ಆ್ಯಪ್ನಗರ

Maharaja Trophy 2022: ಮಂಗಳೂರು ಯುನೈಟೆಡ್‌ಗೆ ಮಣ್ಣು ಮುಕ್ಕಿಸಿದ ಬೆಂಗಳೂರು ಬ್ಲಾಸ್ಟರ್ಸ್‌!

Maharaja Trophy 2022: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದ ಅನುಭವಿ ಆಲ್‌ರೌಂಡರ್‌ ಅನಿರುದ್ಧ ಜೋಶಿ, ಸ್ಪೋಟಕ ಅರ್ಧಶತಕ ಬಾರಿಸುವ ಮೂಲಕ ಚೊಚ್ಚಲ ಆವೃತ್ತಿಯ ಮಹಾರಾಜ ಟ್ರೋಫಿ 2022 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡಕ್ಕೆ ಮಘಳೂರು ಯುನೈಟೆಡ್‌ ವಿರುದ್ಧ ಭರ್ಜರಿ ಗೆಲುವು ತಂದಿದ್ದಾರೆ. ಬೌಲಿಂಗ್‌ನಲ್ಲೂ ಬೆಂಗಳೂರು ತಂಡ ರಿಶಿ ಬೋಪಣ್ಣ ಮತ್ತು ಟಿ ಪ್ರದೀಪ್‌ ಗಮನಾರ್ಹ ದಾಳಿ ಸಂಘಟಿಸಿ ಎದುರಾಳಿ ಬ್ಯಾಟರ್‌ಗಳನ್ನು ಬೇಟೆಯಾಡುವ ಮೂಲಕ 66 ರನ್‌ಗಳ ಅದ್ಭುತ ಗೆಲುವಿಗೆ ಬಲವಾದರು.

Authored byವಿಜೇತ್ ಕುಮಾರ್ | Vijaya Karnataka Web 15 Aug 2022, 8:32 pm

ಹೈಲೈಟ್ಸ್‌:

  • ಚೊಚ್ಚಲ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ.
  • ಮಂಗಳೂರು ಯುನೈಟೆಡ್‌ ವಿರುದ್ಧ ಭರ್ಜರಿ ಜಯ ದಾಖಲಿಸಿದ ಬೆಂಗಳೂರು ಬ್ಲಾಸ್ಟರ್ಸ್‌.
  • ಸ್ಪೋಟಕ ಅರ್ಧಶತಕ ಬಾರಿಸಿ ಅಬ್ಬರಿಸಿದ ಆಲ್‌ರೌಂಡರ್‌ ಅನಿರುದ್ಧ ಜೋಷಿ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Anirudha Joshi
ಸ್ಪೋಟಕ ಅರ್ಧಶತಕ ಬಾರಿಸಿದ ಅನಿರುದ್ಧ ಜೋಶಿ (ಚಿತ್ರ: ಕೆಎಸ್‌ಸಿಎ).
ಮೈಸೂರು: ಮಹಾರಾಜ ಟ್ರೋಫಿ 2022 ಟೂರ್ನಿಯ 17ನೇ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮಂಗಳೂರು ಯುನೈಟೆಡ್ ವಿರುದ್ಧ 66 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಗೆಲ್ಲಲು 192 ರನ್ ಬೃಹತ್ ಮೊತ್ತವನ್ನು ಬೆಂನ್ನತ್ತಿದ ಮಂಗಳೂರು ಯುನೈಟೆಡ್ 16 ಓವರ್‌ಗಳಲ್ಲೇ 125 ರನ್‌ಗಳಿಗೆ ಆಲ್‌ಔಟ್‌ ಆಯಿತು.
ಮಂಗಳೂರು ತಂಡದ ಪರ ಕ್ಯಾಪ್ಟರ್‌ ರವಿಕುಮಾರ್‌ ಸಮರ್ಥ್ (32), ಅಭಿನವ್ ಮನೋಹರ್ (23) ಮತ್ತು ಶರತ್ (22*) ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳು ಬೆಂಗಳೂರು ಬ್ಲಾಸ್ಟರ್ಸ್‌ ತಂಡದ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲರಾದರು. ಬ್ಲಾಸ್ಟರ್ಸ್‌ ಪರ ವೇಗಿ ಪ್ರದೀಪ್ ಹಾಗೂ ರಿಶಿ ಬೋಪಣ್ಣ ತಲಾ 3 ವಿಕೆಟ್ ಪಡೆಯುವ ಮೂಲಕ ತಂಡದ ಭರ್ಜರಿ ಗೆಲುವಿಗೆ ಬಲವಾದರು.

ಇದಕ್ಕೂ ಮುನ್ನ ಅನಿರುಧ ಜೋಶಿ ಅವರ ಮಿಂಚಿನ ಅರ್ಧ ಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಂಗಳೂರು ಯುನೈಟೆಡ್‌ ಎದುರು ತನ್ನ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 191 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಕೇವಲ 24 ಎಸೆತಗಳನ್ನು ಎದುರಿಸಿದ ಜೋಶಿ, 7 ಬೌಂಡರಿ ಹಾಗೂ 3 ಸಿಕ್ಸರ್‌ ಒಳಗೊಂಡ ಅಜೇಯ 57 ರನ್‌ ಸಿಡಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು.

ಮೈಸೂರು ವಾರಿಯರ್ಸ್‌ಗೆ ಶಾಕ್ ಕೊಟ್ಟ ಶಿವಮೊಗ್ಗ ಸ್ಟ್ರೈಕರ್ಸ್!

ಪಂದ್ಯದಲ್ಲಿ ಟಾಸ್‌ ಗೆದ್ದ ಮಂಗಳೂರು ಯುನೈಟೆಡ್‌ ತಂಡ ಫೀಲ್ಡಿಂಗ್‌ ಆಯ್ದುಕೊಂಡಿತು. ಯುವ ಬೌಲರ್‌ ಅನೀಶ್ವರ್‌ ಗೌತಮ್‌ ಆರಂಭಿಕ ಜೊತೆಯಾಟವನ್ನು ಬೇಗನೆ ಮುರಿದರು. ಆದರೆ ಬ್ಲಾಸ್ಟರ್ಸ್‌ ನಾಯಕ ಮಯಾಂಕ್‌ ಅಗರ್ವಾಲ್‌ (47) ಹಾಗೂ ಕೆ.ವಿ ಅನೀಶ್‌ (40) 3ನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟವಾಡಿ ತಂಡದ ಬೃಹತ್‌ ಮೊತ್ತಕ್ಕೆ ಬೇಕಿದ್ಧ ಭದ್ರ ಅಡಿಪಾಯ ಹಾಕಿದರು.

ಆದರೆ ಶಶಿಕುಮಾರ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೈಚೆಲ್ಲಿದ ಮಯಾಂಕ್ 3 ರನ್‌ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಮಯಾಂಕ್‌ ವಿಕೆಟ್‌ ಪತನವಾದರೂ ಬೆಂಗಳೂರು ತಂಡದ ರನ್‌ ಗಳಿಕೆಯ ವೇಗಕ್ಕೆ ಬ್ರೇಕ್ ಬೀಳಲಿಲ್ಲ. ಅನೀಶ್‌ 32 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 40 ರನ್‌ ಸಿಡಿಸಿ ಉತ್ತಮ ಸಾಥ್‌ ನೀಡಿದರು. ಬಳಿಕ ಶಿವಕುಮಾರ್‌ ರಕ್ಷಿತ್‌, ಎದುರಿಸಿದ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಮೂಲಕ 34 ರನ್‌ಗಳಿಸಿ ಅನಿರುಧ ಜೋಶಿಗೆ ಉತ್ತಮ ಬೆಂಬಲ ನೀಡಿದರು.

ಸಂಕ್ಷಿಪ್ತ ಸ್ಕೋರ್‌
ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 191 ರನ್‌ (ಮಯಾಂಕ್‌ ಅಗರ್ವಾಲ್‌ 47, ಅನೀಶ್‌ 40, ಶಿವಕುಮಾರ್‌ ರಕ್ಷಿತ್‌ 34, ಅನಿರುಧ ಜೋಶಿ 57*; ಅನೀಶ್ವರ್‌ ಗೌತಮ್‌ 25ಕ್ಕೆ 1, ಶರತ್‌ 49ಕ್ಕೆ 1, ಶಶಿಕುಮಾರ್‌ 21ಕ್ಕೆ 1, ಆದಿತ್ಯ ಸೋಮಣ್ಣ 19ಕ್ಕೆ 1).
ಮಂಗಳೂರು ಯುನೈಟೆಡ್‌: 16 ಓವರ್‌ಗಳಲ್ಲಿ 125 ರನ್‌ಗಳಿಗೆ ಆಲ್‌ಔಟ್‌ (ರವಿಕುಮಾರ್‌ ಸಮರ್ಥ 32, ಅಭಿನವ್ ಮನೋಹರ್ 23, ಶರತ್ 22*; ರವಿ ಬೋಪಣ್ಣ 26ಕ್ಕೆ 3, ಪ್ರದೀಪ್ 20ಕ್ಕೆ3).
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌