ಆ್ಯಪ್ನಗರ

Maharaja Trophy 2022: ಮೈಸೂರು ವಾರಿಯರ್ಸ್‌ಗೆ ಶಾಕ್ ಕೊಟ್ಟ ಶಿವಮೊಗ್ಗ ಸ್ಟ್ರೈಕರ್ಸ್!

Maharaja Trophy 2022: ಆಲ್‌ರೌಂಡರ್‌ ಪವನ್‌ ದೇಶಪಾಂಡೆ ಅವರ ಕೆಚ್ಚೆದೆಯ ಅರ್ಧಶತಕದ ಹೊರತಾಗಿಯೂ ಮೈಸೂರು ವಾರಿಯರ್ಸ್‌ ತಂಡ ಶಿವಮೊಗ್ಗ ಸ್ಟ್ರೈಕರ್ಸ್‌ ಎದುರು 13 ರನ್‌ಗಳ ಆಘಾತಕ್ಕೊಳಗಾಯಿತು. ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟೂರ್ನಿಗೆ ಪರ್ಯಾಯವಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚೊಚ್ಚಲ ಆವೃತ್ತಿಯ ಮಹರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಿದೆ. ಮೈಸೂರು ತಂಡದ ಎದುರು ಅಬ್ಬರಿಸಿದ ಬಿ.ಆರ್‌ ಶರತ್ ಮತ್ತು ಕೃಷ್ಣಪ್ಪ ಗೌತಮ್‌ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡಕ್ಕೆ ಜಯ ತಂದುಕೊಟ್ಟರು.

Authored byವಿಜೇತ್ ಕುಮಾರ್ | Vijaya Karnataka Web 14 Aug 2022, 8:22 pm

ಹೈಲೈಟ್ಸ್‌:

  • ಚೊಚ್ಚಲ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ.
  • ಶಿವಮೊಗ್ಗ ಪರ ಬಿಆರ್‌ ಶರತ್‌ ಮತ್ತು ಕೆ. ಗೌತಮ್‌ ಭರ್ಜರಿ ಆಟ ಪ್ರದರ್ಶನ.
  • ಬಲಿಷ್ಠ ಮೈಸೂರು ವಾರಿಯರ್ಸ್‌ ಎದುರು ಶಿವಮೊಗ್ಗ ಸ್ಟ್ರೈಕರ್ಸ್‌ಗೆ 13 ರನ್‌ ಜಯ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web BR Sharath
ಶಿವಮೊಗ್ಗ ಸ್ಟ್ರೈಕರ್ಸ್‌ ತಂಡದ ಬ್ಯಾಟರ್‌ ಬಿ.ಆರ್‌ ಶರತ್‌ ಬ್ಯಾಟಿಂಗ್‌ ವೈಖರಿ.
ಮೈಸೂರು: ಆಲ್‌ರೌಂಡ್‌ ಪ್ರದರ್ಶನ ಹೊರತಂದ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡ, ಚೊಚ್ಚಲ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಬಲಿಷ್ಠ ಮೈಸೂರು ವಾರಿಯರ್ಸ್‌ ತಂಡದ ವಿರುದ್ಧ 13 ರನ್‌ಗಳ ಜಯ ದಾಖಲಿಸಿದೆ.
ಗೆಲುವಿಗೆ 174 ರನ್‌ ಕಠಿಣ ಗುರಿ ಬೆನ್ನತ್ತಿದ್ದ ಮೈಸೂರು ವಾರಿಯರ್ಸ್‌ ತಂಡ, ತನ್ನ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 161 ರನ್‌ ಗಳಿಸಲಷ್ಟೇ ಶಕ್ತವಾಗಿ 13 ರನ್‌ಗಳ ಸಂತರದಲ್ಲಿ ಸೋಲೊಪ್ಪಿಕೊಂಡಿತು. ಆಲ್‌ರೌಂಡರ್‌ ಪವನ್‌ ದೇಶಪಾಂಡೆ (64) ಹೋರಾಟದ ಅರ್ಧಶತಕ ಬಾರಿಸಿದರೂ ಮೈಸೂರು ತಂಡವನ್ನು ಜಯದ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಉತ್ತಮ್‌ ಅಯ್ಯಪ್ಪ, ಕೃಷ್ಣಪ್ಪ ಗೌತಮ್‌ ಹಾಗೂ ಎಂ.ಬಿ ದರ್ಶನ್‌ ತಲಾ 2 ವಿಕೆಟ್‌ ಪಡೆದು ಶಿವಮೊಗ್ಗ ತಂಡದ ಗೆಲುವಿಗೆ ಬಲವಾದರು. ಮೈಸೂರು ತಂಡದ ನಾಯಕ ಕರುಣ್‌ ನಾಯರ್‌ ಶೂನ್ಯಕ್ಕೆ ಔಟಾಗಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಯಿತು. ಕೊನೇ ಓವರ್‌ಗಳಲ್ಲಿ ಲೋಚನ್ ಅಯ್ಯಪ್ಪ 27 ರನ್‌ ಗಳಿಸಿ ಔಟಾಗದೇ ಉಳಿದರಾದರೂ, ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

ಜಯದ ಲಯಕ್ಕೆ ಹುಬ್ಬಳ್ಳಿ ಟೈಗರ್ಸ್‌, ಶಿವಮೊಗ್ಗ ಸ್ಟ್ರೈಕರ್ಸ್‌ಗೆ ಸತತ 5ನೇ ಸೋಲು!

ಸ್ಟ್ರೈಕರ್ಸ್‌ ಪರ ಮಿಂಚಿದ ಶರತ್‌
ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡಕ್ಕೆ ರೋಹನ್‌ ಕದಮ್‌ (18) ಮತ್ತು ಬಿ.ಆರ್. ಶರತ್‌ 56 ರನ್‌ ಜೊತೆಯಾಟದೊಂದಿಗೆ ಉತ್ತಮ ಆರಂಭ ಒದಗಿಸಿದರು. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಬಿ.ಆರ್‌ ಶರತ್‌, 35 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ 53 ರನ್‌ ಸಿಡಿಸಿದರು. ಇನಿಂಗ್ಸ್‌ ಮಧ್ಯದಲ್ಲಿ ಕೆ.ವಿ ಸಿದ್ಧಾರ್ಥ್ 36 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು.

ಶರತ್ ಹೊರತಾಗಿ ಉಳಿದ ಬ್ಯಾಟರ್‌ಗಳಿಂದ ಹೇಳಿಕೊಳ್ಳುವ ಪ್ರದರ್ಶನ ಬರಲಿಲ್ಲ. ಆದರೂ ಕೆ. ಗೌತಮ್‌ ಸಾರಥ್ಯದ ಸ್ಟ್ರೈಕರ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 174 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಮೈಸೂರು ತಂಡದ ಪರ ಸ್ಪಿನ್ನರ್‌ ವಿದ್ಯಾಧರ್ ಪಾಟೀಲ್‌ (39ಕ್ಕೆ 3) ಯಶಸ್ವಿ ಬೌಲರ್‌ ಎನಿಸಿದರು. ಆದಿತ್ಯ ಗೋಯಲ್‌ (38ಕ್ಕೆ 2) ಮತ್ತು ಶುಭಾಂಗ್‌ ಹೆಗ್ಡೆ (19ಕ್ಕೆ 2) ತಲಾ ಎರಡು ವಿಕೆಟ್‌ ಪಡೆದು ಉತ್ತಮ ಸಾಥ್‌ ನೀಡಿದರು.

ಟೈಗರ್ಸ್‌ ಸದ್ದಡಗಿಸಿದ ಪಡಿಕ್ಕಲ್‌, ರೋಹನ್:‌ ಗುಲ್ಬರ್ಗ ಮೈಸ್ಟಿಕ್ಸ್‌ಗೆ 9 ವಿಕೆಟ್‌ ಜಯ!

ಸಂಕ್ಷಿಪ್ತ ಸ್ಕೋರ್‌
ಶಿವಮೊಗ್ಗ ಸ್ಟ್ರೈಕರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 174 (ಬಿ.ಆರ್‌. ಶರತ್‌ 53, ಸಿದ್ಧಾರ್ಥ್‌ 36. ಡಿ. ಅವಿನಾಶ್‌ 25; ವಿದ್ಯಾಧರ್ ಪಾಟೀಲ್‌ 39ಕ್ಕೆ 3, ಆದಿತ್ಯ ಗೋಯಲ್‌ 38ಕ್ಕೆ 2, ಶುಭಾಂಗ್‌ ಹೆಗ್ಡೆ 19ಕ್ಕೆ 2).
ಮೈಸೂರು ವಾರಿಯರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 161 (ಪವನ್‌ ದೇಶಪಾಂಡೆ 64, ಲೋಚನ್‌ ಅಯ್ಯಪ್ಪ 27*; ಉತ್ತಮ್‌ ಅಯ್ಯಪ್ಪ 35ಕ್ಕೆ 2, ಕೃಷ್ಣಪ್ಪ ಗೌತಮ್‌ 22ಕ್ಕೆ 2, ದರ್ಶನ್‌ 44ಕ್ಕೆ 2).
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌