ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ ಕೆಕೆಆರ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಯೂಸುಫ್ ಪಠಾಣ್, ಆರ್ಸಿಬಿ ಪಡೆದ ಬೌಲಿಂಗ್ ಅಷ್ಟು ಕಳಪೆಯೇನಿಲ್ಲ ಎಂದಿದ್ದಾರೆ.
ಎಂ.ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೆಕೆಆರ್ ಪಡೆ ಚಾಲೆಂಜರ್ಸ್ ಎದುರು 5 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತ್ತು. 186 ರನ್ಗಳ ಗುರಿ ಬೆನ್ನತ್ತಿದ ಕೆಕೆಆರ್ ಪರ, ಯೂಸುಫ್ ಪಠಾಣ್, ಕೇವಲ 29 ಎಸೆತಗಳಲ್ಲಿ ಅಜೇಯ 60 ರನ್ಗಳನ್ನು ಸಿಡಿಸಿ ಜಯದ ರೂವಾರಿ ಎನಿಸಿದ್ದರು.
ಪಂದ್ಯದ ಬಳಿಕ ಆರ್ಸಿಬಿ ತಂಡದ ಬೌಲಿಂಗ್ ದಾಳಿಯನ್ನು 'ಪೋಪಟ್ವಾಡಿ ಅಟ್ಯಾಕ್' ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನಿಡಿದ ಪಠಾಣ್, ಚಾಲೆಂಜರ್ಸ್ ಬೌಲಿಂಗ್ ಅಷ್ಟೇನು ಹೀನಾಯವಾಗಿಲ್ಲ ಎಂದು ಸಮರ್ಥಿಸಿದ್ದಾರೆ.
''ದುರದೃಷ್ಟಕರ ಎಂಬಂತೆ ಆರ್ಸಿಬಿ ತಂಡದ ಬ್ಯಾಟಿಂಗ್ನಂತೆ ಬೌಲಿಂಗ್ ಯಸಸ್ಸು ಕಾಣುತ್ತಿಲ್ಲ. ಇದೆಲ್ಲಾ ಕೇವಲ ಒಂದೆರಡು ಪಂದ್ಯಗಳ ಫಲಿತಾಂಶವಷ್ಟೇ. ಒಮ್ಮೆ ಬೌಲಿಂಗ್ ಯಶಸ್ಸು ಕಂಡರೆ ಚಾಲೆಂಜರ್ಸ್ ವಿಭಿನ್ನ ತಂಡವಾಗಿ ಕಾಣಿಸಿಕೊಳ್ಳಲಿದೆ,'' ಎಂದು ಪಠಾಣ್ ಹೇಳಿದ್ದಾರೆ.