ಆ್ಯಪ್ನಗರ

ಟಿ-20 ಕದನ; ರೋಹಿತ್ ಮುಂದಾಳತ್ವದಲ್ಲಿ ಯುವ ಪಡೆ ಕಣಕ್ಕೆ

ಮೂರು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯ ಭಾನುವಾರ ಕೋಲ್ಕತ್ತಾದ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ನಡೆಯಲಿದೆ.

Vijaya Karnataka Web 3 Nov 2018, 2:40 pm
ಕೋಲ್ಕತ್ತಾ: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿನ ಅಧಿಕಾರಯುತ ಗೆಲುವುಗಳ ಬಳಿಕ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಎದುರು ನೋಡುತ್ತಿದೆ.
Vijaya Karnataka Web rohit-bumrah


ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಣ ಮೊದಲ ಟ್ವೆಂಟಿ-20 ಪಂದ್ಯ ಭಾನುವಾರದಂದು ಕೋಲ್ಕತ್ತಾದ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ರಾತ್ರಿ 7ಕ್ಕೆ ಸರಿಯಾಗಿ ಆರಂಭವಾಗಲಿದೆ.

ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಸೂಚಿಸಲಾಗಿದ್ದು, ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈಬಿಡಲಾಗಿದೆ. ಈ ಎಲ್ಲದರ ಹಿನ್ನಲೆಯಲ್ಲಿ ನಾಯಕ ರೋಹಿತ್ ಶರ್ಮಾ ಜವಾಬ್ದಾರಿ ಹೆಚ್ಚಿದೆ. ಈ ಎಲ್ಲ ಪರಿಸ್ಥಿತಿಯಲ್ಲೂ ಯುವ ಪಡೆಯನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದು ಕುತೂಹಲವೆನಿಸಿದೆ.

ಏಷ್ಯಾ ಕಪ್‌ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ಹಾಗೂ ಐಪಿಎಲ್‌ನಲ್ಲಿ ನಾಯಕನಾಗಿ ಯಶ ಗಳಿಸಿರುವುದು ರೋಹಿತ್ ಪಾಲಿಗೆ ಪ್ಲಸ್ ಪಾಯಿಂಟ್ ಆಗಿರಲಿದೆ. ಈ ಮೂಲಕ ವಿರಾಟ್ ಸ್ಥಾನವನ್ನು ಸಮರ್ಥವಾಗಿಯೇ ತುಂಬುವ ಭರವಸೆ ನೀಡಿದ್ದಾರೆ.

ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಮನೀಷ್ ಪಾಂಡೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಹಿರಿಯರಾದ ಶಿಖರ್ ಧವನ್ ಹಾಗೂ ದಿನೇಶ್ ಕಾರ್ತಿಕ್ ಜೊತೆಗೆ ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಸಹ ಕಾಣಿಸಿಕೊಳ್ಳಲಿದ್ದಾರೆ.

ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಜೊತೆಗೆ ಖಲೀಲ್ ಅಹ್ಮದ್ ವೇಗದ ಅಸ್ತ್ರವಾಗಲಿದ್ದಾರೆ. ಹಾಗೆಯೇ ಯುಜ್ವೇಂದ್ರ ಚಹಲ್ ಹಾಗೂ ಕುಲ್‌ದೀಪ್ ಯಾದದ್ ಸ್ಪಿನ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಇನ್ನು ಶ್ರೇಯಸ್ ಅಯ್ಯರ್ ಹಾಗೂ ಆಲ್‌ರೌಂಡರ್ ಕೃುಣಾಲ್ ಪಾಂಡ್ಯ ನಡುವೆ ನಿಕಟ ಪೈಪೋಟಿ ಕಂಡುಬರಲಿದೆ. ಅಂತೆಯೇ ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್ ಹಾಗೂ ಶಹಬಾಜ್ ನದೀಂ ಅವಕಾಶ ವಂಚಿತರಾಗುವ ಸಾಧ್ಯತೆಯಿದೆ.

ಅತ್ತ ವಿಂಡೀಸ್ ಟಿ-20 ತಂಡವನ್ನು ಕಾರ್ಲಸ್ ಬ್ರಾತ್‌ವೇಟ್ ಮುನ್ನಡೆಸಲಿದ್ದಾರೆ. ಡ್ಯಾರೆನ್ ಬ್ರಾವೋ, ಕೀರಾನ್ ಪೊವೆಲ್, ವಿಕೆಟ್ ಕೀಪರ್ ದಿನೇಶ್ ರಾಮ್‌ದಿನ್, ಆಲ್‌ರೌಂಡರ್ ಆಂಡ್ರೆ ರೆಸಲ್ ತಂಡವನ್ನು ಸೇರಿಕೊಂಡಿರುವುದು ಹೆಚ್ಚಿನ ಬಲ ತುಂಬಲಿದೆ. ಏಕದಿನದಲ್ಲಿ ಪ್ರಭಾವಿ ಎನಿಸಿಕೊಂಡಿರುವ ಶಿಮ್ರಾನ್ ಹೆಟ್ಮಾಯೆರ್ ಭಾರತಕ್ಕೆ ಅಪಾಯಕಾರಿ ಎನಿಸಿಕೊಳ್ಳಲಿದ್ದಾರೆ. ಇನ್ನು ನಾಯಕ ಜೇಸನ್ ಹೋಲ್ಡರ್ ಹಾಗೂ ಶಾಯ್ ಹೋಪ್ ಅವರನ್ನು ಚುಟುಕು ತಂಡದಿಂದ ಕೈಬಿಟ್ಟಿರುವುದು ಹಿನ್ನಡೆಯಾಗಿದೆ.

ಟಿ-20 ತಂಡಕ್ಕೆ ಟೀಮ್ ಇಂಡಿಯಾ ಇಂತಿದೆ:

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೃುಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಕುಲ್‌ದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್, ಉಮೇಶ್ ಯಾದವ್, ಶಹಬಾಜ್ ನದೀಂ.

ವೆಸ್ಟ್‌ಇಂಡೀಸ್: ಕಾರ್ಲಸ್ ಬ್ರಾತ್‌ವೇಟ್ (ನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ಶಿಮ್ರಾನ್ ಹೆಟ್ಮಾಯೆರ್, ಕೀಮೊ ಪೌಲ್, ಕೀರಾನ್ ಪೊಲಾರ್ಡ್, ದಿನೇಶ್ ರಾಮ್‌ದಿನ್ (ವಿಕೆಟ್ ಕೀಪರ್), ಆ್ಯಂಡ್ರೆ ರೆಸಲ್, ಶೆರ್ಫಾನ್ ರುಥರ್‌ಫಾರ್ಡ್, ಓಶಾನ್ ಥಾಮಸ್, ಖೇರಿ ಪಿಯರ್ರಿ, ಓಬೆಡ್ ಮೆಕೋಯ್, ರೋವ್‌ಮ್ಯಾನ್ ಪೊವೆಲ್ ಮತ್ತು ನಿಕೊಲಸ್ ಪೂರನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌