿದ್ದಾರೆ.

'ಹಿಟ್‌ಮ್ಯಾನ್‌' ರೋಹಿತ್‌ ಬ್ಯಾಟಿಂಗ್‌ಗೆ ಮನಸೋತ ಶೊಯೇಬ್‌ ಅಖ್ತರ್‌

ಭಾರತ ತಂಡ ಇದೀಗ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಮೊದಲಿಗೆ ಜ.24ರಿಂದ 5 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಪೈಪೋಟಿ ನಡೆಸಲಿದೆ. ಬಳಿಕ 3 ಪಂದ್ಯಗಳ ಏಕದಿನ ಮತ್ತು 2 ಪಂದ್ಯಗಳ ಟೆಸ್ಟ್‌ ಸರಣಿಗಳಲ್ಲೂ ಆತಿಥೇಯರ ಸವಾಲನ್ನು ಎದುರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌