ಆ್ಯಪ್ನಗರ

Ranji Trophy: ಹುಬ್ಬಳ್ಳಿಯ 'ಡ್ರಾ' ಪಂದ್ಯದಲ್ಲಿ ಉ.ಪ್ರದೇಶ ವಿರುದ್ಧ ಮೇಲುಗೈ ಸಾಧಿಸಿದ ಕರ್ನಾಟಕ

ಹುಬ್ಬಳ್ಳಿಯಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಣ ರಣಜಿ ಟ್ರೋಫಿ ಪಂದ್ಯವು ಡ್ರಾ ಫಲಿತಾಂಶದಲ್ಲಿ ಅಂತ್ಯಗೊಂಡಿದೆ. ಆದರೂ ಮೊದಲ ಇನ್ನಿಂಗ್ಸ್ ಮುನ್ನಡೆಯ ಹಿನ್ನೆಲೆಯಲ್ಲಿ ಕರ್ನಾಟಕ ಮೂರು ಅಂಕಗಳನ್ನು ಸಂಪಾದಿಸಿದೆ.

Vijaya Karnataka Web 20 Dec 2019, 3:01 pm
ಹುಬ್ಬಳ್ಳಿ: ಆತಿಥೇಯ ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವೆ ಇಲ್ಲಿನ ರಾಜನಗರ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ 'ಬಿ' ಗುಂಪಿನ ಪಂದ್ಯವು ಡ್ರಾ ಫಲಿತಾಂಶದಲ್ಲಿ ಅಂತ್ಯಗೊಂಡಿದೆ. ಹಾಗಿದ್ದರೂ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಪಂದ್ಯದಲ್ಲಿ ಮೇಲುಗೈ ಸಾಧಿಸಿರುವ ಕರುಣ್ ನಾಯರ್ ಪಡೆ ಮೂರು ಅಂಕಗಳನ್ನು ಗಿಟ್ಟಿಸಿಕೊಂಡಿದೆ. ಅತ್ತ ಅಂಕಿತ್ ರಜಪೂತ್ ಪಡೆ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿದೆ.
Vijaya Karnataka Web ಅಭಿಮನ್ಯು ಮಿಥುನ್


ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿರುವ ಕರ್ನಾಟಕ ವೇಗಿ ಅಭಿಮನ್ಯು ಮಿಥುನ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು. ಈ ಮೆದಲು ತಮಿಳುನಾಡು ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕರ್ನಾಟಕ ರೋಚಕ ಗೆಲುವು ಬಾರಿಸಿತ್ತು.

29/1 ಎಂಬಲ್ಲಿದ್ದ ನಾಲ್ಕನೇ ದಿನದಾಟ ಮುಂದುವರಿಸಿದ ಉತ್ತರ ಪ್ರದೇಶ 69.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿದ್ದ ಸಂದರ್ಭದಲ್ಲಿ ಪಂದ್ಯದಲ್ಲಿ ಫಲಿತಾಂಶ ದಾಖಲಿಸುವುದು ಅಸಾಧ್ಯ ಎಂದು ತಿಳಿದುಬಂದ ಪರಿಣಾಮ ಇತ್ತಂಡಗಳ ನಾಯಕರು ಪಂದ್ಯವನ್ನು ಡ್ರಾ ಫಲಿತಾಂಶದಲ್ಲಿ ಅಂತ್ಯಗೊಳಿಸಲು ನಿರ್ಧರಿಸಿದರು.

ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತೆಕ್ಕೆಗೆ ಯಾರ‍್ಯಾರು? ಸಂಪೂರ್ಣ ಮಾಹಿತಿ ಇಲ್ಲಿದೆ

ಉತ್ತರ ಪ್ರದೇಶ ಪರ ಆರಂಭಿಕ ಅಲ್ಮಾಸ್ ಶೌಕತ್ ಅಜೇಯ ಶತಕ (103*) ಸಿಡಿಸಿ ಗಮನ ಸೆಳೆದರು. ಶೌಕತ್ ಶತಕದ ಬೆನ್ನಲ್ಲೇ ಇತ್ತಂಡಗಳು ಹಸ್ತಲಾಘವ ಮಾಡಿಕೊಂಡರು. ಇನ್ನುಳಿದಂತೆ ಎಂ ಕೌಶಿಕ್ (45) ಹಾಗೂ ಎಡಿ ನಾಥ್ 38 ರನ್ ಗಳಿಸಿದರು. ಕರ್ನಾಟಕ ಪರ ರೋನಿತ್ ಮೋರೆ, ಡೇವಿಡ್ ಮಥಾಯಸ್ ಹಾಗೂ ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಹಂಚಿಕೊಂಡರು.

ಈ ಮೊದಲು ಮೂರನೇ ದಿನದಾಟದಲ್ಲಿ ಶ್ರೇಯಸ್ ಗೋಪಾಲ್ ಅವರ ತಾಳ್ಮೆಯ ಅರ್ಧಶತಕ (58) ಹಾಗೂ ಅಭಿಮನ್ಯು ಮಿಥುನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ (34*) ನೆರವಿನಿಂದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 40 ರನ್‌ಗಳ ಮುನ್ನಡೆ ಗಳಿಸಿತು. ಇವರಿಬ್ಬರು ಎಂಟನೇ ವಿಕೆಟ್‌ಗೆ 57 ರನ್‌ಗಳ ಮಹತ್ವದ ಜತೆಯಾಟ ಕಟ್ಟಿದರು.

IPL 2020: ಕಮಿನ್ಸ್‌ಗೆ ದಾಖಲೆಯ ಬೆಲೆ, 8 ಆಟಗಾರರನ್ನು ಖರೀದಿಸಿದ ಆರ್‌ಸಿಬಿ

ಉತ್ತರ ಪ್ರದೇಶದ 281 ಇನ್ನಿಂಗ್ಸ್ ಉತ್ತರವಾಗಿ ಕರ್ನಾಟಕ 321 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕರ್ನಾಟಕ ಪರ ಮಿಂಚಿದ ಆರಂಭಿಕ ದೇವದತ್ ಪಡಿಕ್ಕಲ್ (74) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ದೇಗ ನಿಶ್ಚಲ್ (36) ಹಾಗೂ ಅಭಿಷೇಕ್ ರೆಡ್ಡಿ (32) ಹಾಗೂ ಜಗದೀಶ ಸುಚಿತ್ (28) ಸಹ ಇನ್ನಿಂಗ್ಸ್ ಮುನ್ನಡೆ ಗಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಅಭಿಮನ್ಯು ಮಿಥುನ್ (60ಕ್ಕೆ 6 ವಿಕೆಟ್) ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್‌ನಲ್ಲಿ 181ಕ್ಕೆ ಆಲೌಟಾಗಿತ್ತು.ಆರಂಭಿಕ ಆರ್ಯನ್ ಜುಯಲ್ (109) ಅಮೋಘ ಶತಕ ಗಳಿಸಿದ್ದರೆ ಮೊಹಮ್ಮದ್ ಸೈಫ್ (80) ಆಕರ್ಷಕ ಅರ್ಧಶತಕ ಸಾಧನೆ ಮಾಡಿದ್ದರು.

IPL 2020: ಪಾನಿಪುರಿ ಮಾರುತ್ತಿದ್ದ ಕ್ರಿಕೆಟಿಗನಿಗೆ ಐಪಿಎಲ್‌ನಲ್ಲಿ ಬಂಪರ್‌ ಬೆಲೆ!

ಸಂಕ್ಷಿಪ್ತ ಸ್ಕೋರ್ ಪಟ್ಟಿ ಇಂತಿದೆ:

ಉ.ಪ್ರದೇಶ ಮೊದಲ ಇನ್ನಿಂಗ್ಸ್: 281ಕ್ಕೆ ಆಲೌಟ್
(ಆರ್ಯನ್ ಜುಯಲ್ (109), ಮೊಹಮ್ಮದ್ ಸೈಫ್ (80), ಅಭಿಮನ್ಯು ಮಿಥುನ್ 60/6)

ಕರ್ನಾಟಕ ಮೊದಲ ಇನ್ನಿಂಗ್ಸ್: 321ಕ್ಕೆ ಆಲೌಟ್
(ದೇವದತ್ ಪಡಿಕ್ಕಲ್ 74, ಶ್ರೇಯಸ್ ಗೋಪಾಲ್ 58, ಸೌರಭ್ ಕುಮಾರ್ 116/6)

ಉ.ಪ್ರದೇಶ ದ್ವಿತೀಯ ಇನ್ನಿಂಗ್ಸ್: 204/3 ಡಿಕ್ಲೇರ್.
(ಅಲ್ಮಾಸ್ ಶೌಕತ್ 103, ಮಾಧವ್ ಕೌಶಿಕ್ 45)

ಪಂದ್ಯಶ್ರೇಷ್ಠ: ಅಭಿಮನ್ಯು ಮಿಥುನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌